Advertisement

ಕಲೆ ಮನುಷ್ಯನ ಅಭಿವ್ಯಕ್ತಿಯ ಮಾಧ್ಯಮ

09:05 PM Feb 23, 2020 | Lakshmi GovindaRaj |

ಮೈಸೂರು: ಕಲೆ ಒಂದು ಸಮಾಜದಲ್ಲಿನ ಜನಾಂಗದ ಸಂಸ್ಕೃತಿ ಉಳಿಸಿ, ಬೆಳಸುವ ಜೊತೆಗೆ ಮನುಷ್ಯನ ಅಭಿವ್ಯಕ್ತಿ ಮಾಧ್ಯಮವೂ ಆಗಿದೆ ಎಂದು ಹಿರಿಯ ಕಲಾವಿದ ಜೆ.ಎಸ್‌.ಖಂಡೇ ರಾವ್‌ ಹೇಳಿದರು. ನಗರದ ಚಾಮರಾಜಪುರಂನಲ್ಲಿರುವ ಶ್ರೀ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ ರವಿವರ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ರಾಜ ರವಿವರ್ಮ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

Advertisement

ಕಲೆಯು ಒಂದು ಮಾಧ್ಯಮವಾಗಿದ್ದು, ಚಿತ್ರ ಕಲಾಕೃತಿಗಳು ವೀಕ್ಷಕನಿಗೆ ಕಲೆಯಲ್ಲಿನ ಭಾವನಾತ್ಮಕತೆ ಮತ್ತು ಸಂದೇಶದ ವಿಷಯವನ್ನು ನೀಡುತ್ತವೆ. ಸತ್ಯ, ಸತ್ವ ಮತ್ತು ಸೌಂದರ್ಯ ಕಲೆಯಲ್ಲಿ ಅಡಕವಾಗಿರುತ್ತದೆ. ಅಲೌಕಿಕವಾದ ಆನಂದ ನೀಡುತ್ತದೆ. ಹೃದಯಾಂತರಾಳದಲ್ಲಿ ಉದ್ಭವಿಸುವ ಪ್ರೇರಣೆಯಿಂದ ಹೊರ ಜಗತ್ತಿಗೆ ಅನ್ಯದೃಶ್ಯಗಳ ಮೂಲಕ ಅಭಿವ್ಯಕ್ತಿಗೊಳಿಸುವುದೆ ಕಲೆಯಾಗಿದೆ ಎಂದರು.

ಕಲೆಯು ಆದಿ ಕಾಲದ ಮಾನವನಷ್ಟೇ ಪುರತಾನವಾದದ್ದು, ಮಾನವನ ಸಂಸ್ಕೃತಿಯೆ ಕಲೆಯಾಗಿದೆ. ಕಲೆಯು ಒಂದು ಸಮಾಜದಲ್ಲಿನ ಜನಾಂಗದ ಸಂಸ್ಕೃತಿಯನ್ನು ಉಳಿಸಿ ಬೆಳಸುತ್ತಿದೆ. ಜೊತೆಗೆ ಚಿತ್ರ ಕಲೆಯು ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರವಾಗಿದೆ. ಕಲೆಯ ಮೂಲಕ ಸಮಾಜದಲ್ಲಿನ ಅಸಮಾನತೆ, ಶೋಷಣೆಗಳ ವಿರುದ್ಧ ಜನರನ್ನು ಬಡಿದೆಬ್ಬಿಸಬಹುದು. ಆಧುನಿಕ ಕಾಲದಲ್ಲಿ ಕಲೆಯು ಉತ್ತಮ ರೀತಿಯಲ್ಲಿ ಬೆಳದಿದೆ ಎಂದು ತಿಳಿಸಿದರು.

ಸುಂದರವಾದ ಕಲೆಯು ಸೌಂದರ್ಯದ ಅಭಿವ್ಯಕ್ತವನ್ನು ಪರಿಚಯಿಸುತ್ತದೆ. ರಚನಾತ್ಮಕ ಮತ್ತು ಪ್ರಾಯೋಗಿಕ ಕಲಿಕೆ ಅವಶ್ಯಕ. ಕಲಾವಿದ ಹೆಚ್ಚು ಹೆಚ್ಚು ಕೆಲಸದಲ್ಲಿ ನಿರತನಾಗಿದ್ದರೆ ಉತ್ತಮ ಕಲಾವಿದನಾಗಿ ರೂಪುಗೊಳ್ಳಬಹುದು. ನಿಷ್ಠುರ ಮತ್ತು ನ್ಯಾಯ ಸಮ್ಮತದ ಗುಣಗಳ ಜೊತೆಗೆ ಸಮಾಕಾಲೀನ ಸ್ಫೂರ್ತಿ ಅಳವಡಿಸಿಕೊಂಡರೆ ಸೃಜನಶೀಲ ಕಲಾವಿದನಾಗಲು ಸಾಧ್ಯ. ಅಂತಹವರಿಂದ ಶಾಶ್ವತ ಮೌಲ್ಯಯುತ ಕಲೆ, ಅವಿಷ್ಕಾರದ ರೂಪದಲ್ಲಿ ಹೊರಬರುತ್ತವೆ ಎಂದು ಕಲೆಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಂಬೈನ ಹಿರಿಯ ಕಲಾವಿದ ವಾಸುದೇವ್‌ ಕಾಮತ್‌ ಅವರು 2020ನೇ ಸಾಲಿನ ರಾಜ ರವಿವರ್ಮ ಪ್ರಶಸ್ತಿ ಸ್ವೀಕರಿಸಿ, ವಿದ್ಯಾರ್ಥಿಗಳು ಪಠ್ಯ ವಿಷಯದಲ್ಲಿನ ಕಲೆಯ ಬಗ್ಗೆ ಕಲಿತು ಪ್ರಮಾಣ ಪತ್ರ ಪಡೆದು ಉತ್ತಮ ಕಲಾವಿದನಾಗಲು ಸಾಧ್ಯವಿಲ್ಲ. ಶಿಕ್ಷಕರ ಮಾರ್ಗದರ್ಶನದಿಂದ ಪ್ರಾಯೋಗಿಕವಾಗಿ ಅಭ್ಯಾಸ ನಡೆಸಿದರೆ ಶೇ.80ರಷ್ಟು ಪ್ರಮಾಣದಲ್ಲಿ ಮೌಲ್ಯಯುತ ಕಲಾವಿದರಾಗಿ ಯಶಸ್ವಿಯಾಗಬುದು. ವಿದ್ಯಾರ್ಥಿಗಳು ಶಿಕ್ಷಕರನ್ನು ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಕಾಣುತ್ತಿದ್ದಂತೆ ಗುರು ಸಮಾನರಾಗಿ ಕಾಣಬೇಕು ಎಂದು ಹೇಳಿದರು.

Advertisement

ಕಲೆಯಲ್ಲಿ ರಚನಾತ್ಮಕ ಪರಿಕಲ್ಪನೆಯು ಬಹಳ ಮುಖ್ಯವಾಗಿರುತ್ತದೆ. ನಮ್ಮದೇ ಶೈಲಿ ಪ್ರಕಾರಗಳಲ್ಲಿ ಕಲೆಯಲ್ಲಿ ಸಾಧನೆ ಮಾಡಿದರೆ ಅವುಗಳನ್ನು ಪ್ರದರ್ಶನ ಅಷ್ಟೇ ಮುಖ್ಯವಾಗಿರುತ್ತದೆ. ನಾವು ಸಿದ್ಧಪಡಿಸಿದ ಕಲೆಯು ಪ್ರದರ್ಶನವಾಗದಿದ್ದರೆ, ಅದಕ್ಕೆ ಮೌಲ್ಯ ವಿರುವುದಿಲ್ಲ. ಹೀಗಾಗಿ ಬರೆದ ಕಲೆಗಳ ಚಿತ್ರ ಪ್ರದರ್ಶನಕ್ಕೆ ಇಟ್ಟಾಗ ಕಲಾವಿದನಲ್ಲಿ ಅಂತರಾಳದಲ್ಲಿದ್ದ ಭಾವನೆಯ ಪರಿಕಲ್ಪನೆಯನ್ನು ಹೊರ ಜಗತ್ತಿಗೆ ಪರಿಚಯಿಸಬಹುದು ಎಂದರು.

ಸಿನಿಮಾ, ಡ್ರಾಮಾ, ಕಲೆ, ನೃತ್ಯ ಯಾವುದೇ ಪ್ರಕಾರಗಳಾಗಲಿ ಅದರಲ್ಲಿ ರಚನಾತ್ಮಕತೆ ಇದ್ದರೆ ಮಾತ್ರ ವೀಕ್ಷಕರನ್ನು ಸೆಳೆಯಲು ಸಾಧ್ಯ. ವೀಕ್ಷಕರು ಕಲೆಯನ್ನು ನೋಡಿ ಮೆಚ್ಚಿದರೆ ಆ ಕಲೆಗಳಿಗೆ ಜೀವ ಬರುತ್ತವೆ. ಸ್ವಯಂ ಸ್ವತಂತ್ರ ಕಲಾಕೃತಿಗಳು ಜನಮಾನಸದಲ್ಲಿ ಉಳಿಯುತ್ತವೆ ಎಂದರು.

ನವದೆಹಲಿ ಕೇಂದ್ರ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ಕಲಾವಿದ ಚಿ.ಸು. ಕೃಷ್ಣಶೆಟ್ಟಿ, ತುಮಕೂರಿನ ರವೀಂದ್ರ ಕಲಾನಿಕೇತನ ಉಪನ್ಯಾಸಕ ಪ್ರಭು ಹರಸೂರ್‌, ಹೋರಾಟಗಾರ ಹಾಗೂ ವಕೀಲ ಎಸ್‌.ಅರುಣ್‌ಕುಮಾರ್‌, ಶ್ರೀ ರವಿವರ್ಮ ಚಿತ್ರಕಲೆ ಶಾಲೆ ಪ್ರಾಂಶುಪಾಲ ಶಿವಕುಮಾರ್‌ ಕೆಸರಮಡು ಇದ್ದರು.

ಗಮನ ಸೆಳೆದ ಚಿತ್ರಕಲೆ ಪ್ರದರ್ಶನ: ರವಿವರ್ಮ ಚಿತ್ರಕಲೆ ಶಾಲೆಯಲ್ಲಿ ನಾನಾ ಸಂದೇಶ ಸಾರುವ ಬಗೆಬಗೆಯ ಚಿತ್ರಗಳು ಕಲಾಕೃತಿಗಳು ಕಲಾವಿದನ ಕುಂಚದಲ್ಲಿ ಆರಳಿದ್ದವು. ಪ್ರದರ್ಶನದಲ್ಲಿ ಸುಮಾರು 50ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಪ್ರರ್ದನದಲ್ಲಿ ಇಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next