Advertisement

ತೀರ್ಥಹಳ್ಳಿ: ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿರುದ್ಧ Araga Jnanendra ವಾಗ್ದಾಳಿ

03:48 PM Apr 25, 2023 | Team Udayavani |

ತೀರ್ಥಹಳ್ಳಿ : 70 ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅನೈತಿಕ ದಾರಿ ಹಿಡಿದಿದೆ.  ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡನ್ನು ಪ್ರಿಂಟ್ ಮಾಡಿ ಕ್ಷೇತ್ರದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕೇಳುತ್ತಿದೆ. ಆ ಗ್ಯಾರೆಂಟಿ ಕಾರ್ಡ್ ನ ಮೂಲಕ ಜನರಿಗೆ ಆಮಿಷವನ್ನು ಒಡ್ದುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

Advertisement

ಮಂಗಳವಾರ ಪಟ್ಟಣದ ಬಂಟರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ಗೆದ್ದರೆ ಮಹಿಳೆಯರಿಗೆ 2000 ರೂ.ಗಳು ಪದವೀಧರರಿಗೆ 3000 ಡಿಪ್ಲೋಮಾ ಪದವೀಧರರಿಗೆ 1,500, ಪ್ರತಿ ಮನೆಗೂ 200 ಯೂನಿಟ್ ಹಾಗೂ ಪ್ರತಿ ಮನೆಗೂ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ನಲ್ಲಿ ಮುದ್ರಣ ಮಾಡಿದ್ದಾರೆ. ಗ್ಯಾರೆಂಟಿ ಕಾರ್ಡ್ ನ ಮುದ್ರಣ ಮಾಡಿರುವಂತಹ ಪ್ರೆಸ್ ಹೆಸರು ಎಲ್ಲೂ ಹಾಕಿಲ್ಲ. ಚುನಾವಣಾ ನೀತಿ ಸಂಹಿತೆ ಅನುಸಾರವಾಗಿ ಪ್ರಿಂಟ್ ಮಾಡಿದವರ ಹೆಸರು ಅಲ್ಲಿ ಇರಬೇಕು. ಎಷ್ಟು ಗ್ಯಾರೆಂಟಿ ಕಾರ್ಡ್ ಪ್ರಿಂಟ್ ಆಗಿದೆ ಎಂದು ತೋರಿಸಬೇಕು ಎಂದರು.

ದೇಶದ ಒಂದು ಉನ್ನತ ಸ್ಥಾನದಲ್ಲಿರುವ ಪಕ್ಷವಾಗಿ ತಾನು ಏನು ಮಾಡಲಾಗದೆ ಹತಾಶ ಭಾವನೆಗೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದವರು ಹೇಗಿದ್ದರೂ ನಾವು ಗೆಲ್ಲುವುದಿಲ್ಲ. ಇಂತಹದೇನಾದರೂ ಗಿಮಿಕ್ ಮಾಡಿ ಒಂದಿಷ್ಟು ವೋಟುಗಳನ್ನು ತೆಗೆದುಕೊಂಡು ಪಾರಾಗೋಣ ಎಂಬ ಭಾವನೆಯಲ್ಲಿದ್ದಾರೆ ಎಂದು ಹೇಳಿದರು.

ಗ್ಯಾರೆಂಟಿ ಕಾರ್ಡ್ ನಲ್ಲಿ ಮಾಜಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರ ಸಹಿ ಇದೆ. ಐದು ವರ್ಷಗಳ ಹಿಂದೆ ಅವರದೇ ಸರ್ಕಾರ ಇತ್ತು. ಆಗ ಏನು ಮಾಡಿದ್ದರು. ಇದರಲ್ಲಿರುವ ಒಂದನ್ನು ಕೂಡ ಆಗ ಜಾರಿ ಮಾಡಿರಲಿಲ್ಲ. ಇವರು ಬಡವರ ಪರವಾಗಿ ಇದ್ದರೆ ಆ ಐದು ವರ್ಷಗಳ ಕಾಲದಲ್ಲಿ ಇವೆಲ್ಲವನ್ನು ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಈಗ ಕಾಂಗ್ರೆಸ್ ಸರ್ಕಾರವೇ ಇದೆ. ಎರಡು ಕಡೆಗಳಲ್ಲಿ ಕೊಟ್ಟ ಆಶ್ವಾಸನೆಯನ್ನೇ ಅಲ್ಲೂ ಕೊಟ್ಟಿದ್ದರು. ಆದರೆ ಗೆದ್ದ ಮೇಲೆ ಯಾವುದು ಕೂಡ ಈಡೇರಿಸಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಹೇಗಾದರೂ ಮಾಡಿ ಚುನಾವಣೆ ಗೆಲ್ಲುವ ತಂತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳುತ್ತಾರೆ.  ಯಾವ ಮನೆಗೂ 200 ಯೂನಿಟ್ ಅವಶ್ಯಕತೆಯೇ ಇಲ್ಲ. ಎಲ್ಲೂ ಕೂಡ ವಿದ್ಯುತ್ ಅಷ್ಟೊಂದು ಬಳಕೆ ಮಾಡುವುದಿಲ್ಲ. ದೆಹಲಿಯಲ್ಲಿ ಕೂಡ ವಿದ್ಯುತ್ ಉಚಿತವಾಗಿ ಕೊಡುತ್ತವೆ ಎಂದು ಆಪ್ ಸರ್ಕಾರ ಹೇಳಿದ್ದರು. ಈಗ ಅದನ್ನು ವಾಪಸ್ ತೆಗೆದುಕೊಂಡಿದ್ದಾರೆ. ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ ಎಂದು ದೆಹಲಿಯ ಆಪ್ ಸರ್ಕಾರ ತನ್ನ ಯೋಜನೆಗಳನ್ನು  ವಾಪಸ್ ತೆಗೆದುಕೊಂಡಿದೆ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ ಮತ್ತು ನಿರುದ್ಯೋಗಿ ಪದವೀಧರರಿಗೆ ಕೊಡುವಂತಹ ಹಣ ಎರಡು ಲಕ್ಷ ಕೋಟಿಗೂ ಅಧಿಕ ಹಣ ಬೇಕು. ಒಟ್ಟು ಈ ವರ್ಷದ ಬಜೆಟ್  ಮೂರು ಲಕ್ಷದ ಒಂಬತ್ತು ಸಾವಿರ ಕೋಟಿ. ಕಾಂಗ್ರೆಸ್ ನವರು ಗ್ಯಾರೆಂಟಿ ಕಾರ್ಡ್ ನಲ್ಲಿ ಅಷ್ಟೊಂದು ಹಣಕ್ಕೆ ಆದಾಯವನ್ನು ಎಲ್ಲಿಂದ ತರುತ್ತೇವೆ ಎಂದು ಜನರಿಗೆ ತಿಳಿಸಲಿಲ್ಲ. ಮೇಲಿನಿಂದ ಕುಬೇರ ಏನಾದರೂ ಸುರಿಸುತ್ತಾನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದವರ ಸಾಧನೆ ಶೂನ್ಯ. ಹೇಳಿಕೊಳ್ಳುವಂತಹ ಯಾವ ಸಾಧನೆ ಅವರು ಮಾಡಿಲ್ಲ. ಟಿಪ್ಪು ಜಯಂತಿ,  ಶಾದಿಭಾಗ್ಯ ಜಾತಿ ಆಧಾರದ ಮೇಲೆ ಮಕ್ಕಳನ್ನು ಟೂರ್ ಕಳಿಸುವಂತಹದ್ದು, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿದ್ದು, ಇಂತಹ ಸಾಧನೆಗಳೇ ಆ ಪಕ್ಷಕ್ಕೆ ಹಿಂದಿನ ಚುನಾವಣೆಯಲ್ಲಿ ಮುಳ್ಳಾಗಿತ್ತು ಈಗ ಹೊಸ ಗಿಮಿಕ್ ಅನ್ನ ಶುರು ಮಾಡಿದ್ದಾರೆ ಎಂದರು.

ಈಗಾಗಲೇ ಗ್ಯಾರೆಂಟಿ ಕಾರ್ಡ್ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ನಾವು ದೂರನ್ನು ನೀಡಿದ್ದೇವೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಇನ್ನು ಗ್ಯಾರೆಂಟಿ ಕಾರ್ಡ್ ಹಂಚುವಾಗ ಪ್ರತಿ ಮನೆಯಲ್ಲಿ ಆಧಾರ್ ಕಾರ್ಡ್ ನಂಬರ್ ಮತ್ತು ಪಾನ್ ಕಾರ್ಡ್ ನಂಬರ್ ತೆಗೆದುಕೊಳ್ಳುತ್ತಿದ್ದಾರೆ. ಜನರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಚುನಾವಣಾ ಆಯೋಗದವರು ಬಂದರೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಟ್ಟು ಓಡಿ ಹೋಗುತ್ತಾರೆ ಎಂದು ಹೇಳಿದರು.

ಈ ರೀತಿ ಅನೈತಿಕ ಮಾರ್ಗ ಹಿಡಿದಿರುವ ಕಾಂಗ್ರೆಸ್ ಗೆ ಸೋಲಿನ ಭೀತಿ ಕಾಡುತ್ತಿದೆ. ಇಡೀ ದೇಶದ ಜನರು ಕಾಂಗ್ರೆಸ್‌ ಅನ್ನು ಸೋಲಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಾದರೂ ಇತ್ತು.  ಈಗ ಅದನ್ನು ಕೂಡ ಕಳೆದುಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಎಂ.ಎಲ್.ಸಿ., ಡಿ.ಎಸ್ ಅರುಣ್, ಬಾಳೆಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ರಕ್ಷಿತ್ ಮೇಗರವಳ್ಳಿ, ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next