Advertisement

Chandranath Acharya: ಕಲಾವಿದರಿಗೆ ಮಿತಿಗಳ ಗೋಡೆ ಇರಬಾರದು… 

11:57 AM Oct 15, 2023 | Team Udayavani |

ನಾಡಿನ ಶ್ರೇಷ್ಠ ಚಿತ್ರ ಕಲಾವಿದ ಅಂದುಕೊಂಡಾಗ ತಕ್ಷಣ ಕಣ್ಮುಂದೆ ಬರುವವರು ಚಂದ್ರನಾಥ ಆಚಾರ್ಯ. ಅವರ ಕಲಾಕೃತಿಗಳ ಮೋಡಿಗೆ ಮರುಳಾಗದವರಿಲ್ಲ. ಅದರಲ್ಲೂ ವಚನ ಭಾರತದ ಪಾತ್ರ ಪ್ರಪಂಚವನ್ನು “ಅದ್ಭುತ’ವಾಗಿ ಕಟ್ಟಿಕೊಟ್ಟವರು ಚಂದ್ರನಾಥ್‌. ಇತ್ತೀಚೆಗಷ್ಟೇ ಶಿವರಾಮ ಕಾರಂತ ಪ್ರಶಸ್ತಿಗೆ ಭಾಜನರಾದ ಅವರು ತಮ್ಮ ವೃತ್ತಿ ಬದುಕು, ಪ್ರಯೋಗ ಮತ್ತು ಈಗಿನ ಸಾಮಾಜಿಕ ಸಂದರ್ಭದ ಕುರಿತು ಮಾತಾಡಿದ್ದಾರೆ

Advertisement

ಶಿವರಾಮ ಕಾರಂತರ ಹೆಸರಿನಲ್ಲಿರುವ ಪ್ರಶಸ್ತಿ ಬಂದಿದೆ ಎಂದು ತಿಳಿದಾಗ ನಿಮ್ಮ ಮನಸ್ಸಿನಲ್ಲಿ ಬಂದ ಭಾವನೆ ಏನು?

ಶಿವರಾಮ ಕಾರಂತರ ಮಗಳು ಕ್ಷಮಾ ನನ್ನ ಕ್ಲಾಸ್‌ ಮೇಟ್ಸ್. ಉಲ್ಲಾಸ ಕಾರಂತ ನನ್ನ ಸ್ಪೋರ್ಟ್ಸ್ ಮೇಟ್ಸ್. ಅವರ ಜತೆಯಲ್ಲಿ ಹಲವು ಬಾರಿ ನಮ್ಮ ಮನೆಯಿಂದ ಎರಡೂವರೆ ಫ‌ರ್ಲಾಂಗ್‌ ದೂರದಲ್ಲಿದ್ದ ಕಾರಂತರ ಮನೆಗೆ ಹೋಗಿ ಬರುತ್ತಿದ್ದೆ. ಕಾರಂತರ ಹೆಸರಿನ ಪ್ರಶಸ್ತಿ ಬಂದಿದೆ ಎಂದು ತಿಳಿದಾಗ, ನನಗೆ ನೊಬೆಲ್‌ ಪ್ರಶಸ್ತಿ ಬಂದಷ್ಟು ಖುಷಿಯಾಯ್ತು. ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ “ನಾನು ಈ ಪ್ರಶಸ್ತಿಗೆ ಅರ್ಹನೆ’ ಎನ್ನಿಸಿತು. ಕಾರಂತರಂಥ ಮಹನೀಯರ ಹೆಸರಿನ ಪ್ರಶಸ್ತಿ ದೊರೆತ ಕಾರಣಕ್ಕೆ ನನ್ನ ಸಂಭ್ರಮ ಹೆಚ್ಚಾಗಿದೆ.

ಪತ್ರಿಕೆಯಲ್ಲಿ ಕೆಲಸ ಮಾಡುವ ಹಲವರಿಗಿಂತ ನಿಮ್ಮ ಕಲಾಕೃತಿಗಳು ಭಿನ್ನವಾಗಿರಲು ಕಾರಣವೇನು?

ನಾನು ಪತ್ರಿಕೆಗಳಿಗೆ ಬರೆಯುವುದಕ್ಕೆ ಮುಂಚೆ ಜಿ. ಕೆ ಸತ್ಯ, ರಮೇಶ್‌, ಶ್ರೀನಿವಾಸಮೂರ್ತಿ, ಹುಬ್ಳಿಕರ್‌ ಮುಂತಾದವರೆಲ್ಲ ಇದ್ದರು. ಅಂದಿನ ಹಲವು ಕಲಾವಿದರು ಚಿತ್ರಕಲೆಯನ್ನು ಪಾರಂಪರಿಕವಾಗಿ, ಶಾಲೆ- ಕಾಲೇಜುಗಳಲ್ಲಿ ಕಲಿತವರಲ್ಲ. ಅನುಮಾನವೇ ಬೇಡ; ಶಾಲಾಶಿಕ್ಷಣ ನಮ್ಮಲ್ಲಿ ಶಿಸ್ತಿನ ಪಾಠ ಹೇಳಿಕೊಡುತ್ತದೆ. ಅಲ್ಲಿ ಪಾರಂಪರಿಕ ಜ್ಞಾನದ ಪರಿಚಯವಾಗುತ್ತದೆ. ಚಾರಿತ್ರಿಕ ಮತ್ತು ಸಮಕಾಲೀನ ಸಂಗತಿಗಳ ಬಗೆಗೆ ಅರಿವು ಮೂಡಿಸುತ್ತದೆ. ಇಂಥ ಹಲವು ಸಂಗತಿಗಳು ನನ್ನ ಚಿತ್ರಕಲಾ ಪ್ರಯೋಗವನ್ನು ಪೊರೆದಿವೆ. ಈ ಕಾರಣದಿಂದಲೇ ನನ್ನ ಚಿತ್ರಗಳು ಭಿನ್ನವಾಗಿ ಕಾಣಿಸಿವೆ ಅನ್ನಬಹುದು. ಆಗ ನವ್ಯರ ಕಾಲವಾಗಿತ್ತು. ಅವರ ಆಶಯಗಳನ್ನು ಕಲಾಕೃತಿಗಳಲ್ಲಿ ತರುವ ಚಾಲೆಂಜ್‌ ಕೂಡ ಇತ್ತು.

Advertisement

ನಿಮ್ಮ ಈಚಿನ ಚಿತ್ರಕಲೆಯ ಪ್ರಯೋಗಗಳ ಬಗೆಗೆ ಹೇಳಿ…

ನಾನು ಈಚೆಗೆ ಹೀರೋಸ್‌ ಎಂಬ ಸರಣಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತಿದ್ದೇನೆ. ಆ ಕಲಾಕೃತಿಯ ವಸ್ತು ಹಿಂದಿನ ಕಾಲದ ರಾಜನೂ ಆಗಬಹುದು, ಈಗಿನ ರಾಜಕಾರಣಿಗಳೂ ಆಗಿರಬಹುದು. ಅದರಲ್ಲಿ ನಾನು ಹೇಳಲು ಪ್ರಯತ್ನಿಸಿದ್ದು ಏನೆಂದರೆ- ರಾಜನೂ ನಮ್ಮಂತೆ ಸಾಮಾನ್ಯ ಮನುಷ್ಯ. ಅವನೂ ಮೂಗಿನಲ್ಲಿ ಬೆರಳಿಟ್ಟು ತಿರುವುವಂಥವನು. ಅವನ ಕಿವಿಯಲ್ಲಿಯೂ ಕೂದಲಿದೆ. ನಮ್ಮಂತೆ ಅವನಿಗೂ ಆಸೆಗಳಿವೆ. ತಲೆಯ ತುಂಬೆಲ್ಲ ಯೋಚನೆಗಳಿವೆ ಎಂಬುದನ್ನು ಕಲಾಕೃತಿಯಲ್ಲಿ ತರಲು ಪ್ರಯತ್ನಿಸಿರುವೆ. ಅವು ಜಗತ್ತಿನಾದ್ಯಂತ ಜನಪ್ರಿಯವಾಗಿವೆ. ಬೇರೆ ಬೇರೆ ರಾಜ್ಯ/ ದೇಶದ ಪ್ರತಿಷ್ಠಿತ ಗ್ಯಾಲರಿಗಳಲ್ಲಿವೆ.

ಕಂಪ್ಯೂಟರ್‌ ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ಚಿತ್ರಕಲೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆ?

ಕಂಪ್ಯೂಟರ್‌, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ನಮಗೆ ಬೇಗ ಚಿತ್ರಗಳನ್ನು ರಚಿಸಿಕೊಡಬಹುದಷ್ಟೆ. ಆದರೆ ಅವುಗಳಿಗೆ ಒಂದು ಮಿತಿ ಇದೆ. ಈಗಾಗಲೇ ಪೂರ್ವ ನಿರ್ಧಾರಿತವಾಗಿ ಅಳವಡಿಸಿದ ಚಿತ್ರ ವಿನ್ಯಾಸ­ ಗಳನ್ನು ಎಐ ತಂತ್ರಜ್ಞಾನ ಕೊಡುತ್ತದೆಯಷ್ಟೆ. ಬೆಳವಣಿಗೆಯ ಹಲವು ಹೊಸ ವಿನ್ಯಾಸಗಳನ್ನು ಕಟ್ಟಿಕೊಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ನೀಲಿಯಲ್ಲಿಯೇ ಹತ್ತು ಬಣ್ಣಗಳಿವೆ. ಕೆಂಪಿನಲ್ಲಿ ಹಲವು ವಿಧಗಳಿವೆ. ಕಂಪ್ಯೂಟರ್‌ ನಾಲ್ಕು ಬಣ್ಣಗಳಲ್ಲಿ ಅವುಗಳನ್ನು ವಿನ್ಯಾಸಗೊಳಿಸಿ ಕೊಡುತ್ತದೆ. ಹಿಮಾಲಯದ ತಪ್ಪಲಿನಲ್ಲಿ ನಿಂತು ನೋಡಿದರೆ ಕಾಣುವ ಆಕಾಶದ ಚಿತ್ರವೇ ಬೇರೆ. ಕನ್ಯಾಕುಮಾರಿಯಲ್ಲಿ ನೋಡುವ ಚಿತ್ರವೇ ಬೇರೆ. ಆದರೆ ಕಂಪ್ಯೂಟರಿನಲ್ಲಿ ಅಳವಡಿಸಿರುವ ಚಿತ್ರಗಳೆಲ್ಲ ಒಂದೇ ರೀತಿಯದ್ದಾಗಿರುತ್ತದೆ. ಮನುಷ್ಯನ ಬೆಳವಣಿಗೆಯ ಹಂತಗಳ ಜತೆಜತೆಗೆ ಕಲೆಯೂ ಬೇರೆ ಬೇರೆ ಅವಸ್ಥಾಂತರಗಳ ಮೂಲಕ ಬೆಳೆಯುತ್ತಾ ಬಂದಿದೆ. ಬದಲಾವಣೆಗಳನ್ನು ಕಂಡಿದೆ. ಆಧುನಿಕ ತಂತ್ರಜ್ಞಾನ ಬೇಕು ನಿಜ. ಆದರೆ ಎಷ್ಟು ಬೇಕು ಎಂಬ ಅರಿವಿರಬೇಕು.

ಇವತ್ತಿನ ಯುವ ಕಲಾವಿದರ ಚಿತ್ರಕಲಾ ಶಿಕ್ಷಣದ ಬಗೆಗೆ ನಿಮ್ಮ ಅನಿಸಿಕೆ ಏನು?

ಯುವ ಕಲಾವಿದರಲ್ಲಿ ಹೊಸ ರೀತಿಯ ಹುಡುಕಾಟ ಕಾಣುತ್ತಿದೆ. ಆದರೆ ಅದೇನೆಂದು ಸ್ಪಷ್ಟವಾಗುತ್ತಿಲ್ಲ. ಇದು ಕಾಲೇಜುಗಳಲ್ಲಿ ಕಲಿಸುತ್ತಿರುವ ಅಧ್ಯಾಪಕರಿಗೂ ಗೊತ್ತಿದೆ. ಅದಕ್ಕೇ ಅವರು ವಿದ್ಯಾರ್ಥಿಗಳನ್ನು ಅವರಷ್ಟಕ್ಕೆ ಬಿಟ್ಟು ಹೊಸತಿಗಾಗಿ ಕಾಯುತ್ತಿದ್ದಾರೆ. ಸಾಂಪ್ರದಾಯಿಕ ಶಿಕ್ಷಣವೂ, ಆಧುನಿಕ ಶಿಕ್ಷಣ ಕ್ರಮವೂ ಕಲಾ ಶಿಕ್ಷಣಕ್ಕೆ ಸಾಕಾಗುತ್ತಿಲ್ಲ. ಹೊಸ ಮಾದರಿಯೊಂದಕ್ಕೆ ನಾವೆಲ್ಲ ಕಾಯಬೇಕಿದೆ. ಹಿಂದೆ ರಾಮ ಎಂದರೆ ಹಲವು ಚಿತ್ರಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದವು. ಇವತ್ತು ಕೃಷ್ಣ ಎಂದರೆ ಹೀಗೇ ಇರಬೇಕು, ಇಂಥದೇ ಬಣ್ಣ, ಆಕಾರ, ನಡೆ ನುಡಿ ಹೊಂದಿರಬೇಕು ಎಂದು ಹೇಳುವ ಮೂಲಕ ಅರಳುವ ಭಾವನೆಗಳನ್ನೇ ಮಿತಿಗೊಳಿಸಲಾಗುತ್ತಿದೆ. ಕಲಾವಿದನಿಗೆ ಮಿತಿಗಳ ‘ಗೋಡೆ’ ಇರಬಾರದು.

ನಾನು ಎಸ್‌ ಎಸ್‌ ಎಲ್‌ ಸಿ ಆದನಂತರ ಬೆಂಗಳೂರಿಗೆ ಬಂದೆ. ಆರ್ಥಿಕವಾಗಿ ಬಲಶಾಲಿ­ಯಲ್ಲದ ನನಗೆ ಉದ್ಯೋಗ ಹುಡುಕುವುದು ಅನಿವಾರ್ಯ­ವಾಗಿತ್ತು. ಅವತ್ತಿನ ಸಂದರ್ಭದಲ್ಲಿ ನನ್ನ ಪರಿಸ್ಥಿತಿ ಎಷ್ಟು ಕೆಟ್ಟದಿತ್ತು ಅಂದರೆ, ಬೆಂಗಳೂರಿಗೆ ಬರುವುದಕ್ಕೂ ನನ್ನಲ್ಲಿ ಹಣವಿರಲಿಲ್ಲ. ಆಗ ಸಾರ್ವತ್ರಿಕ ಚುನಾವಣೆಗಳು ಬಂದಿದ್ದವು. ಕಾಂಗ್ರೆಸ್‌ ಪಕ್ಷದ ಚಿನ್ಹೆ- ಹಸು ಮತ್ತು ಕರು ಆಗಿತ್ತು. ಆದರ ಚಿತ್ರ ಬರೆಯುವವರು ನಮ್ಮೂರಿ­ನಲ್ಲಿ ಯಾರೂ ಇರಲಿಲ್ಲ. ನಾನು 10-12 ಬ್ಯಾನರ್‌ ಬರೆದುಕೊಟ್ಟೆ. ಆ ಕೆಲಸಕ್ಕೆ 150 ರೂಪಾಯಿ ಸಿಕ್ಕಿತು. ಆ ಹಣದಿಂದಲೇ ಬೆಂಗಳೂರಿಗೆ ಬರಲು ಸಾಧ್ಯವಾಯ್ತು.

ಈ ವಾರದ ಅತಿಥಿ:

ಚಂದ್ರನಾಥ ಆಚಾರ್ಯ, ಪ್ರಸಿದ್ಧ ಕಲಾವಿದರು.

ಸಂದರ್ಶನ:

ಪಿ. ಚಂದ್ರಿಕಾ

 

Advertisement

Udayavani is now on Telegram. Click here to join our channel and stay updated with the latest news.

Next