Advertisement

ವಜ್ರಮುಷ್ಠಿ ಕಾಳಗಕ್ಕೆ ಅಖಾಡ ಸಜ್ಜು

11:29 AM Oct 17, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ವಜ್ರಮುಷ್ಠಿ ಕಾಳಗಕ್ಕೆ ದಿನಗಣನೆ ಶುರುವಾಗಿದ್ದು, ವಿಜಯದಶಮಿ ದಿನದಂದು ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಸೆಣೆಸಾಡಲು ಜಟ್ಟಿಗಳು ಭಾರೀ ತಯಾರಿ ನಡೆಸಿದ್ದಾರೆ. ಅ.19ರಂದು ನಡೆಯುವ ವಜ್ರಮುಷ್ಠಿ ಕಾಳಗದ ಹಿನ್ನೆಲೆಯಲ್ಲಿ ಮಂಗಳವಾರ ಸ್ಪರ್ಧಿಗಳ ಜೋಡಿ ಕಟ್ಟಲಾಯಿತು. 

Advertisement

ಅಂಬಾವಿಲಾಸ ಅರಮನೆ ಅವರಣದಲ್ಲಿರುವ ಗಾಯತ್ರಿದೇವಿ ದೇವಾಸ್ಥಾನದ ಆವರಣದಲ್ಲಿ ಜಟ್ಟಿ ಸಮುದಾಯದ ಹಿರಿಯರ ಸಮ್ಮುಖದಲ್ಲಿ ನಾಲ್ವರು ಜಟ್ಟಿಗಳನ್ನು ಆಯ್ಕೆ ಮಾಡಲಾಯಿತು. ವಜ್ರಮುಷ್ಠಿ ಕಾಳಗದಲ್ಲಿ ಕೇವಲ ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ಚನ್ನಪಟ್ಟಣದ ಜಟ್ಟಿಗಳು ಮಾತ್ರ ಭಾಗವಹಿಸಲಿದ್ದಾರೆ.

ಅದರಂತೆ ಮೈಸೂರಿನ ಮಂಜುನಾಥ ಜಟ್ಟಿ, ಚಾಮರಾಜನಗರದ ಪುರುಷೋತ್ತಮ ಜಟ್ಟಿ, ಬೆಂಗಳೂರಿನ ರಾಘವೇಂದ್ರ ಜಟ್ಟಿ, ಚನ್ನಪಟ್ಟಣದ ಸಿ.ಪಿ.ವಿದ್ಯಾಧರ ಜಟ್ಟಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ ಮೈಸೂರಿನ ಮಂಜುನಾಥ ಜಟ್ಟಿ – ಬೆಂಗಳೂರಿನ ರಾಘವೇಂದ್ರ ಜಟ್ಟಿ, ಚನ್ನಪಟ್ಟಣದ ಸಿ.ಪಿ.ವಿದ್ಯಾಧರ ಜಟ್ಟಿ-ಚಾ.ನಗರದ ಪುರುಷೋತ್ತಮ ಜಟ್ಟಿ ಮುಖಾಮುಖೀಯಾಗಲಿದ್ದಾರೆ. 

ಜಟ್ಟಿಗಳಿಂದ ತಯಾರಿ: ದಸರೆಯಲ್ಲಿ ವಜ್ರಮುಷ್ಠಿ ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವುದು ಜಟ್ಟಿಗಳ ಪಾಲಿಗೆ ಲಭಿಸುವ ಅದೃಷ್ಟ. ಈ ಹಿನ್ನೆಲೆಯಲ್ಲಿ ರಾಜವಂಶಸ್ಥರ ಸಮ್ಮುಖದಲ್ಲಿ ನಡೆಯುವ ಕಾಳಗದಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಈಗಾಗಲೇ ಜಟ್ಟಿಗಳು ತಯಾರಿ ಆರಂಭಿಸಿದ್ದಾರೆ.

ಈ ಬಾರಿಯ ವಜ್ರಮುಷ್ಠಿ ಕಾಳಗದಲ್ಲಿ ಸ್ಪರ್ಧಿಸುತ್ತಿರುವ ನಾಲ್ವರಲ್ಲಿ ಚನ್ನಪಟ್ಟಣದ ವಿದ್ಯಾಧರ ಜೆಟ್ಟಿ ಹಾಗೂ ಬೆಂಗಳೂರಿನ ರಾಘವೇಂದ್ರ ಜಟ್ಟಿ ಇದೇ ಮೊದಲ ಬಾರಿಗೆ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಇಬ್ಬರು ಜಟ್ಟಿಗಳು ಈಗಾಗಲೇ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸಿದ್ದ ಅನುಭವ ಹೊಂದಿದ್ದಾರೆ. ನಾಲ್ವರು ಜಟ್ಟಿಗಳು ಕಳೆದ ಹಲವು ದಿನಗಳಿಂದ ಕಠಿಣ ತಯಾರಿ ನಡೆಸಿ ಕಾಳಗದಲ್ಲಿ ಸೆಣೆಸಲು ಸಜ್ಜಾಗಿದ್ದಾರೆ. 

Advertisement

ವಜ್ರಮುಷ್ಠಿ ಕಾಳಗ: ದಸರಾ ಮಹೋತ್ಸವದ ಕೊನೆಯ ದಿನದಂದು ನಡೆಯುವ ವಿಜಯದಶಮಿಯ ಜಂಬೂಸವಾರಿಗೂ ಮುನ್ನ ಅರಮನೆ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದೆ. ನಾಡು ಮತ್ತು ರಾಜವಂಶಸ್ಥರ ಒಳಿತಿಗಾಗಿ ನಡೆಯುವ ವಜ್ರಮುಷ್ಟಿ ಕಾಳಗವನ್ನು ಈ ಹಿಂದೆ ಸ್ಪರ್ಧೆಯ ರೀತಿಯಲ್ಲಿ ನಡೆಸಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಡೆಯುತ್ತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಪರಂಪರೆಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ವಜ್ರಮುಷ್ಠಿ ಕಾಳಗದಲ್ಲಿ ಮುಖಾಮುಖೀಯಾಗುವ ಜಟ್ಟಿಗಳ ತಲೆಯಿಂದ ರಕ್ತ ಚಿಮ್ಮುತ್ತಿದ್ದಂತೆ ಕಾಳಗ ಮುಕ್ತಾಯಗೊಳ್ಳಲಿದೆ. ಜಟ್ಟಿ ಕಾಳಗದಲ್ಲಿ ಸೆಣೆಸಾಡುವ ಜಟ್ಟಿಗಳು ರಾಜವಂಶಸ್ಥರು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ, ಚಾಮುಂಡೇಶ್ವರಿಗೆ ರಕ್ತ ನೀಡುತ್ತೇವೆಂಬ ಉದ್ದೇಶದಿಂದ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಾರೆ. 

ಆಯ್ಕೆಯಲ್ಲಿ ವಿಳಂಬ: ಈ ಬಾರಿ ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನಿಂದ ಭಾಗವಹಿಸಲು ಮೂವರ ನಡುವೆ ಪೈಪೋಟಿ ಉಂಟಾದ ಹಿನ್ನೆಲೆಯಲ್ಲಿ ಜಟ್ಟಿಯ ಆಯ್ಕೆಯಲ್ಲಿ ಸ್ವಲ್ಪಮಟ್ಟಿನ ವಿಳಂಬವಾಯಿತು. ವಜ್ರಮುಷ್ಠಿ ಕಾಳಗದಲ್ಲಿ ಸ್ಪರ್ಧಿಸಲು ಮೈಸೂರಿನ ಮಾಧವ ಜಟ್ಟಿ, ಬಲರಾಮ ಜಟ್ಟಿ ಹಾಗೂ ಮಧು ಜಟ್ಟಿ ಅವರು ಆಸಕ್ತಿ ತೋರಿದರು.

ಆದರೆ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಜೋಡಿ ಕಟ್ಟುವಿಕೆಯಲ್ಲಿ ಕೆಲಕಾಲ ವಿಳಂಬವಾಯಿತು. ಆದರೆ ಸಮುದಾಯದ ಹಿರಿಯರ ತೀರ್ಮಾನದಂತೆ ಅಂತಿಮವಾಗಿ ಮಂಜುನಾಥ ಜೆಟ್ಟಿ ಅವರಿಗೆ ಮೈಸೂರಿನಿಂದ ಭಾಗವಹಿಸುವ ಅವಕಾಶ ಲಭಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next