ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಭಾರತೀಯ ಜನತಾ ಪಕ್ಷದ ಏಜೆಂಟ್ ಎಂದು ಭೀಮ್ ಆರ್ಮಿ ಸ್ಥಾಪಕ ಚಂದ್ರಶೇಖರ್ ಆಜಾದ್ ಬುಧವಾರ ಆರೋಪಿಸಿದ್ದಾರೆ.
ಚಂದ್ರಶೇಖರ್ ಆಜಾದ್ ಬಿಜೆಪಿ ಏಜೆಂಟ್. ಅಷ್ಟೇ ಅಲ್ಲ ಬಿಜೆಪಿ ಪಕ್ಷದ ಸೂಚನೆ ಮೇರೆಗೆ ಆಜಾದ್ ದಲಿತರ ಮತಗಳನ್ನು ಒಡೆಯುವ ನಿಟ್ಟಿನಲ್ಲಿ ವಾರಣಾಸಿಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಬಿಎಸ್ಪಿ(ಬಹುಜನ್ ಸಮಾಜ್ ಪಕ್ಷ) ವರಿಷ್ಠೆ ಮಾಯಾವತಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಆಜಾದ್ ಈ ರೀತಿ ತಿರುಗೇಟು ನೀಡಿದ್ದಾರೆ.
ಜೈಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭೀಮ್ ಆರ್ಮಿ ಸ್ಥಾಪಕ ಆಜಾದ್, ದಲಿತ ಚಳವಳಿಯಿಂದ ಪಲಾಯನ ಮಾಡುವುದಿಲ್ಲ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ವಾರಣಾಸಿಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಮಾಯಾವತಿ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ದಲಿತರ ಮೇಲೆ ಬಲವಂತವಾಗಿ ಪ್ರಕರಣ ದಾಖಲಿಸಿದ್ದ ಅಧಿಕಾರಿಗಳಿಗೆ ಅಖಿಲೇಶ್ ಭಡ್ತಿ ನೀಡಿದ್ದರು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಅಖಿಲೇಶ್ ತಂದೆ ಮುಲಾಯಂ ಲೋಕಸಭೆಯಲ್ಲಿ ಹೇಳಿದ್ದರು. ಇವರೆಲ್ಲಾ ಬಿಜೆಪಿ ಏಜೆಂಟರಾಗಿದ್ದಾರೆ, ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಬಿಜೆಪಿ ಏಜೆಂಟ್ ಅಲ್ಲ, ಹೌದು ನಾನು ಬಿಆರ್ ಅಂಬೇಡ್ಕರ್ ಏಜೆಂಟ್. ಒಂದು ವೇಳೆ ನನ್ನ ಸಮಾಜದ ಜನರೇ ನನ್ನ ಹಾದಿಯಲ್ಲಿ ಸಾಗುತ್ತಿಲ್ಲ ಎಂದಾದರೆ, ನಾನು ನನ್ನ ತಾಕತ್ತು ಏನೆಂದು ನಿಮಗೆ(ಅಖಿಲೇಶ್) ತೋರಿಸುತ್ತೇನೆ. ಒಂದು ವೇಳೆ ನೀವು ಅಧಿಕಾರಕ್ಕೆ ಏರಲು ನಾವು ಮತ ಹಾಕಿದ್ದೇವೆ ಎಂದಾದರೆ, ನಿಮ್ಮನ್ನು ಕೆಳಗಿಳಿಸಲು ನಾವು ಸಮರ್ಥರು ಎಂದು ಹೇಳಿದರು.