Advertisement

ಗ್ರಾಮದೇವಿ ಜಾತ್ರೆಗೆ ಸಜ್ಜಾದ ಅಕ್ಕಿಆಲೂರು

03:48 PM Mar 11, 2023 | Team Udayavani |

ಅಕ್ಕಿಆಲೂರು: ಅರೆಮಲೆನಾಡು ಪ್ರದೇಶವಾಗಿರುವ ಅಕ್ಕಿಆಲೂರು ಪಟ್ಟಣದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಆಚರಿಸಲ್ಪಡುವ ಪಟ್ಟಣದ ಅಧಿದೇವತೆ ಗ್ರಾಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಅಕ್ಕಿಆಲೂರಿನ ಮನೆ-ಮನಗಳಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ. ತಾಲೂಕಿನ ಅತ್ಯಂತ ದೊಡ್ಡ ಹೋಬಳಿಯಾಗಿರುವ ಅಕ್ಕಿಆಲೂರು ಪಟ್ಟಣ ಸೇರಿದಂತೆ ಸುತ್ತಲಿನ 56 ಹಳ್ಳಿಗಳಲ್ಲಿ ಕಾಲ ಕಾಲಕ್ಕೆ ಮಳೆ-ಬೆಳೆ ಸಮದ್ಧವಾಗಿರಲು ದೈವತ್ವದ ಮೊರೆ ಹೋಗಿದ್ದ ಇಲ್ಲಿನ ಹಿರಿಯರು 1995 ರಲ್ಲಿ ಮೊದಲ ಬಾರಿಗೆ ಶ್ರೀ ಗ್ರಾಮದೇವಿ ಜಾತ್ರೆ ಆಚರಿಸಲು ಆರಂಭಿಸಿದರು.

Advertisement

ಗ್ರಾಮದೇವಿಯ ಜಾತ್ರಾ ಮಹೋತ್ಸವ ಆಚರಣೆ ಪದ್ಧತಿ ರೂಢಿಗೆ ಬಂದಂತೆಲ್ಲ ಈ ಭಾಗದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಅಕ್ಕಿಆಲೂರು ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮುಂದುವರೆದ ಪ್ರದೇಶವಾಗಿ ನಾಡಿನಲ್ಲಿ ಹೆಸರುವಾಸಿಯಾಗಿದೆ. ಜಿಲ್ಲೆಯ ಸಾಂಸ್ಕೃತಿಕ ನಗರಿಯಾಗಿ ವರ್ಷವಿಡೀ ಹಲವಾರು ಬೃಹತ್‌ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಪಟ್ಟಣದ ಗ್ರಾಮದೇವಿಯ ತವರು ಮನೆ ಸಮೀಪದ ಗೊಂದಿ ಗ್ರಾಮ ಮತ್ತು ಕಲ್ಲಾಪುರ ದೇವಿಯ ಅಜ್ಜ-ಅಮ್ಮನ ಊರು ಎಂಬ ಇತಿಹಾಸವಿದೆ. ಪ್ರತಿವರ್ಷ ಗೊಂದಿ ಗ್ರಾಮಸ್ಥರು ಸಂಕ್ರಮಣ ಸಂದರ್ಭದಲ್ಲಿ ದೇವಿಯನ್ನು ಕರೆದುಕೊಂಡು ಹೋಗುವ ವಾಡಿಕೆಯಿದೆ ಮತ್ತು ಕಲ್ಲಾಪುರ ಗ್ರಾಮಸ್ಥರು ಸಹ ವರ್ಷಕ್ಕೆ ಒಂದು ಭಾರಿ ಗ್ರಾಮದೇವಿಯನ್ನು ಕರೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಕ್ಕಿಆಲೂರಿನಲ್ಲಿ ಐದು ವರ್ಷಕ್ಕೊಮ್ಮೆ ಪಟ್ಟಣದ ಜನತೆ ಜೊತೆ ಗೊಂದಿ ಮತ್ತು ಕಲ್ಲಾಪುರ ಗ್ರಾಮಸ್ಥರು ಸಹ ಜಾತ್ರೆ ಆಚರಿಸುವುದು ವಿಶೇಷ.

ಗಡಿ ದಾಟಿದರೆ ಹುಷಾರ್‌: ಮಾ.11ರಿಂದ ಮಾ.21ರವರೆಗೆ ನಡೆಯಲಿರುವ ಶ್ರೀ ಗ್ರಾಮದೇವಿ ಜಾತ್ರೆ ಹಿನ್ನೆಲೆಯಲ್ಲಿ ಮಾ.12ರಂದು ಬೆಳಿಗ್ಗೆ ದೇವಿಗೆ ಅಂಕಿ ಹಾಕುವ ಧಾರ್ಮಿಕ ವಿ ಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಶ್ರೀದೇವಿಗೆ ಅಂಕಿ ಹಾಕಿದ ನಂತರ ಪಟ್ಟಣದ ಸಾರ್ವಜನಿಕರು ಮುಂದಿನ 3 ದಿನಗಳ ಕಾಲ ಅಕ್ಕಿಆಲೂರ ಸುತ್ತಲಿನ ಗ್ರಾಮದ ಗಡಿ ದಾಟಿ ಹೋಗುವಂತಿಲ್ಲ. ಒಂದು ವೇಳೆ ಹೋದರೆ ಅಪಾಯ ತಪ್ಪಿದ್ದಲ್ಲ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಹೀಗೆ ಶ್ರೀದೇವಿಗೆ ಅಂಕಿ ಹಾಕಿದ ಮೇಲೆ ನಿಯಮ ಉಲ್ಲಂಘನೆ ಮಾಡಿ ದುರ್ಗತಿ ಅನುಭವಿಸಿರುವ ಹಲವು ನಿದರ್ಶನಗಳು ಎಲ್ಲರಿಗೂ ತಿಳಿದಿದೆ ಎನ್ನುತ್ತಾರೆ ಪಟ್ಟಣದ ಬಸವರಾಜ ಸೂರಕೊಂಡರ.

ಸಂಭ್ರಮದ ಜಾತ್ರೆಗೆ ಸಿದ್ಧತೆ: ಪಟ್ಟಣದ ಹಳೂರ ಓಣಿಯಲ್ಲಿರುವ ಶ್ರೀ ಗ್ರಾಮದೇವಿ ದೇವಸ್ಥಾನದಿಂದ ಪೇಟೆ ಓಣಿ ಹೊಂಡದ ಬಳಿಯ ದೇವಿಯ ಪಾದಗಟ್ಟೆಯಲ್ಲಿ ದೇವಿ ಪ್ರತಿಷ್ಠಾಪನೆಯಾಗುವುದರಿಂದ ಪಾದಗಟ್ಟೆಯಲ್ಲಿ ದೀಪಾಲಂಕೃತ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಪಟ್ಟಣಕ್ಕೆ ಆಗಮಿಸುವ ಪ್ರಮುಖ ರಸ್ತೆಗಳಿಗೆ ದೇವಿಯ ಹೆಸರಿನಲ್ಲಿ ಮಹಾದ್ವಾರ ಬಾಗಿಲುಮಾಡಲಾಗಿದೆ. ವಿದ್ಯುದ್ದೀಪದ ಸರಗಳು ಪಟ್ಟಣದಲ್ಲಿ ಸಾಮಾನ್ಯವಾಗಿವೆ. ಜನತೆ ಕಳೆದ 15 ದಿನಗಳಿಂದ ಮನೆಗಳಿಗೆ ಸುಣ್ಣಬಣ್ಣದಿಂದ ಬಳೆದು ಶೃಂಗರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಹೆಂಗಳೆಯರು ಹತ್ತಾರು ಬಗೆಯ ವಿವಿಧ ತಿಂಡಿ-ತಿನಿಸುಗಳನ್ನು ಮಾಡಿ ಪರಸ್ಥಳದ ಸಂಬಂಧಿ ಕರನ್ನು ಆಹ್ವಾನಿಸುತ್ತಿರುವುದು ವಿಶೇಷವಾಗಿದೆ. ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ ಮಾಡಿದೆ.

Advertisement

ನಾಲ್ಕು ದಿನ ನಡೆಯಲಿದೆ ಜಾತ್ರೋತ್ಸವ
ಜಾತ್ರೆ ಪ್ರಯುಕ್ತ ಮಾ.11ರಂದು ಧ್ವಜಾರೋಹಣ, ಪಟ್ಟಣದ ಎಲ್ಲ ದೇವರಿಗೆ ಪೂಜಾ ಕಾರ್ಯಕ್ರಮ, ಮಾ.12ರಂದು ದೇವಿಗೆ ಅಂಕಿ ಹಾಕುವುದು, ಮಾ.13ಕ್ಕೆ ನೂತನವಾಗಿ ನಿರ್ಮಾಣಗೊಂಡ ದೇವಿ ರಥದ ಭೂಸ್ಪರ್ಶ, ಕಳಸಾರೋಹಣ ಮತ್ತು ದೇವಸ್ಥಾನ, ಪಾದಗಟ್ಟೆಯಲ್ಲಿ ಹೋಮ ಹವನಗಳು ನಡೆಯಲಿವೆ. ಮಾ.14ರಂದು ಸಂಜೆ 7ಗಂಟೆಗೆ ಭವ್ಯ ಮೆರವಣಿಗೆ ಮೂಲಕ ಪಾದಗಟ್ಟೆಯಲ್ಲಿ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವುದು.

„ ಪ್ರವೀಣಕುಮಾರ ಎಸ್‌. ಅಪ್ಪಾಜಿ

Advertisement

Udayavani is now on Telegram. Click here to join our channel and stay updated with the latest news.

Next