Advertisement

ಹೂಡಿಕೆದಾರರ ಸಮಾವೇಶದ ಒಡಂಬಡಿಕೆಗಳನ್ನು ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳ ನೇಮಕ: ನಿರಾಣಿ

05:15 PM Nov 05, 2022 | Team Udayavani |

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡಂಬಡಿಕೆಗಳ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು.ಇದರಿಂದ ಯೋಜನೆಗಳ ಶೀಘ್ರವಾಗಿ ಅನುಷ್ಠಾನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇಲಾಖೆ ಹಂತದ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ಯೋಜನೆ ಅನುಷ್ಠಾನ ಮಾಡಬಹುದು. ಈಗಾಗಲೇ ಇಲಾಖಾ ಹಂತದಲ್ಲಿ ಚರ್ಚೆ ನಡೆದಿದೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು ತೊಂಬತ್ತು ದಿನಗಳೊಳಗೆ ಅನುಮೋದನೆ ನೀಡುತ್ತೇವೆ. ಇದಕ್ಕಾಗಿ ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯಿದೆ. ಯೋಜನೆ ಸಾಮರ್ಥ್ಯಕ್ಕೆ ಅನುಗುಣವಾಗಿ ಅನುಮೋದನೆ ನೀಡಲಾಗುವುದು. ಈಗಾಗಲೇ ಅಧಿಕಾರಿಗಳು ಕೂಡ ಕಾರ್ಯಾನ್ಮುಖರಾಗಿದ್ದಾರೆ ಎಂದು ಅವರು ವಿವರಿಸಿದರು.

ಕೇವಲ ಒಡಂಬಡಿಕೆ ಮಾಡಿಕೊಂಡು ಹಾಗೆ ಬಿಡುವುದಿಲ್ಲ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲೇಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಅನುಮೋದನೆ ಕೊಡುತ್ತೇವೆ. ಅಂದಾಜು ಶೇ 70 ರಷ್ಟು ಅನುಷ್ಟಾನವಾಗುವ ವಿಶ್ವಾಸವನ್ನು ನಿರಾಣಿ ಅವರು ವ್ಯಕ್ತಪಡಿಸಿದರು.

Advertisement

ಒಡಂಬಡಿಕೆ ಮಾಡಿಕೊಂಡಿರುವ ಉದ್ಯಮಿಗಳು ಪೂರ್ಣ ಮಟ್ಟದಲ್ಲಿ ಅನುಷ್ಠಾನ ಮಾಡುವ ಸಾಧ್ಯತೆ ಇದೆ. ಪ್ರತಿ ಜಿಮ್‍ ನಲ್ಲಿ ಉದ್ಯಮಿಗಳು ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಬಂಡವಾಳ ಹೂಡಿಕೆ ಮಾಡುತ್ತಿದ್ದರು. ಮೊದಲ ಬಾರಿಗೆ ಜಿಮ್‍ನಲ್ಲಿ ಸರ್ಕಾರದ ಜತೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಶೇ.90ರಷ್ಟು ಬೆಂಗಳೂರಿನಿಂದ ಆಚೆ ಹೂಡಿಕೆಯಾಗಲಿದೆ ಎಂದರು.

ಎರಡು ಮತ್ತು ಮುರನೇ ಹಂತದ ನಗರಗಳನ್ನು ಕೇಂದ್ರೀಕರಿಸಿ ಹೂಡಿಕೆ ಮಾಡುವಂತೆ ನಾವು ಮನವರಿಕೆ ಮಾಡಿದೆವು. ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲೂ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಪ್ರಶಂಸಿಸಿದರು.

ಯೋಜನೆಗಳ ಅನುಷ್ಠಾನಕ್ಕಾಗಿ ನಾವು 50 ಸಾವಿರ ಎಕರೆ ಲ್ಯಾಂಡ್‍ಬ್ಯಾಂಕ್ ಇಟ್ಟಿದ್ದೇವೆ. 50 ಲಕ್ಷ,ಒಂದು ಕೋಟಿ, 10 ಕೋಟಿ, 50 ಕೋಟಿ, 100 ಕೋಟಿ, 500 ಕೋಟಿ ಹೀಗೆ ಯೋಜನೆ ಸಾಮಥ್ರ್ಯಕ್ಕೆ ತಕ್ಕಂತೆ ಅನುಮೋದನೆ ನೀಡಲಾಗುವುದು ಎಂದರು.

500 ಕೋಟಿಗಿಂತ ಹೆಚ್ಚು ಮೊತ್ತದ ಯೋಜನೆಗಳಿಗೆ ಸಿಎಂ ನೇತೃತ್ವದ ಉನ್ನತಾಧಿಕಾರಿ ಮಟ್ಟದ ಸಮಿತಿ ಅನುಮೋದನೆ ಕೊಡಲಿದೆ. ಉಳಿದ ಮೊತ್ತದ ಯೋಜನೆಗಳಿಗೆ ಇಲಾಖಾ ಹಂತದಲ್ಲಿ ನೀಡಲಾಗುವುದು. ಉದ್ಯಮಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎನ್‍ಒಸಿಗಳನ್ನು ನೀಡಲಾಗುತ್ತದೆ. ಜತೆಗೆ ವಾಣಿಜ್ಯ ಬ್ಯಾಂಕ್‍ಗಳಿಂದಲೂ ಸಾಲ ದೊರಕುವಂತೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.

ಈ ಬಾರಿಯ ಜಿಮ್ ನಿರೀಕ್ಷೆಗೂ ಮೀರಿದ ಯಶಸ್ವಿಯಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯ ಎಂಬುದಕ್ಕೆ ಇದು ಸಾಕ್ಷಿ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂರು ದಿನಗಳ ಕಾಲ ನಡೆದ ಜಿಮ್‍ನಲ್ಲಿ ಒಟ್ಟು 9,81,784 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಇದರಲ್ಲಿ 2,83,415 ಲಕ್ಷ ಕೋಟಿಯ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5,41,369 ಲಕ್ಷ ಕೋಟಿ ಮೊತ್ತದ 57 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಇದರಲ್ಲಿ ಅದಾನಿ ಸಮೂಹ ಸಂಸ್ಥೆಯವರು ಇಂಧನ, ನಗರ ಪ್ರದೇಶಗಳಲ್ಲಿ ಗ್ಯಾಸ್‍ಪೈಪ್ ಅಳವಡಿಕೆ, ಸಾರಿಗೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಮಾಡಿದರೆ, ಜೆಎಸ್‍ಡಬ್ಲ್ಯೂ ಸಮೂಹ ಸಂಸ್ಥೆಯವರು ಹಸಿರು ಇಂಧನ, ಬಂದರು ಸೇರಿದಂತೆ ಮತ್ತಿತರ ವಲಯಗಳಲ್ಲಿ 57 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಈ ಬಾರಿ ಒಟ್ಟು 9,81,784 ಕೋಟಿ ಬಂಡವಾಳ ಹೂಡಿಕೆಯಾಗಿದೆ. 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಉತ್ಪದನಾ ವಲಯ, ಹಸಿರು ಇಂಧನ ಮತ್ತಿತರ ವಲಯದಲ್ಲಿ 1,57,014 ಲಕ್ಷ ಕೋಟಿಯ 5 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 1,29,020 ಕೋಟಿ ನಾಲ್ಕು ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡಿದ್ದು, 2,86,034 ಕೋಟಿಯ  ಒಂಭತ್ತು ಯೋಜನೆಗಳು ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.

ನವೀಕರಿಸಬಹುದಾದ ಇಂಧನ ವಲಯದಲ್ಲಿ 72 ಯೋಜನೆಯ ಒಟ್ಟು 29,397 ಕೋಟಿ ಅನುಮೋದನೆ ಕೊಡಲಾಗಿದೆ. ಇದೇ ವಲಯದಲ್ಲಿ 24 ಯೋಜನೆಗಳಿಗೆ  2,99,052 ಕೋಟಿ  ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಟ್ಟು 96  ಯೋಜನೆಗಳಿಂದ 328 449 ಕೋಟಿ   ಹೂಡಿಕೆಯಾಗಲಿದೆ ಎಂದರು.

ಉತ್ಪಾದನಾ ವಲಯದ 44 ಯೋಜನೆಗಳಲ್ಲಿ 27,384 ಕೋಟಿ ಅನುಮೋದನೆ ನೀಡಲಾಗಿದೆ. ಇದೇ ವಲಯದಲ್ಲಿ 9 ಯೋಜನೆಗಳ 46,950 ಕೋಟಿಗೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಂದಾಜು 53 ಯೋಜನೆಗಳಿಂದ 74,724 ಕೋಟಿ ಹೂಡಿಕೆಯಾಗುವ ನಿರೀಕ್ಷೆಯಿದೆ.  ಲಾಜಿಸ್ಟಿಕ್ ಪಾರ್ಕ್ ವಲಯದಲ್ಲಿ 57 ಯೋಜನೆಗಳ 18,834 ಕೋಟಿ ಹೂಡಿಕೆಗೆ ಅನುಮೋದನೆ ಕೊಡಲಾಗಿದೆ.12 ಯೋಜನೆಗಳ 53350 ಕೋಟಿ ಹೂಡಿಕೆಗೆ ಒಡಂಬಡಿಕೆ ಮಾಡಲಾಗಿದ್ದು, 69 ಯೋಜನೆಗಳಿಂದ 74,184 ಕೋಟಿ ಹೂಡಿಕೆಯಾಗುವ ಸಂಭವವಿದೆ. ಉತ್ಪದನಾ ವಲಯದ ಕೋರ್ ಸೆಕ್ಟರ್‍ಗೆ 20 ಯೋಜನೆಗಳ 25817 ಕೋಟಿಗೆ ಅನುಮೋದನೆ ನೀಡಿದ್ದು, 6 ಯೋಜನೆಗಳಿಗೆ 10,458 ಕೋಟಿ ಹೂಡಿಕೆಗೆ ಒಪ್ಪಂದ ಮಾಡಲಾಗಿದ್ದು, 26 ಯೋಜನೆಗಳಿಗೆ 36,275 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಉತ್ಪಾದನಾ ವಲಯದ ಸೆಕ್ಟರ್ ಎ, ಎಎಂಸಿಜಿ ಜವಳಿ ಮತ್ತಿತರ ಕ್ಷೇತ್ರಗಳ 410 ಯೋಜನೆಗಳ ಒಟ್ಟು 24,969 ಕೋಟಿ ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿದೆ.  ಎರಡು ಯೋಜನೆಗಳಿಂದ 2589 ಹೂಡಿಕೆಯಾಗಲಿದ್ದು, ಒಟ್ಟು  412 ಯೋಜನೆಗಳಿಂದ 27558 ಕೋಟಿ ಹರಿದು ಬರಲಿದೆ. ಒಟ್ಟು 608 ಯೋಜನೆಗಳಿಂದ 283415 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.  57 ಯೋಜನೆಗಳಿಂದ 541369 ಕೋಟಿ  ಒಡಂಬಡಿಕೆ ಮಾಡಲಾಗಿದ್ದು, ಒಟ್ಟು 665 ಯೋಜನೆಗಳಿಂದ 824784 ಹೂಡಿಕೆಯಾಗಿದೆ ಎಂದು ನಿರಾಣಿ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next