Advertisement

ಸ್ಥಾನಕ್ಕಾಗಿ ಅರಾಜಕೀಯ: ರಾಜಸ್ಥಾನ ಸಿಎಂ ಆಯ್ಕೆ ವಿಚಾರ

12:41 AM Sep 27, 2022 | Team Udayavani |

ಹೊಸದಿಲ್ಲಿ/ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಎಐಸಿಸಿ ಅಧ್ಯಕ್ಷ ಗಾದಿ ವಿಷಯ ಹಾದಿಬೀದಿ ರಂಪವಾಗಿದೆ. ತಮ್ಮ ಉತ್ತರಾಧಿಕಾರಿ ವಿಷಯದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ವರ್ತನೆ ಬಗ್ಗೆ ಹೈಕಮಾಂಡ್‌ ಗರಂ ಆಗಿದೆ. ಅಷ್ಟೇ ಅಲ್ಲ ಗಾಂಧಿ ಕುಟುಂಬದ ನಂಬಿಕಸ್ಥ ಎಂದೇ ಬಿಂಬಿತರಾಗಿದ್ದ ಗೆಹ್ಲೋಟ್ ಈಗ ಎಐಸಿಸಿ ಅಧ್ಯಕ್ಷ ಗಾದಿಯ ಸ್ಪರ್ಧೆಯಿಂದಲೇ ಹೊರಬಿದ್ದಿದ್ದಾರೆ.

Advertisement

ರವಿವಾರ ರಾತ್ರಿ ಜೈಪುರದಲ್ಲಿ ಹೈಡ್ರಾಮಾ ನಡೆದಿದ್ದು, ಅಶೋಕ್‌ ಗೆಹ್ಲೋಟ್ ಬಣದ 92 ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ಸಚಿನ್‌ ಪೈಲಟ್‌ಗೆ ಸಿಎಂ ಹುದ್ದೆ ನೀಡಬಾರದು ಎಂದು ಪಟ್ಟು ಹಿಡಿದಿದ್ದರು. ಈ ಡ್ರಾಮಾ ಸೋಮವಾರ ಬೆಳಗ್ಗೆಯೂ ಮುಂದುವರಿದಿದ್ದು, ಇಡೀ ಪ್ರಹಸನದ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಂಡವಾಗಿದ್ದಾರೆ. ಗೆಹ್ಲೋಟ್ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಈ ಮಧ್ಯೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಚುನಾವಣೆಯ ಪ್ರಕ್ರಿಯೆಯಿಂದ ಅಶೋಕ್‌ ಗೆಹ್ಲೋಟ್ ಹಿಂದಕ್ಕೆ ಸರಿಯುವಂತೆ ಸೂಚಿಸಲಾಗಿದೆ. ಸೆ. 30ರಂದು ಮತ್ತೊಬ್ಬ ನಾಯಕನಿಗೆ ನಾಮಪತ್ರ ಸಲ್ಲಿಸಲು ಸೂಚಿಸಲಾಗಿದೆ ಎನ್ನಲಾಗಿದೆ. ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರು ವವರಿಗೆ (ಸಚಿನ್‌ ಪೈಲಟ್‌) ಮನ್ನಣೆ ಬೇಡ. ಇದು ಗೆಹ್ಲೋಟ್ ಅವರನ್ನು ತೆಗೆದು ಹಾಕಲು ಮಾಡಿದ ಸಂಚು. ವರಿಷ್ಠರ ಮಾತುಗಳನ್ನು ಸಿಎಂ ಚಾಚೂ ತಪ್ಪದೆ ಪಾಲಿಸಿದ್ದಾರೆ ಎಂದು ಸಿಎಂ ಗೆಹ್ಲೋಟ್ ಬೆಂಬಲಿಗ ಸಚಿವ ಶಾಂತಿ ಧರಿವಾಲ್‌ ಹೇಳಿದ್ದಾರೆ.

ಖರ್ಗೆ ಸ್ಪರ್ಧೆ ಸಂಭವ
ಸಚಿನ್‌ ಪೈಲಟ್‌ಗೆ ಸಿಎಂ ಸ್ಥಾನ ಸಿಗಬಾರದು ಎಂದು ಗೆಹ್ಲೋಟ್ ತಕರಾರು ತೆಗೆದಿರುವಂತೆಯೇ ಸೋನಿಯಾ ನಿವಾಸದಲ್ಲಿ ಪ್ರಿಯಾಂಕಾ ವಾದ್ರಾ, ಕೆ.ಸಿ. ವೇಣುಗೋಪಾಲ್‌, ಮಲ್ಲಿಕಾರ್ಜುನ ಖರ್ಗೆ, ಕಮಲ್‌ನಾಥ್‌, ಅಜಯ ಮಕೇನ್‌ ಸಭೆ ನಡೆಸಿದರು.

ಈಗ ವೇಣುಗೋಪಾಲ್‌, ದಿಗ್ವಿಜಯ್‌ ಸಿಂಗ್‌, ಮುಕುಲ್‌ ವಾಸ್ನಿಕ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಹುದ್ದೆಯ ಸ್ಪರ್ಧೆಗೆ ಬಂದಿದ್ದಾರೆ. ಇವ ರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಹೈಕಮಾಂಡ್‌ ಉತ್ಸುಕವಾಗಿದೆ ಎಂದು ಹೇಳಲಾಗಿದೆ.

Advertisement

ಲಿಖಿತ ವರದಿಗೆ ಸೂಚನೆ
ಸಿಎಂ ಅಶೋಕ್‌ ಗೆಹ್ಲೋಟ್ ಸೂಚಿಸುವ ವ್ಯಕ್ತಿಯೇ ಮುಖ್ಯಮಂತ್ರಿಯಾಗಬೇಕು ಎಂದು 92 ಮಂದಿ ಶಾಸಕರು ಪಟ್ಟುಹಿಡಿದಿದ್ದು, ಶಾಸಕಾಂಗ ಸಭೆ ನಡೆಯದೇ ಇರುವುದು ಕಾಂಗ್ರೆಸ್‌ಗೆ ಆಘಾತ ತಂದೊಡ್ಡಿದೆ. ವಿಶೇಷವೆಂದರೆ, ಸೋಮವಾರ ಬೆಳಗ್ಗೆ ಅಶೋಕ್‌ ಗೆಹ್ಲೋಟ್ ಪರ ಶಾಸಕರಿಗಾಗಿ ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಕೆನ್‌ ಕಾದು ಕುಳಿತರೂ ಯಾರೊಬ್ಬರೂ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಜೈಪುರದಿಂದ ಹೊಸ ದಿಲ್ಲಿಗೆ ದೌಡಾಯಿಸಿದ ಖರ್ಗೆ, ಕಾಂಗ್ರೆಸ್‌ ಉಸ್ತುವಾರಿ ಅಜಯ ಮಕೇನ್‌ ಸೋನಿಯಾ ಅವರಿಗೆ ಮೌಖಿಕ ವರದಿ ಒಪ್ಪಿಸಿ  ದ್ದಾರೆ. ಅಷ್ಟಕ್ಕೇ ತೃಪ್ತರಾಗದ ಅವರು, ಶೀಘ್ರಾತಿಶೀಘ್ರ ಲಿಖಿತ ವರದಿ ನೀಡುವಂತೆ ಇಬ್ಬರು ಮುಖಂಡರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next