Advertisement

ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ

05:15 PM Aug 04, 2021 | Team Udayavani |

ಚೇಳೂರು: ಹೋಬಳಿಯ ಪಾಳ್ಯಕೆರೆ ಗ್ರಾಮದಲ್ಲಿನ ಅಂಗನವಾಡಿ ಕಟ್ಟಡ ತೀರಾ ಹಳೆಯದಾಗಿದ್ದು, ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕ ಮಕ್ಕಳ ಪೋಷಕರಲ್ಲಿ ಮೂಡಿದೆ.

Advertisement

ಹೋಬಳಿಯಲ್ಲಿ ಪಾಳ್ಯಕೆರೆ ಪ್ರಮುಖ ಗ್ರಾ.ಪಂ.ಕೇಂದ್ರ ಆಗಿದೆ. ಆದರೂ, ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಸೌಲಭ್ಯ ಒದಗಿಸಲಾಗಿಲ್ಲ. ಮಕ್ಕಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ರೂ ಪೂರೈಕೆ ಮಾಡಿಲ್ಲ, ಹೀಗಾಗಿ ಮಕ್ಕಳು ಮನೆ, ಇಲ್ಲವೆ, ಸಾರ್ವಜನಿಕ ಕೊಳಾಯಿ ನೀರು
ಅವಲಂಬಿಸಬೇಕಾಗಿದೆ.

ಶೌಚಾಲಯ ಇಲ್ಲ: ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟ್ಯಂತರ ರೂ. ಹಣ ನೀಡುತ್ತಿದೆ. ಆದರೆ, ಗ್ರಾಪಂ ಅಧಿಕಾರಿಗಳು ಸೌಲಭ್ಯ ಒದಗಿಸುವಲ್ಲಿ ವಿಫ‌ಲವಾಗಿದ್ದಾರೆ. ಹೀಗಾಗಿ ಮಕ್ಕಳು ಮಲ ಮೂತ್ರ ವಿಸರ್ಜನೆಗೆ ಬಯಲು ಆಶ್ರಯಿಸುವಂತಾಗಿದೆ.

ಅವಘಡಕ್ಕೆ ಆಹ್ವಾನ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ 50 ವರ್ಷಗಳ ಹಿಂದೆ ನಿರ್ಮಿಸಿರುವ ಈ ಕಟ್ಟಡವನ್ನು ಬಸ್‌ ಪ್ರಯಾಣಿಕರು ವಿಶ್ರಾಂತಿ ಪಡೆಯಲು ಬಳಸಲಾಗಿತ್ತು. ನಂತರ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ 15 ವರ್ಷ ಖಾಲಿ ಬಿದ್ದಿತ್ತು. 35
ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪಾಳು ಬಿದ್ದ ಈ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರ ತೆರೆದಿದೆ. ಈಗ ಕಟ್ಟಡ ಪೂರ್ಣ ಶಿಥಿಲಗೊಂಡು ಯಾವಾಗ ಬೇಕಾದ್ರೂ ಕುಸಿದುಬೀಳಬಹುದು.

ಇದನ್ನೂ ಓದಿ:ಭಕ್ತರ ಗಮನಕ್ಕೆ: ಧರ್ಮಸ್ಥಳ,ಕಟೀಲು,ಕುಕ್ಕೆ ದೇವಸ್ಥಾನ ವಾರಾಂತ್ಯ ಬಂದ್; ಡಿಸಿ ಆದೇಶದಲ್ಲೇನಿದೆ

Advertisement

ಅಂಗನವಾಡಿಯಲ್ಲಿ 15 ಮಕ್ಕಳು
ಅಂಗನವಾಡಿ ಕೇಂದ್ರದಲ್ಲಿ 15 ಮಕ್ಕಳು ಕಲಿಯುತ್ತಿವೆ. ಆಹಾರ, ಇತರೆ ಸೌಲಭ್ಯ ಪಡೆಯಲು ಗರ್ಭಿಣಿಯರು, ಬಾಣಂತಿಯರು,ಕಿಶೋರಿಯರು
ಈ ಅಂಗನವಾಡಿ ಕೇಂದ್ರಕ್ಕೆ ಬಂದು ಹೋಗುತ್ತಾರೆ. ಇಬ್ಬರುಕಾರ್ಯಕರ್ತೆ ಯರು, ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದಕಟ್ಟಡ ಸಂಪೂರ್ಣ ತೇವಾಂಶದಿಂದ ಕೂಡಿದೆ. ಚಾವಣಿ ಸೋರುತ್ತಿದೆ. ದಾಖಲಾತಿ, ಇತರೆ ಕಲಿಕೆ ಪುಸ್ತಕಗಳು, ಆಹಾರ ಧಾನ್ಯ ಬೂಸ್ಟ್‌ ಹಿಡಿದು ಬಳಕೆ ಮಾಡಲಾಗುತ್ತಿಲ್ಲ.ಕೂಡಲೇ ತಹಶೀಲ್ದಾರ್‌,ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಅಧಿಕಾರಿಗಳು ನೂತನಕಟ್ಟಡ ನಿರ್ಮಿಸಿ ಮಕ್ಕಳ ಪ್ರಾಣ ಕಾಪಾಡಲು ಮುಂದಾಗಬೇಕಿದೆ.

ಚರಂಡಿ ಸ್ವಚ್ಛ ಮಾಡಿಲ್ಲ
ಅಂಗನವಾಡಿ, ಶಾಲೆ ಮುಂಭಾಗದಲ್ಲಿರುವ ಚರಂಡಿ ಗಿಡಗಂಟಿ, ಹೂಳು ತುಂಬಿಕೊಂಡು ಕೊಳಚೆ ನೀರು ಮುಂದಕ್ಕೆ ಹರಿಯದೇ ಮಡುಗಟ್ಟಿ
ನಿಂತಿದ್ದು, ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಕಾಟ ಹೇಳತೀರದಾಗಿದೆ.ಈಗಾಗಲೇ ಕೊರೊನಾ, ಡೆಂಗ್ಯೂ,ಚಿಕೂನ್‌ ಗುನ್ಯಾದಂತಹ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನ ಈ ಚರಂಡಿ ನೋಡಿ ಆತಂಕಗೊಂಡಿದ್ದಾರೆ.ಮಳೆ ಕೂಡ ಸುರಿಯುತ್ತಿದ್ದು, ಸಾಂಕ್ರಾಮಿಕ ರೋಗಭೀತಿ ಹೆಚ್ಚಿದೆ. ಕೂಡಲೇ ಗ್ರಾ.ಪಂ.ಅಧಿಕಾರಿಗಳು ಕನಿಷ್ಠ ಚರಂಡಿ ಸ್ವಚ್ಛಗೊಳಿಸಿ,ಮಕ್ಕಳ ಆರೋಗ್ಯ ಕಾಪಾಡಬೇಕಿದೆ.

ಪಾಳ್ಯಕೆರೆ ಗ್ರಾಮದ ಎ.ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ.ಹೀಗಾಗಿ ಅವಸಾನದಂಚಿನಲ್ಲಿರುವ ಹಳೆಯ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಗೋಡೆಗಳು ಬಿರುಕು ಬಿಟ್ಟು, ಸಿಮೆಂಟ್‌ ಗಾರೆ ಉದುರಿ ಇಟ್ಟಿಗೆಗಳು ಹೊರಚಾಚಿಕೊಂಡು ಕರಗುತ್ತಿವೆ.ಕಟ್ಟಡ ಯಾವಾಗ ಕುಸಿಯುತ್ತೋ ಹೇಳಲಾಗುವುದಿಲ್ಲ.
– ಪಿ.ವಿ.ವೆಂಕಟರೆಡ್ಡಿ, ಪಾಳ್ಯಕೆರೆ ಮುಖಂಡ

35 ವರ್ಷಗಳಿಂದ ಅಂಗನವಾಡಿ ಕೇಂದ್ರ ಇದೇ ಕಟ್ಟಡದಲ್ಲಿ ಇದೆ.ಖಾಲಿ ಜಾಗ ನೀಡಿದರೆ ಇಲಾಖೆಯಿಂದ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಲಾಗುತ್ತದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಕಟ್ಟಡಕುಸಿದು ಅವಘಡ ಸಂಭವಿಸಿದರೆ ಗ್ರಾಪಂ ಅಧಿಕಾರಿಗಳೇ ನೇರ ಹೊಣೆ ಹೊರಬೇಕು.
– ಈರಮ್ಮ ಸಿದ್ರಾಮಪ್ಪವಂದಾಲ,
ಮೇಲ್ವಿಚಾರಕರು, ಚೇಳೂರು ವೃತ್ತ.

ಪಾಳ್ಯಕೆರೆ ಶಾಲಾ ಆವರಣದಲ್ಲಿರುವ ಅಂಗನವಾಡಿ ಕಟ್ಟಡ ಕುಸಿಯುವ ಹಂತದಲ್ಲಿದೆ. ನೂತನ ಕಟ್ಟಡ ಕಟ್ಟುವವರೆಗೂ ಶಾಲೆಯಲ್ಲಿನ ಒಂದು
ಕೊಠಡಿ ನೀಡಬೇಕು.
– ವೈ.ಶಂಕರ, ಜಿಲ್ಲಾ ಸಂಚಾಲಕ, ಚಲವಾದಿ ಸಂಘ.
ಡಂಕಣಾಚಾರಿ, ಕರವೇ ಯುವ ಮುಖಂಡ

-ಪಿ.ವಿ.ಲೋಕೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next