Advertisement

ಶುದ್ಧ ನೀರಿಗಾಗಿ ಜನರ ಪರದಾಟ

03:43 PM May 18, 2022 | Team Udayavani |

ಗುರುಮಠಕಲ್‌: ಸರ್ಕಾರ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳ ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಕೊಟ್ಯಂತರ ರೂ. ಖರ್ಚು ಮಾಡಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸುತ್ತಿದೆ. ಆದರೆ, ಪಟ್ಟಣದ ಉಪ್ಪರಗಡ್ಡ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ 6 ತಿಂಗಳಿಂದ ಸ್ಥಗಿತಗೊಂಡಿದ್ದು, ಶುದ್ಧ ಕುಡಿವ ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪುರಸಭೆ ವತಿಯಿಂದ 2016-17ನೇ ಸಾಲಿನ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಸಾವಿರ ಲೀ. ಶುದ್ಧ ನೀರಿನ ಘಟಕವನ್ನು 7 ಲಕ್ಷ ರೂ. ಅಂದಾಜು ಮೊತ್ತದಲ್ಲಿ ನಿರ್ಮಿಸಲಾಗಿದೆ. ಈ ಶುದ್ಧ ನೀರಿನ ಘಟಕ ಸ್ಥಗಿತವಾಗಿರುವುದರಿಂದ ಸುತ್ತಮುತ್ತಲಿನ ವ್ಯಾಪಾರಿಗಳು, ವಾರ್ಡ್‌ ಜನರಿಗೆ ಸಮಸ್ಯೆಯಾಗಿದೆ. ನೀರಿಗಾಗಿ ಜನ ಬೇರೆ ಘಟಕಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಅಂತರ್ಜಲ ಕುಸಿತದಿಂದ ಪ್ಲೊರೈಡ್‌ಯುಕ್ತ ನೀರು ಮಾರಕ ರೋಗಗಳಿಗೆ ಕಾರಣವಾಗಲಿದೆ ಎಂಬ ದೃಷ್ಟಿದಿಂದ ಅಸ್ತಿತ್ವಕ್ಕೆ ತರಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕುಡಿಯಲು ಪ್ಲೊರೈಡ್‌ಯುಕ್ತ ನೀರು ಬಳಕೆ ಮಾಡುವುದು ಅನಿವಾರ್ಯವಾಗಿದೆ. ಪುರಸಭೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.

ಹೆಚ್ಚಿದ ನೀರಿನ ಬೇಡಿಕೆ

ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಘಟಕ ಸ್ಥಗಿತವಾಗಿರುವುದರಿಂದ ಜನ ತೊಂದರೆ ಅನುಭವಿಸುವಂತಾಗಿದೆ. ಅದನ್ನು ತುರ್ತಾಗಿ ದುರಸ್ತಿ ಮಾಡಿಸಿ ಮರು ಚಾಲನೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

Advertisement

ಸರ್ವರಿಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಆಶಯೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣವಾಗಿದೆ. ಕುಡಿಯುವ ನೀರಿನ ಘಟಕಗಳು ನಿಂತು ಹೋದರೆ ತಕ್ಷಣ ಅಧಿಕಾರಿಗಳು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ವಾರ್ಡ್‌ನಲ್ಲಿ ಕಳೆದ 6 ತಿಂಗಳಿಂದ ಶುದ್ಧ ನೀರಿನ ಘಟಕ ಸ್ಥಗಿತಗೊಂಡಿದೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ. ಬೇರೆ ಕಡೆ ಹೋಗಿ ನೀರನ್ನು ತೆಗೆದುಕೊಂಡು ಬರುವ ಸ್ಥಿತಿ ಬಂದಿದೆ. ಇನ್ನಾದರೂ ಸಂಬಂಧಿತರು ಸಮಸ್ಯೆ ಬಗೆಹರಿಸಿ ನೀರಿನ ಘಟಕವನ್ನು ಪುನಃ ಪ್ರಾರಂಭಿಸಬೇಕು. -ಅಯಾಜ್‌ ಅಲಿ, ವಾರ್ಡ್‌ ನಿವಾಸಿ

ನಾನು ಹೊಸದಾಗಿ ಪುರಸಭೆಗೆ ಬಂದಿದ್ದೇನೆ, ಸಮಸ್ಯೆಯ ಕುರಿತು ಈಗ ನಮ್ಮ ಗಮನಕ್ಕೆ ಬಂದಿದೆ. ಸಂಬಂಧಿ ತ ಗುತ್ತಿಗೆದಾರರಿಗೆ ಮಾತನಾಡಿ, ಶೀಘ್ರದಲ್ಲಿ ನೀರಿನ ಘಟಕವನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು. ಲಕ್ಷ್ಮೀಬಾಯಿ, ಪುರಸಭೆ ಮುಖ್ಯಾಧಿಕಾರಿ

-ಚೆನ್ನಕೇಶವಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next