Advertisement

ಮಂಗನ ಕಾಯಿಲೆ ತೀವ್ರ: ಶಾಶ್ವತ ಉಪಶಮನ ಅಗತ್ಯ

12:30 AM Jan 10, 2019 | |

ವೈದ್ಯಕೀಯ ವಿಜ್ಞಾನದಲ್ಲಿ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌(ಕೆಎಫ್ಡಿ) ಎಂದು ಹೆಸರಿಸಲ್ಪಟ್ಟಿರುವ, ಆಡುಮಾತಿನಲ್ಲಿ ಮಂಗನ ಕಾಯಿಲೆ ಎಂದಾಗಿರುವ ಈ ಮಾರಣಾಂತಿಕ ರೋಗ ಈಗ ಮತ್ತೆ ಮಲೆನಾಡು ಜಿಲ್ಲೆಗಳ ಜನರನ್ನು  ಕಾಡತೊಡಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಒಂದರಲ್ಲಿಯೇ ಈವರೆಗೆ  ಆರು ಮಂದಿಯ ಪ್ರಾಣಕ್ಕೆ ಕುತ್ತು ತಂದಿರುವ ಈ ಕಾಯಿಲೆ ಈಗ ಸದ್ದಿಲ್ಲದೆ ಮಲೆನಾಡು ವ್ಯಾಪ್ತಿಗೆ ಹೊಂದಿಕೊಂಡ ಅರಣ್ಯ ಪ್ರದೇಶಗಳಾದ್ಯಂತ ಹರಡುತ್ತಿದೆ. ಸಾಗರ ತಾಲೂಕಿನ ಅರಣ್ಯ ಪ್ರದೇಶಗಳ ವಿವಿಧೆಡೆ ಮಂಗಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದರೆ ಹಲವು ಮಂದಿ ಸೋಂಕು ಪೀಡಿತರಾಗಿ ಜಿಲ್ಲೆ ಮತ್ತು ಹೊರಜಿಲ್ಲೆಗಳ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ  ಈಗಾಗಲೇ 14 ಮಂದಿಗೆ ರೋಗದ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಧ್ಯೆ ಶಿವಮೊಗ್ಗ ಅರಣ್ಯ ವ್ಯಾಪ್ತಿಯ ಕುಂದಾಪುರ ತಾಲೂಕಿನ ಸಿದ್ದಾಪುರ ಪರಿಸರದಲ್ಲಿ ಕಳೆದೆರಡು ದಿನಗಳಲ್ಲಿ  ಐದು ಕೋತಿಗಳ ಶವ ಪತ್ತೆಯಾಗಿದೆ. ಜತೆಗೆ ಬುಧವಾರ ಬೈಂದೂರು ಪರಿಸರದಲ್ಲೂ ಮಂಗಗಳು ಸತ್ತಿವೆ. ಇದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಆದರೆ ಈ ವರೆಗೆ  ಈ ಪ್ರದೇಶದಲ್ಲಿ  ಯಾರಿಗೂ ರೋಗದ ಸೋಂಕು ತಗುಲಿರುವ ಬಗೆಗೆ ಮಾಹಿತಿ ಲಭಿಸಿಲ್ಲವಾದರೂ ಮಂಗಗಳು ಏಕಾಏಕಿ ಸಾವನ್ನಪ್ಪುತ್ತಿರುವುದು ದಿಗಿಲು ಉಂಟು ಮಾಡಿದೆ.

Advertisement

ಆರು ದಶಕಗಳ ಹಿಂದೆ ಅಂದರೆ 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ  ಕಾಣಿಸಿಕೊಂಡ ಈ ಕಾಯಿಲೆ ಚಳಿಗಾಲದ ಸಮಯದಲ್ಲಿ ಪ್ರತಿ ವರ್ಷ ಮಲೆನಾಡು ಜಿಲ್ಲೆಗಳಲ್ಲಿನ ಅರಣ್ಯ ತಪ್ಪಲಿನ ಪ್ರದೇಶಗಳ ಜನರನ್ನು  ಕಾಡುತ್ತದೆ. ಸಾಮಾನ್ಯವಾಗಿ ಡಿಸೆಂಬರ್‌ನಿಂದ ಎಪ್ರಿಲ್‌ ವರೆಗಿನ ಐದು ತಿಂಗಳ ಅವಧಿಯಲ್ಲಿ  ಈ ಕಾಯಿಲೆ ಉಲ್ಬಣಗೊಳ್ಳುತ್ತದೆ. ಚಳಿಯ ತೀವ್ರತೆ ಹೆಚ್ಚಾಗಿದ್ದರಂತೂ ಸಮಸ್ಯೆ ಹೆಚ್ಚು. ಅರಣ್ಯ ಪ್ರದೇಶದಲ್ಲಿರುವ ಮಂಗಗಳಲ್ಲಿರುವ ಉಣ್ಣೆಗಳ ಮೂಲಕ ಈ ವೈರಸ್‌ ಜಾನುವಾರು ಮತ್ತು ಮನುಷ್ಯರಿಗೆ ಕಚ್ಚುವುದರಿಂದ ಈ  ಕಾಯಿಲೆ ಹರಡುತ್ತದೆ. ಈ ವೈರಸ್‌ ತಗುಲಿರುವ ಮಂಗಗಳು ಸತ್ತಾಗ ಉಣ್ಣೆಗಳು ಆ ಪರಿಸರದ ಸುಮಾರು 10 ಕಿ. ಮೀ. ವ್ಯಾಪ್ತಿಯವರೆಗೆ ಪಸರಿಸಿ ಜಾನುವಾರುಗಳು ಮತ್ತು ಮನುಷ್ಯರಿಗೆ ಕಚ್ಚುವ ಮೂಲಕ ಕಾಯಿಲೆ ಹರಡುತ್ತದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿನ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯದ ಅರಣ್ಯ ಪ್ರದೇಶಗಳಲ್ಲೂ ಈ ಕಾಯಿಲೆಗೆ ನೂರಾರು ಮಂದಿ ತುತ್ತಾಗಿದ್ದಾರೆ.

ಮಂಗಗಳಲ್ಲಿರುವ ಉಣ್ಣೆಗಳಿಂದ ಈ ವೈರಸ್‌ ಹರಡುತ್ತದೆ ಎನ್ನಲಾಗಿದ್ದರೂ ಕಾಯಿಲೆ ಪತ್ತೆಯಾಗಿ ಆರು ದಶಕಗಳು ಕಳೆದರೂ ಇಂದಿಗೂ ಇದರ ಮೂಲ ಪತ್ತೆ ಹಚ್ಚಿಲ್ಲ. ವಲಸೆ ಪಕ್ಷಗಳಿಂದ ಈ ವೈರಸ್‌ ದೇಶಕ್ಕೆ ಕಾಲಿರಿಸಿತು ಎಂಬ ಶಂಕೆ ಇದ್ದರೂ ದೃಢೀಕರಣಗೊಂಡಿಲ್ಲ. ಕೆಎಫ್ಡಿ ನಿರೋಧಕ ಚುಚ್ಚುಮದ್ದು  ಲಭ್ಯವಿದ್ದರೂ  ಇದರ ಪಾರ್ಶ ಪರಿಣಾಮಗಳ ಕಾರಣಗಳಿಂದಾಗಿ  ಇದನ್ನು  ಹಾಕಿಸಿಕೊಳ್ಳಲು  ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಾಗಿ ಸುಧಾರಿತ ನಿರೋಧಕವನ್ನು ರೂಪಿಸಬೇಕಿದೆ.

ಕಳೆದ ಕೆಲ ದಶಕಗಳಲ್ಲಿ  ಡೆಂಗ್ಯೂ, ಎಚ್‌1ಎನ್‌1, ಹಕ್ಕಿಜ್ವರ, ಇಲಿಜ್ವರ, ಎಬೋಲಾ, ಝೀಕಾ..ಮತ್ತಿತರ ಕಾಯಿಲೆ, ಸೋಂಕುಗಳಿಗೆ ಪರಿಣಾಮಕಾರಿ ಚಿಕಿತ್ಸೆ, ಔಷಧ, ನಿರೋಧಕಗಳನ್ನು  ಕಂಡುಹಿಡಿಯುವಲ್ಲಿ  ವೈದ್ಯಕೀಯ ತಜ್ಞರು ಯಶಸ್ವಿಯಾಗಿದ್ದರೂ ಈ ಕಾಯಿಲೆಗೆ ಸೂಕ್ತ ಔಷಧವನ್ನು ಕಂಡುಹಿಡಿಯದಿರುವುದು ಬೇಸರದ ಸಂಗತಿ. ಚಳಿಯ ತೀವ್ರತೆ ಕಡಿಮೆ ಇದ್ದಾಗ ಈ ಕಾಯಿಲೆಯ ಸದ್ದಿಲ್ಲದ ಕಾರಣ ಅರಣ್ಯ ತಪ್ಪಲಿನ ನಿವಾಸಿಗಳಾಗಲೀ, ಆರೋಗ್ಯ ಇಲಾಖೆಯಾಗಲೀ ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಪ್ರತಿ ವರ್ಷವೂ ಈ ಕಾಯಿಲೆಯ ಸೋಂಕು ತಗುಲಿದರೂ ಆರೋಗ್ಯ ಇಲಾಖೆ ಆ ಕ್ಷಣಕ್ಕೆ ಒಂದಿಷ್ಟು ಉಪಶಮನ ಕ್ರಮಗಳನ್ನು ಕೈಗೊಳ್ಳುತ್ತದೆಯೇ ಹೊರತು ಬೇರೇನೂ ಅಲ್ಲ. ರಾಜ್ಯ ಸರಕಾರವೂ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ. ಇನ್ನಾದರೂ ಸರಕಾರ ಎಚ್ಚೆತ್ತು ಈ ಮಾರಕ ಕಾಯಿಲೆಯಿಂದ ಮಲೆನಾಡಿನ ಜನರನ್ನು ಪ್ರಾಣ ಭೀತಿಯಿಂದ ಮುಕ್ತಗೊಳಿಸಬೇಕು. ಈ ವೈರಸ್‌ನ ಮೂಲವನ್ನು  ಪತ್ತೆಹಚ್ಚುವುದರ ಜತೆಯಲ್ಲಿ  ಕಾಯಿಲೆಯನ್ನು  ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ  ಪರಿಣಾಮಕಾರಿ ಔಷಧವನ್ನು  ಕಂಡುಹಿಡಿಯಬೇಕು. ಈ ಬಗ್ಗೆ  ಪಶ್ಚಿಮಘಟ್ಟ ಪ್ರದೇಶದ ತಪ್ಪಲಿನ ನಿವಾಸಿಗಳಲ್ಲಿ  ಜಾಗೃತಿ ಮೂಡಿಸಲೂ ಕಾರ್ಯೋನ್ಮುಖವಾಗಬೇಕು. ಈ ದಿಸೆಯಲ್ಲಿ  ವೈದ್ಯಕೀಯ ಸಂಶೋಧಕರೂ ಸರಕಾರದೊಂದಿಗೆ ಕೈಜೋಡಿಸಬೇಕಾದುದು ಅತ್ಯವಶ್ಯ.

Advertisement

Udayavani is now on Telegram. Click here to join our channel and stay updated with the latest news.

Next