ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೇರಳದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಒಂದು ವಾರ ಅವಧಿಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಅ. 2ರಂದು ಸಂಜೆ 6 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ. ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿ ಸುವುದಕ್ಕೆ ದ.ಕ. ಜಿಲ್ಲಾ ಬಿಜೆಪಿ ಘಟಕ ಸರ್ವ ತಯಾರಿ ನಡೆಸಿದೆ. ಶಾ ಅವರನ್ನು ಸುಮಾರು 250ರಿಂದ 300 ವಾಹನಗಳ ಮೆರವಣಿಗೆ ಮೂಲಕ ಕೇರಳದ ಗಡಿಭಾಗ ತಲಪಾಡಿ ತನಕ ಕರೆ ದೊಯ್ಯ ಲಾಗುವುದು. ಅಲ್ಲಿ ಕೇರಳದ ಬಿಜೆಪಿ ನಾಯಕರು ಸ್ವಾಗತಿಸಲಿದ್ದಾರೆ. ಶಾ ಅವರು ಕೇರಳ ಭೇಟಿ ಮುಗಿಸಿ ಅ. 3ರಂದು ಸಂಜೆ ಮತ್ತೆ ಮಂಗಳೂರಿಗೆ ವಾಪಸಾಗಿ ವಾಸ್ತವ್ಯ ಮಾಡಲಿದ್ದಾರೆ.
ಅ. 4: ರಾಜ್ಯ ನಾಯಕರು, ಪ್ರಬುದ್ಧರ ಸಭೆ
ಅ. 4ರಂದು ಬೆಳಗ್ಗೆ 10 ಗಂಟೆಗೆ ಕೊಡಿಯಾಲ್ಬೈಲ್ನ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ನಡೆಯುವ ರಾಜ್ಯ ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು. ಅದೇದಿನ ಸಂಜೆ 5 ಗಂಟೆಗೆ ಎಂ.ಜಿ. ರಸ್ತೆಯ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಜಿಲ್ಲಾ ಬಿಜೆಪಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಮತ್ತು ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಹುತೇಕ ರಾಜ್ಯ ನಾಯಕರು ಮಂಗಳೂರಿಗೆ ಆಗಮಿಸಲಿದ್ದಾರೆ. ಪಕ್ಷ ಬಲವರ್ಧನೆ ಕುರಿತಂತೆ ಕರಾವಳಿಗೆ ಶಾ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ದಿಂದಿದ್ದು, ಅವರು ಸಂಚರಿಸುವ ರಸ್ತೆಯಲ್ಲಿ ಬಿಜೆಪಿ ಧ್ವಜ ದೊಂದಿಗೆ ಸ್ವಾಗತಿಸಲು ಸಕಲ ಸಿದ್ಧªತೆ ನಡೆಸಲಾಗಿದೆ.
ಬಿಗಿ ಭದ್ರತೆ: ಅಮಿತ್ ಶಾ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಭದ್ರತೆ ಕೈಗೊಂಡಿದ್ದಾರೆ. ಶಾ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ತಲಪಾಡಿ ತಲುಪುವವರೆಗೆ ಹಾಗೂ ಆ ಬಳಿಕ ಮಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ.
ಈ ಬಗ್ಗೆ “ಉದಯವಾಣಿ’ ಜತೆಗೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು, ” ಶಾ ಮಂಗಳೂರು ಭೇಟಿ ಹಿನ್ನೆಲೆ ಯಲ್ಲಿ ಭದ್ರತೆ ಬಗ್ಗೆ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲೆಡೆ ಸೂಕ್ತ ಭದ್ರತೆಯನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.