Advertisement

ಅಡುಗೆ ಮನೆ ತ್ಯಾಜ್ಯಕ್ಕೆ ಅಮೃತ ಮಿಟ್ಟಿ ಸ್ಪರ್ಶ

10:26 AM Mar 03, 2020 | Suhan S |

ಹುಬ್ಬಳ್ಳಿ: ಅಡುಗೆ ಮನೆ ತ್ಯಾಜ್ಯ, ಇತರೆ ಒಣ ತ್ಯಾಜ್ಯ ಬಳಸಿಕೊಂಡು ಹರ್ಯಾಣದ ನವೋದ್ಯಮಿಯೊಬ್ಬರು ಸಾವಯವ ಮಣ್ಣು ತಯಾರಿಸಿದ್ದು, “ಅಮೃತ ಮಿಟ್ಟಿ’ ಹೆಸರಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 10 ಟನ್‌ ಮಣ್ಣು ಮಾರಾಟ ಮಾಡಿದ್ದಾರೆ. ತ್ಯಾಜ್ಯ ವಿಲೇವಾರಿ ಹಾಗೂ ತಾಪಮಾನ ತಡೆ ನಿಟ್ಟಿನಲ್ಲಿ ಅಳಿಲು ಸೇವೆಗೆ ಮುಂದಾಗಿದ್ದಾರೆ.

Advertisement

ಹರಿಯಾಣದ ಗುರಗಾಂವ್‌ನ ಎನ್‌ರಿಚ್‌ ಸಾಯಿಲ್‌ ಆ್ಯಂಡ್‌ ಸೋಲ್‌ ಕಂಪನಿ ಸಂಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಸಾವರ್‌ಗಾಂವ್ಕರ್‌, ಅಡುಗೆ ಮನೆ ಹಾಗೂ ಇನ್ನಿತರ ಒಣ ತ್ಯಾಜ್ಯ ಬಳಕೆಯೊಂದಿಗೆ ತಯಾರಿಸಿದ ಮಣ್ಣು ಮಾರಾಟದ ನವೋದ್ಯಮ ಆರಂಭಿಸಿದ್ದಾರೆ. ಇವರ ಈ ಕಾರ್ಯಕ್ಕೆ ಪ್ರೇರಣೆ, ಮಾರ್ಗದರ್ಶನ ಸಿಕ್ಕಿದ್ದು ಬೆಂಗಳೂರಿನಲ್ಲಿ ಎಂಬುದು ಹೆಮ್ಮೆಯ ಸಂಗತಿ.

ಅಮೃತ ಮಿಟ್ಟಿ ತಯಾರಿಕೆ ಹಿಂದಿನ ಆಶಯ, ತಾವು ಎದುರಿಸಿದ ಕಷ್ಟ-ಜಗಳ, ಜಗಳವಾಡಿದ್ದ ಜನರನ್ನೇ ತ್ಯಾಜ್ಯ ವಿಲೇವಾರಿಗಿಳಿಸಿದ್ದು, ಸುಮಾರು 1,200 ಮನೆಳಲ್ಲಿ ತ್ಯಾಜ್ಯ ವಿಲೇವಾರಿ ತಾಣಗಳಾಗಿಸಿದ್ದರ ಕುರಿತಾಗಿ ಪೂರ್ಣಿಮಾ ಅವರು “ಉದಯವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

5 ಪೈಸೆ ತ್ಯಾಜ್ಯಕ್ಕೆ 5 ರೂ. ವೆಚ್ಚ: ಅಡುಗೆ ಮನೆ ತ್ಯಾಜ್ಯವನ್ನು ಕಸದ ತೊಟ್ಟಿಗೆ ಬಿಸಾಡುವ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಚೆಲ್ಲುವ ಇಲ್ಲವೆ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡುವ, ಒಣ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಬಹುತೇಕ ನಗರಗಳಲ್ಲಿ ಸಾಮಾನ್ಯ. ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಜಾಗತಿಕ ತಾಮಮಾನ ಹೆಚ್ಚಳಕ್ಕೆ ತನ್ನದೇ ಕೊಡುಗೆ ನೀಡತೊಡಗಿದೆ. ಅದೇ ರೀತಿ ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಸಹ ಇದಕ್ಕೆ ಸೇರಿದೆ.

ನಗರಗಳಲ್ಲಿ ಐದು ಪೈಸೆ ತ್ಯಾಜ್ಯ ವಿಲೇವಾರಿಗೆ 5 ರೂ. ವೆಚ್ಚ ಮಾಡಲಾಗುತ್ತಿದೆ. ಅಡುಗೆ ಮನೆ ಹಸಿ-ಒಣ ತ್ಯಾಜ್ಯ ವಿಲೇವಾರಿಯೂ ಆಗಬೇಕು, ಮತ್ತೂಂದು ಉಪಯುಕ್ತ ಉತ್ಪನ್ನ ರೂಪ ಪಡೆಯಬೇಕು ಎಂಬ ಉದ್ದೇಶದೊಂದಿಗೆ ಆರಂಭಗೊಂಡ ನನ್ನ ಪಯಣ, ಇದೀಗ ಅಮೃತ ಮಿಟ್ಟಿ ಹೆಸರಲ್ಲಿ ನವೋದ್ಯಮ ಆರಂಭಿಸುವ ಹಂತಕ್ಕೆ ಕರೆತಂದಿದೆ. ಪ್ಲಾಸ್ಟಿಕ್‌, ಗಾಜು, ಕಬ್ಬಿಣದಂತಹ ವಸ್ತುಗಳನ್ನು ಹೊರತುಪಡಿಸಿದರೆ ಉಳಿದ ಮನೆಯ ಹಸಿ ಹಾಗೂ ಒಣ ತ್ಯಾಜ್ಯವನ್ನು ಕಾಂಪೊಸ್ಟ್‌ ಆಗಿ ಪರಿವರ್ತಿಸಬಹುದು. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಾನು, ಏಕೆ ನಗರಗಳಲ್ಲಿ ತಾರಸಿ ತೋಟಗಳಿಗೆ ಫ‌ಲವತ್ತಾದ, ಸಾವಯವ ಮಣ್ಣನ್ನು ನೀಡಬಾರದು ಎಂಬ ಚಿಂತನೆಗೆ ಇಳಿದಾಗ ಕೈಗೊಂಡ ಪ್ರಯೋಗವೇ “ಅಮೃತ ಮಿಟ್ಟಿ’. ನಾನು ಬೆಂಗಳೂರಿನಲ್ಲಿದ್ದಾಗ ದೀಪಕ್‌ ಅವರಿಂದ ನನಗೆ ಇದರ ಬಗ್ಗೆ ಮಾಹಿತಿ, ಮಾರ್ಗದರ್ಶನ ಲಭ್ಯವಾಯಿತು. ಅದನ್ನೇ ಮುಂದುವರೆಸಿದೆ, ಇದೀಗ ನವೋದ್ಯಮ ಕಂಪನಿ ಆರಂಭಿಸಿದ್ದೇನೆ.

Advertisement

ಮಾಡಿದ ಪ್ರಯೋಗ ವಿಸ್ತರಿಸಿದೆ: 2012ರಲ್ಲಿ ಗುರಗಾಂವ್‌ನಲ್ಲಿ ನನ್ನ ಅಡುಗೆ ಮನೆ ಹಸಿ ಹಾಗೂ ಒಣತ್ಯಾಜ್ಯ ಜತೆಗೆ ಒಂದಿಷ್ಟು ತೋಟಗಾರಿಕಾ ತ್ಯಾಜ್ಯವನ್ನು ಬಳಸಿಕೊಂಡು, ಮಣ್ಣು ತರಿಸಿ ಪ್ರಯೋಗಕ್ಕೆ ಮುಂದಾದೆ. ಈ ಪ್ರಯೋಗಕ್ಕೆ ಮುಂದಾದಾಗ ನಾನಿರುವ ಅಪಾರ್ಟ್‌ಮೆಂಟ್‌ ಗಳ ಸಮುತ್ಛಯದ ನೆರೆ ಹೊರೆಯವರು ತಗಾದೆ ತೆಗೆದರು. ದುರ್ವಾಸನೆ ಬರುತ್ತದೆ, ಇದನ್ನು ಮಾಡಲು ನಿಮಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಜಗಳವಾಡಿದರು. ಅದೆಲ್ಲವನ್ನು ಸಹಿಸಿಕೊಂಡು ನನ್ನ ಕಾರ್ಯದಲ್ಲಿ ತೊಡಗಿದೆ. ಸುಮಾರು 1,600 ರೂ. ನಷ್ಟು ವೆಚ್ಚ ಮಾಡಿ ಒಟ್ಟು 350 ಕೆಜಿ ಯಷ್ಟು ಅಮೃತ ಮಿಟ್ಟಿ ತಯಾರಿಸಿದೆ. ಅದನ್ನು ನನ್ನದೇ ತಾರಸಿ ತೋಟಕ್ಕೆ ಬಳಸಿದೆ ಜತೆಗೆ ತೋಟಗಾರಿಕಾ ಇಲಾಖೆಗೂ ನೀಡಿದೆ. ನಂತರದಲ್ಲಿ ಈ ಮಣ್ಣಿನ ಮಹತ್ವದ ಕುರಿತಾಗಿ ಹಲವರಿಗೆ ಮನವರಿಕೆ ಮಾಡಿದೆ. ನಮ್ಮ ಸುತ್ತಮುತ್ತಲ ಸುಮಾರು 1,200 ಮನೆಗಳಿಂದ ಅವರ ಅಡುಗೆ ಮನೆ ಹಸಿ ಹಾಗೂ ಒಣ ತ್ಯಾಜ್ಯ ನೀಡುವಂತೆ ಕೇಳಿ ನಾನೇ ಸಂಗ್ರಹಿಸಿ ತರುತ್ತಿದ್ದೆ. ಒಣ ತ್ಯಾಜ್ಯಕ್ಕೆ ಯಾವುದೇ ಕಾರಣಕ್ಕೆ ಬೆಂಕಿ ಹಚ್ಚದಂತೆ ಮನವಿ ಮಾಡಿದೆ. ಆರಂಭದಲ್ಲಿ ಹೆಚ್ಚಿನ ಸ್ಪಂದನೆ ದೊರೆಯಲಿಲ್ಲ. ನಿಧಾನಕ್ಕೆ ಒಂದೊಂದೇ ಮನೆಯವರು ನೀಡತೊಡಗಿದರು. ನೆರೆ ಹೊರೆಯವರ ಮನೋಭಾವದಲ್ಲೂ ಬದಲಾವಣೆ ಬಂದಿದೆ.

ಪ್ರಯತ್ನ ನಿಂತಿಲ್ಲ: 2012ರಿಂದ 2019ರ ಕೊನೆವರೆಗೆ 1,200 ಮನೆಗಳಲ್ಲಿ ನಿತ್ಯ ಸುಮಾರು 400-480 ಕೆಜಿಯಷ್ಟು ಉತ್ಪಾದನೆಯಾಗುವ ಅಡುಗೆ ಮನೆ ಹಸಿ-ಒಣ ತ್ಯಾಜ್ಯದಲ್ಲಿ ಶೇ.60ರಷ್ಟು ತ್ಯಾಜ್ಯ ಅಮೃತ ಮಿಟ್ಟಿ, ಕಾಂಪೊಸ್ಟ್‌ ರೂಪ ಪಡೆಯುತ್ತಿದೆ. ಇನ್ನುಶೇ.40ರಷ್ಟು ತ್ಯಾಜ್ಯ ಉತ್ಪಾದಕರು ಮಾತ್ರ ಮನ ಬದಲಾವಣೆಗೆ ಮುಂದಾಗಿಲ್ಲ. ಆದರೂ ನನ್ನ ಪ್ರಯತ್ನ ಮಾತ್ರ ನಿಂತಿಲ್ಲ.  10 ಟನ್‌ನಷ್ಟು ಅಮೃತ ಮಿಟ್ಟಿ ಮಾರಾಟ ಮಾಡಿದ್ದೇನೆ. ಗುರಗಾಂವ್‌, ದೆಹಲಿ ಅಲ್ಲದೇ ವಿವಿಧ ಕಡೆಯಿಂದಲೂ ಇದಕ್ಕೆ ಬೇಡಿಕೆ ಬರುತ್ತಿದೆ. ಅಮೇಜಾನ್‌ನಲ್ಲೂ ಇದು ಮಾರಾಟಕ್ಕಿದ್ದು, ಒಂದು ಕೆಜಿಗೆ 30 ರೂ. ನಂತೆ ಒಂದು ಹಾಗೂ ಐದು ಕೆಜಿ ಪ್ಯಾಕ್‌ನಲ್ಲಿ ಮಾರಾಟ ಆಗುತ್ತಿದೆ.

ಅಮೃತ ಮಿಟ್ಟಿ ಮಾರಾಟಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದಂತೆಯೇ ಇದಕ್ಕಾಗಿ ನವೋದ್ಯಮ ಆರಂಭಿಸಿದ್ದು, ಒಟ್ಟು ಆರು ಪ್ರಕಾರದ ಅಮೃತ ಮಿಟ್ಟಿ ತಯಾರಿಸಲಾಗುತ್ತಿದೆ. ಕಳೆದ 6 ತಿಂಗಳ ಹಿಂದೆಯಷ್ಟೇ ಸಂಶೋಧನಾ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಆರಂಭಿಸಿದ್ದು, ಕೃಷಿ ಮತ್ತು ತೋಟಗಾರಿಕಾ ತಾಜ್ಯವನ್ನು ಸುಡುವ ಬದಲು ಅದನ್ನು ಉತ್ಪನ್ನ ರೂಪವಾಗಿ ಮಾಡುವುದು ಹೇಗೆ ಎಂಬುದರ ಸಂಶೋಧನೆ ನಡೆದಿದೆ. ಸುಮಾರು 1,575 ಎಕರೆ ಪ್ರದೇಶದಲ್ಲಿನ ಗೋಧಿ, ಸಜ್ಜೆ, ಭತ್ತದ ತ್ಯಾಜ್ಯದ ಮೇಲೆ ಕೆಲಸ ಮಾಡಲಾಗುತ್ತಿದೆ. ಮಣ್ಣು ಪರೀಕ್ಷೆ ಕೈಗೊಳ್ಳುತ್ತಿದ್ದೇವೆ.

ಮನೆಯೊಳಗಿನ ತ್ಯಾಜ್ಯ ಹೊರ ಹೋಗದಂತೆ, ಬೆಂಕಿ ಹಚ್ಚಿ ವಾತಾವರಣ ಹಾಳು ಮಾಡದಂತೆ ಅದನ್ನೇ ಅಮೃತ ಮಿಟ್ಟಿಯಾಗಿ ಪರಿವರ್ತಿಸುವ ಮಾದರಿಯನ್ನು ಪ್ರಧಾನಿ ಮೋದಿ ಎದುರು ಪ್ರದರ್ಶಿಸಿದ್ದೇನೆ. ದೇಶದ ಯಾವುದೇ ರಾಜ್ಯದಲ್ಲಿ ಯಾರಾದರೂ, ಅಮೃತ ಮಿಟ್ಟಿ ತಯಾರಿಕೆಗೆ ಮುಂದಾದರೆ ಫ್ರಾಂಚೈಸಿ ನೀಡಿ, ತಂತ್ರಜ್ಞಾನ ಸಲಹೆ-ಮಾರ್ಗದರ್ಶನ ನೀಡಲಾಗುವುದು. ತಾಜ್ಯ ಉತ್ಪಾದನೆ ನನ್ನ ಹಕ್ಕು ಎಂದು ಭಾವಿಸುವವರು, ಅದರ ವಿಲೇವಾರಿ ಸಹ ನನ್ನ ಕರ್ತವ್ಯ ಎಂದು ಭಾವಿಸಬೇಕೆಂಬುದೇ ನನ್ನ ಉದ್ದೇಶ.ಪೂರ್ಣಿಮಾ ಸಾವರ್‌ಗಾಂವ್ಕರ್‌

ತಯಾರಿ ಹೇಗೆ?:  ಅಡುಗೆಗೆ ಬಳಸುವ ತರಕಾರಿ, ಪಲ್ಯ, ಉಳಿದ ಅಡುಗೆ, ಇನ್ನಿತರ ಒಣ ತ್ಯಾಜ್ಯವನ್ನು ಹೆಚ್ಚಿನ ವಾಸನೆ ಬಾರದ ರೀತಿಯಲ್ಲಿ ಮನೆಯ ಮೇಲೆ ಇಲ್ಲವೇ ಕಾಂಪೌಂಡ್‌ನ‌ಲ್ಲಿಯೇ ಇರಿಸಬಹುದಾಗಿದೆ. ಅದರೊಳಗಿನ ತೇವಾಂಶ ಹೋಗುವವರೆಗೂ ಅಲ್ಪಸ್ವಲ್ಪ ವಾಸನೆ ಬರಬಹುದು. ಅದು ದೊಡ್ಡ ಸಮಸ್ಯೆಯೂ ಆಗಲಾರದು. ಸುಮಾರು 120-140 ದಿನಗಳಲ್ಲಿ ಇದು ಕಾಂಪೊಸ್ಟ್‌ ರೂಪ ತಾಳುತ್ತದೆ. 1:3 ಆಧಾರದಲ್ಲಿ ಮಣ್ಣು ಸೇರಿಸುವ ಮೂಲಕ ಅಮೃತ ಮಿಟ್ಟಿ ತಯಾರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next