Advertisement

ಎಲ್ಲ ದಿನಗಳು ಮಕ್ಕಳ ದಿನಗಳೇ! 

06:40 AM Nov 12, 2017 | Harsha Rao |

ಈ ಕೆಳಗಿನ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ.
“ಈಗಿನ ಮಕ್ಕಳು ತುಂಬಾ ಚುರುಕು’
“ಮೊಬೈಲ್‌ನ ಎಲ್ಲ ಸಂಗತಿ ಇಂದಿನ ಮಕ್ಕಳಿಗೆ ತಿಳಿದಿದೆ’
“ಮೊಬೈಲ್‌ ಒಂದಿದ್ದರೆ ಈಗಿನ ಮಕ್ಕಳಿಗೆ ಉಳಿದ ಸಂಗತಿಯೇ ಇಲ್ಲ’
“ಈಗಿನ ಮಕ್ಕಳಿಗೆ ಬಾಲ್ಯವೇ ಇಲ್ಲ. ಹುಟ್ಟುತ್ತಲೇ ದೊಡ್ಡವರಾಗುತ್ತಾರೆ’
“ಈಗಿನ ಮಕ್ಕಳಿಗೆ ಸಂಸ್ಕೃತಿಯೇ ಇಲ್ಲ. ಹಿಂದಿನ ಕಾಲದ ಹಾಗೆ ಈಗ ಇಲ್ಲ’

Advertisement

ನಾವು ಎಂದರೆ “ದೊಡ್ಡವರು’ ಮಾತನಾಡುತ್ತಿದ್ದೇವೆ ಎಂದು ಭಾವಿಸುತ್ತ ಮುಂದಿನ ವಿಚಾರಗಳನ್ನು ಗಮನಿಸೋಣ.
ನಾವು ಕೂಡ ಒಂದು ಕಾಲದಲ್ಲಿ ಮಕ್ಕಳಾಗಿದ್ದೆವು ಮತ್ತು ಅಂದಿನ ನಮ್ಮ ಹಿರಿಯರು ನಮ್ಮ ಬಗ್ಗೆ ಇಂಥದೇ ಡೈಲಾಗ್‌ಗಳನ್ನು ಹೇಳುತ್ತಿದ್ದರು ಎಂದು ಒಮ್ಮೆ ಕಲ್ಪಿಸಿಕೊಂಡು ಮೇಲಿನ ವಾಕ್ಯಗಳನ್ನು ಮತ್ತೂಮ್ಮೆ ಓದಬೇಕು!

ಪ್ರತಿಯೊಂದು ಸಂಗತಿಯೂ ದೇಶ ಮತ್ತು ಕಾಲಗಳನ್ನು ಮೀರಿ ನಡೆಯುವ ಹಾಗಿಲ್ಲ. ಇವೆರಡು ಸಂಗತಿಗಳ ಪ್ರಭಾವಕ್ಕೆ ಒಳಗಾಗಿಯೇ ಪ್ರತಿಯೊಬ್ಬನೂ ಜೀವನವನ್ನು ನಡೆಸಬೇಕಾಗುತ್ತದೆ. ಅನ್ನವನ್ನು ತಿನ್ನುವ ಪ್ರದೇಶದವರಿಗೆ ಜೋಳದ ರೊಟ್ಟಿ ಇಷ್ಟವಾಗುವುದಿಲ್ಲ. ಕರಗ ನೃತ್ಯದ ಊರಿನವರು ಕರಗವನ್ನೇ ಇಷ್ಟಪಡುತ್ತಾರೆಯೇ ಹೊರತು ಹೋಳಿ ನೃತ್ಯವನ್ನಲ್ಲ. ಯಾವ ದೇಶಕ್ಕೆ ಹೋದರೂ ಒಮ್ಮೆ ತನ್ನ ದೇಶವೇ ಎಷ್ಟೊಂದು ಒಳ್ಳೆಯದಿತ್ತಲ್ಲ ಅಂತ ಅನ್ನಿಸುವುದು ಕೂಡಾ ಇದೇ ಕಾರಣಕ್ಕಾಗಿ.

“ದೇಶ’ದ ಪ್ರಭಾವಕ್ಕೆ ಹೊರತಾಗಿ ಯಾರೂ ತನ್ನ ಜೀವನ ವಿಧಾನ ಮತ್ತು ಯೋಚನಾ ಕ್ರಮಗಳನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲವೊ ಹಾಗೆಯೇ ಅದೇ “ದೇಶ’ ಎಲ್ಲರ ಮೇಲೆ ಉಂಟುಮಾಡುವ ಪರಿಣಾಮವೂ ಒಂದೇ ಅಲ್ಲ. ಒಂದು ಪ್ರದೇಶದ ಜನಪದ ನೃತ್ಯವನ್ನು ಅದೇ ಪ್ರದೇಶದ ಒಂದನೆಯ ಮತ್ತು ಎರಡನೆಯ ಪೀಳಿಗೆಯವರು ಗ್ರಹಿಸುವ ಕ್ರಮಗಳು ಬೇರೆ ಬೇರೆ. ಕೆಲವರಿಗೆ ಇಷ್ಟವಾಗಬಹುದು, ಇಷ್ಟವಾಗದಿರಬಹುದು. ಹಿರಿಯರಿಗೆ ಇಷ್ಟವಾಗುವಂಥದ್ದು ಮಕ್ಕಳಿಗೆ ಇಷ್ಟವಾಗಬೇಕು ಎಂಬ ಕಡ್ಡಾಯವೇನೂ ಇಲ್ಲ.

ಎರಡನೆಯದಾಗಿ, ಕಾಲದ ವಿಚಾರ. ಎಲ್ಲರೂ ಅವರವರ ಕಾಲದಲ್ಲಿ ಬದುಕುತ್ತಾರೆ. 2017ನೆಯ ಇಸವಿಯಲ್ಲಿ ಇದ್ದುಕೊಂಡು 1950ನೆಯ ಇಸವಿಯಲ್ಲಿ ಬದುಕುತ್ತೇನೆಂದು ಹೇಳಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಹಿರಿಯರಿಗೆ ಬಾಲ್ಯದ ಅಥವಾ ಗತಕಾಲದ ಅನುಭವಗಳು ಗಾಢವಾಗಿ ಕಾಡುವುದರಿಂದಾಗಿ ಅವರು ವರ್ತಮಾನಕ್ಕಿಂತ ಭೂತಕಾಲದ ದಿನಗಳ ಬಗ್ಗೆಯೇ ಹೆಚ್ಚಿನ ಹಪಹಪಿಕೆಯನ್ನು ಹೊಂದಿರುತ್ತಾರೆ. ಈಗಿನ ಕ್ರಿಕೆಟ್‌ ಆಟ ಅವರಿಗೆ ಇಷ್ಟವಾಗಲಿಕ್ಕಿಲ್ಲ ; ಲಗೋರಿ ಆಟವೇ ಎಷ್ಟೊಂದು ಚೆಂದ ಅನ್ನಿಸಬಹುದು! ಹಾಗಾಗಿ, “ಗತಕಾಲದ ಜೊತೆಗೆ ತೀವ್ರವಾಗಿ’ ಬದುಕುವವರು ಮಕ್ಕಳು; ಹಿರಿಯರಲ್ಲ ! ಯಾಕೆಂದರೆ, ಅವರು ಈ ಹೊತ್ತಿನ ಅನುಭವಕ್ಕೆ ಹೊಸದಾಗಿ ತೆರೆಯುತ್ತಿರುವವರು ಮತ್ತು ಅದನ್ನೇ ಜೀವನದ ಭಾಗವಾಗಿ ಸ್ವೀಕರಿಸುತ್ತಿರುವವರು.

Advertisement

ಮಾತು ಮತ್ತು ಅರ್ಥಗಳು “ಪಾರ್ವತಿ-ಪರಮೇಶ್ವರ’ರಂತೆ ಎಂದು ಹೇಳುವಾಗ ಕಾಳಿದಾಸ ಕವಿಯ ರಘುವಂಶ ಮನಸಿಗೆ ಬರುತ್ತದೆ. ನೂರಾರು ವರ್ಷಗಳ ಬಳಿಕವೂ ಆ ಮಾತೇಕೆ ಈಗಲೂ ರೋಮಾಂಚವನ್ನುಂಟುಮಾಡುತ್ತದೆ.

ಕಾಲ ಮತ್ತು ದೇಶಗಳು ಎಲ್ಲವನ್ನೂ ಅಳಿಸಿ ಹಾಕುತ್ತವೆ ಎಂದಾದಲ್ಲಿ ಕಾಳಿದಾಸನೇಕೆ ಜನಮಾನಸದಿಂದ ಮರೆಯಾಗಿಲ್ಲ? “ಯೂ ಬ್ರೂಟಸ್‌!’ ಎಂಬ ಡೈಲಾಗು ಷೇಕ್ಸ್‌ಪಿಯರ್‌ನ “ಜೂಲಿಯಸ್‌ ಸೀಸರ್‌’ನನ್ನು ಕಣ್ಣೆದುರು ತರುತ್ತದೆ. ಎಜ್ರಾ ಪೌಂಡ್‌, ಎಲಿಯೆಟ್‌ನಂಥ ಎಂತೆಂಥ ಕವಿಗಳು “ಪರಂಪರೆ’ಯನ್ನು ಮೆಲುದನಿದಲ್ಲಿ ನಿರಾಕರಿಸುವ ತಾತ್ತಿ$Ìಕತೆಯಲ್ಲಿ ಬರೆದರು. ಆದರೂ ಷೇಕ್ಸ್‌ಪಿಯರ್‌ನನ್ನು ವರ್ತಮಾನದಿಂದ ಅಳಿಸಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಹೊಸದೊಂದು ಸರಣಿ ಬರಹಗಳನ್ನು ಗಮನಿಸಿದೆ. ಅವುಗಳೆಲ್ಲ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿರುವಂಥಾದ್ದು. ಬಹುಶಃ ಇದನ್ನು ಓದಿದವರೆಲ್ಲರೂ ಒಮ್ಮೆಯಾದರೂ ಅಭಿನವಗುಪ್ತನ ಕೃತಿಯನ್ನು ತೆರೆದು ನೋಡಬೇಕೆಂದು ಬಯಸದೇ ಇರಲಾರರು.

ದೀರ್ಘ‌ ನೆರವಲ್‌ಗ‌ಳಿಂದ ಕೂಡಿದ ಒಂದು ಕೀರ್ತನೆಯನ್ನು ಕರ್ನಾಟಕ ಸಂಗೀತದ ಶಾಸ್ತ್ರಬದ್ಧತೆಯಲ್ಲಿ ಹಾಡಲು ಎರಡು ಗಂಟೆಗಳಾದರೂ ಬೇಕು. ಆದರೆ, ರೇಡಿಯೋ ಸಂಗೀತ ಅದನ್ನು ಹತ್ತು ನಿಮಿಷದ ವ್ಯಾಪ್ತಿಗೆ ಇಳಿಸಲಿಲ್ಲವೆ? ಇದರಿಂದ ಸಂಗೀತದ ಸ್ವರೂಪ ಬದಲಾಯಿತು ನಿಜ, ಆದರೆ ಸಂಗೀತ ಹೆಚ್ಚು ಜನಗಳನ್ನು ತಲುಪಲು ಸಾಧ್ಯವಾಯಿತು. ಕಂಠಸ್ಥವಾಗಿದ್ದ ವೇದಗಳು ಯಾವಾಗ ಅಕ್ಷರ ರೂಪಕ್ಕೆ ಬಂದವೊ ಆಗ ಅದು ಎಲ್ಲರಿಗೂ ಲಭ್ಯವಾಯಿತು.

ಗ್ರಂಥಸ್ಥವಾಗಿದ್ದ ಕೃತಿಗಳು ಕಂಪ್ಯೂಟರ್‌ಗೆ ಬಂದವು. ಕಂಪ್ಯೂಟರ್‌ನಲ್ಲಿ ಇಂಟರ್‌ನೆಟ್‌ ಮೂಲಕ ಎಲ್ಲರಿಗೂ ಸುಲಭದಲ್ಲಿ ಲಭ್ಯವಾಗುವಂತಾಯಿತು.

ನಮ್ಮ ಮಕ್ಕಳು ಇಂಥ ಕಾಲದಲ್ಲಿ ಕಲಿಯುತ್ತಿದ್ದಾರೆ ಸ್ವಾಮಿ! ಒಂದು ವೇಳೆ ಮೊಬೈಲ್‌ನಲ್ಲಿ  ಆಟವಾಡುತ್ತ ಹೊರಾಂಗಣದ ಆಟಗಳನ್ನು ಮರೆತಿದ್ದಾರೆ ಎಂದು ದೂಷಿಸುವುದಾದಲ್ಲಿ ನಾವು ಈವರೆಗೆ ಶಾಲಾ ಶಿಕ್ಷಣದಲ್ಲಿ ಮಾಡಿದ್ದೇನು? ದಿನಕ್ಕೆ ಎಂಟು ಪಾಠಗಳು. ಅದರಲ್ಲಿ ಒಂದು ಪೀರಿಯೆಡ್‌ ಆಟಕ್ಕೆ. ಅದೂ ಸ್ಪೆಷಲ್‌ ಕ್ಲಾಸ್‌ ಇದ್ದರೆ ಆಟದ ಪೀರಿಯೆಡ್‌ಗೆ ಖೊಕ್‌! ಓದು ಓದು ಓದು. ನಾವು ಶಾಲಾ ಶಿಕ್ಷಣದ ಪಾಠದಲ್ಲಿ ಭತ್ತದ ಬೇಸಾಯದ ಕುರಿತು ಕಲಿಸುತ್ತ ಬಂದಿದ್ದೇವೆ; ಭತ್ತದ ಗದ್ದೆಗಿಳಿದು ಗೈಮೆ ಮಾಡುವುದನ್ನು ಕಲಿಸಿದ್ದೇವೆಯಾ? ನಮ್ಮ ಶಿಕ್ಷಣದಲ್ಲಿ ಪಶುಸಂಗೋಪನೆಯ ಪಾಠ ಇದೆಯೆ? ಮಕ್ಕಳಿಗೆ ಅನುಭವಜನ್ಯವಾದ ಎಂಥ ಪಾಠಗಳನ್ನು ಕಲಿಸುತ್ತ ಬಂದಿದ್ದೇವೆ? ಕುಮಾರವ್ಯಾಸನ ಪಠ್ಯಗಳ ಅರ್ಥಗಳನ್ನು ತಲೆಚಿಟ್ಟು ಹಿಡಿಸುವಂತೆ ಹೇಳಿಕೊಡುತ್ತ ಬಂದಿದ್ದೇವೆ. ಅದೇ ಪದ್ಯವನ್ನು ರಾಗವಾಗಿ ಹಾಡಲು ಕಲಿಸಿದ್ದೇವೆಯೆ? ಹಾಡುವಾಗ ಸಿಗುವ ಅನುಭವವನ್ನು ಪಡೆಯಲು ಸಹಕರಿಸಿದ್ದೇವೆಯೆ? ಹಾಗೆ ನೋಡಿದರೆ ಈಗ ಇರುವ ಹಿರಿಯರ ಪೀಳಿಗೆಗೆ ಇಂಥ ಯಾವ ಕಾಳಜಿಯನ್ನೂ ಪ್ರಕಟಿಸುವ ಅಧಿಕಾರವಿಲ್ಲ. ಏಕೆಂದರೆ, ಅವರೆಲ್ಲ ಇಂಗ್ಲಿಷರ ಕಾಲದ ಆಧುನಿಕ ಶಿಕ್ಷಣವನ್ನು ಕಲಿತು ಬಂದವರು. ಇಡೀ ದಿನ ಕಚೇರಿಯಲ್ಲಿ ದುಡಿಯುವ ಹಿರಿಯರು ಕೂಡ ಟಿವಿಯ ಮುಂದೆ ಧಾರಾವಾಹಿ ನೋಡುತ್ತ ಸ್ಥಾಪನೆಯಾಗುತ್ತಿರುವಾಗ ಮಕ್ಕಳಿಗೆ ಮೊಬೈಲ್‌ ನೋಡಬೇಡಿ ಎಂದು ಉಪದೇಶಿಸುವ ನೈತಿಕ ಹಕ್ಕಾದರೂ ಎಲ್ಲಿದೆ! ಇಡೀ ದಿನ ಶಾಲೆಯಲ್ಲಿ ಪಾಠ ಓದುವ ಮಕ್ಕಳಿಗೆ ಅಕ್ಷರಗಳನ್ನು ನೋಡುವುದೇ ಅಭ್ಯಾಸವಾಗಿ ಅವು ಮೊಬೈಲ್‌ ಸ್ಕ್ರೀನ್‌ಗೆ ಅಂಟಿಕೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.

“ಇಂದಿನ ಮಕ್ಕಳು ನಾಳಿನ ಪ್ರಜೆಗಳು’ ಎಂಬುದು ಜನಪ್ರಿಯವಾದ ಒಂದು ವಾಕ್ಯವಾಗಿದೆ. “ಇಂದಿನ ಮಕ್ಕಳು ಇಂದಿನದ್ದೇ ಪ್ರಜೆಗಳು’ ಎಂಬ ಸತ್ಯವನ್ನು ಮರೆತಿರುವುದಕ್ಕೆ ಇದೇ ಸಾಕ್ಷಿ. ಎಷ್ಟೋ ಬಾರಿ ನಮ್ಮ ಮಕ್ಕಳನ್ನು ನಾವು ನಮ್ಮಂತೆಯೇ ಪರಿಗಣಿಸದೆ, ನಮ್ಮಂತಲ್ಲದೆ ಮತ್ತೇನೋ ಆಗಬೇಕಾದವರು ಎಂಬ ಹೇರಿಕೆಯ ಭಾವದಲ್ಲಿ ನೋಡುತ್ತೇವೆ. ಒಬ್ಬ ಕೃಷಿಕನ ಮಗನಿಗೆ ನನ್ನ ಮಗ ಕೃಷಿಕನಾಗುವುದು ಇಷ್ಟವಿಲ್ಲ. ಒಬ್ಬ ಡಾಕ್ಟರನ ಮಗನಿಗೆ “ಛೆ! ಈ ವೃತ್ತಿ ನನಗೆ ಸಾಕಪ್ಪ , ನನ್ನ ಮಗ ಸ್ತೆತಾಸ್ಕೋಪ್‌ ಹಿಡಿಯುವುದು ಬೇಡ’ ಎಂಬ ಭಾವವಿರುತ್ತದೆ. ಒಬ್ಬ ಕಲಾವಿದ ತನ್ನ ಮಗ ಕಲಾವಿದನಾಗಿ ಕಷ್ಟ ಪಡುವುದು ಬೇಡ, ಸರ್ಕಾರಿ ವೃತ್ತಿ ಹಿಡಿಯಲಿ ಎಂದು ಕನಸು ಕಾಣುತ್ತಾನೆ. ಬಹಳ ಸ್ಪಷ್ಟವಾಗಿ ಕಾಣುವ ಅಂಶವೆಂದರೆ ಯಾರಿಗೂ ಅವರವರ ವೃತ್ತಿಯ ಬಗ್ಗೆಯೇ ಅಭಿಮಾನವಿಲ್ಲ. ಇದು ಎಂಥ ಜೀವನಾದರ್ಶ!

ಇದನ್ನು ಮಕ್ಕಳ ಮೇಲೆ ಹೇರುವುದಕ್ಕೆ ಏನೆನ್ನಬೇಕು?
ಒಂದು ಜೋಕ್‌ ಇದೆ. ಒಂದು ಮನೆಯ ಎಲ್ಲ ಕೊಠಡಿಗಳಲ್ಲಿ ಜಿಯೋ ನೆಟ್‌ವರ್ಕ್‌ ಸಿಕ್ಕಿದರೆ ಆ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. (ಅಂದರೆ ಆ ಮನೆಯ ವಾಸ್ತು ಸರಿಯಾಗಿದೆ ಎಂದರ್ಥ). ಇದು ಕೇವಲ ವಿನೋದದ ಮಾತಲ್ಲ. ಗಂಭೀರವಾದ ಸತ್ಯಾಂಶವೂ ಇದರಲ್ಲಿದೆ. ಮನೆಯಲ್ಲಿ ಅಪ್ಪ ಮತ್ತು ಅಮ್ಮ ತಮ್ಮ ತಮ್ಮ ಮೊಬೈಲ್‌ಗ‌ಳಲ್ಲಿ ವಾಟ್ಸಾಪ್‌, ಫೇಸ್‌ಬುಕ್‌ ಸಂದೇಶಗಳನ್ನು ಓದುವುದರಲ್ಲಿ ಮತ್ತು ಪ್ರತಿಕ್ರಿಯಿಸುವುದರಲ್ಲಿ ತಲ್ಲೀನರಾಗುವಾಗ ಮಕ್ಕಳು ತಾನೇ ಏನು ಮಾಡಿಯಾರು! ನೀವೊಮ್ಮೆ ಊಹಿಸಿ. ನಿಮ್ಮ ಮುಂದೆ ಕುಳಿತು ಯಾವನಾದರೂ ಗೆಳೆಯ ಮಾತನಾಡುತ್ತಿದ್ದಾನೆ, ನೀವು ಮಾತನಾಡುತ್ತಿದ್ದೀರಿ. ಆತ ಮೊಬೈಲ್‌ನಲ್ಲಿ ಚಾಟ್‌ ಮಾಡುತ್ತಿದ್ದಾನೆ ಎಂದರೆ ನಿಮಗೆ ಎಂಥ ಹಿಂಸೆಯಾಗುತ್ತದೆ.

ಕ್ರಮೇಣ ನೀವು ಕೂಡಾ ನಿಮ್ಮ ಜೇಬಿನಿಂದ ಮೊಬೈಲ್‌ನ್ನು ತೆಗೆದು ವಾಟ್ಸಾಪ್‌ನ್ನು ತೆರೆಯತೊಡಗುತ್ತೀರಿ. ಮನೆಯ ಹಿರಿಯರೆಲ್ಲ “ಭೌತಿಕವಾಗಿ ಮನೆಯಲ್ಲಿರದೆ’ ಮೊಬೈಲ್‌ ಜೊತೆಗೆ ಯಾವುದೋ ಲೋಕದಲ್ಲಿರುವಾಗ, ಟಿವಿ ಧಾರಾವಾಹಿಯಲ್ಲಿ ಹೂತುಹೋಗಿರುವಾಗ ಮಕ್ಕಳು ಕೂಡ ಹೊಸ ತಂತ್ರಜ್ಞಾನದ ಸಲಕರಣೆಗಳತ್ತ ಗಮನಹರಿಸಿದರೆ ಅದನ್ನು ತಪ್ಪೆಂದು ಹೇಳಲಾಗದು.

ಹಾಗಾಗಿ, ಇಂದು ನಿಜವಾದ ಸಮಸ್ಯೆ ಇರುವುದು ಮಕ್ಕಳಲ್ಲಿ ಅಲ್ಲ, ಹಿರಿಯರಲ್ಲಿ. ಭರತನಾಟ್ಯವನ್ನು ಕಲಿತು ತನ್ನ ಮಗು ವೇದಿಕೆ ಮೇಲೇರಿ ಹೆಸರು ಗಳಿಸಬೇಕೆಂದು ಬಯಸುವ ಅಪ್ಪ-ಅಮ್ಮಂದಿರಿಗೆ ನಿಜವಾಗಿ ಭರತನಾಟ್ಯದ ಬಗ್ಗೆ ಒಲವು ಇರುವುದೇ ಇಲ್ಲ, ಅವರ ಆಸಕ್ತಿ ಇರುವುದು ಡೀಜೆ ಮ್ಯೂಸಿಕ್‌ನ ಮೇಲೆ.

ಹಿರಿಯರು ಬದಲಾಗದೆ ಮಕ್ಕಳನ್ನು ಬದಲಾಯಿಸುವುದು ಹೇಗೆ?

– ವಾಣಿ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next