Advertisement

ಕಮಲಕ್ಕೆ ಕ್ಯಾಪ್ಟನ್ |ಇಂದು ಸಂಜೆ ಅಮಿತ್ ಶಾ-ಅಮರೀಂದರ್ ಭೇಟಿ?   

03:51 PM Sep 28, 2021 | Team Udayavani |

ನವದೆಹಲಿ:ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಿಜೆಪಿ ಪಕ್ಷ ಸೇರಲಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇಂದು(ಸೆ.28) ಸಂಜೆ ಅಮರೀಂದರ್ ಸಿಂಗ್ ಅವರು ದೆಹಲಿಗೆ ಭೇಟಿ ನೀಡುತ್ತಿರುವುದು ಈ ವದಂತಿಗೆ ಕಾರಣವಾಗಿದೆ.

Advertisement

ಒಳಜಗಳದ ಕಾರಣವಾಗಿ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ರಾಜೀನಾಮೆ ನೀಡಿದ್ದು ಅವರ ಮುಂದಿನ ನಡೆ ಏನು ಎಂಬುದು ಕುತೂಹಲವಾಗಿ ಉಳಿದಿದೆ. ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ್ದ ಅವರು ಕಾಂಗ್ರೆಸ್ ಪಕ್ಷದಿಂದ ಅವಮಾನಿತನಾದೆ ಎಂದು ಹೇಳಿದರು. ಹಾಗಾಗಿ ಆ ಪಕ್ಷದಲ್ಲಿ ಅವರು ಮುಂದುವರೆಯುವುದು ಅನುಮಾನ ಎನ್ನುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆ ಕ್ಯಾಪ್ಟನ್ ಅವರ ಮುಂದಿನ ರಾಜಕೀಯ ನಡೆ ಏನಿರಬಹುದು ಎಂದು ಎಲ್ಲರೂ ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ. ಇದರ ನಡುವೆ ಇಂದು ಅವರು ನವದೆಹಲಿಗೆ ತೆರಳುತ್ತಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

ವದಂತಿಗೆ ತೆರೆ :

ಇನ್ನು ಅಮರೀಂದರ್ ದೆಹಲಿಗೆ ಭೇಟಿ ರಾಜಕೀಯ ಸ್ವರೂಪ ಪಡೆದಿದ್ದರಿಂದ ಈ ಬಗ್ಗೆ ಅವರ ಮಾಧ್ಯಮ ಸಲಹೆಗಾರ ರವೀನ ತುಕ್ರಾಲ್ ಸ್ಪಷ್ಟನೆ ನೀಡಿದ್ದಾರೆ. ಇದು ಖಾಸಗಿ ಭೇಟಿಯಾಗಿದ್ದು, ನವದೆಹಲಿಯಲ್ಲಿರುವ ಕೆಲವು ತಮ್ಮ ಸ್ನೇಹಿತರನ್ನು ಭೇಟಿ ಮಾಡಲಿದ್ದಾರಷ್ಟೆ ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next