Advertisement

ಪಾಠ ಹೇಳಿದವರು ಮಾತ್ರ ಗುರುಗಳಲ್ಲ; ವಿಶ್ವರೂಪಿ ಗುರುವಿಗೆ ನಮನ

11:35 AM Sep 06, 2019 | Suhan S |

ಪಾಠ ಹೇಳಿದವರು ಮಾತ್ರ ಗುರುಗಳಲ್ಲ; ವಿಶ್ವರೂಪಿ ಗುರುವಿಗೆ ನಮನ ಗುರುವು ಸರ್ವಂತರ್ಯಮಿ. ವಿಶ್ವರೂಪಿ ಕೂಡಾ.  ಪ್ರತಿಯೊಬ್ಬ ಶಿಷ್ಯ ಅಥವಾ ಶಿಷ್ಯೆಯಲ್ಲಿ ಗುರುವಿದ್ದೇ ಇರುತ್ತಾರೆ. ತಮಗೇ ಗೊತ್ತಿಲ್ಲದಂತೆ ನಾವೆಲ್ಲ ನಮ್ಮ ಗುರುಗಳನ್ನು ನೆನಪಿಸಿಕೊಳ್ಳುತ್ತಿರುತ್ತೇವೆ – ನಮ್ಮ ನಡೆಯಲ್ಲಿ, ನುಡಿಯಲ್ಲಿ ನೋಡುವ ದೃಷ್ಟಿಯಲ್ಲಿ ಗುರುವಿದ್ದೇ ಇರುತ್ತಾರೆ.

Advertisement

ಕೊಡಪಾನವು ಅಂಚಿಗೆ ತಗುಲದ ಹಾಗೆ ಬಾವಿಯಿಂದ ನೀರು ಸೇದುವುದನ್ನು ಕಲಿಸಿದ ಕೆಲಸದಾಳು, ಜಾರದಂತೆ ಹಗ್ಗದ ಗಂಟು ಹಾಕಲು ಕಲಿಸಿದ ಅಪರಿಚಿತ, ಟೈ ಕಟ್ಟುವುದನ್ನು ಕಲಿಸಿದ ರೂಮ್ ಮೇಟ್ ಇವರೆಲ್ಲರೂ ಗುರುಗಳೇ!

ಅಕ್ಷರ ಕಲಿಸಿದವರು ಅಥವಾ ತರಗತಿಯಲ್ಲಿ ಪಾಠ ಹೇಳಿದವರು ಮಾತ್ರ ಗುರುಗಳಲ್ಲ. ನಮ್ಮ ಬದುಕನ್ನು ಪ್ರಭಾವಿಸಿದ, ಪುನಃಸಂಘಟಿಸಿದ, ಪ್ರೇರೇಪಿಸಿದ ಸಾವಿರಾರು ವ್ಯಕ್ತಿಗಳು, ಸಂಗತಿಗಳು, ಪರಿಸ್ಥಿತಿಗಳು ನಮಗೆ ಗುರುವೇ ಆಗಿರುವರು. ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿ ಗಳಿಗೆ ಗುರುವಾಗುವ ಹಾಗೆ ವಿದ್ಯಾಥರ್ಿಗಳೂ ಶಿಕ್ಷಕರಿಗೆ ಗುರುವಾಗಬಲ್ಲರು; ಗುರುವಾಗುತ್ತಾರೆ. ವಾಟ್ಸಾಪ್ ಗ್ರೂಪು ಮಾಡಲು ಕಲಿಸಿದ ನನ್ನ ವಿದ್ಯಾರ್ಥಿ ನನ್ನ ಗುರುವಲ್ಲವೇ? ಇಷ್ಟಕ್ಕಾಗಿ ಮಾತ್ರವಲ್ಲ. ಗುರು ಮತ್ತು ಶಿಷ್ಯ ಬೇರೆ ಬೇರೆ ಎಂಬ ಯೋಚನೆಯಲ್ಲೇ ನನಗೆ ಐಬು ಕಾಣಿಸುತ್ತದೆ. ಎಲ್ಲರಲ್ಲೂ ಒಬ್ಬ ಗುರುವಿರುವ ಹಾಗೆ ಎಲ್ಲರಲ್ಲೂ ಒಬ್ಬ ಶಿಷ್ಯ ಅಥವಾ ಶಿಷ್ಯೆ ಇರುತ್ತಾರೆ. ಕಲಿಕೆಯೆನ್ನುವುದು ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಪಾತದಂತೆ ಗುರುವಿನಿಂದ ಶಿಷ್ಯನಿಗೆ ಹರಿವ ಜ್ಞಾನದ ತೊರೆಯಲ್ಲ; ಕಲಿಕೆಯೆಂಬುದು ಕೊಡು-ಕೊಳ್ಳುವ ವ್ಯವಹಾರ. ಅಲ್ಲಿ ಗುರುವಿನಿಂದ ಶಿಷ್ಯನೂ, ಶಿಷ್ಯನಿಂದ ಗುರುವೂ ಕಲಿಯುತ್ತಿರುತ್ತಾರೆ.

ಸೈಕಲ್ ತುಳಿಯುವುದನ್ನು ಕಲಿಯಲು ಅನೇಕ ಗುರುಗಳ ಸಹಾಯ ಬೇಕು. ಸೈಕಲ್ ತುಳಿಯುವುದು ಕಲಿಕೆಯ ಸಂಕೀರ್ಣ ಸ್ವರೂಪವನ್ನು ಸುಂದರವಾಗಿ ನಿರೂಪಿಸುವ ರೂಪಕ. ಶಿಕ್ಷಣಶಾಸ್ತ್ರದ ತತ್ವಗಳನ್ನು ಪೂರ್ಣಚಂದ್ರ ತೇಜಸ್ವಿಯವರ `ರಹಸ್ಯ ವಿಶ್ವ’ ಎಂಬ ಕತೆ ಸೈಕಲ್ ಕಲಿಕೆಯ ರೂಪಕದ ಮೂಲಕವೇ ಕಟ್ಟಿಕೊಡುತ್ತದೆ. ಸೈಕಲ್ ತುಳಿಯುವುದನ್ನು ಕಲಿಯಲು ತನಗಿಂತ ಹಿರಿಯರಾದ ಸ್ನೇಹಿತರ ಸಹಾಯ ಬೇಕಾಗುತ್ತದೆ. ಇವರು ಸೈಕಲ್ ಮೇಲೆ ಏರಲು, ಸೈಕಲ್ ಬೀಳದಂತೆ ನೋಡಿಕೊಳ್ಳಲು ಸಹಾಯಮಾಡುತ್ತಾ ಸೈಕಲ್ ಕಲಿಸುವ ಗುರುವಾಗುತ್ತಾರೆ.

ಆದರೆ, ಎಲ್ಲಿಯವರೆಗೂ ಈ ಗುರುಗಳು ಸೈಕಲ್ ಮೇಲೆ ತಮ್ಮ ಹಿಡಿತ ಹೊಂದಿರುತ್ತಾರೋ ಅಲ್ಲಿಯವರೆಗೂ ಸೈಕಲ್ ಕಲಿಕೆ ಅಸಾಧ್ಯ. ಒಂದರ್ಥದಲ್ಲಿ, ನಿಜವಾದ ಸೈಕಲ್ ಕಲಿಕೆ ಆರಂಭವಾಗುವುದೇ ಗುರುಗಳು ಸೈಕಲ್ ಮೇಲಿನ ತಮ್ಮ ಹಿಡಿತವನ್ನು ಹಿಂತೆಗೆದುಕೊಂಡಾಗಲೇ! ಸೈಕಲ್ ಕಲಿಕೆಗೆ ನೆರವಾದ ಎಲ್ಲ ಸಂಗತಿಗಳೂ `ಗುರು’ ವೇ ಆಗಿದ್ದಾರೆ. ರಕ್ಷಣೆಗಾಗಿ ಸೈಕಲ್ ಹಿಡಿದುಕೊಂಡ ಅಣ್ಣಂದಿರು ಮಾತ್ರವಲ್ಲ, ಸೈಕಲ್ ಕಲಿಯಲು ಪ್ರೇರಣೆ ನೀಡಿದ ಇನ್ಯಾರೋ ನಮ್ಮ ಗುರುವಾಗಬಲ್ಲರು.  ಸರಿ-ತಪ್ಪುಗಳನ್ನು ಗುರುತಿಸಿಕೊಳ್ಳುತ್ತಾ ತನ್ನನ್ನು ತಾನೇ ತಿದ್ದುಕೊಳ್ಳುವ ಕಲಿಯುವಾತ ಕೂಡಾ ಗುರುವೇ! ಹಾಗೆ ನೋಡಿದರೆ, ಭೌತಶಾಸ್ತ್ರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವ ಸೈಕಲ್ ಕೂಡಾ ಸೈಕಲ್ ಕಲಿಯುವಾತನ ಗುರುವೇ ಅಲ್ಲವೇ?  ಸೈಕಲ್ ಕಲಿಯುವಾಗ, ಈಜು ಕಲಿಯುವಾಗ, ಚಹಾ ಮಾಡುವುದನ್ನು ಕಲಿವಾಗ ಮಾತ್ರವಲ್ಲ ಎಲ್ಲ ಕಲಿಕೆಯಲ್ಲೂ ನೂರಾರು ಗುರುಗಳ ಕೈವಾಡ ಇದ್ದೇ ಇರುತ್ತದೆ. ಅನೇಕ ಗುರುಗಳ ಪಾತ್ರ ಕಲಿಯುವವನ ಗಮನಕ್ಕೇ ಬಾರದಿರಬಹುದು.

Advertisement

ನಮಗೆ ಮಾತನಾಡಲು ಯಾರು  ಕಲಿಸಿದವರು ಎಂದು ಗುರುತಿಸಿ ಹೇಳಲು ಸಾಧ್ಯವಿಲ್ಲ. ಅದನ್ನು ಯಾರೋ ಒಬ್ಬ ಗುರು ಕಲಿಸಿರಲು ಸಾಧ್ಯವೂ ಇಲ್ಲ. ಶಿಕ್ಷಣಶಾಸ್ತ್ರಜ್ಞ ವೈಗೋಸ್ಕಿ ಹೇಳುವ ಹಾಗೆ ಕಲಿಕೆಯೆಂಬುದು ಒಂದು ಸಾಮಾಜಿಕ ಪ್ರಕ್ರಿಯೆ. ಒಂಟಿಯಾಗಿ ಕಲಿಯಲು ಸಾಧ್ಯವಿಲ್ಲ. ಹಲವಾರು ಗುರುಗಳು ಒಬ್ಬರ ಮೇಲೆ ಒಬ್ಬರು ಪ್ರಭಾವಿಸುತ್ತಾ, ಗುರುವೂ ಆಗುತ್ತಾ ಶಿಷ್ಯನೂ ಆಗುತ್ತಾ ಕಲಿಕೆಯನ್ನು ಕಾರ್ಯಗತಗೊಳಿಸುತ್ತಿರುತ್ತಾರೆ. ತರಗತಿಕೋಣೆಯಲ್ಲೂ ಅಷ್ಟೇ, ಮೇಷ್ಟ್ರೇ ಎಲ್ಲವನ್ನೂ ಕಲಿಸಲಾರರು. ಹಾಗೆ ನೋಡಿದರೆ, ಕಲಿಸುವುದು ಅವರ ಕೆಲಸವೇ ಅಲ್ಲ. ಅವರು ಕಲಿಯುವ ಪರಿಸ್ಥಿತಿಯನ್ನು ಉಂಟುಮಾಡಬಲ್ಲರು. ಕಲಿಯುವ ಪರಿಸರವನ್ನು ರೂಪಿಸಬಲ್ಲರು. ಕಲಿಕೆ ಎಂಬುದು ಸಂಕೀರ್ಣ ಬೌದ್ಧಿಕ ವ್ಯವಹಾರ. ಅಷ್ಟೇ ಸಂಕೀರ್ಣವಾಗಿರುವುದು `ಗುರು’ ಎಂಬ ವ್ಯಕ್ತಿತ್ವ.

ಒಡನಾಟವು ಕಲಿಕೆಯ ಮೂಲಮಂತ್ರ. ಕಲಿಕೆಯನ್ನು ಸಾಧ್ಯವಾಗಿಸಬಲ್ಲ ಬಹುಬಗೆಯ ಒಡನಾಟದ ಸಾಧ್ಯತೆಯನ್ನು ವಿನ್ಯಾಸಗೊಳಿಸುವುದು ಮತ್ತು ಖಾತ್ರಿಗೊಳಿಸುವುದು ಶಿಕ್ಷಕನ ಕೆಲಸ ಎಂದು ಇಂದು ನಾವು ಹೇಳುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ, ಶಿಕ್ಷಕನ ಪಾತ್ರ ಬದಲಾಗಿದೆ ಎಂದಾಗಲಿ ಗೌಣವಾಗಿದೆ ಎಂದಾಗಲಿ ತೀರ್ಮಾನಿಸಲಾಗದು. ಶಿಕ್ಷಕನ ಪಾತ್ರವನ್ನು ನಿರ್ವಚಿಸುವ ಪರಿಕರ ಮತ್ತು ಪರಿಭಾಷೆಗಳು ಬದಲಾದ ಮಾತ್ರಕ್ಕೆ ಶಿಕ್ಷಕರ ಮಹತ್ವವೇ ಕಡಿಮೆ ಆಗಿದೆ ಎಂದು ಹೇಳುವುದು ಸರಿಯಲ್ಲ.

ತರಗತಿ ಕೋಣೆಗಳು ಸ್ಮಾಟರ್ ಆದಂತೆ ಕಲಿಕೆಯಲ್ಲಿ ಶಿಕ್ಷಕರ ಅವಶ್ಯಕತೆ ಮತ್ತು ಮಹತ್ವ ಕಡಿಮೆ ಆಗುತ್ತದೆ ಎಂಬ ಇಪ್ಪತ್ತು ವರ್ಷಗಳ ಹಿಂದಿನ ಊಹೆಯು ಇಂದು ತಪ್ಪು ಎಂಬುದು ಅರಿವಾಗಿದೆ. ವರ್ಚುವಲ್ ಅನುಭವಗಳು ನೈಜ ಅನುಭವಕ್ಕೆ ಬದಲಿಯಾಗಲಾರವು. ಮನುಷ್ಯರ ಜೊತೆ ಒಡನಾಟಗಳನ್ನು ಕಡಿಮೆ ಮಾಡುವ ಮೂಲಕ ಯಾವ ತರಗತಿ ಕೋಣೆಯೂ ಸ್ಮಾಟರ್ ಆಗಲು ಸಾಧ್ಯವಿಲ್ಲ. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳ ನಡುವೆ, ವಿದ್ಯಾರ್ಥಿ ಮತ್ತು ಕಂಪ್ಯೂಟರ್ ಸೇರಿದಂತೆ ಹಲಬಗೆಯ ಕಲಿಕೆಯನ್ನು ಬೆಂಬಲಿಸುವ ಉಪಕರಣಗಳ ನಡುವೆ, ವಿದ್ಯಾರ್ಥಿ ಮತ್ತು ಪುಸ್ತಕಗಳ ನಡುವೆ, ವಿದ್ಯಾರ್ಥಿ ಮತ್ತು ಹೊರ ಜಗತ್ತಿನ ನಡುವೆ ಒಡನಾಟಗಳು ನಡೆಯುತ್ತಾ ಹೋದಂತೆ ಜ್ಞಾನದ ಉತ್ಪಾದನೆ ಉಂಟಾಗುತ್ತದೆ. ಗೀತೆ, ಉಪನಿಷತ್ತುಗಳೂ ಸೇರಿದಂತೆ ಬಹುತೇಕ ಭಾರತೀಯ ಜ್ಞಾನ ಮೀಮಾಂಸೆಗಳು ಶಿಷ್ಯನು ಗುರುವನ್ನು ಪ್ರಶ್ನಿಸುವ ಮೂಲಕ ಆರಂಭಗೊಳ್ಳುತ್ತವೆ. ಕಲಿಕೆ ಹೇಗೆ ಸಾಗಬೇಕು ಎಂಬ ಸೂಚನೆಯಂತಿರುವ ಈ ಸಂವಾದಗಳು ತರಗತಿಕೋಣೆಯಲ್ಲಿ ಇನ್ನಷ್ಟು ವಿಸ್ತಾರಗೊಳ್ಳುತ್ತವೆ. ಪೂರ್ವಯೋಜಿತವಲ್ಲದ ಆದರೆ, ಕಲಿಕೆಗೆ ಪೂರಕವಾಗಿರುವ ಪ್ರಶ್ನೆಗಳ ಮೂಲಕ ಜ್ಞಾನದ ರಚನೆಯ ಕ್ರಿಯೆ ಸಾಗುತ್ತದೆ.

ಗುರುವು ಎಲ್ಲೆಡೆಯೂ ಇರುತ್ತಾರೆ. ವಾಹನ ಚಾಲನೆ, ಹೊಲಿಗೆ, ಕಮ್ಮಾರಿಕೆ, ಕುಂಬಾರಿಕೆ ಮತ್ತಿತರ ಶ್ರಮ ಮತ್ತು ಕೌಶಲದ ತಿಳುವಳಿಕೆಯಿಂದ ಹಿಡಿದು ನಾಟಕ, ಸಂಗೀತ ಮತ್ತಿತರ ಪ್ರದರ್ಶನ ಕಲೆಗಳ ವರೆಗೆ, ಇಸ್ರ್ತಿ ಮಾಡುವುದರಿಂದ ಗ್ಯಾಸ್ ಬುಕಿಂಗ್ ಮಾಡುವುದರ ವರೆಗೆ ಬದುಕಿನ ಪ್ರತಿ ಹಂತದಲ್ಲೂ ಕಲಿಕೆ ಇದ್ದೇ ಇದೆ. ಕಲಿಕೆಯಿದೆ ಎಂದರೆ ಗುರುವೂ ಇದ್ದಾರೆ.

ಅದೃಷ್ಟವಶಾತ್, ನಮ್ಮ ಬದುಕನ್ನು ಪ್ರಭಾವಿಸಿದ ಈ ಎಲ್ಲ ಗುರುಗಳೂ ನಮ್ಮೊಳಗೆ ಇದ್ದಾರೆ. ನಮಗರಿವಿಲ್ಲದಂತೆ ನಮ್ಮೊಳಗೆ ಸಾವಯವ ರೂಪ ಪಡೆದು ಕೆಲವೊಮ್ಮೆ ಎದುರಾಗುತ್ತಾರೆ. ಕೆಲವೊಮ್ಮೆ ನಮ್ಮೊಳಗೆ ವಿಲೀನವಾಗುತ್ತಾರೆ. ಆದರೆ, ನಮ್ಮಿಂದ ಮರೆಯಾಗುವುದಿಲ್ಲ.

ಉದಯ ಗಾಂವಕರ,

ಶಿಕ್ಷಕರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next