Advertisement

ಆಲಮಟ್ಟಿ ಜಲಾಶಯಕ್ಕಿಂದು ಸಿಎಂ ಬಾಗಿನ

03:39 PM Sep 30, 2022 | Team Udayavani |

ಆಲಮಟ್ಟಿ: ರಾಜ್ಯದ ಶೇ.60 ಭೂಮಿ ನೀರಾವರಿಗೊಳಪಡಿಸುವ ಬೃಹತ್‌ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನ ಆಲಮಟ್ಟಿಯಲ್ಲಿ ಕೃಷ್ಣೆಗೆ ಅಡ್ಡಲಾಗಿ ಕಟ್ಟಿರುವ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯ ತುಂಬಿದ್ದು, ಸೆ.30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಲಿದ್ದಾರೆ.

Advertisement

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪವಾಗಿ ಮಳೆಯಾದ್ದರಿಂದ ವಾಡಿಕೆಯಂತೆ ಕೃಷ್ಣೆಯ ಜಲನಿ ಧಿ ತುಂಬಿತ್ತು. ಕಳೆದೊಂದು ತಿಂಗಳಿಂದ ಜಲಸಂಪನ್ಮೂಲ ಇಲಾಖೆಯ ಕೃಷ್ಣಾ ಭಾಗ್ಯ ಜಲ ನಿಗಮದ ಅ ಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರೂ ಮುಖ್ಯಮಂತ್ರಿಗಳು ಸೆ.9ರಂದು ಆಗಮಿಸಲಿದ್ದಾರೆ ಎಂದು ಜನ ಕಾತುರದಿಂದ ಕಾಯುತ್ತಿದ್ದರು. ಆದರೆ ಸಚಿವ ಉಮೇಶ ಕತ್ತಿ ಅಕಾಲಿಕ ನಿಧನದಿಂದ ಮುಂದೂಡಲಾಗಿತ್ತು. ಇದೀಗ ಮುಖ್ಯಮಂತ್ರಿಗಳು ಶುಕ್ರವಾರ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ಖಚಿತವಾಗಿದೆ.

ಬರದ ನಾಡಿನ ದಾಹ ನೀಗಿಸಲು ಆಲಮಟ್ಟಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಆಗಿನ ಪ್ರಧಾನಿ ಶಾಸ್ತ್ರೀಜಿ 1964 ಮೇ 22ರಂದು ಜಲಾಶಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಹಾಗೂ ಭೂಸ್ವಾ ಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದರ ಪರಿಣಾಮ ಜಲಾಶಯದ ಕಟ್ಟಡ ನಿರ್ಮಾಣ ಕಾಮಗಾರಿಗಳು 2000ನೇ ಸಾಲಿನಲ್ಲಿ ಪೂರ್ಣಗೊಂಡಿದ್ದರೂ 2002ರಿಂದ ನೀರು ಸಂಗ್ರಹಿಸಲು ಆರಂಭಿಸಲಾಯಿತು.

2006, ಆ.21ರಂದು ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ರಾಷ್ಟ್ರಪತಿಯಾಗಿದ್ದ ಡಾ| ಎ.ಪಿ.ಜೆ. ಅಬ್ದುಲ ಕಲಾಂ ಅವರಿಂದ ಜಲಾಶಯ ಲೋಕಾರ್ಪಣೆಗೊಳಿಸಿದ್ದರು. 2015ರಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗದೇ ಗರಿಷ್ಠವಾಗಿ ಸೆ.25ರಂದು ಗರಿಷ್ಠ 519.60 ಮೀ. ಎತ್ತರದ ಜಲಾಶಯದಲ್ಲಿ 515.82 ಮೀ. ಸಂಗ್ರಹವಾಗಿ ಜಲಾಶಯದಲ್ಲಿ 71.806 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿತ್ತು.

2002ರಿಂದ ಜಲಾಶಯದಲ್ಲಿ ಗರಿಷ್ಠ ನೀರು ಸಂಗ್ರಹ ಆರಂಭಿಸಿದಾಗಿನಿಂದ 2002ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ, 2005ರಲ್ಲಿ ದಿ.ಧರ್ಮಸಿಂಗ್‌, 2006ರಲ್ಲಿ ಎಚ್‌.ಡಿ. ಕುಮಾರಸ್ವಾಮಿ, 2007ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ, 2008ರಿಂದ 2010ರವರೆಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ, 2011ರಲ್ಲಿ ಮುಖ್ಯಮಂತ್ರಿ ಸದಾನಂದಗೌಡ, 2012ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, 2013 ಹಾಗೂ 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿದ್ದರು. 2015ರಲ್ಲಿ ಜಲಾಶಯ ತುಂಬದ್ದರಿಂದ ಬಾಗಿನ ಅರ್ಪಣೆಯಾಗಲಿಲ್ಲ, 2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಮಗ ರಾಕೇಶ ಅಕಾಲಿಕ ನಿಧನದಿಂದ ಮುಖ್ಯಮಂತ್ರಿ ಬಾಗಿ ಅರ್ಪಣೆಗೆ ಆಗಮಿಸಲಿಲ್ಲ. 2017ರಲ್ಲಿ ಸಿದ್ದರಾಮಯ್ಯ ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು.

Advertisement

2018ರಲ್ಲಿ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗಿದ್ದರೂ ಹುಬ್ಬಳ್ಳಿಯಲ್ಲಿ ಮಳೆಯಾಗಿದ್ದರಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಬಾಗಿನ ಅರ್ಪಿಸಲು ಆಗಮಿಸುತ್ತಾರೆಂದು ವಿಜೃಂಭಣೆ ಸ್ವಾಗತಕ್ಕಾಗಿ ಇಡೀ ಪ್ರದೇಶ ಹೂವಿನಿಂದ ಅಲಂಕರಿಸಲಾಗಿತ್ತು. ಸಮಾರಂಭಕ್ಕೆ ಬಾರದೇ ಮಳೆ ನೆಪ ಹೇಳಿ ರದ್ದುಗೊಳಿಸಿದ್ದರಿಂದ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಸೇರಿ ವಿವಿಧ ಮಠಾಧಿ àಶರು, ರೈತರು ಮುಖ್ಯಮಂತ್ರಿಗಳ ನಡೆ ತೀವ್ರವಾಗಿ ಖಂಡಿಸಿದ್ದರು.

2019ರ ಅ.5ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಾಗಿನ ಅರ್ಪಿಸಿದ್ದರು. 2020 ಅ.22ರಂದು ನಿಗದಿಯಾಗಿದ್ದ ಬಾಗಿನ ಅರ್ಪಣೆ ಹವಾಮಾನ ವೈಪರೀತ್ಯದಿಂದ ನೆರೆಹಾವಳಿಗೆ ತುತ್ತಾಗಿದ್ದ ಪ್ರದೇಶ ವೀಕ್ಷಿಸಿ ಮುಖ್ಯಮಂತ್ರಿ ಬಿಎಸ್‌ವೈ ಆಲಮಟ್ಟಿಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲೆಯ ಶಾಸಕರು, ರೈತರು, ಮಠಾಧಿಧೀಶರು, ಅಭಿಮಾನಿಗಳು ಆಗಮಿಸಿದ್ದರು. ಆದರೆ ಸಂಜೆ 6 ಗಂಟೆ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ರದ್ದು ಎಂದು ಘೋಷಣೆ ಮಾಡಿದ್ದರು. ಇದರಿಂದ ಕೃಷ್ಣೆಯ ಒಡಲ ಮಕ್ಕಳಿಗೆ ನಿರಾಶೆಯಾಗುವಂತಾಗಿತ್ತು. ನಂತರ 2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಮಾಡಿದ್ದರು. ರಾಜ್ಯದಲ್ಲಿ ಅತಿ ಉದ್ದವಾಗಿ ಹರಿದು ಸುಮಾರು 6.59 ಲಕ್ಷ ಎಕರೆ ಜಮೀನಿಗೆ ಹಾಗೂ 12 ಜಿಲ್ಲೆಗಳಿಗೆ ಕುಡಿವ ನೀರು ಪೂರೈಸುವ, ಜಲವಿದ್ಯುತ್‌ ಘಟಕಗಳಿಗೆ, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಕೇಂದ್ರ ಹಾಗೂ ವಿವಿಧ ಕಾರ್ಖಾನೆಗಳಿಗೆ ಸೇರಿ ರಾಜ್ಯದ ಬಹುಭಾಗ ನೀರಿನ ದಾಹ ನೀಗಿಸುವ ಕೃಷ್ಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿಗೆ ಆಗಮಿಸಿ ಸೆ.30ರಂದು ಬಾಗಿನ ಅರ್ಪಿಸಲಿದ್ದಾರೆ.

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next