Advertisement

ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ: ಪ್ರವೀಣ್‌ ಶೆಟ್ಟಿ ಪುತ್ತೂರು ಆಯ್ಕೆ

12:04 PM May 25, 2022 | Team Udayavani |

ಮುಂಬಯಿ: 2020-2022 ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪುಣೆಯ ಜನಪ್ರಿಯ ಸಮಾಜ ಸೇವಕ, ಕಲಾ ಪೋಷಕ, ಹೊಟೇಲ್‌ ಉದ್ಯಮಿ ಪ್ರವೀಣ್‌ ಶೆಟ್ಟಿ ಪುತ್ತೂರು ಇವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 25 ರಂದು ಸಂಜೆ 6.30 ಕ್ಕೆ ನಾಡಿನ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಜನ್ಮ ಭೂಮಿಯಲ್ಲಿ ಮತ್ತು ಕರ್ಮಭೂಮಿಯಲ್ಲಿ ಸಮಾಜ ಸೇವೆ ಮಾಡುವ ಭಾಗ್ಯವನ್ನು ಪಡೆದುಕೊಳ್ಳುವ ಬೆರಳೆಣಿಕೆಯ ಜನರಲ್ಲಿ ಯಶಸ್ವಿ ಉದ್ಯಮಿ, ಕಲಾಪ್ರೇಮಿ, ಕಲಾ ಸಂಘಟಕ, ಸಮಾಜ ಸೇವಾಕರ್ತ ಪ್ರವೀಣ್‌ ಶೆಟ್ಟಿ ಪುತ್ತೂರು ಅವರು ಕೂಡಾ ಒಬ್ಬರು. ತನ್ನ ಆದಾಯದ ಒಂದಾಂಶವನ್ನು ಬಡವರಿಗೆ ಸಹಾಯ ಹಸ್ತ ನೀಡುವಲ್ಲಿ ಇವರದ್ದು ಎತ್ತಿದ ಕೈ. ಸಮಾಜ ಸೇವಕನಾಗಿ, ಕಲಾ ಸೇವಕನಾಗಿ, ಸಂಕಷ್ಟದಲ್ಲಿರುವವರಿಗೆ ಅಪತ್ಭಾಂದವರಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯ ಸೇರಿದಂತೆ ಸಮಾಜದಲ್ಲಿ ಗುರುತಿಸಿಕೊಂಡಿರುವ ಪ್ರವೀಣ್‌ ಶೆಟ್ಟಿ ಪುತ್ತೂರು ಅವರು ಯುವ ಪೀಳಿಗೆಗೆ ಮಾದರಿ.

ಕ್ಯಾಟರಿಂಗ್‌ ಉದ್ಯಮದಲ್ಲಿ ಯಶಸ್ಸು :

ಪುಣೆಯ ಅರ್‌ಬಿಐ ಪ್ರವೀಣಣ್ಣ ಎಂದೇ ಪ್ರಸಿದ್ದಿ ಪಡೆದ ಪ್ರವೀಣ್‌ ಶೆಟ್ಟಿ ಇವರು ಉಡುಪಿಯ ಪುತ್ತೂರಿನಲ್ಲಿ ಕಲ್ಯಾಣಿ ಶೆಟ್ಟಿ ಮತ್ತು ಶಂಕರ ಶೆಟ್ಟಿ ದಂಪತಿಯ ಪುತ್ರನಾಗಿ ಜನಿಸಿ, ಹುಟ್ಟೂರಿನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ, ಪದವಿ ಶಿಕ್ಷಣವನ್ನು ಮುಗಿಸಿ ಎಲ್ಲರಂತೆಯೇ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಉದ್ಯೋಗವನ್ನು ಅರಸಿ ಪುಣೆಗೆ ಬಂದು ಹೊಟೇಲ್‌ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. 1999ರಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ಪುಣೆಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕ್ಯಾಂಟೀನ್‌ ಉದ್ಯಮವನ್ನು ಪ್ರಾರಂಭಿಸಿದರು. ಬಳಿಕ ಹಂತ ಹಂತವಾಗಿ ಮೇಲೆಕ್ಕೇರಿ ಹಲವಾರು ಕಾರ್ಪೊರೇಟ್‌ ಕಂಪನಿಗಳು ಸೇರಿದಂತೆ ಎ. ಪಿ ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈವೇಟ್‌ ಹೆಸರಿನಲ್ಲಿ ಕ್ಯಾಟರಿಂಗ್‌ ಉದ್ಯಮವನ್ನು ಪ್ರಾರಂಬಿಸಿ ಉತ್ತಮ ಸೇವೆಯನ್ನು ನೀಡುವ ಮೂಲಕ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದ್ದಾರೆ. ಹೊಟೇಲ್‌ ಉದ್ಯಮದಲ್ಲೂ ಆಸಕ್ತಿ ಹೊಂದಿರುವ ಇವರು ಪುಣೆ ಹಾಗೂ ಉಡುಪಿಯಲ್ಲಿ ಹೊಟೇಲ್‌ಗ‌ಳನ್ನು ಪ್ರಾರಂಭಿಸಿ ಯಶಸ್ಸನ್ನು ಪಡೆದಿದ್ದಾರೆ.

ಕಲೆ-ಕಲಾವಿದರ ಆಶಾಕಿರಣ :

Advertisement

ತುಳುನಾಡಿನ ಪ್ರೀತಿಯಿಂದ, ಕರ್ಮಭೂಮಿಯಲ್ಲೂ ತವರೂರ ತುಳು ಭಾಷೆ, ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವು ದಲ್ಲದೆ, ಹಲವಾರು ಸಂಘ ಸಂಸ್ಥೆಗಳಿಗೆ ನೆರವು ನೀಡಿದ್ದಾರೆ. ಯಕ್ಷಗಾನದ ಮೇಲಿನ ಅತೀವ ಪ್ರೀತಿಯಿಂದ 2009ರಲ್ಲಿ ಪುಣೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು  85 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಪುಣೆ ಬಂಟರ ಸಂಘದ ಟ್ರಸ್ಟಿಯಾಗಿ, ಸಂಘದ ಉಪಾಧ್ಯಕ್ಷರಾಗಿ, ಉಡುಪಿ ಪುತ್ತೂರು ಬಂಟರ ಸಂಘದ ಗೌರವಾಧ್ಯಕ್ಷರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ಬರ ಪರಿಸ್ಥಿತಿಯ ಸಮಯದಲ್ಲಿ ಉಡುಪಿಯ ಸುಬ್ರಹ್ಮಣ್ಯ ವಾರ್ಡ್‌ನ ಜನರು ನೀರಿಲ್ಲದೆ ಪರದಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಸ್ವಂತ ಜಾಗದಲ್ಲಿ ಬಾವಿಯನ್ನು ನಿರ್ಮಿಸಿ ಸುಮಾರು 3 ಗ್ರಾಮದವರಿಗೆ ನೀರನ್ನು ಒದಗಿಸಿದ ಪುಣ್ಯ ಕಾರ್ಯ ಇವರದ್ದಾಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲೂ ತುಳು-ಕನ್ನಡಿಗರ ಹಲವಾರು ಬಡ ಕುಟುಂಬಗಳು ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ. ತುಳುನಾಡಿನ ಹಲವಾರು ಯಕ್ಷಗಾನ ಕಲಾವಿದರು, ರಂಗ ಕರ್ಮಿಗಳಿಗೆ ತನ್ನಿಂದಾದ ಧನ ಸಹಾಯವನ್ನು ನೀಡಿದ್ದಾರೆ. ಮನೆ ಬಾಡಿಗೆ ಕಟ್ಟಲಾಗದೆ ತನ್ನ ಬಳಿಗೆ ಬಂದವರಿಗೆ, ಲಾಕ್‌ಡೌನ್‌ನಿಂದ ಎಲ್ಲವನ್ನು ಕಳಕೊಂಡು ಊರಿಗೆ ಹೋಗಲು ಕಷ್ಟದಲ್ಲಿದ್ದವರಿಗೆ ಸಹಕರಿಸಿದ್ದಾರೆ.

ಹಲವಾರು ಪ್ರಶಸ್ತಿ-ಪುರಸ್ಕಾರಗಳು :

ಇವರ ಅತ್ಯುತ್ತಮ ಹಾಸ್ಪಿಟಾಲಿಟಿ ಸರ್ವಿಸ್‌ಗೆ ರಾಷ್ಟ್ರ ಮಟ್ಟದ ಗೌರವವೂ ಲಭಿಸಿದೆ. ಇವರ ಸಾಮಾಜಪರ ಕಾರ್ಯಗಳಿಗೆ ವಿಶ್ವ ತೌಳವ ರತ್ನ ಪ್ರಶಸ್ತಿ, ತೌಳವ ಪ್ರಶಸ್ತಿ, ಸುಬ್ಬಣ್ಣ ಶೆಟ್ಟಿ ಸಂಸ್ಕರಣ ಪ್ರಶಸ್ತಿ, ಮುಂಬಯಿ ಕಲ್ವ ಫ್ರೆಂಡ್ಸ್‌ ಪ್ರಶಸ್ತಿ, ಕಾಪು ತುಳುಕೂಟದ ಪ್ರಶಸ್ತಿ, ಯಕ್ಷ ರûಾ ಪ್ರಶಸ್ತಿ, ಭ್ರಾಮರಿ ಯಕ್ಷನೃತ್ಯಕಲಾ ನಿಲಯದ ಪ್ರಶಸ್ತಿ, ಎಚ್‌. ಬಿ. ಎಲ್‌. ರಾವ್‌ ಸಂಸ್ಮರಣ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮಾನ-ಸಮ್ಮಾನಗಳು ಲಭಿಸಿವೆ. ಸದಾ ಹಸನ್ಮುಖೀಯಾಗಿರುವ ಇವರು ಪತ್ನಿ ಆಶಾ ಶೆಟ್ಟಿ ಹಾಗು ಮಕ್ಕಳಾದ ಪ್ರಣವ್‌ ಮತ್ತು ಪ್ರತೀಕ್‌ ಅವರೊಂದಿಗೆ ಪುಣೆಯಲ್ಲಿ ನೆಲೆಸಿದ್ದಾರೆ.

ಪ್ರಚಾರ ಬಯಸದ ಸಮಾಜ ಸೇವೆ :

ಪುಣೆ ತುಳುಕೂಟದ ಮುಖ್ಯ ಸಲಹೆಗಾರರಾಗಿ ತುಳು ಕೂಟದ ಮುಖಾಂತರ ಪ್ರತಿ ವರ್ಷ ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಪ್ರತಿಭಾವಂತ ಮಕ್ಕಳಿಗೆ ಸತ್ಕಾರಕ್ಕೆ ಸಹಕಾರ, ತುಳು ಭಾಷೆ, ಕಮ್ಮಟ, ಯಕ್ಷಗಾನ, ತಾಳಮದ್ದಲೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರಾಗಿ ತುಳು ಭಾಷೆಯ ಬೆಳವಣಿಗೆಗೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡುತ್ತಿದ್ದಾರೆ. ಪುಣೆ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಸಂಸ್ಥೆಗಳಿಗೆ, ದೈವ-ದೇವಸ್ಥಾನಗಳಿಗೆ ದೇಣಿಗೆ ನೀಡಿ ತನ್ನಲ್ಲಿಯೇ ಸಂತೃಪ್ತಿಯನ್ನು ಕಂಡವರು. ಯಾವುದೇ ರೀತಿಯಲ್ಲೂ ಪ್ರಚಾರವನ್ನು ಬಯಸದೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next