Advertisement

ಗತಕಾಲದ ವೈಭವವು ಉಳಿದಿರುವುದು ಬರೀ ನನ್ನ ಕ್ಯಾಮರಾ ಕಣ್ಣುಗಳಲ್ಲಿ…!

01:07 PM Mar 28, 2021 | Team Udayavani |

ಬದುಕು ಸವೆದು ಹೋದಂತೆ ಕಳೆದು ಹೋದ ಮಾಸ ಋತುಮಾನ ವರುಷಗಳೆಷ್ಟೋ! ಕಾಲಚಕ್ರ ಉರುಳಿದಂತೆ ಗತಿಸಿ ಹೋದವುಗಳೆಲ್ಲಾ ನೆನಪುಗಳಷ್ಟೇ ಅಲ್ಲವೇ ? ಆದರೂ ಏಕೋ ನೀ ಮಾತ್ರ ಬದಲಾಗಲಿಲ್ಲ, ಅಂತ ಅನಿಸುತ್ತೆ. ಹಾಗೆ ನೋಡಿದರೆ ಈ ಮಾತನ್ನು ಪೂರ್ತಿಯಾಗಿ ಅಂತಃಕರಣ ಒಪ್ಪುತ್ತಿಲ್ಲ…

Advertisement

ಆಟದ ಮೈದಾನವೇ ಪ್ರಪಂಚವಾಗಿದ್ದ ಬಾಲ್ಯದ ದಿನವದು. ದಿನಪೂರ್ತಿ ನಿನ್ನೊಂದಿಗೆ ಆಟ ಆಡುತ್ತಾ, ಹಾಡುತ್ತಾ, ಎದ್ದು ಬಿದ್ದು ಓಡುತ್ತಾ ಜಿಗಿಯುತ್ತಾ ಇರಬೇಕೆಂದು ಬಯಸಿದ್ದರೂ, ನನ್ನ ಆಸೆ ಮುಂಜಾವಿನ ಮಂಜಿನಂತೆ ಮಾಸಿದ್ದು ನಿಜ. ಹೆತ್ತವರ ಮಾತಿಗೆ ಕಟ್ಟುಬಿದ್ದು ನಿನ್ನ ಬಿಟ್ಟು ಹೊರಡಲೇ ಬೇಕಾದ ಅನಿವಾರ್ಯತೆಯ ನಡುವೆಯು ನಿನ್ನ ಹೆಸರ ಆ ಮೈಲುಗಲ್ಲಿನ ಮೇಲೆ ಶಾಸನದಂತೆ ಕೆತ್ತಿರುವುದು ನಿನಗೆ ತಿಳಿದಿಲ್ಲವೇ? ನನ್ನ ಪ್ರೀತಿಪಾತ್ರರಿಗೆ ನಿನ್ನೋಂದಿಗೆ ಇರುವುದು ಹಿಡಿಸಲಿಲ್ಲ . ಸಿರಿವಂತಿಗೆಗಾಗಿ ಊರು ತೊರೆದರು, ಅವರೊಂದಿಗೆ ನಾನು ಕೂಡ ! ಆದರೆ ಅವರಿಗೇನು ಗೊತ್ತು ನಮ್ಮಿಬ್ಬರ ಪ್ರೀತಿಯಲಿ ಬಡತನವಿಲ್ಲವೆಂದು ನಿನ್ನಲ್ಲಿದ್ದ ಸಿರಿತನವನ್ನು ಗುರುತಿಸಲು, ಜಗತ್ತಿನ ಐಚ್ಛಿಕ ವಸ್ತುಗಳಲ್ಲಿದ್ದ ವ್ಯಾಮೋಹ ಅವರನ್ನು ಕುರುಡಾಗಿ ಮಾಡಿತ್ತು. ಆದರೆ ನಾನು ನಿನ್ನ ತೊರೆದ ಆ ಕ್ಷಣಗಳಿಂದ ಈವರೆಗೂ ಜೀವನದ ಅಮೂಲ್ಯವಾದುದನ್ನು ಕಳೆದುಕೊಂಡಂತೆ ಬದುಕಿದೆ. ಆದರೆ ಅಲ್ಲಿ ನೆಮ್ಮದಿಯ ಹೊರತಾಗಿ ನನಗೆ ಎಲ್ಲವೂ ದೊರಕಿತ್ತು,. ಜೀವನದ ಕೆಲವೊಂದು ಅಪೂರ್ವ ಕ್ಷಣಗಳನ್ನು ಆನಂದಿಸಿದೆ ಆಸ್ವಾದಿಸಿದೆ, ಜೀವನದ ಸಾರ್ಥಕತೆಯಲ್ಲೊಂದಿಗೆ ಅಲ್ಪ ನಿರಾರ್ಥಕತೆಯ ಭಾವ ನನ್ನನ್ನುಬಿಟ್ಟು ಹೋಗಲಿಲ್ಲ.

ಓದಿ : ತಕಳಿ ಶಿವಶಂಕರ ಪಿಳ್ಳೆಯವರ ಮಹಾಕಾದಂಬರಿ ‘ಕಯರ್’ ನ ಕನ್ನಡ ಅನುವಾದ ‘ಹಗ್ಗ’

ಕಾರ್ಮೋಡವು ಮಳೆಗೆ ಅಣಿಯಾದಂತೆ, ಬಾಂಧವ್ಯ ಕೈಬೀಸಿ ಕರೆದಂತೆ ದೂರ ಬಹುದೂರ ಎತ್ತಲಿಂದಲೋ ಎತ್ತಲಿಗೋ ಅಂದರೆ ಇಲ್ಲಿ ಸ್ಪಷ್ಟತೆ ಇಲ್ಲವೆಂದಲ್ಲ, ಇಷ್ಟರವರೆಗೆ ದೂರವಿದ್ದು ನಿನ್ನ ಕಾಣದೆ.. ಆ ಕವಲುದಾರಿಯಲ್ಲಿರುವ ಅಸ್ಪಷ್ಟತೆ ನೀ ಸಿಗುವರೆಗೂ, ನಿನ್ನ ಕಣ್ತುಂಬಿಸಿಕೊಳ್ಳುವರೆಗೂ ನನ್ನ ಪಯಣ ನಿನ್ನ ನೆನಪಿನ ಅಂಗಳದಲಿ ಸಾಗುತ್ತಿರುವುದು. ಈ ಅಸ್ಪಷ್ಟ ಹಾದಿಯಲಿ ನೀನೇಕೆ ನೀಡಬಾರದೊಂದು ಸುಳಿವು….

ನೆನಪಿನ ಬುತ್ತಿಯನ್ನು ತುಂತುರು ಮಳೆಹನಿಯು ತೆರೆದಿರಲು ನಿನ್ನ ಗುರುತು ಕಲ್ಪನೆಗೂ ಮೀರಿದ ಚೆಲವಲ್ಲಿ ಈ ಮನ ತೇಲುತ್ತಿದ್ದಂತೆ ಅಂದು ನಿರ್ಗಮಿಸುವ ಮುನ್ನ ಆ ಮೈಲಿಗಲ್ಲು ಮೇಲೆ ಕೆತ್ತಿದ ನಿನ್ನ ಹೆಸರು ನನ್ನನ್ನು ನಿನ್ನ ಆಲಯದೊಳಗೆ ಬರಮಾಡಿಕೊಳ್ಳುತ್ತೆಂಬ ಖಚಿತತೆಯಲ್ಲಿ ಅನುಮಾನದ ಮಾತೇಕೆ ? ನಿನ್ನ ಹೆಸರುಗಳಿಗೆ ಅದೆಷ್ಟೊ ಅನ್ವರ್ಥಗಳಿದ್ದು ನೀನು ಅದರಂತೆ ಇದ್ದೆ; ಈಗಲೂ ಇರುವೆಯೇ ಎಂಬ ಅನುಮಾನದ ಕತ್ತಲೆಯಲ್ಲಿ ಹಣತೆಯನ್ನು ಗುರುತಿಸುವಲ್ಲಿ ಅನರ್ಹನಾದೆ. ಆದರೂ ಈ ಕಲ್ಪನೆಯಲ್ಲಾಗಲಿ ವಾಸ್ತವದಲ್ಲಾಗಲಿ ನಾ ನಿಂತ ಜಾಗದಲ್ಲಿ ಅದೇಷ್ಟೋ ಸಾಮ್ಯತೆ.

Advertisement

ಅಂದು ನಿನ್ನ ಹೆಸರ ಕೆತ್ತಿರುವ ನವೀರಾದ ಈ ಕಲ್ಲು ಬಿರುಕು ಮೂಡಿದೆ. ನಿನ್ನ ಹೆಸರು ಮಾಸುತ್ತಿದೆ. ಹಳ್ಳಿಗಳು ಬಿಕೋ ಅನ್ನುತ್ತಿದೆ. ಕಣ್ತುಂಬಿಸಿಕೊಳ್ಳೊ ನಿನ್ನ ಸೌಂದರ್ಯ ಮರೆಯಾಗಿದೆ. ದಣಿದಿರುವ ಈ ಜೀವಕ್ಕೆ ಆ ತೊರೆಯ ಒಂದು ಹನಿಯು ಆಯಾಸ ನೀಗಿಸುವಂತೆ ಕಾಣುತ್ತಿಲ್ಲ. ಅಂದು ನಿನ್ನ ಬಿಟ್ಟೋಗುವಾಗ ಅದು ವಸಂತ ಋತುವಿನಲ್ಲಿ ನಿನ್ನ ಚೆಲುವಿಗೆ ಚಂದಿರನೇ ನಾಚಿಕೊಳ್ಳುವಂತೆ ಭಾಸವಾಗುತ್ತಿತ್ತು ಎಂದು ಹೇಳಿದ ಮಾತು ಹುಸಿಯಾಗುತ್ತಿದೆಯೇ..? ಇಲ್ಲ…! ಎಂದಿಗೂ ಹಾಗಾಗದು ಇದಕ್ಕೆ ಕಾರಣ ನಾವೇ, ನಿನ್ನ ತಪ್ಪೆನಿಲ್ಲ. ನಮಗೆ ಬೇಕಿರುವುದು ಅಭಿವೃದ್ಧಿ, ಆ ಹೆಸರಲ್ಲಿ ಬೆಳೆದು ನಿಂತ ಕೈಗಾರಿಕೆಗಳು, ಅದರಿಂದ ಹೊರಬರುವ ವಿಷಾನಿಲ, ನಿನ್ನ ಈ ಸ್ಥಿತಿಗೆ ನಾವೇ ಕಾರಣವೆಂದು ತಲೆಬಾಗುವೆ. ಫಲವತ್ತತೆಯ ಭೂಮಿ ಬರಡಗುತ್ತಾ ನಿನ್ನ ಸೌಂದರ್ಯ ಕಳೆಗುಂದಿದೆ. ಮುಂಜಾವಿನ ಮಂಜಿನಲಿ ದುಂಬಿಯು ಹೂವಿನ ಮಕರಂದ ಹೀರಲು ಹವಣಿಸಿ ವಿಫಲವಾದಂತೆ, ನಿನ್ನ ಸೌಂದರ್ಯವ ಸವಿಯುವಲ್ಲಿ ನಾ ಅನರ್ಹನಾದೆ. ಗತಕಾಲದ ವೈಭವವು ಉಳಿದಿರುವುದು ಬರೀ ನನ್ನ ಕ್ಯಾಮರಾ ಕಣ್ಣುಗಳಲ್ಲಿ…!

ಓದಿ : ದೆಹಲಿ v/s ಕೇಂದ್ರ : ದೆಹಲಿಯ ಚುನಾಯಿತ ಸರ್ಕಾರದ ಬಗ್ಗೆ ಕೇಂದ್ರದ ನಿಲುವೇನು..?

ಆ ಮೈಲಿಗಲ್ಲಿನ ಮೇಲಿರುವ “ನಿಸರ್ಗ” ಎಂಬ ಹೆಸರಲಿ ನಿಶ್ಕಲ್ಮಶವಿದ್ದರೂ ಅನ್ವರ್ಥ ಬದಲಾಗಿದೆ. ನಿನ್ನ ಹಸಿರು ಉಡುಗೆಯ ಬಣ್ಣ ಮಾಸುತ್ತಿದೆ. ಬಿಸಿನೀರಿನ ವಿಷಜಲವು ನಿನ್ನ ಪಾದ ತೊಳೆಯುತ್ತಿವೆ. ನಿನ್ನ ಕರುಣೆಯ ಕುಡಿಗಳು ಅಭಿವೃದ್ಧಿಯ ಮುಖವಾಡ ಹೊತ್ತು ಸೃಷ್ಟಿಯನ್ನೇ ತಲೆಕೆಳಗೆ ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಮಾನವೀಯತೆಯೆಂದು ತಳಮಳದಿಂದ ನಿನ್ನ ಹೃದಯ ಪ್ರಶ್ನಿಸುತ್ತಿದ್ದರೂ, ಕಾಲಚಕ್ರದೊಳಗೆ ನಾವು ಬದಲಾದೆವು ಮುಂದೊಂದಿನ ಎದುರಿಸುವ ಭಯನಕ ಸವಾಲುಗಳೇ ನಮ್ಮ ಮೂರ್ಖತನಕ್ಕೆ ಉತ್ತರವೆಂಬಂತೆ ನಾಶದ ಮೃದಂಗ ಮಾರ್ದನಿಸುತ್ತಿದೆ.

ಪೂಜಶ್ರೀ ತೋಕೂರು

ಆಳ್ವಾಸ್ ಕಾಲೇಜು ಮೂಡುಬಿದಿರೆ

ಓದಿ : ಮಾ.29 ವಿಷ್ಣು ಪ್ರಿಯ ಟ್ರೇಲರ್: ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next