Advertisement

ಶಬರಿಮಲೈಯಲ್ಲಿ ಅಣ್ಣಾಮಲೈ; ಅಲ್ಲೂ ಸೆಲ್ಫಿ ಅಭಿಮಾನಿಗಳು!

09:49 AM Jun 18, 2019 | keerthan |

ಕಾಪು: ಕುಟುಂಬದೊಂದಿಗೆ ಕಾಲಕಳೆಯುವ ಇಚ್ಛೆಯೊಂದಿಗೆ ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿರುವ ಕರುನಾಡ ಸಿಂಗಂ ಖ್ಯಾತಿಯ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ರವಿವಾರ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ.

Advertisement

ಅದೇ ಸಂದರ್ಭ ಅಲ್ಲಿದ್ದ ಉಡುಪಿ, ದಕ್ಷಿಣ ಕನ್ನಡ ಮೂಲದ ಅಯ್ಯಪ್ಪ ಭಕ್ತರು ಅಣ್ಣಾಮಲೈ ಅವರನ್ನು ಗುರುತುಹಿಡಿದು ಅವರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ತಮಿಳುನಾಡಿನಿಂದ ಬಂದ ಭಕ್ತರೂ ಅಣ್ಣಾಮಲೈ ಹೆಸರು ಕೇಳಿದಾಗ ಅವರೂ ಸೆಲ್ಫಿ ತೆಗೆಸಿಕೊಂಡರು.

ಅಣ್ಣಾಮಲೈ ಅವರು ಟೀ ಶರ್ಟ್‌, ಕಪ್ಪು ಲುಂಗಿ ಧರಿಸಿ ಹೆಗಲಿಗೊಂದು ಕಪ್ಪು ಶಾಲು ಹಾಕಿಕೊಂಡು ಸಂಕ್ರಾಂತಿಯ ದಿನ ಮಣಿಕಂಠನ ದರ್ಶನ ಮಾಡಲು ಶಬರಿಮಲೆಗೆ ಬಂದಿದ್ದರು. ಶಬರಿಮಲೆಯ ಸಂಪ್ರದಾಯದಂತೆ ಹದಿನೆಂಟು ಮೆಟ್ಟಿಲನ್ನೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ ಅವರು ಬೆಟ್ಟ ಹತ್ತಿ, ಇಳಿಯುವ ಸಂದರ್ಭದಲ್ಲೂ ಕರಾವಳಿಯ ಭಕ್ತರ ಜತೆಗೆ ಮುಕ್ತವಾಗಿ ಮಾತುಕತೆ ನಡೆಸಿದರು.

ಸಿಂಗಂ ಜತೆ ಕೈ ಕುಲುಕಿ ಮಾತನಾಡಿದಾಗ ಪೊಲೀಸ್‌ ವೃತ್ತಿಗೆ ಗುಡ್‌ ಬೈ ಹೇಳಿರುವುದು ಸರಿಯಲ್ಲ ಎಂಬ ಮಾತನ್ನೂ ಕೆಲವರು ಹೇಳಿದರೆಂದು ತಿಳಿದು ಬಂದಿದೆ. ಅಣ್ಣಾಮಲೈ ಅವರು ಶಬರಿಮಲೆಗೆ ಭೇಟಿ ನೀಡಿರುವ ವಿಚಾರ ತಿಳಿದು ಸ್ಥಳೀಯ ಪೊಲೀಸ್‌ ವರಿಷ್ಠಾಧಿಕಾರಿಗಳು ಶಬರಿಮಲೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಹಲವು ವರ್ಷಗಳ ಕನಸು ನನಸು
ಹಲವು ಸಮಯಗಳ ಹಿಂದೆಯೇ ಶಬರಿಮಲೆಗೆ ತೆರಳುವ ಸಂಕಲ್ಪ ಮಾಡಿದ್ದೆ. ಆದರೆ ಕೆಲಸದ ಒತ್ತಡದಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಅದು ಸ್ವೀಕೃತವಾಗಲು ಒಂದೆರಡು ವಾರ ಬೇಕು. ಈಗ ದೇವರ ದರ್ಶನ ಪಡೆಯಲು ಅವಕಾಶ ಸಿಕ್ಕಿದೆ. ಈ ಮೂಲಕ ಹಲವು ವರ್ಷಗಳ ಕನಸು ನನಸಾಗಿದೆ. ಅಯ್ಯಪ್ಪನ ದರ್ಶನದಿಂದ ಹೊಸ ಚೈತನ್ಯ ಸಿಕ್ಕಿದಂತಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Advertisement

ಮುಂದೇನು ? ಮತ್ತೆ ತಿಳಿಸುವೆ
“ಶಬರಿಮಲೆಯಲ್ಲಿ ಉಡುಪಿಯ ಸ್ನೇಹಿತರು ಸಿಕ್ಕಿರುವುದು ಖುಷಿ ಕೊಟ್ಟಿದೆ. ಸಾಮಾನ್ಯ ವ್ಯಕ್ತಿಯಾಗಿ ಉಡುಪಿಗೆ ಬರಬೇಕೆಂದಿದ್ದೇನೆ. ಈಗ ನಿವೃತ್ತಿಯನ್ನು ಎಂಜಾಯ್‌ ಮಾಡುತ್ತಿದ್ದೇನೆ. ಮುಂದೇನು ಎನ್ನುವ ಬಗ್ಗೆ ಈವರೆಗೆ ಯೋಚನೆ ಮಾಡಿಲ್ಲ. ಮುಂದೆ ಈ ಬಗ್ಗೆ ತಿಳಿಸುತ್ತೇನೆ’ ಅಣ್ಣಾಮಲೈ ಮಾಧ್ಯಮ ಮಿತ್ರರ ಬಳಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next