Advertisement

Moodabidri ಇಂದಿನಿಂದ ಸಪ್ತಮೇಳದೊಂದಿಗೆ ಆಳ್ವಾಸ್‌ ವಿರಾಸತ್‌ ವೈಭವ

12:08 AM Dec 14, 2023 | Team Udayavani |

ಮೂಡುಬಿದಿರೆ: ವರ್ಷಕ್ಕೊಮ್ಮೆ ಸಂಸ್ಕೃತಿ ವೈವಿಧ್ಯದ ಸೊಬಗು ಸೂಸುವ ಜತೆಗೆ ರಾಷ್ಟ್ರದ ಪರಂಪರೆಯ ಶ್ರೀಮಂತಿಕೆಯ ಅನನ್ಯತೆಯೊಂದಿಗೆ ಸಾಂಸ್ಕೃತಿಕ ಮನಸ್ಸುಗಳನ್ನು ತನ್ನತ್ತ ಸೆಳೆಯುವ ಮೂಡುಬಿದಿರೆಯ ವಿದ್ಯಾಗಿರಿ ಮತ್ತೆ “ಆಳ್ವಾಸ್‌ ವಿರಾಸತ್‌-2023’ರ ತಳಿರು ತೋರಣದೊಂದಿಗೆ ಸಜ್ಜಾಗಿದೆ.

Advertisement

29ನೇ ವಿರಾಸತ್‌ ಡಿ. 14ರಂದು ಚಾಲನೆ ಪಡೆದು ಡಿ. 17ರ ವರೆಗೆ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂದಿರದಲ್ಲಿ ನಡೆಯಲಿವೆ.

ಪ್ರತೀ ಸಂಜೆ ವೇಳೆಗೆ ಸಾಂಸ್ಕೃತಿಕ ರಸದೌತಣ ನೀಡಲು ವಿರಾಸತ್‌ ವೇದಿಕೆ ಸಜ್ಜಾಗಿದ್ದರೆ, ಸಪ್ತ ಮೇಳಗಳು ದಿನವಿಡೀ ನಡೆದು ಯಾವುದೇ ಆಸಕ್ತಿ ಇರುವವರಿಗೂ ಮನಮುದಗೊಳಿಸಲಿವೆ. ದೀಪಾಲಂಕಾರ, ಕಲಾಕೃತಿಗಳು, ಪುಷ್ಪ-ಫಲಗಳು ಕಣ್ಮನ ಸೆಳೆಯುತ್ತಿವೆ.

ವಿರಾಸತ್‌ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿವೆ. ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರ್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು, ಪ್ರಾದೇಶಿಕ ಕಲಾಪ್ರಕಾರಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಪ್ರಾಂಗಣದುದ್ದಕ್ಕೂ ಹೆಜ್ಜೆ ಹಾಕಿದಂತೆ ಆನೆ, ಜಿರಾಫೆ, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಸಂಗೊಳ್ಳಿ ರಾಯಣ್ಣ, ಡೊಳ್ಳು ಕುಣಿತ, ಅಂಬೇಡ್ಕರ್‌, ವೀರಗಾಸೆ ಕಥಕ್ಕಳಿ ಪ್ರತಿಮೆಗಳನ್ನು ಕಾಣಬಹುದು.

ಕಾರ್ಟೂನ್ ಪಾತ್ರಧಾರಿಗಳಾದ ಚೋಟಾ ಭೀಮ್‌, ರಾಜು, ಕಾಲಿಯಾ, ಡೊನಾಲ್ಡ್‌ ಡಕ್‌, ಮಿಕಿ, ಜಗ್ಗು , ಇಂದುಮತಿ, ಡೋಲು ಬೋಲು ಪುಟಾಣಿಗಳಿಗೆ ಪುಳಕ ನೀಡಲಿದ್ದಾರೆ.

Advertisement

ಈ ಬಾರಿ ಉದ್ಘಾಟನೆಗೆ ಮುನ್ನ ನಡೆಯುವ ಸಾಂಸ್ಕೃತಿಕ ಮೆರವಣಿಗೆ ವೇಳೆ ಅಂತಿಮ ಘಟ್ಟದಲ್ಲಿ ಬಲದಿಂದ ಎಡಕ್ಕೆ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ. ಈ ರಥದಲ್ಲಿ ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ದ್ಯೋತಕವಾದ ಮಹಾಲಕ್ಷ್ಮೀ ಹಾಗೂ ವಿದ್ಯಾದೇವತೆ ಸರಸ್ವತಿ ಇರಲಿದ್ದಾರೆ. ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ.

ಫಲಪುಷ್ಪ
ವಿರಾಸತ್‌ ಆವರಣ ಮದುವಣ ಗಿತ್ತಿಯಂತೆ ಹೂಗಳಿಂದ ಸಿಂಗರಿಸಿ ಕೊಂಡಿದೆ. ಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ಹೂಗಿಡಗಳಿಂದ ಆವರಣವನ್ನು ಅಲಂಕರಿಸಲಾಗಿದೆ.

ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ “ಪ್ರದರ್ಶನ ಮತ್ತು ಮಾರಾಟ ಮೇಳವು ವಿಶೇಷ ಆಕರ್ಷಣೆಯಾಗಿದೆ.

ಸಪ್ತಮೇಳಗಳು
ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಹಂತಗಳ ಸಮಗ್ರ ಚಿತ್ರಣ, ಪ್ರದರ್ಶನ, ಮಾರಾಟ, ಪ್ರಾತ್ಯಕ್ಷಿಕೆಯ ಅನುಭವನ್ನು ಕೃಷಿ ಮೇಳ ನೀಡಲಿದೆ. ಆಹಾರ ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಫಾಸ್ಟ್‌ ಫುಡ್ ತನಕದ ಸಸ್ಯಾಹಾರ ಹಾಗೂ ಮಾಂಸಾಹಾರ ವೈವಿಧ್ಯ ಇವೆ. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.

ಸುಮಾರು 200ಕ್ಕೂ ಹೆಚ್ಚು ದೇಶ ವಿದೇಶದ ಕಲಾಕಾರರ 500ಕ್ಕೂ ಅಧಿಕ ಚಿತ್ರಕಲಾಕೃತಿಗಳು ಪ್ರದರ್ಶನಕ್ಕಿವೆ. ವನ್ಯಜೀವಿ ಛಾಯಾಚಿತ್ರದ ಸ್ಪರ್ಧೆ ಈಗಾಗಲೇ ನಡೆದಿದ್ದು, ಪ್ರದರ್ಶನಕ್ಕೆ ಬಂದ ಫೋಟೋಗಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಛಾಯಚಿತ್ರಗಳ ಪ್ರದರ್ಶನವಿದೆ. 2 ಎಕರೆ ಪ್ರದೇಶದಲ್ಲಿ ಸ್ಕೌಟ್‌-ಗೈಡ್‌ ಕೇಂದ್ರವು ರೂಪುಗೊಂಡಿದೆ.

ಇಂದು ಸಂಜೆ ಉದ್ಘಾಟನೆ
ಡಿ. 14ರಂದು ಸಂಜೆ 5.30ಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರಿಗೆ ಗೌರವ ರಕ್ಷೆ ನಡೆಯಲಿದೆ. ಬಳಿಕ 5.45ಕ್ಕೆ ರಾಜ್ಯಪಾಲರು ವಿರಾಸತ್‌ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆಯುವ ಪ್ರದರ್ಶನ ಮತ್ತು ಮಾರಾಟ ಮಹಾಮೇಳಗಳ ಉದ್ಘಾಟನೆ ನಡೆಯಲಿದೆ. ಕೃಷಿಸಿರಿ ವೇದಿಕೆ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲ ಪುಷ್ಪ ಮೇಳ ಮತ್ತು ಸ್ಕೌಟ್ಸ್‌ ಗೈಡ್ಸ್‌ ಸಾಹಸಮಯ ಚಟುವಟಿಕೆಗಳ ಕೇಂದ್ರದ ಉದ್ಘಾಟನೆಯನ್ನು ಭಾರತ್‌ ಸ್ಕೌಟ್ಸ್‌ ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ನೆರವೇರಿಸಿದರೆ, ಚಿತ್ರಕಲಾ ಮೇಳ, ಕಲಾಕೃತಿ, ಛಾಯಾಚಿತ್ರ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನಗಳ ಉದ್ಘಾಟನೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್‌ ನೆರವೇರಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next