Advertisement

ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಅಟಲ್‌ಜೀ

11:27 AM Aug 17, 2018 | |

ವಿಜಯಪುರ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ವಿಜಯಪುರ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ ಕ್ಷಣಗಳನ್ನು ಜಿಲ್ಲೆಯ ಜನರು ಸ್ಮರಿಸುತ್ತಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಬಳಿಕ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡು ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರ ಪತನಗೊಂಡು ಜನಸಂಘ ಎಂಬ ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ಹಂತದಲ್ಲಿ 1980ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಟಲ್‌ ಬಿಹಾರ ವಾಜಪೇಯಿ ಅವರು ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದರು.

Advertisement

ಪಕ್ಷ ಸಂಘಟನೆಗಾಗಿ ರಾಷ್ಟ್ರ ಪ್ರವಾಸ ಆರಂಭಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು 1980ರಲ್ಲಿ ವಿಜಯಪುರ ನಗರಕ್ಕೆ ಮಧ್ಯರಾತ್ರಿ 12 ಗಂಟೆಗೆ ಆಗಮಿಸಿದರೂ ಅವರ ಭಾಷಣ ಕೇಳಲು ಲಕ್ಷಾಂತರ ಜನರು ನೆರೆದಿದ್ದರು. ನಗರದ ದರ್ಬಾರ ಮೈದಾನದಲ್ಲಿ ಪ್ರಖರ ಭಾಷಣ ಮಾಡಿದ್ದ ವಾಜಪೇಯಿ ಅವರನ್ನು ಸಂಘಟಟನೆಯ ನೇತೃತ್ವ ವಹಿಸಿದ್ದ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಯುವ ಪಡೆ ಸ್ವಾಗತಿಸಿತ್ತು. ಪಕ್ಷದ ಸಂಘಟನೆ ಕಾರ್ಯಕ್ರಮದಲ್ಲಿ ಭಾಷಣದ ಬಳಿಕ ಜನಸಂಘದ ಜಿಲ್ಲಾಧ್ಯಕ್ಷರಾಗಿದ್ದ ಡಾ|
ಮನೋಹರ ಧೋಂಡಿಬಾ ಮಹೇಂದ್ರಕರ ಅವರ ಮನೆಗೆ ಭೇಟಿ ನೀಡಿದ್ದರು. 

ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗಿನ ತಮ್ಮ ಅನುಭವವನ್ನು ಉದಯವಾಣಿ ಜೊತೆ ಹಂಚಿಕೊಂಡಿರುವ ಯತ್ನಾಳ, ಆಗ ನಾನು ಇನ್ನೂ ಹದಿ ಹರೆಯದ ಯುವಕ ಆರ್‌ಆರ್‌ಎಸ್‌. ಲಾಠಿ ಹಿಡಿದು ನಾನು ಪಕ್ಷದ ಸಂಘಟನೆ ಹೊಣೆ ಹೊತ್ತಿದ್ದೆ.

ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನೇ ಇಡೀ ಕಾರ್ಯಕ್ರಮ ಸಂಘಟನೆಯ ಹೊಣೆ ಹೊತ್ತಿದ್ದೆ. ಕೆಲವೇ ಕೆಲ ಕಾರ್ಯಕರ್ತರಿದ್ದರೂ ಪಕ್ಷದ ಕಾರ್ಯಕ್ರಮವನ್ನು ಸಮರ್ಥವಾಗಿ ಸಂಘಟಿಸಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ರಸ್ತೆ ಮಾರ್ಗವಾಗಿ ವಿಜಯಪುರಕ್ಕೆ ಬಂದಿದ್ದ ಇಲ್ಲಿನ ರಸ್ತೆಗಳ ದುಸ್ಥಿತಿ ಕಂಡು ಕಾರ್ಯಕ್ರಮದಲ್ಲಿ ಮರುಗಿದ್ದು ಇನ್ನೂ ನೆನಪಿದೆ ಎಂದು ಹಾಲಿ ಶಾಸಕರೂ ಆಗಿರುವ ಅಟಲ್‌ ಸರ್ಕಾರದಲ್ಲಿ ಸಚಿವರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಸ್ಮರಿಸುತ್ತಾರೆ. ಇದಾದ ಬಳಿಕ 1994 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಾಗ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ್ದಾಗ ನಾನು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದೆ. ನಗರಕ್ಕೆ ಆಗಮಿಸಿದ್ದ ಅವರು ಆಗ ನಗರದಲ್ಲಿ ಪ್ರಚಾರ ಭಾಷಣ ಮಾಡಿದ್ದ ಅವರು,
ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸಿದ್ಧರಾಮೇಶ್ವರರಿಗೆ ಪೂಜೆ ಸಲ್ಲಿಸಿದ್ದರು. ನಮ್ಮ ಮನೆಗೂ ಭೇಟಿ ನೀಡಿ ಉಪಹಾರ ಸೇವಿಸಿದ್ದರು ಎಂದು ಬಸನಗೌಡ ಪಾಟೀಲ ಯತ್ನಾಳ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ. ಇದಾದ ಬಳಿಕ ನಾನು ವಿಜಯಪುರ ಕ್ಷೇತ್ರದಿಂದ ಎರಡು ಬಾರಿ ಸಂಸದನಾಗಿ ಮಾತ್ರವಲ್ಲ ವಾಜಪೇಯಿ ಅವರು ತಮ್ಮ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವನನ್ನಾಗಿ ಮಾಡಿ, ಜವಳಿ ಹಾಗೂ ರೈಲ್ವೆ ಖಾತೆ ಸಚಿವರನ್ನಾಗಿ ಮಾಡಿ ನನ್ನಂಥ ಯುವಕನನ್ನು ರಾಜಕೀಯವಾಗಿ ಬೆಳೆಸಿದ್ದರು. ಸರಳ ಸಜ್ಜನಿಕೆ ಅವರು ನಿಗರ್ವಕ್ಕೆ ಮತ್ತೂಂದು ಹೆಸರಾಗಿದ್ದರು, ಕಿರಿಯ ನಾಯಕರನ್ನು ಅತ್ಯಂತ ಸೌಜನ್ಯದಿಂದ ನೋಡಿಕೊಳ್ಳುತ್ತಿದ್ದರು. 

Advertisement

ಸಂಪುಟದ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯಾ ನೀಡಿದ್ದರು. ಯಾವುದೇ ಸಚಿವರ ಖಾತೆಯಲ್ಲಿ ಎಂದಿಗೂ ಅವರು ಹಸ್ತಕ್ಷೇಪ ಮಾಡುತ್ತಿರಲಿಲ್ಲ ಗುಣಗಾನ ಮಾಡಿ ಕಂಬನಿ ಮಿಡಿದಿದ್ದಾರೆ ಯತ್ನಾಳ. ಇನ್ನೋರ್ವ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ಕೂಡ ಅಟಲ್‌ಜೀ ಅವರನ್ನು ತಾವು ಭೇಟಿ ಮಾಡಿದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದು, 1994 ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ವಿಜಯಪುರಕ್ಕೆ ಬಂದಿದ್ದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನೇ ಕೈ ಹಿಡಿದು ಕಾರಿನಿಂದ ಇಳಿಸಿಕೊಂಡು, ಬಸನಗೌಡ ಯತ್ನಾಳ ಅವರ ಹಳೆಯ ಮನೆಗೆ ಉಪಹಾರಕ್ಕೆ ಕರೆದೊಯ್ದಿದ್ದೆ. ಜನಾರ್ಧನ ಪತಂಗೆ ಹಾಗೂ ಷಣ್ಮುಖ ಮಡಿವಾಳ ಕೂಡ ನನ್ನೊಂದಿಗೆ ಇದ್ದರು ಎಂಬುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರನ್ನು ಅತ್ಯಂತ ಹತ್ತಿರದಿಂದ ನೋಡಿದ ಆ ಕ್ಷಣ ನನ್ನ ಜೀವಿತಾವಧಿಯ ಅದ್ಭುತ ಅವಿಸ್ಮರಣೀಯ ಘಳಿಗೆ ಎಂದು ಸ್ಮರಿಸಿದ್ದಾರೆ.

 ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಎರಡು ಖಾತೆ ನಿಭಾಯಿಸಿದ್ದೆ. ಎರಡು ಬಾರಿ ಸಂಸದನಾಗಿ ಅವರೊಂದಿಗೆ
ಲೋಕಸಭೆಯಲ್ಲಿ ಆಸೀನನಾಗಿದ್ದೆ ಎಂಬುದೇ ನನ್ನ ಜೀವಿತಾವಧಿಯ ಅವಿಸ್ಮರಣೀಯ ಕ್ಷಣ. ಅವರನ್ನು ಕಳೆದುಕೊಂಡು ಭಾರತ ಮಾತ್ರವಲ್ಲ ವಿಶ್ವವೇ ಓರ್ವ ಸಜ್ಜನ ರಾಜಕೀಯ ನಾಯಕನನ್ನು ಕಳೆದುಕೊಂಡು ಬಡವಾಗಿದೆ. 
 ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಶಾಸಕರು (ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು)

Advertisement

Udayavani is now on Telegram. Click here to join our channel and stay updated with the latest news.

Next