Advertisement
ಎರಡು ಗ್ರಾಪಂಗಳು ಅಕ್ಕಪಕ್ಕ ಇದ್ದರೂ, ಒಂದು ಗ್ರಾಪಂ ವ್ಯಾಪ್ತಿಯ ಹೊಲದಲ್ಲಿ ನಷ್ಟವಾದ ಬೆಳೆಗೆ ನೀಡುವ ಬೆಳೆವಿಮೆ ಹೆಕ್ಟೇರ್ಗೆ 40 ಸಾವಿರ ರೂ., ಆದರೆ ಅದರ ಪಕ್ಕದ ಗ್ರಾಪಂನಲ್ಲಿ ಅದೇ ಹೊಲಗಳಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಹೆಕ್ಟೇರ್ಗೆ 15 ಸಾವಿರ ರೂ. ಸಿಗುತ್ತಿದೆ. ಅಷ್ಟೇ ಖರ್ಚು, ಅಷ್ಟೇ ಮಳೆ, ಅಷ್ಟೇ ಹಾನಿ ಮತ್ತು ಅಷ್ಟೇ ಶ್ರಮ ಹಾಕಿ ದುಡಿದ ರೈತರಿಗೆ ಇದೀಗ ಬೆಳೆವಿಮೆಯಲ್ಲಿ ತಾರತಮ್ಯವಾಗಿದ್ದು, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳೊಂದಿಗೆ ರೈತರು ಜಗಳಕ್ಕಿಳಿದಿದ್ದಾರೆ.
Related Articles
Advertisement
ವಿಮೆ ಹೇರಾಫೇರಿ: ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಭತ್ತ ಬೆಳೆದ ರೈತರು ಧಾರವಾಡ ತಾಲೂಕಿನ ಪಶ್ಚಿಮ ಭಾಗ ಮತ್ತು ಕಲಘಟಗಿ ತಾಲೂಕಿನಲ್ಲಿ ಹೆಚ್ಚಿದ್ದಾರೆ. ಒಟ್ಟು 11,849 ಜನ ರೈತರು 10,954 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ಈ ಸಂಬಂಧ 1.11 ಕೋಟಿ ರೂ. ಹಣವನ್ನು ರೈತರು ಭತ್ತಕ್ಕೆ ಬೆಳೆವಿಮೆ ಇರಿಸಿದ್ದರು.
ಇದಕ್ಕೆ 55.86 ಕೋಟಿ.ರೂ. ಬೆಳೆವಿಮೆ ಮಂಜೂರಾಗಿದೆ. ಆದರೆ ಕೆಲವು ಗ್ರಾಪಂಗಳಿಗೆ ಹೆಕ್ಟೇರ್ಗೆ 40 ಸಾವಿರ ರೂ. ಕೊಟ್ಟರೆ, ಇನ್ನಷ್ಟಕ್ಕೆ 20, 14, 13 ಸಾವಿರ ರೂ. ನೀಡಲಾಗಿದೆ. ಆದರೆ ಬೆಳೆನಷ್ಟ ಮಾತ್ರ ಸಮಪ್ರಮಾಣದಲ್ಲಿಯೇ ಆಗಿದೆ. ಇನ್ನು ಮಳೆಯಾಶ್ರಿತವಾಗಿ ಶೇಂಗಾ ಬೆಳೆದ ರೈತರ ಗೋಳು ಕೂಡ ಇದಕ್ಕೆ ಹೊರತಾಗಿಲ್ಲ.
4965 ರೈತರು 6023 ಹೆಕ್ಟೇರ್ನಲ್ಲಿ ಶೇಂಗಾ ಬೆಳೆದಿದ್ದರು. ಶೇ.77ರಷ್ಟು ನಷ್ಟವಾಗಿದ್ದರಿಂದ ಪ್ರತಿ ಹೆಕ್ಟೇರ್ಗೆ 33,986 ರೂ. ಬೆಳೆವಿಮೆ ಮಂಜೂರಾಗಿದೆ. ಇನ್ನು ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ ಕೂಡ ರೈತರ ಕಣ್ಣಲ್ಲಿ ನೀರು ತರಿಸುತ್ತಿದ್ದು, 17471 ರೈತರು 12323 ಹೆಕ್ಟೆರ್ನಲ್ಲಿ ಬಿತ್ತನೆ ಮಾಡಿದ್ದರು.
ಇದು ಶೇ.19 ರಷ್ಟು ನಷ್ಟವಾಗಿ, ಪ್ರತಿ ಹೆ.13973 ರೂ. ಗಳಷ್ಟು ಹಣ ವಿಮೆ ಮಂಜೂರಾಗಿದೆ. ಇನ್ನು ಹತ್ತಿ, ಮೆಣಸಿನಕಾಯಿ, ಗೋವಿನಜೋಳ, ಹೆಸರು, ಆಲೂಗಡ್ಡೆಯ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಹೀಗಾಗಿ ಆಣೆವಾರಿ ಪದ್ಧತಿಯನ್ನೇ ಬದಲಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
* ಬಸವರಾಜ ಹೊಂಗಲ್