Advertisement

ಅಲ್ಬರ್ಟ್ ಐನ್ ಸ್ಟೈನ್ “ದಡ್ಡ” ಎಂದು ಅಧ್ಯಾಪಕರು ತಾಯಿಗೆ ಪತ್ರ ಬರೆದಿದ್ರು…ಆದರೆ

05:42 PM Oct 02, 2022 | ದಿನೇಶ ಎಂ |

ಶ್ರೇಷ್ಠ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾದ ಅಲ್ಬರ್ಟ್ ಐನ್‍ಸ್ಟೈನ್ ಮಾರ್ಚ್ 14, 1879 ರಂದು ಜರ್ಮನಿಯ ವುಟೆನ್ ಬರ್ಗ್ನ ಉಲ್ಮ್ ಎಂಬ ಹಳ್ಳಿಯಲ್ಲಿ ಐನ್‍ಸ್ಟೈನ್ ಜನಿಸಿದ್ದರು. 1921ರಲ್ಲಿ ಇವರ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಐಸಾಕ್ ನ್ಯೂಟನ್ ಸಿದ್ಧಾಂತವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಭೌತಶಾಸ್ತ್ರ (Physics) ಸಂಶೋಧನೆಯಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದವರು ಅಲ್ಬರ್ಟ್ ಐನ್‍ಸ್ಟೈನ್.

Advertisement

ನಹಿ ಜ್ಞಾನೇನ ಸದೃಶಂ ಅಂತಾರೆ ಅಂದರೆ ಜ್ಞಾನಕ್ಕಿಂತ ಮಿಗಿಲಾದ ವಸ್ತು ಬೇರೆ ಇಲ್ಲ ಎಂಬರ್ಥದಲ್ಲಿ, ಜ್ಞಾನ ಸಂಪತ್ತು ಅಕ್ಷಯವಾದದ್ದು ಮತ್ತು ನಮಗೆಲ್ಲಾ ತಿಳಿದಿರುವಂತೆ ದೀಪದಿಂದ ದೀಪ ಹಚ್ಚಿದಾಗ ಬೆಳಕು ಹೆಚ್ಚುವಂತೆ ಜ್ಞಾನಿ ತನ್ನ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸಿದಾಗ ಅದು ಹೆಚ್ಚಾಗುತ್ತದೆ ಹೊರತು ಕ್ಷೀಣಿಸುವುದಿಲ್ಲ, ಅದನ್ನು ಕದಿಯಲೂ ಸಾಧ್ಯವಿಲ್ಲ ಆದರೆ, ನಿರ್ಲಕ್ಷ್ಯ ಮತ್ತು ಉದಾಸಿನತೆಯಿಂದ ಮರೆಯಬಹುದು.

ಜ್ಞಾನ ಕತ್ತಿಯ ಅಲಗು ಇದ್ದಂತೆ ಎನ್ನುತ್ತಾರೆ ಅದನ್ನು ಉಪಯೋಗಿಸದಿದ್ದರೆ ತುಕ್ಕು ಹಿಡಿಯಬಹುದು ಅಥವಾ ಹರಿತ ಕಳೆದುಕೊಳ್ಳಬಹುದು. ನಿರಂತರ ಶ್ರಮ ಮತ್ತು ಕುತೂಹಲಗಳ ಕಡೆಗಿನ ತುಡಿತ ಮತ್ತು ಒಲವು ಒಬ್ಬರನ್ನು ಸದಾ ಕಾಲ ಅಧ್ಯಯನಶೀಲರಾಗಿ ಮತ್ತು ತೇಜಸ್ವಿ ವ್ಯಕ್ತಿಯಾಗಿ ಉಳಿಸಿ – ಬೆಳೆಸಲು ಸಾಧ್ಯ. ಅಂತಹ ಒಬ್ಬ ವಿಶ್ವ ಕಂಡ ಮಹಾನ್‌ ಮೇಧಾವಿ ಅಲ್ಬರ್ಟ್ ಐನ್‍ಸ್ಟೈನ್.

ಅವರ ವಯಸ್ಸಿನ ಹುಡುಗರ ಜೊತೆ ಆಟವಾಡದೇ, ಸೈನಿಕನಾಗಬೇಕೆಂಬ ಯಾವ ಗುರಿಯು ಕಾಣದ್ದನ್ನು ನೋಡಿ ಅವರ ತಾಯಿ ಗಾಬರಿಗೊಂಡಿದ್ದರಂತೆ. ನಂತರ ಅಧ್ಯಾಪಕ ವೃತ್ತಿಗೆ ಅರ್ಜಿಹಾಕಿ 2 ವರ್ಷ ಅಲೆಯುತ್ತಾರೆ. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ ಬರ್ನ್ ನಗರದ ಪೇಟೆಂಟ್ ಆಫೀಸ್ ನಲ್ಲಿ ಕೆಲಸ ಸಿಕ್ಕಿತು.  ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿಕೊಂಡರೂ ಕೂಡ ಅವರಲ್ಲಿ ವಿಜ್ಞಾನದ ಬಗ್ಗೆ ಇದ್ದ ಕುತೂಹಲ ಅವರು ಬರ್ನ್ ನಗರದ ಪೇಟೆಂಟ್ ಕಚೇರಿಯಲ್ಲಿ ಕೆಲಸಕ್ಕಿದ್ದಾಗ ʼSpecial Theory of Relativityʼ ಯನ್ನು ಕಂಡು ಹಿಡಿಯುವಂತೆ ಮಾಡಿತು. ಈಗ ನಮಗೆ ಕಾಲೇಜುಗಳಲ್ಲಿದ್ದು ಓದಲೆಂದೇ ಸಮಯವಿದ್ದರೂ ಒಂದು ಪ್ರಬಂಧ ಬರೆಯಲು ಯಾರೋ ಶಿಕ್ಷಕರು ನಮ್ಮ ಮೇಲೆ ಒತ್ತಡ ಹೇರಬೇಕು. ಆದರೆ, ಪರಿಸ್ಥಿತಿಗಳು ಹೇರುವ ಒತ್ತಡಗಳನ್ನು ಶಿಕ್ಷೆಯೆಂದು ಭಾವಿಸದೆ ಶಿಕ್ಷಣವೆಂದು ಭಾವಿಸಿ ಜವಾಬ್ದಾರಿಯಿಂದ ನಮ್ಮ ಆಸಕ್ತಿಗಳ ಕಡೆಗೆ ಮಾಡುವ ನಿರಂತರ ಪ್ರಯತ್ನ ಒಂದೊಂಮ್ಮೆ ಜೀವನದ ಉನ್ನತ ತಿರುವುಗಳಿಗೆ ಕಾರಣವಾಗಬಹುದು. ಆ ತಿರುವುಗಳಿಗೆ ಉತ್ತಮ ಉದಾಹರಣೆ ಅಲ್ಬರ್ಟ್ ಐನ್‍ಸ್ಟೈನ್.‌

 ಅವರ ತಂದೆಯ ದೊಡ್ಡ ಕಟ್ಟಡ ಉದ್ಯಮದ ಬಗ್ಗೆ, ಅದೆಲ್ಲಾ ನಷ್ಟವಾಗಿ ಬೇರೆ ಉದ್ಯಮ ಮಾಡುವ ಬಗ್ಗೆ ಅವರ ಜೀವನದಲ್ಲಿ ನಡೆದದ್ದು, . 1903ರಲ್ಲಿ ಜರ್ಮನ್ ಹುಡುಗಿ ಮಿಲೆವಾ ಮ್ಯಾರಿಕ್ ಜೊತೆ ಅಲ್ಬರ್ಟ್ ಐನ್‍ಸ್ಟೈನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡು ಮಕ್ಕಳು ಜನಿಸಿದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಂತರ 1919ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯ ಜೊತೆ ಮರು ಮದುವೆಯಾದರು ಇದೆಲ್ಲವೂ ಅವರ ಜೀವನದ ವಿಶೇಷ ತಿರುವುಗಳು.

Advertisement

ದೊಡ್ಡ ಮೇಧಾವಿಯೂ ಸಹ ಸಾಮಾನ್ಯ ಮನುಷ್ಯರಂತೆ ಸನ್ನಿವೇಶ ಪರಿಸ್ಥಿತಿಗಳ ಕೈಗೊಂಬೆಯಾಗುತ್ತಾರೆ, ಆದರೆ ಅದನ್ನೆಲ್ಲಾ ಮೀರಿ ಇತರರಿಗೆ ಆದರ್ಶರಾಗುವುದು ಅಸಾಮಾನ್ಯ ವ್ಯಕ್ತಿತ್ವವೇ ಸರಿ. ನಂತರ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ಸ್ವಿಸ್ ದೇಶದ ಪೌರತ್ವವನ್ನು ಪಡೆದಿದ್ದು, ಎರಡನೇ ವಿಶ್ವಯುದ್ಧದಲ್ಲಿ ನಡೆದ ಯಹೂದಿಗಳ ಮಾರಣ ಹೋಮ, ಆ ಸಮಯದಲ್ಲಿ ಅಮೆರಿಕಾಗೆ ಹೋಗಿದ್ದರು. ತಾನೂ ಆ ಮಾರಣ ಹೋಮದಿಂದ ಪಾರಾಗಿ ಬಂದದ್ದಷ್ಟೆ ಅಲ್ಲದೆ, ಅದರಲ್ಲಿ ಸಿಕ್ಕಿಹಾಕಿಕೊಂಡವರ, ಅವರ ಮನೆಯವರ ದುಃಖಕ್ಕೆ ಸ್ಪಂದಿಸಿದ್ದು ಐನ್‍ಸ್ಟೈನ್ ವಿಶೇಷತೆ.

ಪ್ರತೀ ಮೇಧಾವಿಗಳು ಮತ್ತು ಸಾಧಕರ ಜೀವನ ಕಂಡಾಗ ಅವರಲ್ಲಿರುವ  ವಿಶಿಷ್ಟ ಗುಣಗಳನ್ನು ನಾವು ಖಂಡಿತಾ ಕಾಣುತ್ತೇವೆ. ಒಮ್ಮೆ ಅಧ್ಯಯನಕ್ಕೆ ಕೂತರೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಸತತ ಎಂಟು ಗಂಟೆಗಳಿಗಿಂತ ಹೆಚ್ಚುಕಾಲ ಏಳದೆ ಕುಳಿತು ಕೆಲಸ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಹಿತ-ಮಿತವಾದ ಆಹಾರ ಸೇವನೆಯನ್ನು ರೂಢಿಸಿಕೊಂಡಿದ್ದ ಬಗ್ಗೆ ಉಲ್ಲೇಖಗಳಿವೆ. ಇದನ್ನೇ ಹಿರಿಯರು ಆಸನ ವಿಜಯವೆಂದು ಕರೆದದ್ದು. ಇಂತಹ ಹಲವು ಅಮೂಲ್ಯ ಗುಣಗಳ ಆಗರ ಅಲ್ಬರ್ಟ್ ಐನ್‍ಸ್ಟೈನ್.‌

ಸಣ್ಣವರಿದ್ದಾಗ 5 ವರ್ಷಗಳವರೆಗೆ ಮಾತೇ ಆಡದೆ ಇದ್ದರು, ಅದು ಮಾತು ಬರದೆ ಅಲ್ಲ, ಆ ಕಣ್ಣುಗಳು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದವು. ಅವುಗಳಿಗೆ ತಿಳಿದುಕೊಳ್ಳುವ ಹಸಿವಿತ್ತು ಹೊರತು ಈಗಿನ ಕೆಲ ಸ್ವಯಂ ಘೋಷಿತ ಮೇಧಾವಿಗಳಂತೆ ಒಣ ಭಾಷಣ ಮಾಡುವ ಇಚ್ಛೆ ಅವರಿಗಿರಲಿಲ್ಲ ಎಂದುಕೊಳ್ಳುತ್ತೇನೆ.

ಅಧ್ಯಾಪಕರು ತಾಯಿಗೆ ಮಗ ದಡ್ಡನೆಂದು ಪತ್ರ ಬರೆದಾಗಲೂ ತಾಯಿ ಅದನ್ನು ಮಗನಿಗೆ ತಿಳಿಸೋ ಬದಲು ಆಕೆ ನೀನು ಉಳಿದವರಂತಲ್ಲ ಎಂದು ಹುರಿದುಂಬಿಸಿದಳಲ್ಲ ಆ ಮಹಾತಾಯಿ ಓದಿದ್ದು ಮಗ ಅಲ್ಬರ್ಟ್ ಐನ್‍ಸ್ಟೈನ್ ರ ಮುಖವನ್ನಲ್ಲ ಮನಸ್ಸನ್ನು. ಇಂತಹ ಮಾತೆ ಅದ್ಭುತ ಮೇಧಾವಿಗೆ ಜನ್ಮ ನೀಡಿಲ್ಲ ಆದರೆ, ಜನ್ಮ ನೀಡಿದ ಮಗನನ್ನು ಮೇಧಾವಿಯಾಗಿ ಪರಿವರ್ತಿಸಲು ಪ್ರೇರಕ ಶಕ್ತಿಯಾದಳು. ಹಾಗಾಗಿ ನಾವು ಇತರರಿಂದ ಅವರ ಒಳ್ಳೆಯ ಗುಣಗಳನ್ನು ಕಂಡು ಪ್ರಶಂಸಿಸಿ ಬೆನ್ನು ತಟ್ಟೋಣ, ನಾವೂ ಅವರ ಸದ್ಗುಣಗಳನ್ನು ರೂಢಿಸಿಕೊಂಡು ಗುರಿ ಮುಟ್ಟೋಣ.

Advertisement

Udayavani is now on Telegram. Click here to join our channel and stay updated with the latest news.

Next