Advertisement

ಅಂತರಗಂಗೆ ಬೆಟ್ಟಕ್ಕೆ ಬೇಕಾಬಿಟ್ಟಿ ಹೋಗಿ ಬರುವಂತಿಲ್ಲ

04:41 PM Sep 22, 2021 | Team Udayavani |

ಕೋಲಾರ: ಇನ್ನು ಮುಂದೆ ಅಂತರಗಂಗೆ ಬೆಟ್ಟಕ್ಕೆ ಬೇಕಾಬಿಟ್ಟಿ ಹೋಗಿ ಬರುವಂತಿಲ್ಲ, ಇಲ್ಲಿಗೆ ಬರುವ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್‌ ಇಲಾಖೆ ಕಟ್ಟೆಚ್ಚರವಹಿಸಲು ಮುಂದಾಗಿದೆ. ಬೆಟ್ಟಕ್ಕೆ ಬರುವ ಪ್ರತಿಯೊಬ್ಬರು ಹಾಗೂ ವಾಹನಗಳ ಮೇಲೆ ನಿಗಾ ಇಡಲು ಮುಂದಾಗಿದೆ.

Advertisement

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕುಳಿತಿದ್ದ ಯುವಕ ಯುವತಿಯ ಮೇಲೆ ಹಲ್ಲೆ, ಅತ್ಯಾಚಾರ ನಡೆಸಿದ ಪ್ರಕರಣದ ಬೆನ್ನಲ್ಲೇ ಕೋಲಾರದ ಅಂತರಗಂಗೆ ಬೆಟ್ಟದಲ್ಲೂ ಇಂತ ಅನೇಕ ದುರ್ಘ‌ಟನೆಗಳು ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಇಂತದ್ದೆ ಘಟನೆಗಳು ಮತ್ತಷ್ಟು ನಡೆಯಲು ವಿಫ‌ುಲವಾದ ಅವಕಾಶಗಳಿವೆ. ಇದರ ನಿಯಂತ್ರಣ ಅಗತ್ಯ ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿ ಬಂದಿತ್ತು.

ನಿತ್ಯ ನೂರಾರು ಪ್ರವಾಸಿಗರು ಭೇಟಿ: ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಬೆಟ್ಟಕ್ಕೆ ಎರಡು ಮಾರ್ಗಗಳಿಂದ ಹತ್ತಲು ಅವಕಾಶವಿದೆ. ಒಂದು ಕೀಲುಕೋಟೆ ಮೂಲಕ ದೇವಾಲಯದ ಮಾರ್ಗ ಮತ್ತೂಂದು ತೇರಹಳ್ಳಿ ಮಾರ್ಗ. ಈ ಎರಡೂ ಮಾರ್ಗಗಳ ಮೂಲಕ ಪ್ರತಿ ನಿತ್ಯವೂ ನೂರಾರು ಪ್ರವಾಸಿಗರು ಬೆಟ್ಟಕ್ಕೆ ಆಗಮಿಸುತ್ತಾರೆ. ವಾರಾಂತ್ಯಗಳಲ್ಲಿ ಬೆಟ್ಟದಲ್ಲಿ ಚಾರಣ, ಸಾಹಸ ಕ್ರೀಡೆಗಳ ಸಲುವಾಗಿಯೇ ಬೆಂಗಳೂರಿನಿಂದ ಸಾಹಸ ಕ್ರೀಡೆ ಕ್ಲಬ್‌ಗಳ ಸದಸ್ಯರು ತಂಡೋಪ ತಂಡವಾಗಿ ಬಂದು ಹೋಗುತ್ತಾರೆ. ಮಳೆ ಬಂದ ಎರಡು ಮೂರು ದಿನ ಬೆಟ್ಟದಲ್ಲಿ ಏರ್ಪಡುವ ಪುಟಾಣಿ ಜಲಪಾತಗಳನ್ನು ಕಣ್ತುಂಬಿ ಕೊಳ್ಳಲು ಜನ ಬೆಟ್ಟಕ್ಕೆ ಬರುತ್ತಿದ್ದಾರೆ. ಇದೇ ಬೆಟ್ಟದಲ್ಲಿರುವ ಕಾಶೀ ವಿಶ್ವೇಶ್ವರ ದೇವಾಲಯ ಮತ್ತು ತೇರಹಳ್ಳಿ ಮಾರ್ಗದಲ್ಲಿ ಬರುವ ಆದಿಮ, ಬುಡ್ಡಿದೀಪ ಸಾಂಸ್ಕೃತಿಕ ಕೇಂದ್ರ, ದರ್ಗಾವೊಂದಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಾರೆ..

ಇದನ್ನೂ ಓದಿ:ಪ್ರವಾಹದ ನಡುವೆಯೂ ಡೋಣಿ ನದಿ ದಾಟಲು ಹೋದ ವ್ಯಕ್ತಿ ನೀರು ಪಾಲು : ಶೋಧ ಕಾರ್ಯ

ಸುರಕ್ಷತೆ ಇರಲಿಲ್ಲ: ಅಂತರಗಂಗೆ ಬೆಟ್ಟಕ್ಕೆ ಹೀಗೆ ಬರುವ ಪ್ರವಾಸಿಗರನ್ನು ದರೋಡೆ ಮಾಡುವ, ಕೆಣಕುವ ಘಟನೆಗಳನ್ನು ಕಿಡಿಗೇಡಿಗಳು ನಡೆಸುತ್ತಿದ್ದರು. ಅದರಲ್ಲೂ ಬೆಟ್ಟಕ್ಕೆ ಬರುವ ವಿದ್ಯಾರ್ಥಿನಿಯರು ಹಾಗೂ ಪ್ರೇಮಿಗಳು ಕಿಡಿಗೇಡಿಗಳ ಗುರಿಯಾಗಿರುತ್ತಿತ್ತು. ದೌರ್ಜನ್ಯ ಕ್ಕೊಳಗಾದವರು ಮಾನಕ್ಕೆ ಹೆದರಿ ಪೊಲೀಸರಿಗೆ ದೂರನ್ನು ನೀಡದೆ ಕಹಿ ಘಟನೆಯನ್ನು ನುಂಗಿ ವಾಪಸ್ಸಾಗುತ್ತಿದ್ದರು. ತೀರಾ ಎರಡು ಮೂರು ದಿನಗಳ ಹಿಂದಷ್ಟೇ ಬೈಕ್‌ವೆುàಲೆ ಬೆಟ್ಟಕ್ಕೆ ಹೋಗಿ ಬರುತ್ತಿದ್ದ ಯುವಕನನ್ನು ಗುಂಪೊಂದು ತಡೆದು ನಿಲ್ಲಿಸಿ ದರೋಡೆ ನಡೆಸಿತ್ತು.

Advertisement

ಮದ್ಯವ್ಯಸನಿಗಳ ತಾಣ: ಪ್ರವಾಸಿಗರಿಗೆ ಕಿಡಿಗೇಡಿಗಳ ಕಿರಿಕಿರಿಯಾದರೆ, ಸಂಜೆ ರಾತ್ರಿ ವೇಳೆ ಮದ್ಯವ್ಯಸನಿಗಳು ಗಾಂಜಾ ಸೇವಿಸುವವರು ಅಂತರಂಗೆ ಬೆಟ್ಟಕ್ಕೆ ತೆರಳಿ ಮನಸೋಯಿಚ್ಛೆ ತಿರುಗಾಡಿ ಮದ್ಯ, ಗಾಂಜಾ ಸೇವಿಸುತ್ತಿ ದ್ದರು. ಬಹುತೇಕ ಯುವಕರು ಬೆಟ್ಟವನ್ನು ಮದ್ಯ ಸೇವ ನೆಯ ತಾಣವಾಗಿ ಮಾರ್ಪಡಿಸಿಕೊಂಡಿದ್ದರು. ಗಾಂಜಾ ಸೇವನೆ,  ಬೆಟ್ಟ ಆಶ್ರಯ ಒದಗಿಸಿತ್ತು. ಇಷ್ಟೆಲ್ಲಾ ಆವಾಂತರಗಳು ಆಗುತ್ತಿದ್ದರೂ ಅಂತರಗಂಗೆ ಬೆಟ್ಟಕ್ಕೆ ಬಂದು ಹೋಗುವರಿಗೆ ಯಾವುದೇ ಸುರಕ್ಷತೆ ಇರಲಿಲ್ಲ. ಅಂತರಂಗೆ ಬೆಟ್ಟದ ತಪ್ಪಲಲ್ಲಿ ಹೊರಠಾಣೆ ಇತ್ತಾದರೂ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಿರಲಿಲ್ಲ. ತೇರಹಳ್ಳಿ ಮಾರ್ಗದಲ್ಲಂತು ಕೇಳುವವರೇ ಇರಲಿಲ್ಲ.

ಹೊರಠಾಣೆ ತಪಾಸಣೆ: ಸಾರ್ವಜನಿಕರಿಂದ ಕೇಳಿ ಬಂದ ಬೇಡಿಕೆ ಮತ್ತು ದೂರುಗಳ ಹಿನ್ನೆಲೆಯಲ್ಲಿ ಪೊಲೀ ಸ್‌ ವರಿಷ್ಠಾಧಿಕಾರಿ ಡೆಕ್ಕಾ ಸುರೇಶ್‌ಬಾಬು ಅಂತ ರಗಂಗೆ ಬೆಟ್ಟಕ್ಕೆ ಬರುವ ಪ್ರತಿಯೊಬ್ಬರ ಮೇಲೂ ನಿಗಾ ಇಟ್ಟು, ವಾಹನಗಳನ್ನು ನೋಂದಣಿ ಮಾಡಿ ಬೆಟ್ಟಕ್ಕೆ ಹೋಗು ವಂತ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದ್ದಾರೆ.

ಬೆಟ್ಟ ಹತ್ತುವವರ ಮಾಹಿತಿ ಸಂಗ್ರಹ: ಗ್ರಾಮಾಂತರ ಠಾಣೆ ಪೊಲೀಸರು ಅಂತರಗಂಗೆ ಬೆಟ್ಟದ ತಪ್ಪಲಲ್ಲಿರುವ ಹೊರ ಠಾಣೆಯಲ್ಲಿ ಬಂದೋಬಸ್ತ್ ನಿರ್ವಹಿಸಿ ಬೆಟ್ಟ ಹತ್ತುವ ಪ್ರತಿಯೊಬ್ಬರ ವಿವರ ಸಂಗ್ರಹಿಸುತ್ತಾರೆ. ಬೆಟ್ಟಕ್ಕೆ ಯಾವ ಕಾರಣಕ್ಕಾಗಿ ಹೋಗುತ್ತಿರುವುದು, ಎಲ್ಲಿಗೆ ಹೋಗುತ್ತಿರುವುದು ಎಂಬಿತ್ಯಾದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಎರಡೂ ಮಾರ್ಗಗಳಲ್ಲಿ ಪೊಲೀಸ್‌ ನೇಮಕ:
ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಚಲನವಲನಗಳು ಕಂಡು ಬಂದರೆ ತಕ್ಷಣವೇ ಎಚ್ಚರದಿಂದ ಕ್ರಮವಹಿಸಲು ಪೊಲೀಸ್‌ ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಂತರಗಂಗೆಯ ಎರಡೂ ಮಾರ್ಗಗಳಲ್ಲಿ ಪೊಲೀಸ್‌ ಸಿಬ್ಬಂದಿಯ ನಿಯೋಜನೆಯಾಗಿದೆ. ಇವರು ಬೆಳಗ್ಗಿನಿಂದ ರಾತ್ರಿಯವರೆಗೂ ಪ್ರವಾಸಿಗರ ಮೇಲೆ ಅವರ ವಾಹನಗಳ ಮೇಲೆ ನಿಗಾವಹಿಸುತ್ತಾರೆ. ತೇರಹಳ್ಳಿ ಮಾರ್ಗದಲ್ಲಿ ಈಗಾಗಲೇ ಹೊರಠಾಣೆ ಕಟ್ಟಡ ನಿರ್ಮಾಣವೂ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿಡಲು ಪೊಲೀಸ್‌ ಇಲಾಖೆ ಮುಂದಾಗಿದೆ. ಎರಡು ಮೂರು ದಿನಗಳಿಂದ ಬೆಟ್ಟಕ್ಕೆ ಹೋಗುವವರಿಗೆ ಪೊಲೀಸ್‌ ಸಿಬ್ಬಂದಿಯ ಹೊಸ ಕಾರ್ಯಾಚರಣೆ ಪರಿಚಯವಾಗುತ್ತಿದೆ. ಒಟ್ಟಾರೆ ಪೊಲೀಸರ ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ. ಅಂತರಗಂಗೆ ಬೆಟ್ಟಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗೂ ಕಾರಣವಾಗಿದೆ.

ಪೊಲೀಸ್‌ ಚೌಕಿ ಒಡೆದು ಹಾಕಿದ ಕಿಡಿಗೇಡಿಗಳು
ಅಂತರಗಂಗೆ ಬೆಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್‌ ಇಲಾಖೆ ನಿರ್ಮಾಣ ಮಾಡುತ್ತಿದ್ದ ಚೆಕ್‌ಪೋಸ್ಟ್‌ ಚೌಕಿಯನ್ನು ರಾತ್ರೋರಾತ್ರಿ ಕೆಲವು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಇತ್ತೀಚೆಗೆ ಜಿಲ್ಲಾ ಪೊಲೀಸ್‌ ಇಲಾಖೆ ಅಂತರಗಂಗೆ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಿಂದಾಗಿ ಬೆಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಆದರೆ, ಕೆಲವು ಕಿಡಿಗೇಡಿಗಳು ತಮ್ಮ ಅಕ್ರಮ ಚಟುವಟಿಕೆಗಳು ನಡೆಸಲು ಸಾಧ್ಯವಿಲ್ಲ ಎಂದು ರಾತ್ರೋ ರಾತ್ರಿ ಚೆಕ್‌ಪೋಸ್ಟ್‌ ನ ಪೊಲೀಸ್‌ ಚೌಕಿ ಹೊಡೆದು ಹಾಕಿದ್ದಾರೆ. ತಮ್ಮ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ ಎಂದು ಕಿಡಿಗೇಡಿಗಳೇ ಚೌಕಿ ಹೊಡೆದು ಹಾಕಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದರು. ಚೆಕ್‌ಪೋಸ್ಟ್‌ ನಿರ್ಮಾಣದಿಂದ ಪುಂಡಾ ಪೋಕರಿಗಳ ಹಾವಳಿ ಕಡಿಮೆ ಯಾಗಿತ್ತು. ಇದರಿಂದಾಗಿ ಬೆಟ್ಟದ ಮೇಲಿರುವ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ರು. ಪೊಲೀಸರು ಚೆಕ್‌ಪೋಸ್ಟ್‌ ಧ್ವಂಸ ಮಾಡಿರುವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಂತರಗಂಗೆ ಬೆಟ್ಟಕ್ಕೆ ಬರುವ ಪ್ರವಾಸಿಗರ ಸುರಕ್ಷತೆ ಕುರಿತಂತೆ ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಟ್ಟದ ಮಾರ್ಗಗಳಲ್ಲಿ ಹೊರಠಾಣೆ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಬಂದೋಬಸ್ತ್ ಸಿಬ್ಬಂದಿ ನೇಮಕ ಮಾಡಲಾ ಗಿದೆ. ಶೀಘ್ರವೇ ಬೆಟ್ಟದ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಉದ್ದೇಶವೂ ಇದೆ.
●ಡೆಕ್ಕಾ ಕಿಶೋರ್‌ಬಾಬು, ಎಸ್ಪಿ, ಕೋಲಾರ.

ಅಂತರಗಂಗೆ ಬೆಟ್ಟಕ್ಕೆ ಬರುವ ಭಕ್ತರು, ಪ್ರವಾಸಿಗರು ಮತ್ತು ಪ್ರೇಮಿಗಳಿಗೆ ಪುಂಡರು ಮತ್ತು ಕಿಡಿಗೇಡಿಗಳ ಕಾಟ ವಿಪರೀತವಾಗಿತ್ತು. ಇದೀಗ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಹೊರಠಾಣೆ ನಿರ್ಮಿಸುತ್ತಾ, ಬಂದೋಬಸ್ತ್ ಮಾಡಲು ಮುಂದಾಗಿರುವುದು ಸ್ವಾಗತಾರ್ಹ.
-ಅಮರ್‌, ಕೋಲಾರ ನಿವಾಸಿ

– ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next