Advertisement

ಸಮಾನತೆಯೇ ಅಂಬೇಡ್ಕರ್‌ಗೆ ನೀಡುವ ಕಾಣಿಕೆ

04:11 PM Apr 15, 2023 | Team Udayavani |

ಯಳಂದೂರು: ಸಮಾಜವನ್ನು ಸಮಾನತೆಯಿಂದ ಕಾಣುವುದು, ಎಲ್ಲರೂ ಸ್ವತಂತ್ರರಾಗಿರುವುದು, ಶೋಷಿತರು, ಶೋಷಕರು ಪರಸ್ಪರ ಗೌರವದಿಂದ ವರ್ತಿಸುವುದೇ ಅಂಬೇಡ್ಕರ್‌ ಯುಗವಾಗಿದ್ದು ಇದನ್ನು ಪರಸ್ಪರರಿಗೆ ಹಂಚಿಕೆ ಮಾಡಬೇಕು ಎಂದು ಸರ್ಕಾರಿ ಪಬ್ಲಿಕ್‌ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ. ಆರ್‌.ಅಂಬೇಡ್ಕರ್‌ 132ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಸಮ ಸಮಾಜ ನಿರ್ಮಾಣವಾಗಲಿದೆ: ಅಂಬೇಡ್ಕರ್‌ ವಾದವನ್ನು ಇಂದು ಇಡೀ ವಿಶ್ವವೇ ಒಪ್ಪಿದೆ. ಇವರ ವಾದ ಅನುಸರಿ ಸುವ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋರಾಡುವ ಬದಲು, ಅನ್ಯಾಯ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದಿದ್ದೇ ಆದಲ್ಲಿ ನಮ್ಮ ದೇಶದಲ್ಲಿ ಸಮ ಸಮಾಜ ನಿರ್ಮಾಣವಾಗಲಿದೆ. ನಾವು ಸಹೋದರತ್ವ, ಐಕ್ಯತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡುವ ಗುರಿಯನ್ನು ಇಟ್ಟುಕೊಳ್ಳಬೇಕು. ಅಂಬೇಡ್ಕರ್‌ ಜೀವನ ಚರಿತ್ರೆಯೇ ನಮಗೆ ಪಾಠವಾಗಬೇಕು, ಶಿಕ್ಷಣವಂಚಿತರಾಗಿ ಯಾರೂ ಇರಬಾರದು ಎಲ್ಲಾ ಸಮಾಜವನ್ನು ಸರಿಸಮಾನವಾಗಿ ನಡೆಸಿಕೊಳ್ಳುವ ಕೆಲಸವಾಗಬೇಕು, ಇವರ ಪ್ರತಿಯೊಂದು ಆಲೋಚನೆಗಳೂ ವೈಜ್ಞಾನಿವಾಗಿತ್ತು. ಆದರೆ ನಾವು ಇನ್ನೂ ಕೆಲವೆಡೆ ಮೌಡ್ಯತೆಯನ್ನು ಆಚರಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇವೆ. ಇಂತಹ ಆಚರಣೆಗಳ ನಿರ್ಮೂಲನೆ ನಮ್ಮ ಕರ್ತವ್ಯವಾಗಿದೆ. ಜ್ಞಾನವನ್ನು ಬಿತ್ತರಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ನಮ್ಮ ಸಂವಿಧಾನ ಜಗತ್ತಿಗೆ ಮಾದರಿ: ತಹಶೀಲ್ದಾರ್‌ ಶ್ರೀಶೈಲ ಯಮನಪ್ಪ ತಳವಾರ್‌ ಮಾತನಾಡಿ, ನಮ್ಮ ದೇಶವನ್ನು ಕಟ್ಟುವುದರಲ್ಲಿ ಅಂಬೇಡ್ಕರ್‌ ಅಗ್ರಗಣ್ಯ ನಾಯಕರಾಗಿದ್ದಾರೆ. ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ತೊಲಗಬೇಕಿದೆ, ಶೋಷಿತರ ಸಬಲೀಕರಣ ವಾಗಬೇಕಿದೆ, ಶಿಕ್ಷಣ, ರಾಜಕೀಯ, ಉದ್ಯೋಗಗಳಲ್ಲಿ ಈ ಸಮಾಜ ಪ್ರಬಲವಾಗಬೇಕಿದೆ. ಅಂಬೇಡ್ಕರ್‌ ಜಯಂತಿ ಆಚರಣೆಯ ಜೊತೆಗೆ ಇವರನ್ನು ಅನುಕರಣೆ ಮಾಡುವ ಪರಿಪಾಠವನ್ನು ಕಲಿಯುವಂತಾಗಬೇಕು ಎಂದು ತಿಳಿಸಿದರು. ಇದಕ್ಕೂ ಮುಂಚೆ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದ ಮುಂಭಾಗದ ಅಂಬೇಡ್ಕರ್‌ ಪ್ರತಿಮೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಲಾರ್ಪಣೆ ಮಾಡಿ ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

ಶಾಸಕ ನಮನ: ಶಾಸಕ ಎನ್‌.ಮಹೇಶ್‌ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ತಮ್ಮ ಬೆಂಬಲಿಗರೊಂದಿಗೆ ಪಟ್ಟಣವೂ ಸೇರಿದಂತೆ ತಾಲೂಕಿನ ಮಾಂಬಳ್ಳಿ, ಹೊನ್ನೂರು ಗ್ರಾಮಗಳಲ್ಲಿ ರುವ ಅಂಬೇಡ್ಕರ್‌ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅಂಬೇಡ್ಕರ್‌ಗೆ ನಮಿಸಿದರು.

Advertisement

ವಿವಿಧೆಡೆ ಸಂಭ್ರಮದ ಅಂಬೇಡ್ಕರ್‌ ಜಯಂತಿ, ಬಸ್‌ಗಳಲ್ಲೂ ಅಂಬೇಡ್ಕರ್‌ಗೆ ಅಲಂಕಾರ: ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಯನ್ನು ಸಂಭ್ರಮ, ಸಡಗರಗಳಿಂದ ಆಚರಣೆ ಮಾಡಲಾಯಿತು. ಮಾಂಬಳ್ಳಿ, ಹೊನ್ನೂರು, ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಅಂಬೇಡ್ಕರ್‌ ಪ್ರತಿಮೆಗಳು, ಭಾವಚಿತ್ರಗಳಿಗೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತು. ಕೆಲವು ಖಾಸಗಿ ಬಸ್ಸುಗಳ ಮಾಲೀಕರು, ಚಾಲಕರು ತಮ್ಮ ಬಸ್ಸುಗಳನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕರಿಸಿ ಅಂಬೇಡ್ಕರ್‌ ಭಾವಚಿತ್ರವನ್ನಿಟ್ಟು ಜಯಂತಿ ಆಚರಣೆ ಮಾಡುವ ಮೂಲಕ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next