ಕೊಪ್ಪಳ: ಅಂಜನಾದ್ರಿಯ ಅಭಿವೃದ್ಧಿಗೆ ಎಲ್ಲ ನೀಲನಕ್ಷೆಯೂ ಸಿದ್ದವಾಗಿದೆ. ನೂರಕ್ಕೆ ನೂರರಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು. ಅದಕ್ಕಾಗಿ ಪ್ಲಾನ್ ಎ ಮತ್ತು ಬಿ ಸಿದ್ದಪಡಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಹೇಳಿದರು.
ತಾಲೂಕಿನ ಮುನಿರಾಬಾದ್ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಅಂಜಿನಾದ್ರಿಯು ಶೂದ್ರ ಎನ್ನುವ ವಿಚಾರ ಗೊತ್ತಿಲ್ಲ. ಕಾಂಗ್ರೆಸ್ ಅಂಜಿನಾದ್ರಿಯನ್ನು ಬೇಗ ಅಭಿವೃದ್ಧಿ ಮಾಡಿ ಎಂದು ನಮಗೆ ಪ್ರಚೋದನೆ ನೀಡುತ್ತಿದೆ ಎಂದರಲ್ಲದೇ, ಆಂಜಿನೇಯ ಜನ್ಮ ಸ್ಥಳದ ವಿವಾದ ಅವರವರ ನಂಬಿಕೆ. ಅದನ್ನು ನಾವು ಹೇಳಕ್ಕಾಗಲ್ಲ ಎಂದರು.
ಅಂಜನಾದ್ರಿಯ ಅಭಿವೃದ್ಧಿ ಕುರಿತು ಜೂ.24 ರಂದು ಸಿಎಂ ಅವರೇ ಸಭೆ ಕರೆದಿದ್ದಾರೆ. ಅದಕ್ಕೂ ಪೂರ್ವದಲ್ಲಿ ನಾವು ಅಂಜನಾದ್ರಿಯಲ್ಲಿ ಏನೆಲ್ಲಾ ಕೆಲಸ ಆಗಬೇಕು ಎನ್ನುವ ಕುರಿತು ಒಂದು ಸುತ್ತು ಸಭೆ ನಡೆಸಿದ್ದೇವೆ. ಮೊದಲ ಹಾಗೂ ಎರಡನೇ ಆದ್ಯತೆ ಮೇಲೆ ಏನೆಲ್ಲಾ ಕಾಮಗಾರಿ ತೆಗೆದುಕೊಳ್ಳಬೇಕು ಎನ್ನುವ ಕುರಿತು 60 ಎಕರೆಯಲ್ಲಿ ನೀಲನಕ್ಷೆಯನ್ನು ಸಿದ್ದಪಡಿಸಲಾಗಿದೆ. ನಾನೂ ಸ್ಥಳ ಪರಿಶೀಲನೆ ನಡೆಸಿದ್ದೇನೆ.
ಜಿಲ್ಲಾಡಳಿತವು 60 ಎಕರೆ ಪ್ರದೇಶ ಬೆಟ್ಟದ ಪಕ್ಕ ಜಮೀನು ಗುರುತು ಮಾಡಿದೆ. ಆದರೆ ಬೆಟ್ಟದ ಪಕ್ಕದಲ್ಲೇ ಕಟ್ಟಡ ನಿರ್ಮಿಸಿದರೆ ಬೆಟ್ಟದ ನೈಸರ್ಗಿಕ ಸೊಬಗು ಹಾಳಾಗಲಿದೆ ಎಂದು ಹೇಳಿದ್ದೇನೆ. ಅದರ ಬದಲಾಗಿ ರಸ್ತೆ ಪಕ್ಕದ ಜಮೀನಿನಲ್ಲಿ ಅಭಿವೃದ್ಧಿ ಕೆಲಸ ಮಾಡಲು ಯೋಜಿಸಿದೆ. ಪ್ಲಾನ್ ಎ ಹಾಗೂ ಪ್ಲಾನ್ ಬಿ ಯೋಜನೆ ಮಾಡಿಕೊಂಡಿದ್ದು, ಸಿಎಂ ಗಮನಕ್ಕೆ ಈ ವಿಚಾರ ತರಲಿದ್ದೇವೆ ಎಂದರು.
Related Articles
ಇದನ್ನೂ ಓದಿ : ಶಾನಾಡಿ: 30 ಅಡಿ ಆಳದ ಪಾಳು ಬಾವಿಗೆ ಬಿದ್ದ ಜಿಂಕೆ ಮರಿ ರಕ್ಷಿಸಿದ ಸ್ಥಳೀಯ ಯುವಕರ ತಂಡ
ಅಂಜಿನಾದ್ರಿಯ ಪ್ರಕೃತಿ ಹಾಗೂ ಸೌಂದರ್ಯವನ್ನು ಉಳಿಸಬೇಕು. ಹಸಿರು ಸೌಂದರ್ಯ ಪ್ರವಾಸಿಗಿರ ಗಮನ ಸೆಳೆಯಬೇಕು. ನಾವು ಬೆಟ್ಟದ ಪಕ್ಕದಲ್ಲಿಯೇ ಮನೆಗಳನ್ನು ನಿರ್ಮಿಸಿದರೆ ಮುಂದಿನ ದಿನದಲ್ಲಿ ಬೆಟ್ಟವೇ ಮುಂದೆ ಕಾಣಿಸಲ್ಲ. ಅಂತಹ ಸಲಹೆಯನ್ನು ಕೊಟ್ಟಿದ್ದೇನೆ. ಇನ್ನು ಬೆಟ್ಟಕ್ಕೆ ರೂಪ್ ವೇ ನಿರ್ಮಿಸುವ ಕುರಿತು ಕೆಲವರು ಪರ-ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ತಾಂತ್ರಿಕವಾಗಿ ಚರ್ಚಿಸಿಲ್ಲ. ಸಿಎಂ ಈ ವಿಷಯ ಗಮನಕ್ಕೆ ತರಲಿದ್ದೇವೆ ಎಂದರು.
ಅಂಜಿನಾದ್ರಿಯ ಬೆಟ್ಟದ ಪಕ್ಕದಲ್ಲಿನ ರೈತರು ಜಮೀನು ಕೊಡಲು ವಿರೋಧ ವ್ಯಕ್ತಪಡಿಸಿಲ್ಲ. ಮಾರುಕಟ್ಟೆಯ ಮೌಲ್ಯಕ್ಕೆ ತಕ್ಕಂತೆ ನಮಗೆ ಬೆಲೆ ಕೊಡಿ ಎಂದು ಅಲ್ಲಿನ ರೈತರು ನಮ್ಮ ಗಮನಕ್ಕೆ ತಂದಿದ್ದಾರೆ. ನಮ್ಮನ್ನೂ ಅದರಲ್ಲಿ ಸೇರಿಸಿಕೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ. ನಾವು ಸಿಎಂ ಗಮನಕ್ಕೆ ತರಲಿದ್ದೇವೆ. ವಿರೋಧ ವ್ಯಕ್ತಪಡಿಸುವ ರೈತರು ನಮ್ಮ ಗಮನಕ್ಕೆ ಬಂದಿಲ್ಲ. ಅಂತಹ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿದ್ದೇವೆ. ನವಲಿ ಡ್ಯಾಂ ನಿರ್ಮಿಸುವ ವಿಚಾರ ಶಾಸಕ ಬಸವರಾಜ ದಡೆಸೂಗೂರು ಅವರು ಮಾತನಾಡಲಿದ್ದಾರೆ ಎಂದರು.