Advertisement

ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ

08:37 PM Dec 04, 2021 | Team Udayavani |

ಉಡುಪಿ: ಸೈಬರ್‌ ವಂಚನೆ ಪ್ರಕರಣದಲ್ಲಿ ನಡೆಯುವ ಕಳ್ಳ-ಪೊಲೀಸ್‌ ಆಟದಲ್ಲಿ ಕಳ್ಳರದ್ದೇ ಮೇಲುಗೈ ಎಂಬಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಸೈಬರ್‌ ಠಾಣೆಗಳಿಗೆ 250 ಮಂದಿ ಸೈಬರ್‌ ಪರಿಣತರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.

Advertisement

ಇತ್ತೀಚೆಗೆ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ವಿದ್ಯಾವಂತರೇ ಕ್ಷಣಾರ್ಧದಲ್ಲಿ ನಡೆಯುವ ಕಳ್ಳರ ಕೈಚಳಕದಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಗುಜರಾತ್‌ ಸರಕಾರದೊಂದಿಗೆ ಎಂಒಯು:

“ಸೈಬರ್‌ ಸೇಫ್ ಮಿಷನ್‌’ ಮೂಲಕ ಗುಜರಾತ್‌ ಸರಕಾರ ಈಗಾಗಲೇ ಹಲವಾರು ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಿ ಮಾದರಿ ಎನಿಸಿಕೊಂಡಿದೆ. ಹಾಗೆಯೇ ಸೈಬರ್‌ ಠಾಣೆಗಳಿಗೆ ಪರಿಣತ ರನ್ನು ನೇಮಕ ಮಾಡಿ ಅನೇಕ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದ್ದಾರೆ. ಇದನ್ನೇ ಮಾದರಿಯಾಗಿರಿಸಿಕೊಂಡು ಕರ್ನಾಟಕ ಸರಕಾರವೂ ಗುಜರಾತ್‌ ಸರಕಾರದೊಂದಿಗೆ ಎಂಒಯುನಡಿ ಸೈಬರ್‌ ವಿಂಗ್‌ ರಚಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸೈಬರ್‌ ಠಾಣೆಗಳಿಗೂ ಪರಿಣತರನ್ನು ನೇಮಿಸುವ ಉದ್ದೇಶ ರಾಜ್ಯ ಸರಕಾರದ್ದು. ಮೊದಲ ಹಂತದಲ್ಲಿ 250 ಮಂದಿ ಪರಿಣತರನ್ನು ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣತರನ್ನು ನೇಮಿಸಲು ಉದ್ದೇಶಿಸಲಾಗಿದೆ.

ದೇಶದ್ರೋಹ ಮಟ್ಟ ಹಾಕುವ ಉದ್ದೇಶ:

Advertisement

ದೇಶದ್ರೋಹ ಕೃತ್ಯ ಎಸಗುವವರು ವಿವಿಧ ಚೈನೀಸ್‌ ಆ್ಯಪ್‌ಗ್ಳು, ಐಎಸ್‌ಐ ಏಜೆಂಟ್‌ಗಳು, ನಕಲಿ ಆ್ಯಪ್‌ಗ್ಳ ಮೂಲಕ ವಿವಿಧ ರೀತಿಯಲ್ಲಿ ಬಳಕೆದಾರರ ಡಾಟಾ ಕದಿಯುವ ಮೂಲಕ ಅನಾಮಧೇಯ ವ್ಯಕ್ತಿಗಳು ಷಡ್ಯಂತ್ರ ರೂಪಿಸುತ್ತಿರು ವುದು ಪೊಲೀಸರಿಗೂ ತಲೆ ನೋವಾಗಿದೆ. ಇತ್ತೀಚೆಗಷ್ಟೇ ಬಿಟ್‌ಕಾಯಿನ್‌ ಹಗರಣ ದೇಶಾದ್ಯಂತ ಸದ್ದು ಮಾಡಿದ್ದು, ಈ ಪ್ರಕರಣವನ್ನೂ ಭೇದಿಸಲು ಸರಕಾರ ನಾನಾ ಕಸರತ್ತು ಮಾಡುತ್ತಿದೆ. ಸೈಬರ್‌ ಕ್ರೈಂ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಆರೋಪಿಗಳಿಂದಲೇ ಪೊಲೀಸರು ಪ್ರಾತ್ಯಕ್ಷಿಕೆ ಮಾಡಿಸುವ ಘಟನೆಗಳೂ ನಡೆದಿವೆ.

ಬೇಗನೇ ದೂರು ನೀಡಿದರೆ ಉತ್ತಮ:

ಸೈಬರ್‌ ವಂಚನೆ ಪ್ರಕರಣಗಳಲ್ಲಿ ಘಟನೆ ನಡೆದ ತತ್‌ಕ್ಷಣವೇ ಪೊಲೀಸರಿಗೆ ಹಾಗೂ ಬ್ಯಾಂಕ್‌ನವರಿಗೆ ಮಾಹಿತಿ ನೀಡಿದರೆ ಉತ್ತಮ. ಆ ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲೊಕೇಶನ್‌ ಆಧಾರದಲ್ಲಿ ಲಭ್ಯವಾಗುತ್ತದೆ. ವಿಳಂಬ ಮಾಡಿದಷ್ಟು ಸಮಸ್ಯೆ ಜಟಿಲವಾಗಿ ಪರಿಣಮಿಸತೊಡಗುತ್ತದೆ.

ವಿದೇಶದಿಂದಲೂ ಕನ್ನ :

ರಾಜ್ಯಕ್ಕೆ ಉತ್ತರಪ್ರದೇಶ ಸಹಿತ ಅನ್ಯ ದೇಶದಲ್ಲಿದ್ದುಕೊಂಡು ಕೃತ್ಯ ಮಾಡುವವರೇ ಬಹಳಷ್ಟು ಮಂದಿ ಇದ್ದಾರೆ. ನಕಲಿ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡುವುದು. ಕರೆಮಾಡಿ ಒಟಿಟಿ ಸಂಖ್ಯೆ ಕೇಳುವುದು. ವಿವಿಧ ಬಗೆಯ ಬಹುಮಾನಗಳ ಆಫ‌ರ್‌ ನೀಡುವುದು. ನಿಮಗೆ ಕೋಟ್ಯಂತರ ರೂ.ಹಣ ಬಂದಿದೆ; ಪಡೆದುಕೊಳ್ಳಿ ಎಂಬ ಅನಾಮಧೇಯ ಲಿಂಕ್‌ಉಳ್ಳ ಸಂದೇಶಗಳು ಹ್ಯಾಕರ್‌ಗಳ ತಂತ್ರವಾಗಿದೆ. ಇದರ ಹಿಂದೆ ಹೋದಷ್ಟೇ ವೇಗವಾಗಿ ನಮ್ಮ ಅಕೌಂಟ್‌ನಲ್ಲಿರುವ ಹಣವೂ ಮಾಯವಾಗತೊಡಗುತ್ತದೆ. ಕೆಲವರಿಗೆ ಈ ಬಗ್ಗೆ ದೂರು ನೀಡಲು ಮುಜುಗರವಾದರೆ; ಇನ್ನೂ ಕೆಲ ವರು ದೂರು ನೀಡಿದರೂ ತಮ್ಮ ಸಮಸ್ಯೆ ಬಗೆಹರಿಯಲಿಲ್ಲ ಎಂಬ ಚಿಂತೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ದಾಖಲಾದ ಪ್ರಕರಣ :

ಇಸವಿ  ಪ್ರಕರಣ

2019       28

2020       49

2021       40

ಸೈಬರ್‌ ಠಾಣೆಗಳ ಬಲವರ್ಧನೆ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ. ಪರಿಣತರನ್ನೊಳಗೊಂಡ ಸೈಬರ್‌ ವಿಂಗ್‌ಗಳ ಮೂಲಕ ರಾಜ್ಯದ ಎಲ್ಲ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಪರಿಗಣಿಸಿ ತ್ವರಿತಗತಿಯ ತನಿಖೆ ಮಾಡಲಾಗುವುದು. ಆರಗ ಜ್ಞಾನೇಂದ್ರ,ಗೃಹ ಸಚಿವರು

ಜಿಲ್ಲೆಯ ಸೈಬರ್‌ ಠಾಣೆಯಲ್ಲಿ ದಿನನಿತ್ಯ ವಿಭಿನ್ನ ಪ್ರಕರಣಗಳು ದಾಖಲಾಗುತ್ತಿವೆ. ಇದರ ಜಾಡು ಹಿಡಿಯಲು ಪೊಲೀಸರು ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ವಂಚನೆ ಮಾಡಿದವರು ಉತ್ತರ ಭಾರತ ಮೂಲದವರಾಗಿರುತ್ತಾರೆ. ಕೃತ್ಯ ನಡೆಸಿದ ಕೆಲವೇ ಕ್ಷಣಗಳಲ್ಲಿ ಇವರು ದಾಖಲೆಗಳನ್ನು ಮರೆಮಾಚುತ್ತಾರೆ.  ಮಂಜುನಾಥ್‌,ಪೊಲೀಸ್‌ ನಿರೀಕ್ಷಕರು, ಸೆನ್‌ ಠಾಣೆ ಉಡುಪಿ

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next