Advertisement

“ಜೂ. 3ಕ್ಕೆ ಹೈಕೋರ್ಟ್‌ಗೆ ಕ್ರಿಯಾಯೋಜನೆ ಸಲ್ಲಿಕೆ’

10:51 PM May 18, 2019 | Team Udayavani |

ಮಹಾನಗರ : ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟವನ್ನು ತಡೆಯುವ ಕುರಿತು ಕ್ರಿಯಾಯೋಜನೆಯನ್ನು ರೂಪಿಸಿ ಜೂ. 3ಕ್ಕೆ ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಆಯುಕ್ತ ಪಾಲಯ್ಯ ತಿಳಿಸಿದರು.

Advertisement

ಕ್ರಿಯಾಯೋಜನೆ ತಯಾರಿ ಕುರಿತಂತೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕು ಸಾಗಾಟ ವಾಹನಗಳಲ್ಲಿ ಜನರನ್ನು ಸಾಗಾಟ ಮಾಡುವುದನ್ನು ತಡೆಯಲು ರಾಜ್ಯ ಸರಕಾರಕ್ಕೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಕಾನೂನುಸೇವಾ ಪ್ರಾಧಿಕಾರ ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಎ. 22ರಂದು ನೀಡಿದ ಆದೇಶದಂತೆ ಸುರಕ್ಷಿತ, ಸುಲಲಿತ ಸಂಚಾರ ವ್ಯವಸ್ಥೆಗೆ ಸಮಗ್ರ ಕ್ರಿಯಯೋಜನೆ ರೂಪಿಸಲಾಗುತ್ತಿದೆ ಎಂದರು.

ಜಿಲ್ಲಾಮಟ್ಟದಲ್ಲಿ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ, ಕಾರ್ಮಿಕ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಆರ್‌ಡಿಪಿಆರ್‌, ಮಹಿಳಾ ಮತ್ತು ಮಕ್ಕಳ ಇಲಾಖೆ, ಪ್ಯಾಕ್ಟರೀಸ್‌ ಹಾಗೂ ಬಾಯ್ಲಿಲರ್‌ ಇಲಾಖೆ ಸಹಿತ ಸಂಬಂಧಪಟ್ಟ ಇಲಾಖೆಗಳು ಸೇರಿ ಸಮಗ್ರ ಜಿಲ್ಲಾ ಮಟ್ಟದ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಅಲ್ಲಿಂದ ಮೇ 25ರೊಳಗೆ ರಾಜ್ಯ ಸಾರಿಗೆ ಇಲಾಖೆಗೆ ಸಲ್ಲಿಸಬೇಕು ಎಂದರು.

ಸರಕುಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಂಚಾರ ತಪ್ಪು
ಕಾರ್ಮಿಕರಿಗೆ ಸೂಕ್ತ ಸಂಚಾರ ವ್ಯವಸ್ಥೆಗಳು ಇಲ್ಲದಿರುವ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಸರಕುಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಂಚರಿಸಬಾರದು. ಈಗಾಗಲೇ ಪ್ಯಾಕ್ಟರೀಸ್‌, ಬಾಯ್ಲರ್‌ ಇಲಾಖೆ ಮತ್ತು ಕಾರ್ಮಿಕ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಕಾರ್ಮಿಕರು, ಸಂಚಾರಕ್ಕೆ ಬಸ್‌ಗಳ ಕೊರತೆ ಕುರಿತು ಸಮೀಕ್ಷೆ ಮಾಡಿದ್ದಾರೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕುಸಾಗಾಟ ವಾಹನಗಳಲ್ಲಿ ಕಾರ್ಮಿಕರ ಸಾಗಾಟ ಸಮಸ್ಯೆ ಕಡಿಮೆ ಎಂದರು.

Advertisement

13 ಲಕ್ಷ ರೂ. ದಂಡ ವಸೂಲಿ
ಸರಕು ಸಾಗಾಟ ವಾಹನಗಳಲ್ಲಿ ಜನರ ಸಾಗಾಟ ಕುರಿತು ಜಿಲ್ಲಾ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಕಳೆದ ವರ್ಷ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ 13 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆರ್‌ಟಿಒ ಜಾನ್‌ ಮಿಸ್ಕಿತ್‌ ವಿವರಿಸಿದರು.

ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಮಾತನಾಡಿ, ದಕ್ಷಿಣ ಕನ್ನಡಜಿಲ್ಲೆಯಲ್ಲಿ 2.5 ಲಕ್ಷ ಕೃಷಿ ಕಾರ್ಮಿಕರು, 38,000 ಕಾರ್ಮಿಕರು, 58,000 ಅಂಗಡಿ, ವಾಣಿಜ್ಯ ಮಳಿಗೆಗಳ ಕಾರ್ಮಿಕರು, 56,000 ಕಟ್ಟಡ ಕಾರ್ಮಿಕರಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ಮುಖಂಡರಾದ ವಿಶ್ವನಾಥ ಶೆಟ್ಟಿ , ವಸಂತ ಆಚಾರಿ, ಮಹಮ್ಮದ್‌ ರಫಿ ಮಾತನಾಡಿ, ಕಾರ್ಮಿಕರ ಸಂಚಾರಕ್ಕೆ ಸಮಸ್ಯೆ ಇರುವ ಕಡೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಆಗ್ರಹಿಸಿದರು.

ಅಪರ ಜಿಲ್ಲಾಧಿಕಾರಿ ಆರ್‌. ವೆಂಕಟಾಚಲಪತಿ, ಪೊಲೀಸ್‌ ಉಪ ಆಯುಕ್ತ ಲಕ್ಷ್ಮೀ ಗಣೇಶ್‌, ಸಹಾಯಕ ಕಾರ್ಮಿಕ ಆಯುಕ್ತರಾದ ಕೆ.ಬಿ. ನಾಗರಾಜ್‌, ಜಾನ್ಸನ್‌ ಕೆ.ಜೆ., ಉಪಸ್ಥಿತರಿದ್ದರು.

ಶಾಲಾವಾಹನಗಳಲ್ಲಿ
ಮಕ್ಕಳ ಮಿತಿ: ಜಾಗೃತಿ
ಆಟೋರಿಕ್ಷಾ, ವ್ಯಾನ್‌ಗಳು ಸಹಿತ ಶಾಲಾವಾಹನಗಳಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಮಕ್ಕಳ ಸಾಗಾಟ ತಡೆ ಕುರಿತು ಶಿಕ್ಷಣ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೇ 13 ರಂದು ತಾಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮೇ 27ರಿಂದ 30ರ ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಶಾಲಾಡಳಿತ ಮಂಡಳಿ, ಶಾಲಾ ವಾಹನಗಳ ಚಾಲಕರು, ಹೆತ್ತವರು ಒಳಗೊಂಡಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿದ್ಯಾಂಗ ಉಪನಿರ್ದೇಶಕ ಶಿವರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next