Advertisement

ಬಿಎಸ್‌ವೈಗೆ ಮತ್ತೊಂದು ಭೂಕಂಟಕ

11:14 PM Sep 30, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮತ್ತೆ ಭೂ ಕಂಟಕ ಎದುರಾಗಿದೆ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಐಎಡಿಬಿಗೆ ಸೇರಿದ ಬೊಮ್ಮಸಂದ್ರದ ಕೈಗಾರಿಕಾ ಲೇಔಟ್‌ನಲ್ಲಿರುವ ಸರ್ಕಾರಿ ಜಮೀನನ್ನು ಡಿ-ನೋಟಿಫಿಕೇಷನ್‌ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಸೋಮವಾರ ಎಸಿಬಿಗೆ ದೂರು ನೀಡಿದ್ದಾರೆ.

Advertisement

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಮುರುಗೇಶ್‌ ಆರ್‌. ನಿರಾಣಿ, ನಿವೃತ್ತ ಐಎಎಸ್‌ ಅಧಿಕಾರಿ ವಿ.ಪಿ.ಬಳಿಗಾರ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ನಾಲ್ಕನೇ ಹಂತದ 84 ಎಕರೆ ಸರ್ಕಾರಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ 1993-94ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈ ಪೈಕಿ 9 ಎಕರೆ 20 ಗುಂಟೆ ಭೂ ಮಾಲೀಕರಾದ ಪಿಳ್ಳಾರೆಡ್ಡಿ, ತಿಮ್ಮರೆಡ್ಡಿ, ಶಿವಕುಮಾರ್‌ ಎಂಬುವರು 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಜಾಗವನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಮನವಿ ಮಾಡುತ್ತಾರೆ.

ಆ ಸಂದರ್ಭದಲ್ಲಿ ಅಂದಿನ ಕೈಗಾರಿಕಾ ಮಂತ್ರಿಯಾಗಿದ್ದ ಮುರುಗೇಶ್‌ ಆರ್‌. ನಿರಾಣಿ , ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಪಿ. ಬಳಿಗಾರ್‌ ಹಾಗೂ ಬಿ.ಎಸ್‌.ಯಡಿಯೂರಪ್ಪ 9 ಎಕರೆ 20ಗುಂಟೆ ಜಮೀನನ್ನು ಡಿ-ನೋಟಿಫಿಕೇಶನ್‌ ಮಾಡಲು ಸೂಚಿಸಿದ್ದರು. ಈ ಮೂಲಕ ಮೂವರು ವ್ಯಾಪಕ ಭ್ರಷ್ಟಾಚಾರ ಎಸಗಿದ್ದು, ಅದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next