Advertisement

ಅಂಗನವಾಡಿ ಕಾರ್ಯಕರ್ತೆಯರ ಸತ್ಯಾಗ್ರಹ

03:48 PM Mar 16, 2021 | Team Udayavani |

ಚಿಕ್ಕೋಡಿ: ಕೋವಿಡ್ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ್ದ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಬಜೆಟ್‌ನಲ್ಲಿ ಬಗೆಹರಿಸದ ಪರಿಣಾಮ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ಒಂದು ದಿನ ಇಲ್ಲಿನ ಸಿಡಿಪಿಒ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

Advertisement

ಸರಕಾರ ಸಂಪೂರ್ಣವಾಗಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಸತ್ಯಾಗ್ರಹದ ಜೊತೆಗೆ ಮಾರ್ಚ 13 ರಿಂದ ಹೆಚ್ಚುವರಿ ಕೆಲಸಗಳಾದ ಇ-ಸರ್ವೇ, ಸಿಎನ್‌ಇ ಸರ್ವೇ, ಬಿಪಿಎಲ್‌ ಕಾರ್ಡ ಸರ್ವೇ, ಆರ್‌ಸಿಎಚ್‌ ಸರ್ವೆ, ಭಾಗ್ಯಲಕ್ಷ್ಮೀ, ಮಾತೃವಂದನಾ, ಮಾತೋಶ್ರೀ, ಸ್ತ್ರಿಶಕ್ತಿ ಮುಂತಾದ ಕೆಲಸಗಳನ್ನು ಬಹಿಷ್ಕರಿಸಲಾಗಿದೆ. ಜೊತೆಗೆ ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಂತೆ ಹಲವು ಹೋರಾಟಗಳು ನಡೆದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೇವಾ ಜೇಷ್ಠತೆ ಆಧಾರದಲ್ಲಿ 153.23 ಕೋಟಿ ರೂ, ಮಿನಿ ಅಂಗನವಾಡಿ ಕೇಂದ್ರ ಸಹಾಯಕಿ ನೇಮಕಾತಿಗೆ 6.99 ಕೋಟಿ ರೂ., ಅಂಗನವಾಡಿ ಸಹಾಯಕರಿಗೆ ಸಂಬಳದ ವ್ಯತ್ಯಾಸ ಮೊತ್ತ 131.42 ಕೋಟಿ ರೂ., ನಿವೃತ್ತಿ ಸೌಲಭ್ಯಕ್ಕೆ 47.82 ಕೋಟಿ ರೂ. ಶಿಫಾರಸು ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಮೂರು ಶಿಫಾರಸು ಪರಿಗಣಿಸದೇ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಕೋವಿಡ್ ವೇಳೆ ಕಾರ್ಯನಿರ್ವಹಿಸಿ ರಾಜ್ಯದಲ್ಲಿ ಮೃತಪಟ್ಟ 26 ಜನರ ಕುಟುಂಬಗಳಿಗೆ ಇಂದಿಗೂ ಪರಿಹಾರ ದೊರಕಿಲ್ಲ, ಅವರಿಗೆ ಪರಿಹಾರ ನೀಡಬೇಕು. 2016ರಲ್ಲಿ ನಿವೃತ್ತರಾದ ಕಾರ್ಯಕರ್ತರಿಗೆ ಮತ್ತು ಸಹಾಯಕಿಯರಿಗೆ ನೀಡಬೇಕಿದ್ದ ಹಣವನ್ನು ಸಹ ಸರ್ಕಾರ ಕೊಟ್ಟಿಲ್ಲ. ಇಂದಿನಿಂದ ಹೆಚ್ಚುವರಿ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸಂಘದ ಅಧ್ಯಕ್ಷ ಗುರವ್ವ ಮಡಿವಾಳ, ಕಾರ್ಯದರ್ಶಿ ಭಾರತಿ ಸನದಿ, ಖಜಾಂಚಿ ಸಂಗೀತಾ ಚಿಂಚಣಿ, ಶಿವಲೀಲಾ ಮಠದ, ಶೋಭಾ ಬಾನೆ, ರೇಖಾ ಇಟ್ಟೇಕರ, ಸುರೇಖಾ ಭವಾನಿ, ಶಶಿಕಲಾ ಪೆಂಡಾರೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next