Advertisement

ಕಾಂಗ್ರೆಸ್‌ಗೆ ಶಾಕ್‌ ನೀಡಬಹುದೇ ಅಮಿತ್‌ ಶಾ ಮಂಗಳೂರು ಭೇಟಿ?

08:58 AM Oct 02, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ರಾಜಕೀಯ ತಂತ್ರಗಾರಿಕೆ ರೂಪಿಸುವುದರಲ್ಲಿ ನಿಸ್ಸೀಮ ರೆನಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಆ ಮೂಲಕ ಕರಾವಳಿಯ ಕೈ ಪಾಳಯದ ವೋಟ್‌ ಬ್ಯಾಂಕ್‌ಗೆ ಕೈಹಾಕಲು ಮುಂದಾಗಿದ್ದಾರೆ. ಹೀಗಾಗಿ ಅಮಿತ್‌ ಶಾ ಅವರ ಈ ಕರಾವಳಿ ಭೇಟಿ ಹಾಗೂ ರಾಜಕೀಯ ಲೆಕ್ಕಾಚಾರಗಳು ಈಗ ಕಾಂಗ್ರೆಸ್‌ಗೆ ಆಘಾತವುಂಟು ಮಾಡುವ ಸಾಧ್ಯತೆಯಿದೆ.

Advertisement

ಏಕೆಂದರೆ ರಾಜ್ಯದ ಬಿಜೆಪಿ ನಾಯಕರು ಹಾಗೂ ಮುಖಂಡರು ಇತ್ತೀಚೆಗಷ್ಟೇ ಸರಕಾರದ ನಿರ್ಬಂಧವನ್ನು ಮೀರಿ “ಮಂಗಳೂರು ಚಲೋ’ ಮೂಲಕ ತಮ್ಮ ಶಕ್ತಿಪ್ರದರ್ಶನ ಮಾಡುವ ಜತೆಗೆ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿದ್ದರು. ಮಂಗಳೂರು ಚಲೋ ಯಶಸ್ಸಿನ ಬೆನ್ನಲ್ಲೇ ರಾಷ್ಟ್ರೀಯ ಅಧ್ಯಕ್ಷ ಮಂಗಳೂರಿಗೆ ಆಗಮಿಸಿ ಪಕ್ಷ ಬಲವರ್ಧನೆಗೆ ಕಾರ್ಯತಂತ್ರ ರೂಪಿ ಸುತ್ತಿರುವುದು ಸಹಜವಾಗಿಯೇ ಕರಾವಳಿ ಭಾಗದ ಬಿಜೆಪಿ ನಾಯಕರ ಉತ್ಸಾಹವನ್ನು ಇಮ್ಮಡಿ ಗೊಳಿ ಸಿದೆ. ಶಾ ಅವರ ಈ ಭೇಟಿ ರಾಜಕೀಯ ವಾಗಿ ಬೇರೆ ಪಕ್ಷಗಳಲ್ಲೂ ಸಂಚಲನಕ್ಕೆ ಎಡೆಮಾಡಿದೆ.

ಉತ್ತರ ಪ್ರದೇಶ, ಉತ್ತರಖಂಡದಲ್ಲಿ ನಡೆದ ವಿಧಾನ ಸಭೆ ಚುನಾವಣೆಗಳಲ್ಲಿ ಅಮಿತ್‌ ಶಾ ಅವರು ಸದ್ದಿಲ್ಲದೆ ಯಾವ ರೀತಿಯ ತಂತ್ರಗಾರಿಕೆ ರೂಪಿಸಿದ್ದರು; ಆ ಮೂಲಕ ಅಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ಏನೆಲ್ಲ ತಂತ್ರಗಾರಿಕೆ ಹೂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿಯೂ ಪಕ್ಷವನ್ನು ಹೇಗಾದರೂ ಮಾಡಿ ಅಧಿಕಾರಕ್ಕೆ ತರಬೇಕು ಎನ್ನುವ ದೃಢ ಸಂಕಲ್ಪ ಮಾಡಿಕೊಂಡಿದ್ದಾರೆ.

ಪ್ರತ್ಯೇಕ ಸಭೆ ಗಮನಾರ್ಹ
ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಯಿರು ವಾಗಲೇ ಶಾ ತಾಲೀಮು ಪ್ರಾರಂಭಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕಳೆದ ತಿಂಗಳಷ್ಟೇ ರಾಜ್ಯಕ್ಕೆ ಬಂದು ಹೋಗಿದ್ದ ಅಮಿತ್‌ ಶಾ ಅವರು ಈಗ ಮತ್ತೆ ಆಗಮಿಸುತ್ತಿದ್ದಾರೆ. ಬಿಜೆಪಿಯ ರಾಜ್ಯ ಪ್ರಮುಖ ನಾಯಕರ ಸಭೆ ಹಾಗೂ ಮೇಧಾವಿಗಳ ಸಭೆಗಳನ್ನು ಪ್ರತ್ಯೇಕವಾಗಿ ನಡೆಸುತ್ತಿರುವುದು ಗಮನಾರ್ಹ.

ಬುಧವಾರ ನಗರದಲ್ಲಿ ನಡೆಯುವ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸಹಿತ ರಾಜ್ಯ ನಾಯಕರು, ಕೇಂದ್ರದ ಸಚಿವರು, ಪಕ್ಷದ ರಾಜ್ಯ ಪದಾಧಿಕಾರಿಗಳು ಭಾಗ ವಹಿಸು ತ್ತಾರೆ. ಕರಾವಳಿ ಭಾಗದಲ್ಲಿ ಪ್ರಮುಖವಾಗಿ ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ಅಹಿತಕರ ಘಟನೆ ಹಾಗೂ ಅದರಿಂದ ಆಗಿರುವ ನಾನಾ ರೀತಿಯ ಬೆಳವಣಿಗೆ ಗಳನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ನಡೆಯುವ ಸಾಧ್ಯತೆಯಿದೆ. ಆ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆ ಮಾಡುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾ ನಾಥ ರೈ ಅವರ ವರ್ಚಸ್ಸು ಕುಗ್ಗಿಸುವುದಕ್ಕೆ ಬೇಕಾದ ಕಾರ್ಯತಂತ್ರ ಹೆಣೆಯುವ ಸಾಧ್ಯತೆಯೂ ಇದೆ.

Advertisement

ಈ ಎಲ್ಲ ದೃಷ್ಟಿಯಿಂದ ಅಮಿತ್‌ ಶಾ ಅವರ ಈ ಭೇಟಿಯು ರಾಜಕೀಯವಾಗಿ ಹಾಗೂ ಪಕ್ಷ ಸಂಘಟನೆ ದೃಷ್ಟಿ ಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅದ ರಲ್ಲಿಯೂ ಶಾ ಅವರು ಮಂಗಳೂರಿನಲ್ಲೇ ವಾಸ್ತವ್ಯ ಹೂಡಿ ದಿನವಿಡೀ ಪಕ್ಷ ಬಲವರ್ಧನೆ ಬಗ್ಗೆ ಚರ್ಚೆ ನಡೆಸ ಲಿರುವುದು ಹಲವು ರೀತಿಯ ರಾಜಕೀಯ ವಿಶ್ಲೇಷಣೆಗೆ ವೇದಿಕೆ ಕಲ್ಪಿಸಿದೆ. ಅಮಿತ್‌ ಶಾ ಖುದ್ದು ನಡೆಸಲಿರುವ ಮೇಧಾವಿಗಳ ಸಭೆಯಲ್ಲಿ ಪಕ್ಷದ ಬಗ್ಗೆ ಒಲವು ಹೊಂದಿ  ರುವ ನ್ಯಾಯವಾದಿಗಳು, ಚಾರ್ಟರ್ಡ್‌ ಅಕೌಂಟೆಂಟ್‌ ಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು ಸಹಿತ ಉನ್ನತ ವೃತ್ತಿಪರರು, ಚಿಂತಕರು, ಉದ್ಯಮಿಗಳು ಭಾಗ ವಹಿಸು ತ್ತಾರೆ. ಈ ಸಭೆಯಲ್ಲಿ ಭಾಗವಹಿಸುವುದಕ್ಕೆ ಈಗಾಗಲೇ ಸುಮಾರು 1,800 ಮಂದಿಯನ್ನು ಆಹ್ವಾ ನಿಸ ಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ಬಿಜೆಪಿಯ ಭದ್ರ ನೆಲೆ ಎನಿಸಿ ಕೊಂಡಿದ್ದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಧೂಳೀಪಟವಾಗಿ ಒಟ್ಟು 13 ಸ್ಥಾನಗಳ ಪೈಕಿ ಕೇವಲ ಎರಡು ಸ್ಥಾನಗಳನ್ನಷ್ಟೇ ಪಡೆ ಯಲು ಶಕ್ತವಾಗಿತ್ತು. 10 ಸ್ಥಾನಗಳನ್ನು ಕಾಂಗ್ರೆಸ್‌ ಹಾಗೂ ಒಂದು ಸ್ಥಾನ ಪಕ್ಷೇತರರ ಪಾಲಾಗಿತ್ತು. ಆ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿ ಪಕ್ಷಕ್ಕೆ ಭಾರೀ ಮುಖಭಂಗವುಂಟು ಮಾಡಿತ್ತು. ಆದರೆ ಬಳಿಕ ಚೇತರಿಸಿಕೊಂಡು 2014ರ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಒಂದು ಕಡೆ ಕಾಂಗ್ರೆಸ್‌ ತನ್ನ ಜಯಭೇರಿಯನ್ನು ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗಿ ಕೆಪಿಸಿಸಿಯ ಇಬ್ಬರು ಪ್ರಧಾನ ಕಾರ್ಯ ದರ್ಶಿಗಳನ್ನು ಪ್ರಧಾನ ಉಸ್ತುವಾರಿಗಳನ್ನಾಗಿ ದ.ಕ. ಜಿಲ್ಲೆಗೆ ನಿಯೋಜಿಸಿದೆೆ. ಇವರ ಕೈಕೆಳಗೆ ನಾಲ್ವರು ಕೆಪಿಸಿಸಿ ಕಾರ್ಯದರ್ಶಿಗಳನ್ನು ಉಸ್ತುವಾರಿಗಳನ್ನು ನಿಯೋಜಿಸಲಾಗಿದ್ದು ಪ್ರತಿಯೊಬ್ಬರಿಗೂ ತಲಾ ಎರಡು ವಿಧಾನಸಭಾ ಕ್ಷೇತ್ರ ಹಂಚಿಕೆ ಮಾಡಿ ಬೂತ್‌ ಮಟ್ಟದಲ್ಲಿ ಸಂಘಟನೆ ಬಲಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ ಕೂಡ ಮುಂದಿನ ಚುನಾವಣೆಗೆ ಗೆಲುವಿನ ಕಾರ್ಯತಂತ್ರ ರೂಪಿಸುವುದಕ್ಕೆ ಆರಂಭಿಸಿದೆ.

ಮರಳಿ ಪಡೆಯಲು ಪಣ
ಕಾಂಗ್ರೆಸ್‌ ನಡೆ ಗಂಭೀರವಾಗಿ ಪರಿ ಗಣಿ ಸಿರುವ ಬಿಜೆಪಿ ಈ ಬಾರಿ ಕಳೆದ ಬಾರಿ ತಮ್ಮಿಂದ ತಪ್ಪಿ ಹೋಗಿದ್ದ ಶಾಸಕ ಸ್ಥಾನಗಳನ್ನು ಮರಳಿ ಪಡೆ ಯಲು ಪಣತೊಟ್ಟಿದೆ. ಬಿಜೆಪಿಗೆ ಕಾರ್ಯಕರ್ತರ ಪ್ರಬಲ ನೆಲೆ ಇದೆ. ಅವರಲ್ಲಿ ಹೊಸ ಹುರುಪು ಮೂಡಿಸಿ ಇನ್ನಷ್ಟು ಚುರುಕುಗೊಳಿಸಿ ತಮ್ಮ ಗುರಿ ಸಾಧನೆಯ ಒಂದು ಭಾಗವಾಗಿ ಅಮಿತ್‌ ಶಾ ಅವರ ದ.ಕ. ಜಿಲ್ಲಾ ಭೇಟಿ ಎಂದು ವಿಶ್ಲೇಷಿಸ ಲಾಗು ತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಮಂಗಳೂರು ಮತ್ತು ದ.ಕ. ಜಿಲ್ಲೆ ಮುಂದಿನ ದಿನ ಗಳಲ್ಲಿ ರಾಜಕೀಯ ಕದನಗಳ ಕಾರ್ಯಕ್ಷೇತ್ರಕ್ಕೆ ಒಂದು ಪ್ರಮುಖ ಕೇಂದ್ರವಾಗಿ ಮೂಡಿ ಬರುವ ಮುನ್ಸೂಚನೆ ಕಂಡುಬರುತ್ತಿದೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next