Advertisement

ಸಾಲ ವಿತರಣೆಯಲ್ಲಿ ತಾರತಮ್ಯ ಮಾಡಿಲ್ಲ

05:38 PM Oct 23, 2021 | Team Udayavani |

ಚಿಕ್ಕಬಳ್ಳಾಪುರ: ಪೂರಕ ದಾಖಲೆ ಒದಗಿಸಿ ಸಾಲ ಮಂಜೂರು ಮಾಡಲು ಅನಗತ್ಯ ವಿಳಂಬ ಮಾಡಿ ದ್ದನ್ನು ಸಾಬೀತುಪಡಿಸಿದರೆ ಅಧ್ಯಕ್ಷ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರಿಯುವುದಿಲ್ಲ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸವಾಲು ಹಾಕಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಬೆಳೆಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಮಂಜೂರು ಮಾಡಿರುವ ಸಾಲದ ಕುರಿತು ದಾಖಲೆಗಳನ್ನು ಒದಗಿಸಿ, ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿ ಪವಿತ್ರ ಸ್ಥಾನಕ್ಕೆ ಧಕ್ಕೆ ಆಗುವ ಕೆಲಸ ಮಾಡಿಲ್ಲ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸು ತ್ತಿದ್ದೇನೆ ಎಂದು ಹೇಳಿದರು.

ಜೈಲಿಗೆ ಬೇಕಾದ್ರೂ ಕಳುಹಿಸಲಿ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರ ಆರೋಪಗಳಲ್ಲಿ ಯಾವುದೇ ಹುರಳಿಲ್ಲ, ಅದೆಲ್ಲಾ ನಿರಾಧಾರ ಅವರಿಗೆ ಬಹುಶಃ ತಪ್ಪುಗ್ರಹಿಕೆಯಾಗಿದೆ ಅಥವಾ ಅವರನ್ನು ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಳ್ಳುಹೇಳಿ ದಿಕ್ಕುತಪ್ಪಿಸಿದ್ದಾರೆ.

ಬುದ್ದಿವಂತರಾಗಿರುವ ಸಚಿವರು ಯಾವ ಕ್ಷಣದಲ್ಲಿ ಬೇಕಾದರೂ ಬ್ಯಾಂಕಿನಲ್ಲಿ ನೀಡುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು. ಬ್ಯಾಂಕಿನಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಸರ್ಕಾರದಿಂದ ತನಿಖೆ ನಡೆಸಲಿ ಲೋಪದೋಷವಾಗಿದ್ದರೇ ಜೈಲು ಅಥವಾ ಎಲ್ಲಿಗೆ ಬೇಕಾದರೂ ಕಳುಹಿಸಲಿ ಎಂದು ಸವಾಲು ಹಾಕಿದರು.

ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ಹಾಗೂ ಕೆಜಿ ಎಫ್‌ ವಿಧಾನಸಭಾ ಕ್ಷೇತ್ರಕ್ಕೆ ತಲಾ 500 ಕೋಟಿ ರೂ. ಸಾಲ ಸೌಲಭ್ಯವನ್ನು ನೀಡಿದ್ದೇನೆ ಎಂಬ ಜಿಲ್ಲಾ ಉಸ್ತು ವಾರಿ ಸಚಿವರ ಆರೋಪ ಸತ್ಯಕ್ಕೆ ದೂರವಾಗಿದ್ದು ಪೂರಕ ದಾಖಲೆಗಳನ್ನು ಹೊಂದಿರುವ ಸಹಕಾರ ಸಂಘಗಳ ಮೂಲಕ ಬರುವ ಸಾಲದ ಅರ್ಜಿ ಗಳನ್ನು ತ್ವರಿತವಾಗಿ ಅಂಗೀಕರಿಸಿ ಸಾಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

Advertisement

ರೈತ ಸಹಕಾರದಿಂದ ಸಾಧ್ಯ: ಕಳೆದ 8 ವರ್ಷಗಳ ಹಿಂದೆ ಕೇವಲ 45 ಕೋಟಿ ರೂ. ವಹಿವಾಟು ನಡೆಯು ತ್ತಿದ್ದ ಡಿಸಿಸಿ ಬ್ಯಾಂಕಿನಲ್ಲಿ 1200 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಯುತ್ತಿದೆ. ಉಭಯ ಜಿಲ್ಲೆಗಳ ಶಾಸ ಕರು, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇ ಶಕರು, ಮಹಿಳೆಯರು ಮತ್ತು ರೈತರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ವಿವರಿಸಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಅನಿಲ್‌ಕುಮಾರ್‌ ಮಾತನಾಡಿದರು.

ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಮೋಹನ್‌ರೆಡ್ಡಿ, ಜಿಲ್ಲಾ ಸಹಕಾರ ಯೂನಿ ಯನ್‌ನ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಚ್‌.ವಿ.ನಾಗರಾಜ್‌, ಗೌರಿಬಿದನೂರು ನಿರ್ದೇಶಕ ಹನುಮಂತರೆಡ್ಡಿ, ಬಂಗಾರಪೇಟೆ ಗೋವಿಂದರಾಜು, ಆರ್‌.ದಯಾನಂದ್‌, ಎಲ್‌.ವಿ.ಸುಧಾಕರ್‌, ಶ್ರೀನಿ ವಾಸಪುರ ವೆಂಕಟರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ:- ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ

ರಮೇಶ್‌ ಕುಮಾರ್‌ ಹಸ್ತಕ್ಷೇಪ ಮಾಡಿಲ್ಲ-

ಡಿಸಿಸಿ ಬ್ಯಾಂಕಿನಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಹಾಗೂ ಮಾಜಿ ಡೆಪ್ಯುಟಿ ಸ್ಪೀಕರ್‌ ಎನ್‌.ಎಚ್‌.ಶಿವಶಂಕರ್‌ರೆಡ್ಡಿ ಅವರು ಹಸ್ತ ಕ್ಷೇಪ ಮಾಡುತ್ತಿದ್ದಾರೆ ರಮೇಶ್‌ಕುಮಾರ್‌ ರಿಂಗ್‌ ಮಾಸ್ಟರ್‌ ಆಗಿದ್ದಾರೆ ಎಂಬ ಸಚಿವರ ಆರೋಪ ಹಸಿ ಸುಳ್ಳಿನಿಂದ ಕೂಡಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಮಾಜಿ ಸ್ಪೀಕರ್‌ ಹಾಗೂ ಮಾಜಿ ಡೆಪ್ಯೂಟಿ ಸ್ಪೀಕರ್‌ ಸಹಿತ ಅನೇಕ ಶಾಸಕರು ಬ್ಯಾಂಕಿನ ಅಭಿವೃದ್ಧಿ ವಿಚಾರದಲ್ಲಿ ಸಲಹೆ, ಸೂಚನೆ ನೀಡಿ ಸಹಕರಿಸುತ್ತಿ ದ್ದಾರೆ. ಜೊತೆಗೆ ರಮೇಶ್‌ಕುಮಾರ್‌ ಅವರು ಬ್ಯಾಂಕಿನ ಹಿತಚಿಂತಕರಾಗಿದ್ದಾರೆ ಹೊರತು, ಆಡಳಿತ ದಲ್ಲಿ ಯಾವುದೇ ರೀತಿಯ ಹಸ್ತಾಕ್ಷೇಪ ಮಾಡುತ್ತಿಲ್ಲ ಅಂತಹ ಪರಿಸ್ಥಿತಿ ಬ್ಯಾಂಕಿಗೆ ಬಂದಿಲ್ಲ ಎಂದು ತಿಳಿಸಿದರು.

ಬ್ಯಾಂಕಿನ ಜವಾನ: ಸಚಿವರು ಬ್ಯಾಂಕಿಗೆ ಸಂಬಂಧಿ ಸಿದ ಯಾವುದೇ ವಿಚಾರ ಅಥವಾ ಮಾಹಿತಿ ಪಡೆದು ಕೊಳ್ಳಲು ಮುಕ್ತ ಅವಕಾಶಗಳಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಹೇಳುವ ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಹನುಮೇಗೌಡ, ಬ್ಯಾಂಕಿನ ವ್ಯವ ಸ್ಥಾಪಕ ನಿರ್ದೇಶಕ ವೆಂಕಟೇಶ್‌ ಅವರ ಮಾತುಗಳಿಗೆ ಮರುಳಾಗದೆ, ನೈಜ ಸತ್ಯಾಂಶ ಅರಿತುಕೊಳ್ಳಬೇಕು, ಜನರ ಜೀವನಾಡಿ ಡಿಸಿಸಿ ಬ್ಯಾಂಕಿಗೆ ನಾನು ಜವಾನನಾಗಿ ಸೇವೆ ಸಲ್ಲಿಸುತ್ತಿದ್ದೇನೆ ವಿನಃ, ಅ ಕಾರವನ್ನು ನಡೆಸುತ್ತಿಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ನಮ್ಮಪ್ಪನ ಆಸ್ತಿ ಯಿಂದ ಸಾಲ ಮಂಜೂರು ಮಾಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ಬ್ಯಾಂಕ್‌ ಯಾರಪ್ಪನ ಆಸ್ತಿಯೂ ಅಲ್ಲ, ಅಧಿ ಕಾರವು ಶಾಶ್ವತವಲ್ಲ, ಇವತ್ತು ನಾನು ಅಧ್ಯಕ್ಷನಾಗಿದ್ದೇನೆ, ಮುಂದೆ ಯಾರು ಬೇಕಾದರೂ ಅಧ್ಯಕ್ಷರಾಗಬಹುದು. ಅವಳಿ ಜಿಲ್ಲೆಯ ಸಂಸ್ಥೆಗೆ ಕಳಂಕ ತರುವ ಕೆಲಸ ಯಾರೂ ಮಾಡಬಾರದೆಂದು ಮನವಿ ಮಾಡಿದರು.

“ಜಿಲ್ಲಾ ಉಸ್ತುವಾರಿ ಸಚಿವರಿಗೆ ದಿಕ್ಕುತಪ್ಪಿಸುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಸಾಲ  ಸೌಲಭ್ಯ ಮಂಜೂರು ಮಾಡಲು ಕೆಲ ನಿಯಮಗಳ ಪಾಲನೆ ಸಹ ಆಗಬೇಕಾಗಿದೆ. ಬ್ಯಾಂಕಿನಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇದೆ. ಸಚಿವರು ಬುದ್ಧಿವಂತರಾಗಿದ್ದಾರೆ. ಹೇಳಿದವರ ಮಾತು ಕೇಳಬಾರದು.- ರೂಪಕಲಾ, ಕೆಜಿಎಫ್‌ ಶಾಸಕಿ.

ಬ್ಯಾಂಕ್‌ಹಿತದೃಷ್ಟಿಯಿಂದ ಕೋರ್ಟ್‌ನಿಂದ ತಡೆಯಾಜ್ಞೆ

ರಾಜ್ಯದಲ್ಲಿ ನಡೆದ ಸಿ.ಡಿ. ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯವಾಗಿ ತೇಜೋವಧೆ ಆಗದಿರಲು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅದೇ ರೀತಿ ಬ್ಯಾಂಕಿನ ಹಿತದೃಷ್ಟಿಯಿಂದ ತನಿಖೆಗೆ ತಡೆಯಾಜ್ಞೆ ತಂದಿದ್ದೇವೆ ವಿನಃ, ಅದರಲ್ಲಿ ಯಾವುದೇ ರೀತಿಯ ದುರುದ್ದೇಶ ಇಲ್ಲ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಸ್ಪಷ್ಟಪಡಿಸಿದರು.

ಒಂದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಜಿಎಫ್‌ನ ಮಾಜಿ ಶಾಸಕ ವೈ.ಸಂಪಂಗಿ, ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ನಿರ್ದೇಶಕ ಹನುಮೇಗೌಡ ಅವರು ಪದೇ ಪದೆ ಸುಳ್ಳು ಆರೋಪ ಮಾಡುವ ಕಾಯಕ ರೂಢಿಸಿಕೊಂಡಿದ್ದಾರೆ.

ಬ್ಯಾಂಕಿನ ಕೆಲಸ ಕಾರ್ಯ ಮಾಡಲು ಆಗುತ್ತಿರುವ ಅಡಚಣೆಯಿಂದ ತಪ್ಪಿಸಲು ತಡೆಯಾಜ್ಞೆ ತಂದಿದ್ದೇವೆ ಎಂದು ವಿವರಿಸಿದರು. ಈಗಾಗಲೇ ಅನೇಕ ಬಾರಿ ಸಹಕಾರಿ ಇಲಾಖೆಯ ಅ ಧಿಕಾರಿಗಳು ತನಿಖೆ ನಡೆಸಿ ಕ್ಲೀನ್‌ಚಿಟ್‌ ನೀಡಲಾಗಿದೆ. ಬ್ಯಾಂಕಿನ ಆಡಳಿತ ವ್ಯವಸ್ಥೆಗೆ ಸಂಬಂಧಿ ಸಿದಂತೆ ಒಂದೇ ಬಾರಿಗೆ ತನಿಖೆ ನಡೆಸಿದರೆ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್‌ ಅವರಿಗೆ ಸವಾಲು ಹಾಕಿದರು.

500 ಕೋಟಿ ರೂ. ಸಾಲ ನೀಡಲು ಸಿದ್ಧ-

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ 500 ಕೋಟಿ ರೂ. ಸಾಲವನ್ನು ನೀಡಲು ಡಿಸಿಸಿ ಬ್ಯಾಂಕ್‌ ಸಿದ್ಧವಾಗಿದೆ. ಸಹಕಾರ ಸಂಸ್ಥೆಗಳಿಂದ ಪೂರಕ ದಾಖಲೆಗಳನ್ನು ಒದಗಿಸಿ ಸೌಲಭ್ಯ ಪಡೆದುಕೊಳ್ಳಲಿ ಜೊತೆಗೆ ಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಸಹಕಾರ ನೀಡಲಿ.

ವಿವಿಧ ತಾಲೂಕಿಗೆ ನೀಡಿದ ಸಾಲ(ಲಕ್ಷ ರೂ.ನಲ್ಲಿ)

ಕೋಲಾರ ತಾಲೂಕು 14,943.64 ರೂ., ಚಿಂತಾಮಣಿ ತಾಲೂಕು 14,752.68 ರೂ., ಮುಳಬಾಗಿಲು 10,003.55 ರೂ., ಶಿಡ್ಲಘಟ್ಟ 9,118.68 ರೂ., ಬಾಗೇಪಲ್ಲಿ 8,905.05 ರೂ., ಗೌರಿಬಿದನೂರು 8,472.38 ರೂ., ಬಂಗಾರಪೇಟೆ 8,022.17 ರೂ., ಕೆಜಿಎಫ್‌ 6,783.49 ರೂ., ಮಾಲೂರು 6,774.85 ರೂಪಾಯಿ, ಶ್ರೀನಿವಾಸಪುರ 6,380.74 ರೂಪಾಯಿ, ಚಿಕ್ಕಬಳ್ಳಾಪುರ 3,776.28 ರೂಪಾಯಿ, ಗುಡಿಬಂಡೆ 1,594.72 ರೂಪಾಯಿ, ಡೇರಿ ಶಾಖೆ 53.51 ಲಕ್ಷ ರೂ. ಸಹಿತ 99,581.73 ರೂ. ಸಾಲವನ್ನು ರೈತರಿಗೆ ಬೆಳೆ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಂಕಿ ಅಂಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next