Advertisement

ತಮ್ಮನ ದರೋಡೆಗೆ ಸುಪಾರಿ ಕೊಟ್ಟವನ ಸೆರೆ

12:23 AM May 02, 2019 | Team Udayavani |

ಬೆಂಗಳೂರು: ಸಾಲ ತೀರಿಸಲು ಸಹೋದರನ ಬಳಿಯಿದ್ದ ಹಣ ದರೋಡೆಗೆ ಸುಪಾರಿ ಕೊಟ್ಟಿದ್ದ ಅಣ್ಣ ಸೇರಿದಂತೆ ಆರು ಮಂದಿಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

Advertisement

ಕೋರಮಂಗಲದ ಮೆಸ್ತ್ರೀಪಾಳ್ಯ ನಿವಾಸಿ ಮುರುಗನ್‌ ಸುಪಾರಿ ಕೊಟ್ಟವ. ಆತನ ಸೂಚನೆ ಮೇರೆಗೆ ದರೋಡೆ ಮಾಡಿದ್ದ ಮುರುಗನ್‌, ಹೇಮಂತ್‌ ಅಲಿಯಾಸ್‌ ಗೋಳ್ಳು, ಬಸವರಾಜು, ಸಂತೋಷ್‌ ಹಾಗೂ ಅರುಣ್‌ ಬಂಧಿತರು.

ಕ್ಯಾಬ್‌ ಚಾಲಕನಾಗಿರುವ ಮುರುಗನ್‌ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಅನ್ಯ ಮಾರ್ಗ ತಿಳಿಯದೆ ಸಹೋದರ ಮುನಿಯಪ್ಪ ಬಳಿಯಿದ್ದ ಹಣ ದರೋಡೆ ಮಾಡಲು ಆರೋಪಿಗಳಿಗೆ ಸುಪಾರಿ ಕೊಟ್ಟಿದ್ದ ಎಂದು ಪೊಲೀಸರು ಹೇಳಿದರು.

ಗುಟ್ಕಾ ಸಗಟು ವ್ಯಾಪಾರಿಯಾಗಿರುವ ಮುನಿಯಪ್ಪ, ಏ.22ರಂದು ಹಣ ತೆಗೆದುಕೊಂಡು ಕೆ.ಆರ್‌.ಮಾರುಕಟ್ಟೆಯಿಂದ ಚಂದಾಪುರಕ್ಕೆ ಹೋಗುತ್ತಿದ್ದರು.

ಈ ವೇಳೆ ಮುನಿಯಪ್ಪ ಬಳಿ ಹಣ ಇರುವುದನ್ನು ಖಚಿತಪಡಿಸಿಕೊಂಡ ಮುರುಗನ್‌, ಚಂದಾಪುರದಲ್ಲಿ ಹಣ ಸುಲಿಗೆ ಮಾಡುವಂತೆ ಸ್ನೇಹಿತರಾದ ಸಂತೋಷ್‌, ಬಸವರಾಜು ಹಾಗೂ ಅರುಣ್‌ಗೆ ಸುಪಾರಿ ಕೊಟ್ಟಿದ್ದ. ಆದರೆ, ಆರೋಪಿಗಳ ದರೋಡೆ ಯತ್ನ ವಿಫ‌ಲವಾಗಿತ್ತು.

Advertisement

ಘಟನೆ ನಡೆದ ಮರು ದಿನ ಮತ್ತೆ ತಿಂಡಿ ತಿನ್ನುವ ನೆಪದಲ್ಲಿ ಆರೋಪಿಗಳನ್ನು ಮನೆಗೆ ಕರೆಸಿಕೊಂಡಿದ್ದ ಆರೋಪಿ ಮುರುಗನ್‌, ಮುನಿಯಪ್ಪನ ಬಳಿ ಲಕ್ಷಾಂತರ ರೂ. ಇದ್ದು, ಅದರೊಂದಿಗೆ ಹೊರಗಡೆ ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದ.

ಕೂಡಲೇ ಆರೋಪಿಗಳು ಕೋರಮಂಗಲ ಸಮೀಪ ಹೋಗುತ್ತಿದ್ದ ಮುನಿಯಪ್ಪನನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಈ ಸಂಬಂಧ ಮುನಿಯಪ್ಪ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next