Advertisement

ಅಶ್ವತ್ಥಾಮ ಗರ್ವಭಂಗ ಮಾಡಿದ ಸತ್ವ ಶೈಥಿಲ್ಯ

09:52 AM Oct 24, 2019 | mahesh |

ಅಶ್ವತ್ಥಾಮ ಮಹಾಭಾರತ ಅವಧಿಗೆ ಮಾತ್ರ ಕಾಯಸಹಿತ ಚಿರಂಜೀವಿ ಅನಂತರ ಕಾಯರಹಿತನಾಗಿ ಇರುತ್ತಾನೆ. ಅದಕ್ಕೆ ಕಾರಣಗಳು ಹಾಗೂ ಚಿರಂಜೀವಿ ಎಂಬ ಕಾರಣದಿಂದ ಉಂಟಾದ ಗರ್ವವನ್ನು ಕೃಷ್ಣ ಮುರಿದ ಕಥಾ ಹಂದರವೇ ಸತ್ವಶೈಥಿಲ್ಯ.ಸುಬ್ರಹ್ಮಣ್ಯ ಧಾರೇಶ್ವರ ರಾಜಾಂಗಣದಲ್ಲಿ ಧಾರೇಶ್ವರ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ಸತ್ವ ಶೆ„ಥಿಲ್ಯ ಪ್ರದರ್ಶನ ಸಾಕಾರಗೊಳಿಸಿದರು. ಪದ್ಯಗಳ ಮೂಲಕ ಪ್ರಸಂಗವನ್ನು ನೀಡಿದವರು ಶ್ರೀಧರ ಡಿ.ಎಸ್‌. ತನ್ನಲ್ಲಿರುವ ವಿಶೇಷ ಶಕ್ತಿ ಅಥವಾ ವಸ್ತು ಲೋಕಕಲ್ಯಾಣಾರ್ಥವಾಗಿ ಇರುವುದು ಎಂಬ ಅಂಶ ಹೊಂದಿದವ‌ನಿಗೆ ಸ್ವಯಂವೇದ್ಯವಾಗದ ಹೊರತು ಆತ ಆ ಶಕ್ತಿಯನ್ನು ಲೋಕಕಂಟಕನಾಗಿ ಬಳಸಬಲ್ಲ, ಆ ವಸ್ತುವಿನಂದಲೇ ಅಹಂಕಾರಿಯಾಗಬಲ್ಲ ಎನ್ನುವುದು ಕಥೆಯುದ್ದಕ್ಕೂ ಸಾಗಿಬಂತು.

Advertisement

ಧರ್ಮರಾಯ (ಪ್ರಭಾಕರ ಚಿಟ್ಟಾಣಿ) ಅರ್ಜುನ (ಸಿದ್ದಾಪುರ ಅಶೋಕ ಭಟ್‌) ಸಂವಾದದ ಮೂಲಕ ಪೀಠಿಕೆ ಆರಂಭ. ಯುದ್ಧದ ಕುರಿತು ಚಿಂತನೆ ಇತ್ಯಾದಿ. ಆಚಾರ್ಯ ದ್ರೋಣರು (ಸುಜಯೀಂದ್ರ ಹಂದೆ ಕೋಟ) ಬ್ರಹ್ಮಶಿರೋ ಅಸ್ತ್ರವನ್ನು ಅರ್ಜುನನ ಹೊರತಾಗಿ ಯಾರಿಗೂ ಉಪದೇಶಿಸಿರಲಿಲ್ಲ. ಸಂಯಮಿಯಾದ ಅರ್ಜುನ ಅದನ್ನು ಲೋಕೋಪದ್ರವಕ್ಕೆ ಬಳಸಲಾರ ಎಂಬ ನಂಬಿಕೆಯಿಂದ ಅಸ್ತ್ರ ಉಪದೇಶ ಹಾಗೂ ಉಪಸಂಹಾರವನ್ನು ಕಲಿಸಿದ್ದರು. ಈ ಅಸ್ತ್ರದ ಮೂಲಕ ಸಮಸ್ತ ಲೋಕವನ್ನು ನಾಶ ಮಾಡಬಹುದು, ಭವಿಷ್ಯದ ಜೀವಸಂಕುಲದ ಮೇಲೂ ಪ್ರತಿಕೂಲ ಪರಿಣಾಮ ಬೀರ‌ಬಹುದು. ಪಾಂಡವ ಕೌರವರ ನಡುವೆ ವೈಮನಸ್ಸು ಮೂಡಿದಾಗ ದ್ರೋಣರಿಗೆ ಚಿಂತೆ ಆರಂಭವಾಗುತ್ತದೆ. ಯುದ್ಧ ಸಂಭವಿಸಿ ಪಾರ್ಥ ಅಸ್ತ್ರ ಪ್ರಯೋಗಿಸಿದರೆ ಲೋಕಕ್ಕೆ ಕಷ್ಟವಾಗುತ್ತದೆ ಎಂದು ಮಗ ಅಶ್ವತ್ಥಾಮನಲ್ಲಿ (ನೀಲ್ಗೊàಡು ಶಂಕರ ಹೆಗಡೆ) ಹೇಳಿದರು. ಅಸ್ತ್ರದ ಕುರಿತು ಕುತೂಹಲಭರಿತನಾದ ಗುರುಪುತ್ರ ಅಶ್ವತ್ಥಾಮ ಕೌರವರು ಸೋಲುವರೆಂಬ ಭೀತಿ ಬಿಟ್ಟು ದ್ರೋಣರನ್ನು ಸಂಕಟವಿಮೋಚರನ್ನಾ°ಗಿಸಿ ಕೌರವರಿಗೆ ಜಯ ತಂದುಕೊಡುವೆ, ಅಸ್ತ್ರ ಪ್ರಯೋಗ ತನಗೂ ಉಪದೇಶಿಸಿ ಎಂದು ಮನವಿ ಮಾಡುತ್ತಾನೆ. ದ್ರೋಣರು ಪಾತ್ರಾಪಾತ್ರ ವಿವೇಚನೆಯನ್ನು ತಿಳಿಸಿ, ಸದಾ ಕೋಪೋದ್ರಿಕ್ತನಾದವನಿಗೆ ಉಪದೇಶಕ್ಕೆ ನಿರಾಕರಿಸಿದರು. ಆಗ ನೀವು ಅರ್ಜುನನ ಜತೆಗೇ ಇರಿ ಎಂದು ಮೂದಲಿಸುತ್ತಾನೆ. ಒತ್ತಾಯದಿಂದ ಅಸ್ತ್ರ ಪ್ರಯೋಗ ಕಲಿತರೂ ಉಪಸಂಹಾರ ಕಲಿಯಲು ನಿರಾಕರಿಸುತ್ತಾನೆ.ಅಸ್ತ್ರೋಪದೇಶದ ಬಳಿಕ ತನ್ನ ಬ್ರಹ್ಮಶಿರೋ ಅಸ್ತ್ರಕ್ಕಿಂತ ಕೃಷ್ಣನ ಸುದರ್ಶನ ಚಕ್ರವೇ ಮೇಲು ಎಂದು ವಿನಿಮಯ ಮಾಡುವ ಸಲುವಾಗಿ ಕೃಷ್ಣನಲ್ಲಿಗೆ (ತೀರ್ಥಹಳ್ಳಿ ಗೋಪಾಲಾಚಾರ್‌) ತೆರಳುತ್ತಾನೆ. ಪ್ರವಾಸದಲ್ಲಿರುವ ಕೃಷ್ಣ ದ್ವಾರಕೆಗೆ ಬರುವಾಗ ಸಂತೋಷದಿಂದ ಇದಿರುಗೊಳ್ಳಬೇಕು ಎಂದು ದಾರುಕ (ಕಾಸರಕೋಡು ಶ್ರೀಧರ) ನೃತ್ಯ ಸ್ವಾಗತ ಏರ್ಪಡಿಸಿರುತ್ತಾನೆ. ನಂತರ ಕೃಷ್ಣ ಅಶ್ವತ್ಥಾಮರ ಜತೆ ಸಂವಾದ ನಡೆದು ಸುದರ್ಶನ ಚಕ್ರವನ್ನು ಎತ್ತಲೂ ಆಗದೇ ಅಶ್ವತ್ಥಾಮ ಮರಳುತ್ತಾನೆ.

ಮಹಾಭಾರತ ಯುದ್ಧ ಮುಗಿದ ನಂತರ ತೊಡೆ ಮುರಿದು ಮಲಗಿದ್ದ ದುಯೊìàಧನನ ಅಪೇಕ್ಷೆಯಂತೆ ಪಾಂಡವರ ಶಿರವನ್ನು ತರಲು ಹೋದ ಅಶ್ವತ್ಥಾಮ ಉಪಪಾಂಡವರನ್ನು ಸಂಹರಿಸುತ್ತಾನೆ. ಅದನ್ನು ತಿಳಿದ ಭೀಮ (ಪ್ರಸನ್ನ ಶೆಟ್ಟಿಗಾರ್‌) ಅಶ್ವತ್ಥಾಮನನ್ನು ಕೊಲ್ಲಲು ಹೋಗುವಾಗ ದ್ರೌಪದಿ (ಗೋವಿಂದ ವಂಡಾರ್‌) ತಡೆಯುತ್ತಾಳೆ. ಕೃಷ್ಣ ಅಶ್ವತ್ಥಾಮನ ಶಿರೋಮಣಿಯನ್ನು ಕೀಳಲು ಸೂಚಿಸುತ್ತಾನೆ. ಅಶ್ವತ್ಥಾಮ ಬ್ರಹ್ಮಶಿರೋ ಅಸ್ತ್ರ ಪ್ರಯೋಗಿಸುತ್ತಾನೆ. ಅಸ್ತ್ರವು ಜಗತ್ತನ್ನೇ ನಾಶ ಮಾಡುತ್ತದೆ ಎಂದು ತಿಳಿದಿದ್ದ ಕೃಷ್ಣ ಅರ್ಜುನನಲ್ಲಿ ಪ್ರತಿಯಾಗಿ ಬ್ರಹ್ಮಶಿರೋ ಅಸ್ತ್ರ ಪ್ರಯೋಗಿಸಲು ಹೇಳುತ್ತಾನೆ.

ಎರಡೂ ಅಸ್ತ್ರಗಳು ಒಂದಕ್ಕೊಂದು ಘರ್ಷಿಸಿ ಲೋಕಲಯವಾಗುವಾಗ ಅರ್ಜುನ ತನ್ನ ಅಸ್ತ್ರವನ್ನು ಉಪಸಂಹರಿಸುತ್ತಾನೆ. ಆದರೆ ಉಪಸಂಹಾರ ತಿಳಿಯದ ಅಶ್ವತ್ಥಾಮ ತನ್ನ ಬ್ರಹ್ಮಶಿರೋ ಅಸ್ತ್ರವನ್ನು ಉತ್ತರೆಯ ಗರ್ಭದೆಡೆಗೆ ಪ್ರಯೋಗಿಸುತ್ತಾನೆ. ಆಗ ಕೃಷ್ಣ ಅದನ್ನು ನಿವಾರಿಸಿ ಪಾಂಡವರ ಕುಲದ ಕುಡಿಯನ್ನು ರಕ್ಷಿಸುತ್ತಾನೆ. ಋಷಿಶಾಪದಿಂದ 3 ಸಾವಿರ ವರ್ಷಗಳಷ್ಟೆ ಕಾಯಸಹಿತ ಚಿರಂಜೀವಿಯಾಗಿದ್ದ ಅಶ್ವತ್ಥಾಮ ಕುಷ್ಠ, ವ್ರಣದಂತಹ ರೋಗದಿಂದ ಕಾಯ ಬಿಡುತ್ತಾನೆ. ನಂತರ ಮಾಯದ ರೂಪಿನಿಂದ ಇರುತ್ತಾನೆ ಎನ್ನುವುದು ಕಥಾಸಾರಾಂಶ.

ಅಸ್ತ್ರಗಳಾಗಿ ಹರೀಶ್‌ ಜಪ್ತಿ ಹಾಗೂ ನಿತಿನ್‌ ಶೆಟ್ಟಿ ಅಭಿನಯಿಸಿದ್ದರು. ಭಾಗವತಿಕೆಯಲ್ಲಿ ಧಾರೇಶ್ವರ , ಮದ್ದಳೆಯಲ್ಲಿ ಎನ್‌.ಜಿ. ಹೆಗಡೆ, ಚೆಂಡೆಯಲ್ಲಿ ಕಾರ್ತಿಕ್‌ ಧಾರೇಶ್ವರ ಪ್ರಸಂಗವನ್ನು ಚಂದಗಾಣಿಸಿದರು. ನೀಲ್ಗೊàಡು ಅಶ್ವತ್ಥಾಮ ಪಾತ್ರದಲ್ಲಿ ತನ್ನ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿ ಶ್ಲಾಘನೀಯವಾದರು.

Advertisement

ಧಾರೇಶ್ವರರು ತಮ್ಮ ಮಾಧುರ್ಯಯುತ ಸ್ವರದಿಂದ, ಅತ್ಯುತðಷ್ಟ ಪದ್ಯಗಳಿಂದ ಕೇಳುಗರ ಕಿವಿಗೆ, ಮನಸಿಗೆ ಹಿತವನ್ನುಂಟು ಮಾಡಿದರು. ||ಮರಣವಿಲ್ಲದ ತನ್ನೊಳು ಇರಲು ದಿವ್ಯಾಸ್ತ್ರವು ಹರಿ ಪಾರ್ಥರಿಗೆ ಎಣೆ ನಾನು, ಪರಮ ಸುದರ್ಶನ ಬರಲೆನ್ನ ಹೊರೆಗಾಗ|| ಎಂಬ ಅಶ್ವತ್ಥಾಮನ ಪದ್ಯ, ||ಧನವ ಕೇಳೆ ಬಂದುದಲ್ಲ ನಂದ ನಂದನ, ಎನ್ನ ಫ‌ಣೆಯ ರತ್ನಕೆ ಎಣೆಯೇ ನಿನ್ನ ದ್ವಾರಕೆ, ಎನಗೆ ನೀಡಬೇಕು ನೀನು ವರಸುದರ್ಶನ|| ಎಂಬ ಸುಂದರ, ಸ್ಪಷ್ಟ, ಸರಳ ಸಾಹಿತ್ಯದ ಮೂಲಕ ಕಥೆಯನ್ನು ಪ್ರಸಂಗ ಮುಗಿದ ಬಳಿಕವೂ ಪದ್ಯದ ಮೂಲಕವೇ ಪ್ರೇಕ್ಷಕರಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಭೂಪ್‌ ಮತ್ತು ಪಹಾಡಿ ರಾಗದಲ್ಲಿ ರೂಪಕ ತಾಳದಲ್ಲಿ ಧಾರೇಶ್ವರರು ಹಾಡಿದ “ಧನವ ಕೇಳೆ ಬಂದುದಲ್ಲ’, ದೇಸ್‌ ರಾಗದಲ್ಲಿ ಹಾಡಿದ ||ಆಗದಾಗದು ಮಗನೇ ದಿವ್ಯ ಬ್ರಹ್ಮಶಿರದ ಸಿದ್ಧಿ ಯೋಗಮಾನಸಗಲ್ಲದೇ ತರುಣ ಕೇಳೀ ದಿವ್ಯ ಶರವನು ಧರಣಿ ಸಹಿಸದು ಕೋಪದಿಂದ ನೀ ಉರಿದುಬಿಟ್ಟರೆ ಕಷ್ಟವದರಿಂ ಲೋಕನಾಶವಾಗುವುದು ||ಎಂಬ ಹಾಡು ಸದಾ ಸ್ಮರಣೀಯ. ನೆಬ್ಬೂರರ ಕಾಲಘಟ್ಟದಲ್ಲಿ ತ್ರಿವುಡೆ ತಾಳಕ್ಕೆ ಬಳಸುತ್ತಿದ್ದ ಭೂಪ್‌ ರಾಗವನ್ನು ಕಾಳಿಂಗ ನಾವಡರು ಅಮೃತಮತಿ ಪ್ರಸಂಗದಲ್ಲಿ ರೂಪಕ ತಾಳಕ್ಕೆ ಬಳಸಿದರು. ಧಾರೇಶ್ವರರು ಪದ್ಮಪಲ್ಲವಿ ಪ್ರಸಂಗದಲ್ಲಿ ಇದನ್ನು ಮುಂದುವರಿಸಿದರು. ಭೂಪ್‌ ಜತೆಗೆ ಪಹಾಡಿಯನ್ನು ಮಿಶ್ರಣ ಮಾಡಿ ವಿಶಿಷ್ಟ ಸ್ವರಸಂಯೋಜನೆಯಲ್ಲಿ ಗಾನಸುಧೆ ಉಣಬಡಿಸಿದ್ದು ಅನನ್ಯವಾಗಿತ್ತು. ಕೃಷ್ಣನ ಸ್ವಾಗತಕ್ಕೆ ಕೋಲಾಟದ ಹಾಡು ಸೇರ್ಪಡೆ ||ಡೋಲು ತಮ್ಮಟೆ ಮೊಸರು ಕುಡಿಕೆ ಮೇಳ ಕುಣಿಯಲು ತಾನು ಕುಣಿದು, ನಂದಗೋಕುಲದಲ್ಲಿ ಚಂದಗೋವಳ ಕಾಯ್ದ ಆನಂದ ಮೂರುತಿ ಕೃಷ್ಣ ಬಂದ ನೋಡು|| ಇದು ಧಾರೇಶ್ವರರ ರಂಗಮಾಂತ್ರಿಕತೆಯನ್ನು ಸೂಚಿಸುತ್ತದೆ. ಪ್ರಸಂಗ ಎಲ್ಲೂ ಓಘ ಕಳೆದುಕೊಳ್ಳದಂತೆ ಪೌರಾಣಿಕ ಕಥೆಯಲ್ಲಿ ಹಿಡಿದಿಟ್ಟುಕೊಳ್ಳಲು ಅನುವಾಗುವಂತೆ ಅವರು ಕೋಲಾಟವನ್ನು ಸೇರ್ಪಡೆಗೊಳಿಸಿದ್ದರು.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next