Advertisement

ಡಿಸೆಂಬರ್‌ 6 ಗೃಹರಕ್ಷಕರ ದಿನ

11:24 AM Dec 06, 2017 | |

ಗೃಹರಕ್ಷಕದಳ ಎನ್ನುವುದು ಸರಕಾರದ ಅಧೀನದಲ್ಲಿರುವ ಸ್ವತಂತ್ರವಾದ ಸ್ವಯಂ ಸೇವಕರನ್ನು ಒಳಗೊಂಡ ಸೇವಾ
ಸಂಸ್ಥೆಯಾಗಿದ್ದು, ತುರ್ತು ಅಗತ್ಯದ ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ‘ನಿಷ್ಕಾಮಸೇವೆ’ ಎಂಬುದೇ ಅದರ ಮೂಲ ಮಂತ್ರ. 

Advertisement

ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ನಾಜಿ’ ಸೈನ್ಯಪಡೆಯನ್ನು ಹಿಮ್ಮೆಟ್ಟಿಸಲು ಪೊಲೀಸ್‌ ಮತ್ತು ಮಿಲಿಟರಿ ಪಡೆಗೆ ಪರ್ಯಾಯವಾಗಿ ಜನರೇ ದೇಶವನ್ನು ರಕ್ಷಿಸಲು ರೂಪಿಸಿದ ನಾಗರಿಕ ಪಡೆಯನ್ನು LDV ಅಂದರೆ LOCAL DEFENCE VOLUNTEER  (ಸ್ಥಳೀಯ ರಕ್ಷಣಾ ಕಾರ್ಯಕರ್ತ) ಎಂದು ಕರೆಯಲಾಗುತ್ತಿತ್ತು.

1946ರಲ್ಲಿ ಭಾರತದ ಬಾಂಬೆ ರಾಜ್ಯದಲ್ಲಿ ಗೃಹ ರಕ್ಷಕ ದಳ ಅಸ್ತಿತ್ವಕ್ಕೆ ಬಂದಿತು. ನೌಕಾದಳ, ವಾಯುದಳ, ಭೂ ಸೇವಾದಳದ ಜತೆಗೆ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂದರ್ಭಗಳಲ್ಲಿ ರಕ್ಷಣೆ ನೀಡಲು ಪೌರ ರಕ್ಷಣೆ ಮತ್ತು ಗೃಹರಕ್ಷಕದಳ ಎಂಬುದಾಗಿ ಡಿಸೆಂಬರ್‌ 6ರಂದು ಸ್ಥಾಪಿಸಲಾಯಿತು. ದಿವಂಗತ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಈ ಸಂಬಂಧ ಕಾಯಿದೆ ಮತ್ತು ಕಾನೂನುಗಳನ್ನು ಗೃಹ ಸಚಿವಾಲಯದಡಿ ರೂಪಿಸಲಾಯಿತು.

ಸಾಮಾನ್ಯ ಜನರಿಗೆ ಮತೀಯ ಗಲಭೆ ಹಿಂಸಾಚಾರಗಳ ಸಂದರ್ಭದಲ್ಲಿ ರಕ್ಷಣೆ ಒದಗಿಸಲು ಈ ಸ್ವಯಂ ಸೇವಕರ ಪಡೆ ನಿಯೋಜಿಸಲಾಗಿತ್ತು. ಕ್ರಮೇಣ 1962ರಲ್ಲಿ ಭಾರತ ಚೀನ ಯುದ್ಧದ ಸಂದರ್ಭದಲ್ಲಿ ಈ ಸ್ವಯಂ ಸೇವಕರ ಸೇವೆಯನ್ನು ರಕ್ಷಣಾ ಕಾರ್ಯಕ್ಕೆ ಬಳಸಲು ಕೇಂದ್ರ ಸರಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಲ್ಲಿ ‘ಗೃಹರಕ್ಷಕ ದಳ’ ಆರಂಭಿಸಿ, ಖಾಕಿ ಸಮವಸ್ತ್ರದೊಂದಿಗೆ ಮನ್ನಣೆ ನೀಡಿತು.

ದೇಶಾದ್ಯಂತ ಸುಮಾರು 6 ಲಕ್ಷ ಗೃಹ ರಕ್ಷಕ ಸಿಬಂದಿಯಿದ್ದಾರೆ. ಕೇರಳ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ದಳವಿಲ್ಲ. ಗೃಹರಕ್ಷಕರಲ್ಲಿ ನಗರ ಮತ್ತು ಗ್ರಾಮೀಣ ಗೃಹರಕ್ಷಕ ಪಡೆ ಎಂದಿದೆ. ಗಡಿ ರಕ್ಷಣಾ ಗೃಹರಕ್ಷಕ ಪಡೆ (Border wing) ಎಂಬುದಾಗಿ ಗಡಿ ರಕ್ಷಣಾ ಪಡೆಗೆ ಪೂರಕವಾಗಿ ಕೆಲಸ ಮಾಡುವ ಪಡೆಯೂ ಇದೆ. ಈ ಪಡೆಗಳು ಪಂಜಾಬ್‌, ರಾಜಸ್ಥಾನ, ಗುಜರಾತ್‌, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರಿಪುರಗಳಲ್ಲಿ ಹೆಚ್ಚು ಕ್ರಿಯಾತ್ಮಕವಾಗಿದೆ. ಈ ಪಡೆಯು ಶಸ್ತ್ರ ಪ್ರಯೋಗದಲ್ಲಿ ಹೆಚ್ಚಿನ ಪರಿಣತಿ ಪಡೆದ ಗೃಹರಕ್ಷಕರನ್ನು ಹೊಂದಿದೆ.

Advertisement

ಎಲ್ಲೆಲ್ಲಿ ಬಳಕೆ?
1. ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಪೊಲೀಸ್‌ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವುದು.
2. ನೈಸರ್ಗಿಕ ವಿಕೋಪಗಳಾದ ನೆರೆ ಹಾವಳಿ, ಭೂಕಂಪ, ಸೈಕ್ಲೋನ್‌, ಸುನಾಮಿ, ಭೂಕುಸಿತ ಹಾಗೂ ಇತ್ಯಾದಿ ಸಂದರ್ಭ ರಕ್ಷಣಾ ಕಾರ್ಯ ಮಾಡುವುದು.
3. ಯುದ್ಧ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭ, ವೈಮಾನಿಕ ದಾಳಿಗಳ ಸಂದರ್ಭಗಳಲ್ಲಿ ಸಮುದಾಯವನ್ನು ಎಚ್ಚರಿಸುವುದು ಮತ್ತು ರಕ್ಷಿಸುವುದು.
4. ಮಾನವ ನಿರ್ಮಿತ ಕೃತಕ ವಿಕೋಪಗಳಾದ ಕಟ್ಟಡ ಕುಸಿತ, ಅನಿಲ ದುರಂತ, ಗ್ಯಾಸ್‌ ಸ್ಫೋಟ ಅಥವಾ ಇನ್ಯಾವುದೇ ವಿಷಮ ಪರಿಸ್ಥಿತಿಗಳಲ್ಲಿ ಜನರ ಆಸ್ತಿ ಪಾಸ್ತಿ ಪ್ರಾಣ ರಕ್ಷಣೆಗೆ ಮುಂದಾಗುವುದು.
5. ಜಾತ್ರೆ, ಉತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಮುಷ್ಕರ ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭಗಳ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯಗಳಿಗೆ ಕೆಲಸಮಾಡುವುದು.
6. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆಗೆ ಬಳಕೆ. 
7. ಪೊಲೀಸ್‌ ಆಂತರಿಕ ಭದ್ರತೆ, ಸರಕಾರಿ ಆಸ್ಪತ್ರೆಗಳು ಸಹಿತ ವಿವಿಧೆಡೆ ಪಹರೆ ಕರ್ತವ್ಯ ಮತ್ತು ಸಾಮಾಜಿಕ ಸೊತ್ತು ರಕ್ಷಣಾ ಕಾರ್ಯಗಳಿಗೆ ಸಹಕರಿಸುವುದು.
8. ಜಿಲ್ಲಾ ವಿಪತ್ತು ನಿರ್ವಹಣ ಕೇಂದ್ರಗಳು ಭೂಕುಸಿತ, ಕಟ್ಟಡ ಕುಸಿತ, ಅಗ್ನಿ ಅಕಸ್ಮಿಕ ವಿಕೋಪಗಳಲ್ಲಿ ಸಿಲುಕಿದವರ ಪ್ರಾಣ ರಕ್ಷಣೆ, ಗಾಯಾಳುಗಳ, ಮೃತದೇಹಗಳ ಶೋಧ ಕಾರ್ಯ ಮತ್ತು ಸ್ಥಳಾಂತರಕ್ಕೆ ಸಹಕರಿಸುವುದು.
9. ಚುನಾವಣೆ ಸಂದರ್ಭಗಳಲ್ಲಿ ಜಿಲ್ಲಾಡಳಿತಕ್ಕೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಪಡೆಯ ಜತೆ ಕೆಲಸ
ನಿರ್ವಹಿಸುವುದು.
10. ಗಡಿರಕ್ಷಣಾ ಗೃಹರಕ್ಷಕ ಪಡೆ ದೇಶದ ಗಡಿಯನ್ನು ಕಾಯುವಲ್ಲಿ ಗಡಿರಕ್ಷಣಾ ಪಡೆ (BSE) ಗೆ ಸಹಾಯ ನೀಡುವುದು.
11. ಅಬಕಾರಿ ಇಲಾಖೆಗೆ ಕಳ್ಳ ಬಟ್ಟಿಸಾರಾಯಿ ಮತ್ತು ಅನಧಿಕೃತ ಮದ್ಯ ಮಾರಾಟದ ನಿಯಂತ್ರಣಕ್ಕಾಗಿ
ಸಂಬಂಧಪಟ್ಟ ಇಲಾಖೆ ಸಿಬಂದಿಯೊಂದಿಗೆ ಶ್ರಮಿಸುವುದು.

ಸಂಭಾವನೆ
ಹೆಚ್ಚು ಹೆಚ್ಚು ಜನರು ಸೇರಲಿ ಎಂಬ ಕಾರಣಕ್ಕೆ ಸರಕಾರ ದಿನವೊಂದಕ್ಕೆ ರೂ. 325/- (ಗ್ರಾಮೀಣ ಪ್ರದೇಶಗಳಲ್ಲಿ) ರೂ. 400/- (ನಗರ ಪ್ರದೇಶಗಳಲ್ಲಿ ಬೆಂಗಳೂರು) ಗೃಹ ರಕ್ಷಕ ದಳ ಸಿಬಂದಿಗೆ ಗೌರವ ಧನ ನೀಡಿ ಪ್ರೋತ್ಸಾಹಿಸುತ್ತಿದೆ. ಇದು ದಿನಭತ್ಯೆಯಾಗಿರದೆ ಗೌರವ ಧನವಾಗಿರುತ್ತದೆ. ಸಮಾಜದ ಶಾಂತಿ, ನೆಮ್ಮದಿ, ಸ್ವಾಸ್ಥ್ಯ ವೃದ್ಧಿಸುವ ಏಕೈಕ ಸದುದ್ದೇಶವನ್ನು ಹೊಂದಿರುವ ಗೃಹರಕ್ಷಕ ದಳ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಹಾಗಾಗಿ ಇಂದು (ಡಿ.6) ಗೃಹರಕ್ಷಕರ ದಿನ. ಅವರ ಸೇವೆಗೆ ಧನ್ಯವಾದ ಅರ್ಪಿಸೋಣ.

ಯಾರು ಸೇರಬಹುದು?
ಈ‌ ದಳಕ್ಕೆ ಸೇರಲು ಮುಖ್ಯವಾಗಿ ಸಮಾಜದ ಸೇವೆ ಮಾಡಬೇಕೆಂಬ ತುಡಿತ ಇರುವ ಎಲ್ಲರೂ ಸೇರಬಹುದು. ದೈಹಿಕವಾಗಿ ಆರೋಗ್ಯವಾಗಿದ್ದು, ನಿಷ್ಕಾಮ ಸೇವೆ ಸಲ್ಲಿಸುವ ಮನೋಧರ್ಮವನ್ನು ಹೊಂದಿರಬೇಕು. ಕನಿಷ್ಠ ವಿದ್ಯಾರ್ಹತೆ 4ನೇ ತರಗತಿ (ಯಾವುದೇ ಭಾಷಾಮಾಧ್ಯಮದಲ್ಲಿ) ಮತ್ತು ವಯೋಮಿತಿ 20ರಿಂದ 50 ವರ್ಷದ ಒಳಗಿರಬೇಕು. ಸಾಮಾನ್ಯವಾಗಿ ಒಮ್ಮೆ ದಾಖಲಾತಿ ಮಾಡಿದ ಬಳಿಕ 3 ವರ್ಷಗಳಿಗೊಮ್ಮೆ ಪುನಃ ಮರು ದಾಖಲಾತಿ ಮಾಡಿಕೊಳ್ಳಬೇಕು. ಗೃಹರಕ್ಷಕದಳದ ಜಿಲ್ಲಾ ಕಚೇರಿಗಳಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳ ನಕಲಿ ಪ್ರತಿಗಳನ್ನು ಸಲ್ಲಿಸಬೇಕು. 

ಅರ್ಜಿದಾರರ ಮೇಲೆ ಯಾವುದೇ ರೀತಿಯ ಪೊಲೀಸ್‌ ದೂರು ಅಥವಾ ಕ್ರಿಮಿನಲ್‌ ದಾಖಲೆ ಇಲ್ಲವೆಂದು ಸಾಬೀತಾದ ಬಳಿಕ ಅಭ್ಯರ್ಥಿಯ ಆಯ್ಕೆಗೆ ಸಂದರ್ಶನ ನಡೆಯುತ್ತದೆ. ಈ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಗೃಹರಕ್ಷಕ ಸಮಾದೇಷ್ಠರು ಇರುತ್ತಾರೆ. ಆಯ್ಕೆಯಾದವರಿಗೆ ಆರು ತಿಂಗಳ ಕಾಲ ಮೂಲ ತರಬೇತಿ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲೂ ಹಾಗೂ ಉನ್ನತ ತರಬೇತಿಗಳನ್ನು ಬೆಂಗಳೂರಿನ ಗೃಹರಕ್ಷಕ ಮತ್ತು ಪೌರ ತರಬೇತಿ ರಕ್ಷಣಾ ಅಕಾಡೆಮಿಯಲ್ಲಿ ನೀಡಿ ಸಜ್ಜುಗೊಳಿಸಲಾಗುತ್ತದೆ. 

 ಡಾ| ಮುರಲೀ ಮೋಹನ್‌ ಚೂಂತಾರು,
 ಸಮಾದೇಷ್ಠರು, ಜಿಲ್ಲಾ ಗೃಹರಕ್ಷಕ ದಳ ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next