Advertisement

ಅಂಜುಶ್ರೀ ಸಾವು ಪ್ರಕರಣಕ್ಕೆ ತಿರುವು…ವಿಷ ಸೇವಿಸಿ ಆತ್ಮಹತ್ಯೆ?

12:15 AM Jan 10, 2023 | Team Udayavani |

ಕಾಸರಗೋಡು : ಪೆರುಂಬಳ ಬೇನೂರು ನಿವಾಸಿ, ಮಂಜೇಶ್ವರ ಸರಕಾರಿ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ (19) ಸಾವಿಗೆ ವಿಷ ಸೇವನೆ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

Advertisement

ಹೊಟೇಲ್‌ನಿಂದ ಆನ್‌ಲೈನ್‌ ಮೂಲಕ ತರಿಸಿದ ಆಹಾರ ಸೇವನೆಯಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ತನ್ನ ಸ್ನೇಹಿತ ಬೆಂಡಿಚ್ಚಾಲ್‌ ಮಂಡಲಿಪಾರ ನಿವಾಸಿ ವಿಪಿನ್‌ ರಾಜ್‌ ಇತ್ತೀಚೆಗೆ ಅನಾರೋಗ್ಯದಿಂದ ನಿಧನಹೊಂದಿದ ಕಾರಣ ಮನನೊಂದು ವಿಷ ಸೇವಿಸಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಅಂಜುಶ್ರೀ ಅವರ ಫೋನ್‌ನಲ್ಲಿ ವಿಪಿನ್‌ರಾಜ್‌ ಮಾಹಿತಿ ಲಭಿಸಿದೆ ಎನ್ನಲಾಗಿದೆ.

ಜ. 7ರಂದು ಘಟನೆ ಸಂಭವಿಸಿದ್ದು, ಬೇಕಲ ಡಿವೈಎಸ್‌ಪಿ ಸಿ.ಕೆ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸರು ವಿದ್ಯಾರ್ಥಿನಿಯ ಮನೆಗೆ ತೆರಳಿ ಮನೆಯವರಿಂದ ಹಾಗೂ ಸಂಬಂಧಿಕರಿಂದ, ಗೆಳೆಯರಿಂದ ಹೇಳಿಕೆ ಸಂಗ್ರಹಿಸಿದ್ದಾರೆ. ಇದೇ ವೇಳೆ ಆಕೆ ಬರೆದಿಟ್ಟಿರುವುದೆಂದು ಸಂಶಯಿಸಿರುವ ಪತ್ರವೊಂದು ಲಭಿಸಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಫಾರೆನ್ಸಿಕ್‌ ಪರೀಕ್ಷೆಯ ವರದಿ ಇನ್ನೆರಡು ದಿನಗಳೊಳಗೆ ಲಭಿಸುವ ಸಾಧ್ಯತೆಯಿದ್ದು, ಆಕೆಯ ದೇಹ ಸೇರಿರುವ ವಿಷ ಯಾವುದೆಂದು ಬಳಿಕವಷ್ಟೇ ದೃಢಪಡಲಿದೆ.

ಕ್ಯಾನ್ಸರ್‌ನಿಂದ ಸ್ನೇಹಿತ ಸಾವು
ವಿಪಿನ್‌ ರಾಜ್‌ ಕ್ಯಾನ್ಸರ್‌ ಬಾಧಿಸಿ ಮೃತಪಟ್ಟಿದ್ದು, ಅದಾಗಿ 41ನೇ ದಿನ ಅಂಜುಶ್ರೀ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರ ಮನೆ ಸುಮಾರು 15 ಕಿ.ಮೀ. ಅಂತರದಲ್ಲಿದ್ದು, ಪರಿಚಯ ಹೇಗಾಯಿತು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ವಿಪಿನ್‌ ರಾಜ್‌ ವಿದ್ಯಾನಗರದ ಐಟಿಐಯಲ್ಲಿ ಕಲಿತಿದ್ದು. ಈ ಸಂದರ್ಭದಲ್ಲಿ ಪರಿಚಯವಾಗಿರಬೇಕೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next