ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾ.ಪಂ. ಪಿಡಿಒ ಹಾಗೂ ಸಿಬಂದಿ ಮೇಲೆ ಹಲ್ಲೆ, ಸರಕಾರಿ ಸೊತ್ತು ನಾಶ, ನಗದು ದರೋಡೆ ಹಾಗೂ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪಿಡಿಒ ನೀಡಿದ ದೂರಿನಂತೆ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಗ್ರಾ.ಪಂ. ಸದಸ್ಯೆ ಯಮುನಾ, ಅವರ ಪುತ್ರ ನವೀನ್ ನಾಯ್ಕ ಹಾಗೂ ತಾ.ಪಂ. ಮಾಜಿ ಸದಸ್ಯ ಮಂಜುನಾಥ ಸಾಲಿಯಾನ್ ಎಂಬವರು ಈ ಪ್ರಕರಣದ ಆರೋಪಿಗಳು. ತೆಕ್ಕಾರು ಗ್ರಾ.ಪಂ. ಸ್ವತ್ಛತಾಗಾರ್ತಿ ಪ್ರಮೀಳಾ ಮತ್ತು ಪಿಡಿಒ ಸುಮಯ್ನಾ ಅವರು ಈ ಸಂಬಂಧ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಗ್ರಾ.ಪಂ. ವಿವಾದಿತ ಕಟ್ಟಡವನ್ನು ಯಮುನಾ ಅವರು ಅತಿಕ್ರಮಿಸಿಕೊಂಡಿದ್ದು, ಇದರ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಇದೆ. ಅದೇ ವಿವಾದಿತ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ. ವತಿಯಿಂದ ಸಿಬಂದಿ ಪ್ರಮೀಳಾ ಅವರು ಯಮುನಾ ಅವರಿಗೆ ನೊಟೀಸ್ ನೀಡಿ ಅದರ ಸ್ವೀಕೃತಿ ಪಡೆದು, ಗ್ರಾ.ಪಂ.ಗೆ ಹಿಂದುರಿಗಿಸಿದ್ದರು.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಯಮುನಾ ಹಾಗೂ ಅವರ ಪುತ್ರ ನವೀನ್ ನಾಯ್ಕ ಅವರು ಮಂಜುನಾಥ್ ಸಾಲಿಯಾನ್ ಎಂಬವರ ಕುಮ್ಮಕ್ಕಿನಿಂದ ಗ್ರಾ.ಪಂ.ಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ಈ ಸಂದರ್ಭ ಅವರು ಸಿಬಂದಿ ಮೇಲೆ ಕೈ ಮಾಡಿ, ಪಿಡಿಒ ಹಾಗೂ ಅವರಿಬ್ಬರ ಮೇಲೆ ಹಲ್ಲೆ ನಡೆಸಿ, ಮಾನಭಂಗ ನಡೆಸಿದ್ದಾರೆ. ಅಲ್ಲದೆ, ಪಂಚಾಯತ್ನಲ್ಲಿದ್ದ ಸರಕಾರಿ ಹಣ 3,000 ರೂ.ಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.