Advertisement

10,265 ಕೋಟಿ ರೂ. ಪೂರಕ ಅಂದಾಜಿಗೆ ಒಪ್ಪಿಗೆ

10:32 PM Sep 23, 2021 | Team Udayavani |

ಬೆಂಗಳೂರು: ರಾಜ್ಯ ಸರಕಾರ ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡದೆ ಆರ್ಥಿಕ ಶಿಸ್ತು ಕಾಯ್ದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಸಲಹೆ ನೀಡಿದ್ದಾರೆ.

Advertisement

ಮಸೂದೆ ಮೇಲೆ ಪರ್ಯಾಲೋಚಿಸಿ, 2021-22ನೇ ಸಾಲಿನ 10,265 ಕೋಟಿ ರೂ. ಗಳ ಪೂರಕ ಅಂದಾಜಿಗೆ ಒಪ್ಪಿಗೆ ನೀಡುವಂತೆ ಕೋರಲಾಯಿತು. ಇದರಲ್ಲಿ ಜೆಜೆಎಂ 1,000 ಕೋಟಿ ರೂ., ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 1,000 ಕೋ. ರೂ.,  ಆರೋಗ್ಯಕ್ಕೆ 3,300 ಕೋಟಿ ರೂ. ವ್ಯಯಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಲಾಯಿತು.

ಈ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ ಅವರು,  ಸರಕಾರ ಎಷ್ಟು ಜಿಎಸ್‌ಟಿ ಸಂಗ್ರಹವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಬಕಾರಿ ತೆರಿಗೆ ಹೊರತುಪಡಿಸಿ ಬೇರೆ ಯಾವುದೇ ಮೂಲದಿಂದ ಆದಾಯ ಬರುತ್ತಿಲ್ಲ. 6,000 ಕೋಟಿ ರೂ. ಅನ್ನು ಯಾವ ಮೂಲದಿಂದ ಸಂಗ್ರಹಿಸಲಾಗುತ್ತಿದೆ  ಎನ್ನುವುದನ್ನು ತಿಳಿಸಬೇಕು. ಇಲ್ಲದಿದ್ದರೆ, ಇರುವ ಯೋಜನೆಗಳ ಅನುದಾನ ಕಡಿತ ಮಾಡಬೇಕಾಗುತ್ತದೆ ಎಂದು  ಹೇಳಿದರು.

ಯಡಿಯೂರಪ್ಪ ಅವರು ಈಗಾಗಲೇ 4.57 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ನಾನು ಅಧಿಕಾರ ಬಿಡುವಾಗ 2 ಲಕ್ಷ ಕೋಟಿ ಸಾಲವಿತ್ತು. ನೀವು ಮುಖ್ಯಮಂತ್ರಿಯಾದ ಮೇಲೆ ಹೊಸ ಯೋಜನೆಗಳನ್ನು ಘೋಷಿಸಿದ್ದೀರಿ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.

ಕೇಂದ್ರ ಸರಕಾರ 2022ರಿಂದ ಜಿಎಸ್‌ಟಿ ಪರಿಹಾರದ ಹಣವನ್ನು ನೀಡುವುದನ್ನು ಸ್ಥಗಿತಗೊಳಿಸಲಿದೆ. ರಾಜ್ಯದ ಹಿತದೃಷ್ಟಿಯಿಂದ ಎಷ್ಟು ಸಾಲ ಮಾಡುತ್ತೀರಿ? ಈ ವರ್ಷ 22,000 ಕೋಟಿ ಆದಾಯ ಕೊರತೆಯಾಗಲಿದೆ. ಹೀಗಾಗಿ ಆರ್ಥಿಕ ಶಿಸ್ತು ಪಾಲನೆ ಅತಿ ಮುಖ್ಯ ಎಂದು ಸಲಹೆ ನೀಡಿದರು.

Advertisement

ರಾಜ್ಯದ ಸಾಲ ಜಿಡಿಪಿಯ ಶೇ. 25 ಮಿತಿಯಲ್ಲಿರಬೇಕು ಎಂದು ನಿಯಮ ಮಾಡಿಕೊಂಡಿದ್ದೇವೆ. ಆದರೆ, ಇದನ್ನು ಮೀರಿದ್ದೇವೆ. ಹೀಗಾಗಿ ಅದರ ಮಿತಿ ಮೀರದಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಕೇಂದ್ರದಿಂದ 15,109 ಕೋಟಿ ರೂ. ಜಿಎಸ್‌ಟಿ ಪರಿಹಾರ

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರ 15,109 ಕೋಟಿ ರೂ. ಜಿಎಸ್‌ಟಿ ಪರಿಹಾರ ನೀಡುವುದಾಗಿ ಹೇಳಿದೆ. ಅದರಲ್ಲಿ 8,542 ಕೋಟಿ ರೂ. ಬಿಡುಗಡೆ ಮಾಡಿದೆ. ಇದೊಂದು ವಿಶೇಷವಾದ ಹಣಕಾಸು ಪರಿಸ್ಥಿತಿ ಇದೆ. ಈಗಿನ ಪರಿಸ್ಥಿತಿಯಲ್ಲಿ  ಅನುತ್ಪಾದಕ ವೆಚ್ಚ ಕಡಿಮೆ ಮಾಡಲಾಗುವುದು. ವಿಜಯಭಾಸ್ಕರ್‌ ಸಮಿತಿ ವರದಿ ಆಧಾರದಲ್ಲಿ ಶೇ. 5ರಷ್ಟು ವೆಚ್ಚ ಕಡಿತ ಮಾಡಲು ಕ್ರಮ ಕೈಗೊಳ್ಳಲಾಗುವುದು. ಲೋಕೋಪಯೋಗಿ, ವಸತಿ ಇಲಾಖೆಯ ಬಾಕಿ ಹಣ ಹಾಗೂ ನೀರಾವರಿ ಯೋಜನೆಗಳಿಗೆ ಹಣ ಒದಗಿಸಲಾಗುವುದು ಎಂದರು.

ಜಿಎಸ್‌ಟಿಯಲ್ಲಿ ಹಣ ಕದಿಯುವ ಕೆಲಸವಾಗುತ್ತಿದ್ದು, ಅದರ ಬಗ್ಗೆ ತನಿಖೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಿಂದ ಶೇ. 14ರಷ್ಟು ಜಿಎಸ್‌ಟಿ ಪರಿಹಾರ ಬರಲಿದೆ. ಕೇಂದ್ರ ಸರಕಾರಕ್ಕೆ ರಾಜ್ಯದ ಪಾಲಿನ ಬಾಕಿ ಹಣ ಕೊಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಅಲ್ಲದೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಹೊಂದಿದ್ದೇನೆ ಎಂದು ಹೇಳಿದರು.

“ಡಯಾಲಿಸಿಸ್‌ ಕೇಂದ್ರ ಸುಸ್ಥಿತಿಗೆ ಶೀಘ್ರ ಕ್ರಮ’ : 

ಬೆಂಗಳೂರು: ತಾಲೂಕು ಕೇಂದ್ರಗಳ ಡಯಾಲಿಸಿಸ್‌ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಸಿಗುತ್ತಿಲ್ಲ. ಅಗತ್ಯ ಸಲಕರಣೆ ಇಲ್ಲ, ಅಲ್ಲಿ ಕೆಲಸ ಮಾಡುವವರಿಗೆ ವೇತನವೂ ಸಿಗುತ್ತಿಲ್ಲ ಎಂಬ ವಿಚಾರವು ಸ್ಪೀಕರ್‌ ಸಹಿತ ಪಕ್ಷಾತೀತವಾಗಿ ಪ್ರಸ್ತಾವವಾಯಿತು.

ಸರಕಾರವು ಪ್ರತಿ ಡಯಾಲಿಸಿಸ್‌ಗೆ 1,155 ರೂ. ವೆಚ್ಚ ಮಾಡುತ್ತಿದೆ. ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆ ವಹಿಸಿದ್ದ ಎರಡು ಕಂಪೆನಿಗಳಲ್ಲಿ ಬಿ.ಆರ್‌.ಶೆಟ್ಟಿಗೆ ಸೇರಿದ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ, ಸರಕಾರ ಪರ್ಯಾಯ ಕ್ರಮಗಳ ಬಗ್ಗೆ  ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಆದಷ್ಟು ಶೀಘ್ರದಲ್ಲಿ ಉತ್ತಮ ಸೇವೆ ಪಡೆಯುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಭರವಸೆ ನೀಡಿದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ, ಈ ಬಗ್ಗೆ ಸರಕಾರ ಅಗತ್ಯ ಗಮನಹರಿಸಬೇಕು ಎಂದು ಸೂಚಿಸಿದರು. ಬಿಜೆಪಿಯ ಡಿ.ಎಸ್‌. ಸುರೇಶ್‌, ಕಾಂಗ್ರೆಸ್‌ನ ಮಹಾಂತೇಶ್‌ ಕೌಜಲಗಿ, ಅಮರೇಗೌಡ ಬಯ್ನಾಪುರ, ಶಿವಾನಂದ ಪಾಟೀಲ್‌ ಪ್ರಮುಖವಾಗಿ ಚರ್ಚೆಯಲ್ಲಿ ಪಾಲ್ಗೊಂಡರು.

ಡಯಾಲಿಸಿಸ್‌ ಕೇಂದ್ರಗಳ ಸಮಸ್ಯೆ ನಮ್ಮ ಗಮನದಲ್ಲಿದೆ. ಇದೇ ಕಾರಣಕ್ಕೆ ಆಗಸ್ಟ್‌ನಿಂದ ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯಡಿ ಅಲ್ಲಿನ ಸಿಬಂದಿಗೆ ವೇತನವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದೂ ಡಾ|  ಸುಧಾಕರ್‌  ಹೇಳಿದರು.

ಮೇಲ್ದರ್ಜೆಗೆ ಕ್ರಮ:

ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಅವರ ಮತ್ತೂಂದು ಪ್ರಶ್ನೆಗೆ  ಉತ್ತರಿಸಿದ  ಆರೋಗ್ಯ ಸಚಿವರು, 250 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವ ಸರಕಾರದ ಮುಂದಿದ್ದು, ಪ್ರತಿ ತಾಲೂಕಿನ ಒಂದಾದರೂ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಸಕಲ ಸೌಲಭ್ಯ ಸಹಿತ ಮೇಲ್ದರ್ಜೆಗೇರಲಿದೆ ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next