Advertisement

ಕೊಠಡಿ ಕೊರತೆ ನೀಗಿದರೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ

08:40 PM Sep 21, 2021 | Team Udayavani |

ಮೂಡುಬಿದಿರೆ:  ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೆೇರಿ ವ್ಯಾಪ್ತಿಯ ಅಳಿಯೂರಿನ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮ, ಎಲ್‌ಕೆಜಿಯಿಂದ 3ನೇ ತರಗತಿ, ಆರು ಮತ್ತು ಏಳನೇ ತರಗತಿಯವರೆಗೆ ಆಂಗ್ಲ ಮಾಧ್ಯಮದ ತರಗತಿಗಳಿವೆ.

Advertisement

ಎಲ್‌ಕೆಜಿ ಸೇರಿ ಎಲ್ಲ ತರಗತಿಗಳಲ್ಲಿ ಕಳೆದ ಬಾರಿ 255 ಮಕ್ಕಳಿದ್ದರೆ ಈ ಬಾರಿ ಈ ಸಂಖ್ಯೆ 320ಕ್ಕೇರಿದೆ. ಮಕ್ಕಳ ಸಂಖ್ಯೆ ಪ್ರಕಾರ 16 ಕೊಠಡಿಗಳು ಬೇಕಾಗಿವೆ.

ಇರುವುದು 5 ಕೊಠಡಿಗಳು ಮಾತ್ರ. ಎರಡು ಕೊಠಡಿಗಳ ನಿರ್ಮಾಣಕ್ಕೆ ಅನು ದಾನ ಮಂಜೂರಾಗಿದ್ದು ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. 9 ಕೊಠಡಿಗಳ ಕೊರತೆ ಕಾಡಿದೆ.

ಇಲಾಖೆಯ ಐವರು ಶಿಕ್ಷಕರಿದ್ದಾರೆ. ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಬಿದ್ದಿವೆ. ಉಳಿದಂತೆ ಮೂವರನ್ನು ಶಾಲಾ ಭಿವೃದ್ಧಿ ಸಮಿತಿ ಸಹಿತ ಸಮನ್ವಯ ಸಮಿತಿ ನಿಯೋಜಿಸಿದೆ. ಓರ್ವರು ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಸುಮಾರು 6 ಮಂದಿ ಶಿಕ್ಷಕರ ಕೊರತೆಯನ್ನು ಸರಕಾರ ನೀಗಬೇಕಾಗಿದೆ.

ಕಂಪ್ಯೂಟರ್‌ಗಳಿವೆ, ಕಲಿಸುವವರಿಲ್ಲ:

Advertisement

ಇನ್ಫೋಸಿಸ್‌ 10, ಕರ್ಣಾಟಕ ಬ್ಯಾಂಕ್‌ 2 ಕಂಪ್ಯೂಟರ್‌ಗಳನ್ನು ನೀಡಿವೆ; ಆದರೆ ಕಲಿಸಲು ಶಿಕ್ಷಕರಿಲ್ಲದ ಪರಿಸ್ಥಿತಿ ಇದೆ.

ಎಸ್‌ಡಿಎಂಸಿ, ಶಾಲಾಭಿಮಾನಿಗಳು ಸೇರಿ ರಚಿಸಿದ ಸಮನ್ವಯ ಸಮಿತಿಯು ಪದ್ಮನಾಭ ಕೋಟ್ಯಾನ್‌ ಅಳಿಯೂರು ಅವರ ಅಧ್ಯಕ್ಷತೆಯಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಉಗ್ರಾಣ, ಶೌಚಾಲಯ, ಪುಸ್ತಕಗಳನ್ನಿರಿಸಲು ಕಲ್ಲಿನ ರ್ಯಾಕ್‌ಗಳ ಸಹಿತ ಶಿಕ್ಷಕರ ಕೊಠಡಿ ನಿರ್ಮಾಣ, ಸರಕಾರದ ವತಿಯಿಂದ ಕೆಲವು ವರ್ಷಗಳ ಹಿಂದೆ ರಚನೆಯಾಗಿ ಬಹಳ ದುರ್ಬಲವಾಗಿದ್ದ ಕಟ್ಟಡದ ದುರಸ್ತಿ, ಜೀರ್ಣವಾಗಿದ್ದ ಕಿಟಿಕಿ, ಬಾಗಿಲುಗಳ ಪುನರ್‌ಜೋಡಣೆ, ಟೈಲ್ಸ್‌ ಹೊದಿಕೆ, ಕಟ್ಟಡದುದ್ದಕ್ಕೂ ಜಗಲಿಗೆ ಹೊಂದಿಕೆಯಾಗಿ ಅಂಗಳದತ್ತ ವಿಸ್ತರಿಸಿಕೊಂಡು ಶೀಟ್‌ ಅಳವಡಿಕೆ ಇವನ್ನೆಲ್ಲ ಮಾಡಲಾಗಿದೆ. ಎಂಆರ್‌ಪಿಎಲ್‌ ನಿಂದ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣವಾಗುತ್ತಲಿದೆ. ಮಳೆನೀರು ಕೊಯ್ಲು ಕಾಮಗಾರಿ ಇನ್ನಷ್ಟೇ ಆಗಲಿದೆ.

ಎಸ್‌ಡಿಎಂಸಿ ಬೇಡಿಕೆ :

11 ತರಗತಿ ಕೊಠಡಿಗಳು, ಕಂಪ್ಯೂಟರ್‌ ಕೋಣೆ, ಬಹುಪಯೋಗಿ ಊಟದ ಹಾಲ್‌, ಕೊಳವೆ ಬಾವಿಗೆ ಪಂಪ್‌, ವಿದ್ಯುತ್‌, 150 ದೊಡ್ಡ ಬೆಂಚು-ಡೆಸ್ಕ್ಗಳು, 50 ಚಿಕ್ಕ ಬೆಂಚು-ಡೆಸ್ಕ್ಗಳು, ದಾಸ್ತಾನು ಕೊಠಡಿ, ಗ್ರಂಥಾಲಯ ಕೊಠಡಿ, ವಿಜ್ಞಾನ ಕೊಠಡಿ ಇವೆಲ್ಲ ಆಗಬೇಕಾಗಿವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ಡಿ. ಪೂಜಾರಿ ಸಂಬಂಧಪಟ್ಟವರ ಗಮನ ಸೆಳೆದಿದ್ದಾರೆ.

“ಎಸ್‌ಡಿಎಂಸಿ, ಸಮನ್ವಯ ಸಮಿತಿ ಶಾಲೆಯ ಪ್ರಗತಿಗಾಗಿ ಬಹಳಷ್ಟು ಕೊಡುಗೆ ಸಂಚಯಿಸುತ್ತಿದ್ದಾರೆ. ಪೋಷಕರು, ದಾನಿಗಳ ಸಹಕಾರವೂ ಇದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಪರಿಶ್ರಮಿಸುತ್ತಿದ್ದಾರೆ. ಕೊಠಡಿಗಳು ಮತ್ತು ಶಿಕ್ಷಕರ ಕೊರತೆ ನೀಗಿಸಿದಲ್ಲಿ ಶಾಲೆ ಇನ್ನಷ್ಟು ಬೆಳಗಲು ಎಲ್ಲ ಅವಕಾಶಗಳಿವೆ. ನಮಿತಾ ಜೈನ್‌, ಪ್ರಭಾರ ಮುಖ್ಯೋಪಾಧ್ಯಾಯಿನಿ.

 

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next