Advertisement

‘Akbar-Sita’ Lions Row: ಉನ್ನತ ಅಧಿಕಾರಿಯನ್ನು ಅಮಾನತುಗೊಳಿಸಿದ ತ್ರಿಪುರಾ ಸರ್ಕಾರ

12:43 PM Feb 26, 2024 | Team Udayavani |

ಪಶ್ಚಿಮ ಬಂಗಾಳ: ಮೃಗಾಲಯದ ಸಿಂಹ ಮತ್ತು ಸಿಂಹಿಣಿಗೆ ಕ್ರಮವಾಗಿ ಅಕ್ಬರ್ ಮತ್ತು ಸೀತಾ ಎಂದು ನಾಮಕರಣ ಮಾಡುವ ವಿವಾದದ ಮಧ್ಯೆ ತ್ರಿಪುರಾ ಸರ್ಕಾರವು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಪರಿಸರ ಪ್ರವಾಸೋದ್ಯಮ) ಪ್ರಬಿನ್ ಲಾಲ್ ಅಗರವಾಲ್ ಅವರನ್ನು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

Advertisement

ಅಕ್ಬರ್ ಮತ್ತು ಸೀತಾ ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ಗೆ ದೂರು ನೀಡಿದ ನಂತರ ಅಮಾನತುಗೊಳಿಸಲಾಗಿದೆ.

ಅಮಾನತ್ತಾದ ಅಧಿಕಾರಿ ಪ್ರಬೀನ್ ಲಾಲ್ ಅಗರ್ವಾಲ್ ಅವರು 1994ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದರು. ತ್ರಿಪುರಾ ರಾಜ್ಯದಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಫೆಬ್ರವರಿ 12 ರಂದೇ ತ್ರಿಪುರಾದ ಸೆಪಾಹಿಜಲ ಮೃಗಾಲಯದಿಂದ ಸಿಲಿಗುರಿಯ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಸಿಂಹ ಮತ್ತು ಸಿಂಹಿಣಿಯನ್ನು ವನ್ಯಜೀವಿಗಳ ವಿನಿಮಯ ಕಾರ್ಯಕ್ರಮದ ಅಡಿ ವರ್ಗಾವಣೆ ಮಾಡಲಾಗಿದೆ.

ವನ್ಯಜೀವಿಗಳನ್ನು ತ್ರಿಪುರಾ ರಾಜ್ಯದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಗೆ ವರ್ಗಾವಣೆ ಮಾಡುವ ವೇಳೆ ಅಲ್ಲಿನ ರಿಜಿಸ್ಟರ್ ಪುಸ್ತಕದಲ್ಲಿ ಸಿಂಹದ ಹೆಸರನ್ನು ಅಕ್ಬರ್‌ ಎಂದೂ, ಸಿಂಹಿಣಿ ಹೆಸರನ್ನು ಸೀತಾ ಎಂದು ನಮೂದಿಸಲಾಗಿತ್ತು ಎನ್ನಲಾಗಿದೆ.

Advertisement

ಅಕ್ಬರ್ ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಪ್ರಮುಖ ಮುಸ್ಲಿಂ ಆಡಳಿತಗಾರನಾಗಿದ್ದನು, ಆದರೆ ಹಿಂದೂ ಮಹಾಕಾವ್ಯ ರಾಮಾಯಣದ ಪ್ರಕಾರ ಸೀತೆಯನ್ನು ಭಗವಾನ್ ವಿಷ್ಣುವಿನ ಮಹತ್ವದ ಅವತಾರವಾದ ಭಗವಾನ್ ರಾಮನ ಪತ್ನಿ ಎಂದು ಗುರುತಿಸಲಾಗಿದೆ. ಕೆಲವು ವ್ಯಕ್ತಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣಕ್ಕೆ ಹೆಸರುಗಳನ್ನು ಬದಲಾಯಿಸುವಂತೆ ಒತ್ತಾಯಿಸಿ ವಿಎಚ್‌ಪಿ ಸರ್ಕ್ಯೂಟ್ ಬೆಂಚ್‌ಗೆ ಅರ್ಜಿ ಸಲ್ಲಿಸಿದೆ.

ಮೌಖಿಕ ಅವಲೋಕನದಲ್ಲಿ, ಕಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಸರ್ಕ್ಯೂಟ್ ಬೆಂಚ್ ವಿವಾದವನ್ನು ತಡೆಗಟ್ಟಲು ಸಿಂಹ ಮತ್ತು ಸಿಂಹಿಣಿಗೆ “ಸೀತಾ” ಮತ್ತು “ಅಕ್ಬರ್” ಎಂದು ಹೆಸರಿಸುವ ನಿರ್ಧಾರವನ್ನು ತಪ್ಪಿಸಬೇಕಿತ್ತು ಎಂದು ವ್ಯಕ್ತಪಡಿಸಿತು. ಸ್ವಾಮಿ ವಿವೇಕಾನಂದ ಅಥವಾ ರಾಮಕೃಷ್ಣ ಪರಮಹಂಸರಂತಹ ವ್ಯಕ್ತಿಗಳ ಹೆಸರನ್ನು ಸಿಂಹಕ್ಕೆ ಇಡಬಹುದೇ ಎಂದು ಪ್ರಶ್ನಿಸಿದ ಪೀಠ, ಪಶ್ಚಿಮ ಬಂಗಾಳದ ಮೃಗಾಲಯ ಪ್ರಾಧಿಕಾರವು ಮರುಪರಿಶೀಲಿಸಿ ಎರಡು ಪ್ರಾಣಿಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠ, ಮೌಖಿಕ ನಿರ್ದೇಶನದಲ್ಲಿ, ವಿವಾದದಿಂದ ದೂರವಿರಲು ಮತ್ತು ಪ್ರಾಣಿಗಳ ಮರುನಾಮಕರಣವನ್ನು ಪರಿಗಣಿಸುವಂತೆ ರಾಜ್ಯವನ್ನು ಕೇಳಿದೆ. ನೀವು ಸಿಂಹಕ್ಕೆ ಹಿಂದೂ ದೇವತೆ, ಮುಸ್ಲಿಂ ಪ್ರವಾದಿ ಅಥವಾ ಕ್ರಿಶ್ಚಿಯನ್ ದೇವರು ಅಥವಾ ಸ್ವಾತಂತ್ರ್ಯ ಹೋರಾಟಗಾರ ಅಥವಾ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಇಡುತ್ತೀರಾ? ನಮ್ಮ ದೇಶದ ಜನರು ಗೌರವಿಸುವ ಹೆಸರನ್ನಿಡುತ್ತೀರಾ?” ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಪ್ರಶ್ನಿಸಿದರು.

ಇದರ ನಡುವೆ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುವ ಹೆಚ್ಚುವರಿ ಅಡ್ವೊಕೇಟ್ ಜನರಲ್ ತ್ರಿಪುರಾದಲ್ಲೇ ಸಿಂಹಗಳಿಗೆ ಹೆಸರನ್ನು ಇಡಲಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Gyanvapi Case: ಹಿಂದೂಗಳಿಗೆ ಪೂಜೆ ಮುಂದುವರೆಸಲು ಅವಕಾಶ… ಮುಸ್ಲಿಂ ಪರ ಅರ್ಜಿ ತಿರಸ್ಕೃತ

Advertisement

Udayavani is now on Telegram. Click here to join our channel and stay updated with the latest news.

Next