ನವದೆಹಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ‘ಪೆಗಾಸಸ್’ ವಿಷಯದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಕಿಡಿ ಕಾರಿದ್ದಾರೆ.
“ರಾಹುಲ್ ಗಾಂಧಿ ಮತ್ತೆ ವಿದೇಶಿ ನೆಲದಲ್ಲಿ ಈ ಹುನ್ನಾರದ ಕೆಲಸ ಮಾಡುತ್ತಿದ್ದಾರೆ. ಪೆಗಾಸಸ್ ಅವರ ಮನಸ್ಸಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿಶ್ವದಾದ್ಯಂತ ಭಾರತದ ಬಗ್ಗೆ ಗೌರವ ಹೆಚ್ಚಿದೆ ಮತ್ತು ದೊಡ್ಡ ನಾಯಕರು ಹೇಳುತ್ತಿದ್ದಾರೆ, ಪ್ರಧಾನಿ ಮೋದಿ ಬಗ್ಗೆ ಇಟಲಿ ಪ್ರಧಾನಿ ಹೇಳಿದ್ದನ್ನ ರಾಹುಲ್ ಗಾಂಧಿ ಕೇಳಬೇಕು.” ಎಂದು ಠಾಕೂರ್ ಹೇಳಿದ್ದಾರೆ.
ಮೂರು ರಾಜ್ಯಗಳ ಚುನಾವಣ ಫಲಿತಾಂಶವು ಕಾಂಗ್ರೆಸನ್ನು ಮತ್ತೊಮ್ಮೆ ಅಳಿಸಿಹಾಕಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಜನಾದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ನಿನ್ನೆಯ ಫಲಿತಾಂಶವು ಜನರು ಪ್ರಧಾನಿ ಮೋದಿಯನ್ನು ನಂಬುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಠಾಕೂರ್ ಹೇಳಿದರು.
ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಂದೆರಡು ತಿಂಗಳ ಹಿಂದೆ ಭಾರತದಲ್ಲಿ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದ ಪೆಗಾಸಸ್ ವಿಚಾರವನ್ನು ಪ್ರಸ್ತಾಪಿಸಿ,”ದೊಡ್ಡ ಸಂಖ್ಯೆಯ ರಾಜಕೀಯ ನಾಯಕರ ಫೋನ್ನಲ್ಲಿ ಪೆಗಾಸಸ್ ಇದೆ. ನನ್ನ ಫೋನ್ನಲ್ಲಿ ಪೆಗಾಸಸ್ ಇತ್ತು. ನನಗೆ ಗುಪ್ತಚರ ಅಧಿಕಾರಿಗಳು ಕರೆ ಮಾಡಿದ್ದರು , ದಯವಿಟ್ಟು ಫೋನ್ನಲ್ಲಿ ಏನು ಹೇಳುತ್ತೀರೋ ಅದನ್ನು ನಾವು ರೆಕಾರ್ಡ್ ಮಾಡುತ್ತಿದ್ದೇವೆ ಎಂದು ಜಾಗರೂಕರಾಗಿರಿ” ಎಂದಿದ್ದರು. “ಪ್ರತಿಪಕ್ಷಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳ ಅಡಿಯಲ್ಲಿ ಇರಬಾರದ ವಿಷಯಗಳಿಗಾಗಿ ನನ್ನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದಿದ್ದರು.