ಬೆಳ್ತಂಗಡಿ : ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಬಾಧಿಸಿರುವ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರವು 4 ಕೋಟಿ ರೂ. ಅನುದಾನ ಘೋಷಿಸಿದ ಬೆನ್ನಲ್ಲೇ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಶಿಲೀಂಧ್ರ ನಾಶಕ ಔಷಧ ವಿತರಿಸಲಾಗುತ್ತಿದೆ.
ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಸುಮಾರು 20,534.50 ಹೆಕ್ಟೇರ್ನಲ್ಲಿ ಎಲೆಚುಕ್ಕಿ ರೋಗ ಬಾಧಿಸಿತ್ತು. ಔಷಧ ಖರೀದಿಸಲು ಪ್ರತೀ ಹೆಕ್ಟೇರ್ಗೆ 4 ಸಾವಿರ ರೂ.ಗಳಂತೆ 1.50 ಹೆಕ್ಟೇರ್ ವರೆಗೆ ರೈತರಿಗೆ ಸಹಾಯಧನ ನೀಡಲು ಅಂದಾಜು 8 ಕೋ.ರೂ. ಅಗತ್ಯವಿದೆ. ಆರಂಭದಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮೊದಲನೇ ಸಿಂಪರಣೆಗೆ 4 ಕೋ.ರೂ. ಆವಶ್ಯಕತೆ ಮನಗಂಡು ಸರಕಾರ ಅನುದಾನ ನೀಡಲು ಸಮ್ಮತಿಸಿದೆ.
ಕೇಂದ್ರದ ತಂಡ ಭೇಟಿ
ಪುತ್ತೂರು: ಎಲೆಚುಕ್ಕಿ ಹಾಗೂ ಹಳದಿ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ವಿಜ್ಞಾನಿಗಳ ವಿಶೇಷ ಅಧ್ಯಯನ ತಂಡವನ್ನು ಕಳುಹಿಸಿದೆ. ತಂಡವು ಸುಳ್ಯ, ಕಳಸ, ಶೃಂಗೇರಿ ಭಾಗಗಳಲ್ಲಿ ತೆರಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮರ್ಕಂಜದ ಮಾಪಲತೋಟ, ಬಲ್ಕಾಡಿ ಮತ್ತು ದಾಸರಬೈಲಿನ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ.