Advertisement

ದಾಳಿಗಷ್ಟೇ ಸೀಮಿತಗೊಂಡ ಎಸಿಬಿ ಸಾಧನೆ: 2,121 ಎಫ್ಐಆರ್‌, 22 ಮಂದಿಗೆ ಮಾತ್ರ ಶಿಕ್ಷೆ

02:01 AM Jul 13, 2022 | Team Udayavani |

ಬೆಂಗಳೂರು: ಭ್ರಷ್ಟರಿಗೆ ಸಿಂಹಸ್ವಪ್ನ ವಾಗಿದ್ದ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಾರಂಭವಾದ ಬಳಿಕ ಇದುವರೆಗೆ 2,121 ಎಫ್ಐಆರ್‌ ದಾಖಲಾದರೂ ಶಿಕ್ಷೆಯಾಗಿರುವುದು ಕೇವಲ 22 ಮಂದಿಗೆ ಮಾತ್ರ!

Advertisement

ಎಸಿಬಿಯು ದಾಳಿಗಷ್ಟೇ ಸೀಮಿತವಾಗಿದ್ದು, ಸಣ್ಣಪುಟ್ಟ ಟ್ರ್ಯಾಪ್‌ ಕೇಸ್‌ಗಳಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿದೆ. ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಗಳಿಕೆ (ಡಿಸ್‌ಪ್ರಪೋರ್ಷನೇಟ್‌ ಅಸೆಟ್‌ -ಡಿಎ) ಪ್ರಕರಣಗಳಲ್ಲಿ ದೊಡ್ಡ ಭ್ರಷ್ಟರ ಕೋಟೆಗೆ ಲಗ್ಗೆ ಇರಿಸಿದರೂ ಇದುವರೆಗೆ ಒಂದೇ ಒಂದು ಪ್ರಕರಣದಲ್ಲೂ ಚಾರ್ಜ್‌ಶೀಟ್‌ ಸಲ್ಲಿಸಿಲ್ಲ.ಎಸಿಬಿ ಸ್ಥಾಪನೆಯಾದ ಬಳಿಕ ಇದುವರೆಗೆ 2,121 ಪ್ರಕರಣಗಳ ತನಿಖೆ ನಡೆಸಲಾಗಿದೆ. ಈ ಪೈಕಿ 99 ಪ್ರಕರಣಗಳಲ್ಲಿ ಸಾಕ್ಷ  éಗಳಿಲ್ಲದೆ ಕೋರ್ಟ್‌ಗೆ “ಬಿ’ ವರದಿ ಸಲ್ಲಿಸಲಾಗಿದೆ. 70 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಮುಕ್ತಾಯ ಗೊಂಡಿದ್ದು, ಶೇ. 3ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ.

ಇದರಲ್ಲೂ 9 ಮಂದಿ ಆರೋಪದಿಂದ ಮುಕ್ತಿ ಹೊಂದಿದ್ದಾರೆ. ಸೂಕ್ತ ತನಿಖೆ ನಡೆಸದ್ದರಿಂದ 39 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆ ಗೊಂಡಿವೆ.

ಭ್ರಷ್ಟಾಚಾರದಲ್ಲಿ ತೊಡಗಿದ್ದ 1,473ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತಾದರೂ ಬಹುತೇಕ ಮಂದಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. 682ಕ್ಕೂ ಅಧಿಕ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.

2016ರಿಂದ ಇದುವರೆಗೆ ಎಸಿಬಿ ದಾಳಿಗೊಳಗಾದ 1,336 ಮಂದಿ ಸರಕಾರಿ ನೌಕರರು ಸೇವೆಯಿಂದ ಅಮಾನತುಗೊಂಡಿದ್ದಾರೆ. 85ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ತನಿಖೆ ನಡೆಸಲು ವಿವಿಧ ನ್ಯಾಯಾ ಲಯಗಳಲ್ಲಿ ತಡೆಯಿದೆ. 763 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 480ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿ ಸರಕಾರದ ವಿವಿಧ ಇಲಾಖೆಗಳಿಂದ ಪೂರ್ವಾನುಮತಿ ಬಾಕಿ ಇದೆ.

Advertisement

2016ರಲ್ಲಿ ಒಂದು ವರ್ಷದಲ್ಲಿ 153 ಪ್ರಕರಣಗಳು ಎಸಿಬಿ ಮೆಟ್ಟಿಲೇರಿದ್ದವು. 2017ಕ್ಕೆ ಇದರ ಪ್ರಮಾಣ 289ಕ್ಕೆ ಏರಿತ್ತು. 2018ರಲ್ಲಿ 378, 2019ರಲ್ಲಿ 379, 2020ರಲ್ಲಿ 271 ಎಫ್ಐಆರ್‌ ದಾಖಲಾಗಿತ್ತು. 2021-22ರಲ್ಲಿ 281ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ಎಸಿಬಿಯಲ್ಲಿ ದಾಖಲಿಸಿದ್ದ 2 ಪ್ರಕರಣಗಳನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ಕ್ಲಾಸ್‌-1 ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳ ವಿರುದ್ಧ 391 ಪ್ರಕರಣ ದಾಖಲಾಗಿವೆ ಎಂದು ಎಸಿಬಿ ಉನ್ನತ ಮೂಲಗಳು ಉದಯವಾಣಿಗೆ ತಿಳಿಸಿವೆ.

ಸರಕಾರದ ನಿರ್ದೇಶನದಂತೆ ಕೆಲಸ
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಾಯುಕ್ತಕ್ಕಿದ್ದ ಅಧಿಕಾರ ಮೊಟಕುಗೊಳಿಸಿ 2016ರಲ್ಲಿ ಕಾಂಗ್ರೆಸ್‌ ಸರಕಾರವು ಎಸಿಬಿಯನ್ನು ಪ್ರಾರಂಭಿಸಿತ್ತು. ಲೋಕಾಯುಕ್ತ ಪೊಲೀಸರಿಗೆ ಸ್ವತಂತ್ರವಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಅಧಿಕಾರವಿತ್ತು. ಆದರೆ ಎಸಿಬಿ ಅಧಿಕಾರಿಗಳು ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಗೃಹ ಸಚಿವರ ಸಲಹೆಗಾರರು ಸೂಚಿಸಿದಂತೆ ಕೆಲಸ ಮಾಡಬೇಕಿದೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಮತ್ತು ಭ್ರಷ್ಟಾಚಾರ ತಡೆ ಅಧಿನಿಯಮ 1988 ಎರಡು ಪ್ರತ್ಯೇಕ ಶಾಸನಗಳಾಗಿವೆ. ಎಸಿಬಿ ಸಂಸ್ಥೆಯು ಸರಕಾರದ ಅಧೀನದÇÉೇ ಇರುವುದರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಹೆಚ್ಚಿನ ಬಲವೂ ಇಲ್ಲ ಎಂಬ ಮಾತುಗಳಿವೆ.

ಎಸಿಬಿ ತನಿಖೆಗೆ ಹಿನ್ನೆಡೆ ಏಕೆ?
ಪ್ರಮುಖ ಪ್ರಕರಣಗಳಲ್ಲಿ ಅಭಿಯೋಜನೆ ಮಂಜೂರಾತಿ ಸಿಗುವುದು ವಿಳಂಬವಾಗುತ್ತಿದೆ. ಬೃಹತ್‌ ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ ಬಹುತೇಕ ಸರಕಾರಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ತಡೆ ನೀಡಲಾಗಿದೆ. ದಾಳಿಗೊಳಗಾದ ಪ್ರಭಾವಿ ಭ್ರಷ್ಟ ಸರಕಾರಿ ಅಧಿಕಾರಿಗಳು ರಾಜಕಾರಣಿಗಳ ಮೊರೆ ಹೋಗಿ ಸರಕಾರದ ಮೂಲಕ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವುದರಿಂದ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ಸಾಕ್ಷ್ಯ ಸಿಗದ ಪ್ರಕರಣಗಳಲ್ಲೂ ನ್ಯಾಯಾಲಯಕ್ಕೆ ಬಿ-ರಿಪೋರ್ಟ್‌ ಹಾಕುತ್ತಿರುವ ಗಂಭೀರ ಆರೋಪವಿದೆ. ಮತ್ತೂಂದೆಡೆ ಎಸಿಬಿ ಬಲೆಗೆ ಬಿದ್ದ ಕ್ಲಾಸ್‌-1 ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲು ಸರಕಾರ ನಿರಾಕರಿಸುತ್ತಿರುವುದರಿಂದ ತನಿಖೆಗೆ ಹಿನ್ನೆಡೆಯಾಗಿದೆ ಎನ್ನಲಾಗಿದೆ.

ಪ್ರಭಾವಿಗಳಿಗೆ ಕ್ಲೀನ್‌ಚಿಟ್‌ ಕೊಟ್ಟ ಪ್ರಮುಖ ಪ್ರಕರಣಗಳು
– 2017ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಜ್ರ ಖಚಿತ ಹ್ಯೂಬ್ಲೋಟ್‌ ವಾಚ್‌ ಪ್ರಕರಣ.
– ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ವಿ.ಜಿ. ನಾಯಕ್‌, ಸಹಾಯಕ ನಿರ್ದೇಶಕ ಡಾ| ಅರವಿಂದ್‌ ಅವರು ಸುಳ್ಳು ವರದಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ.
– 2017ರಲ್ಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಯಾಗ್ನಾಸ್ಟಿಕ್‌ ಸರ್ವೀಸಸ್‌ ಘಟಕ ಆರಂಭಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನಡೆಸುತ್ತಿದ್ದ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸೊಲ್ಯೂಷನ್ಸ್‌ ಕಂಪೆನಿಗೆ ನಿಯಮ ಉಲ್ಲಂಘಿಸಿ ಟೆಂಡರ್‌ ನೀಡಿರುವ ಪ್ರಕರಣ.
– ಸರಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ ಗೃಹ ಇಲಾಖೆ ಸಲಹೆಗಾರರಾಗಿದ್ದ ಕೆಂಪಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎಸಿಬಿಗೆ ಕೊಟ್ಟ ದೂರು.
– ಜಮೀನು ವಿಚಾರಕ್ಕೆ ಸಂಬಂಧಿಸಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದ್ಕರ್‌ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣ.

ಚಾರ್ಜ್‌ಶೀಟ್‌ ಸಲ್ಲಿಸಲು ಬಾಕಿ ಇರುವ ಪ್ರಮುಖ ಪ್ರಕರಣಗಳು
– ಬಿಡಿಎ ಎಂಜಿನಿಯರ್‌ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲ್ಯೂಡಿ ಎಂಜಿನಿಯರ್‌ಗಳು, ಐಎಎಸ್‌ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಅಧಿಕಾರಿಗಳು, ಕೆಪಿಟಿಸಿಎಲ್‌ ಅಧೀಕ್ಷಕ ಅಭಿಯಂತರ, ಬಿಡಿಎ ಉಪ ನಿರ್ದೇಶಕರು, ಆರ್‌.
ಟಿ.ಒ. ಕಚೇರಿ ಮೇಲೆ ನಡೆದ ದಾಳಿ ಪ್ರಕರಣಗಳು
– ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಆಗಿದ್ದ ಟಿ.ಆರ್‌. ಸ್ವಾಮಿ, ಬಿಡಿಎ ಮುಖ್ಯ ಎಂಜಿನಿಯರ್‌ ಆಗಿದ್ದ ಜಿ.ಎನ್‌. ಗೌಡಯ್ಯ ಮೇಲಿನ ಪ್ರಕರಣ.
– ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕನ ವಿರುದ್ಧ ದಾಖಲಾಗಿದ್ದ ಪ್ರಕರಣ.

ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಗಳಿಕೆ ಪ್ರಕರಣಗಳಲ್ಲಿ ಸಾಕ್ಷ  é ಕಲೆಹಾಕಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಚಾರ್ಜ್‌ಶೀಟ್‌ ಸಲ್ಲಿಸುವುದು ವಿಳಂಬ  ವಾಗುತ್ತದೆ. ಎಸಿಬಿ ತನಿಖಾಧಿಕಾರಿ ಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
– ಸೀಮಂತ್‌ ಕುಮಾರ್‌ ಸಿಂಗ್‌,
ಎಡಿಜಿಪಿ ಎಸಿಬಿ

-ಅವಿನಾಶ್‌ ಮೂಡಂಬಿಕಾನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next