Advertisement

ಅಕ್ಕಮಹಾದೇವಿ ವಿವಿಗೆ ನಿರಾಸಕ್ತಿಯ ಬರೆ

12:17 PM Oct 22, 2021 | Team Udayavani |

ಸಿಂಧನೂರು: ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಬಿಕಾಂ, ಬಿಎಸ್ಸಿ, ಬಿಎ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ದುಬಾರಿ ಶುಲ್ಕ ಪಾವತಿಸಲಾಗದ ಬಡವರಿಗೆ ವರವಾಗಬೇಕಾದ ಇಲ್ಲಿನ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ನಿರಾಸಕ್ತಿಯ ಮಂಕು ಕವಿದಿದೆ.

Advertisement

ಅತ್ಯಂತ ಕಡಿಮೆ ಶುಲ್ಕ ಪಾವತಿಸಿ ವಿಶ್ವವಿದ್ಯಾಲಯ ದರ್ಜೆಯ ಸುಸಜ್ಜಿತ ಸೌಲಭ್ಯದ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಕೇಂದ್ರದ ಬಗ್ಗೆಯೇ ಆಡಳಿತ ವರ್ಗದಲ್ಲಿ ಇಚ್ಛಾಶಕ್ತಿ ಕೊರತೆ ರಾರಾಜಿಸಿದೆ. ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಚ್ಚಿ ಹೋಗಿದ್ದ ವಿಜ್ಞಾನ ವಿಭಾಗ ತೆರೆಯಲು ನಾಲ್ಕು ಜನ ಉಪನ್ಯಾಸಕರು ಮನಸ್ಸು ಮಾಡಿದ ಪರಿಣಾಮ ಕಾಲೇಜಿನ ಸೀಟುಗಳೇ ಭರ್ತಿಯಾಗಿವೆ. ಅಕ್ಕಮಹಾದೇವಿ ವಿವಿ ಸೆಂಟರ್‌ನಲ್ಲಿ ಲಭ್ಯ ಇರುವ ಸೀಟು ಭರ್ತಿ ಮಾಡಲು ಯಾರೊಬ್ಬರೂ ಪ್ರೋತ್ಸಾಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸಿಕ್ಕರೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ಅಡವಿಯಲ್ಲಿ ಮಾತ್ರ ಫಲಕ

ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜ್ಞಾನಸಿಂಧು ಆವರಣ ಎಂಬ ಹೆಸರಿನಲ್ಲಿ ಸಣ್ಣ ಬ್ಯಾನರ್‌ ಕುಷ್ಟಗಿ ರಸ್ತೆಯಲ್ಲಿ ಹಾಕಲಾಗಿದೆ. ಸರ್ಕಾರಿ ವಿವಿ ಕೇಂದ್ರದಲ್ಲಿ ಬಿಎ ವಿಭಾಗದಲ್ಲಿನ ವ್ಯಾಸಂಗದ ವಿಷಯ ಕನ್ನಡ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಕಾರ್ಯ, ಇತಿಹಾಸ, ಮಹಿಳಾ ಅಧ್ಯಯನ ಪ್ರಸ್ತಾಪಿಸಲಾಗಿದೆ. ಸಾಮಾನ್ಯರಿಗೆ 4,235 ರೂ., ಎಸ್ಸಿ, ಎಸ್ಟಿ, ಒಬಿಸಿಗೆ 2,990 ರೂ. ಮಾತ್ರ ಶುಲ್ಕವೆಂದು ನಮೂದಿಸಲಾಗಿದೆ. ಬಿಕಾಂ ವಿಭಾಗದಲ್ಲಿನ ವಾಣಿಜ್ಯಶಾಸ್ತ್ರ ಕೋರ್ಸ್‌ಗೂ ಇದೇ ಶುಲ್ಕ ಅನ್ವಯವಾಗುತ್ತದೆ. ಬಿಎಸ್ಸಿ ಗಣಿತ ಶಾಸ್ತ್ರ, ಗಣಕ ವಿಜ್ಞಾನಕ್ಕೆ ಪ್ರವೇಶ ಪಡೆದರೆ, ಸಾಮಾನ್ಯ ವರ್ಗದವರು ಕೇವಲ 5,035 ರೂ., ಎಸ್ಸಿ, ಎಸ್ಟಿ ವರ್ಗದವರು 3,390 ರೂ. ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಸಿಂಧನೂರು ನಗರದಿಂದ ಎರಡು ಕಿ.ಮೀ ದೂರದಲ್ಲಿ ವಿವಿ ಕೇಂದ್ರಕ್ಕೆ ಅಡವಿಯಲ್ಲಿ ಸಾಗುವ ಮಾರ್ಗದಲ್ಲಿ ಈ ಬ್ಯಾನರ್‌ ಅಳವಡಿಸಿ, ಪ್ರಚಾರ ಪಡಿಸುತ್ತಿರುವುದು ವಿಶೇಷ.

ಇದನ್ನೂ ಓದಿ: ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

Advertisement

ಸೌಲಭ್ಯವಿದ್ದರೂ ಸದ್ಬಳಕೆಯಿಲ್ಲ

ಮಹಿಳೆಯರಿಗಾಗಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಪಿಜಿ ಮತ್ತು ಯುಜಿ ಕೇಂದ್ರ ಸಿಕ್ಕರೂ ಅದನ್ನು ಬಳಸಿಕೊಂಡು ಬಡವರಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ನಿರಾಸಕ್ತಿ ವ್ಯಾಪಿಸಿದೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ವಿವಿ ಕೇಂದ್ರದ ಬೃಹತ್‌ ಕಟ್ಟಡದಲ್ಲಿ ಏಳೆಂಟು ಸಿಬ್ಬಂದಿ ಮಾತ್ರ ಇರುತ್ತಾರೆ. ಅಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಭಾಗದ ಕೊಠಡಿ, ಬೆಂಚ್‌ ಸೌಲಭ್ಯವೂ ಇದೆ. ಯಾವುದೇ ಖಾಸಗಿ ಶಿಕ್ಷಣ ಹೊಂದಿಲ್ಲದಂತಹ ಬೃಹತ್‌ ಕಟ್ಟಡ ಹೊಂದಿದ ಏಕೈಕ ಕೇಂದ್ರವಾದರೂ ಅಲ್ಲಿ ಪ್ರವೇಶಾಂತಿ ಹೆಚ್ಚಿಸುವ ಪ್ರಕ್ರಿಯೆಗಳು ಮಂಕಾಗಿದ್ದು, ಬಡವರ ಪಾಲಿಗೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.

ಉನ್ನತ ಶಿಕ್ಷಣ ಮರೀಚಿಕೆ

ಮಹಿಳೆಯರಿಗೆ ಅತ್ಯುನ್ನತ ದರ್ಜೆಯ ಶಿಕ್ಷಣ ನೀಡಲಿಕ್ಕಾಗಿ ಸರ್ಕಾರ 10 ಕೋಟಿ ರೂ. ಗೂ ಹೆಚ್ಚಿನ ಮೊತ್ತ ವ್ಯಯಿಸಿದ್ದರೂ ಅಲ್ಲಿ ಸಂಸ್ಥೆಯ ಮಹತ್ವ ಸಾರುವ ಕೆಲಸವೇ ನಡೆಯುತ್ತಿಲ್ಲವೆಂಬ ವೇದನೆ ಹಲವರಿಗೆ ಕಾಡಲಾರಂಭಿಸಿದೆ. ಖಾಸಗಿ ಲಾಬಿಯ ಪ್ರಭಾವ ಇಲ್ಲವೇ ಸಿಬ್ಬಂದಿ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಈ ನಡುವೆ ಇರುವ ರಸ್ತೆ ಸುಧಾರಿಸುವ ನಿಟ್ಟಿನಲ್ಲಿ ಆಡಳಿತ ವರ್ಗವೂ ಮನಸ್ಸು ಮಾಡದ್ದರಿಂದ ಬಡ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮರೀಚಿಕೆ ಎಂಬಂತಾಗಿದೆ.

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next