Advertisement

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

05:45 PM Oct 25, 2024 | Team Udayavani |

ಉಡುಪಿ: ಕರಾವಳಿಯಲ್ಲಿ ಭಾರಿ ಸುದ್ದಿಯಾದ ಕಾರ್ಕಳ ತಾಲೂಕಿನ ಅಜೆಕಾರಿನ ಬಾಲಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಹಲವು ವಿಚಾರಗಳು ಹೊರ ಬರುತ್ತಿದೆ. ಬಾಲಕೃಷ್ಣರ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿ ಮಧ್ಯರಾತ್ರಿ ಬಾಲಕೃಷ್ಣರ ಮುಖಕ್ಕೆ ಬೆಡ್‌ ಶೀಟ್ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗಿದೆ.

Advertisement

ಅಜೆಕಾರು ಮರ್ಣೆ ಗ್ರಾಮದ ಬಾಲಕೃಷ್ಣ (44) ಕೊಲೆ ಪ್ರಕರಣದಲ್ಲಿ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಹೆಗ್ಡೆ ಎಂಬ ಇಬ್ಬರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ,

ಆಗಿದ್ದೇನು?

ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕೃಷ್ಣರಿಗೆ ಕಾರ್ಕಳ, ಮಣಿಪಾಲ ಕೆಎಂಸಿ, ಮಂಗಳೂರಿನ ವೆನ್‌ಲಾಕ್‌ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣಮುಖರಾದ ಕಾರಣ ಅ.19 ರಂದು ರಾತ್ರಿ ಅಜೆಕಾರಿನ ದೆಪ್ಪುತ್ತೆಗೆ ಕರೆದುಕೊಂಡು ಬರಲಾಗಿತ್ತು. ಮಧ್ಯರಾತ್ರಿ ಸುಮಾರು 3:30 ಗಂಟೆಗೆ ಮನೆಯಲ್ಲಿ ಬೊಬ್ಬೆ ಕೇಳಿಬಂದಿತ್ತು. ಬಾಲಕೃಷ್ಣ ತಂದೆ ಸಂಜೀವ ಹೋಗಿ ನೋಡಿದಾಗ ಬಾಲಕೃಷ್ಣ ಮಾತನಾಡದ ಸ್ಥಿತಿಯಲ್ಲಿದ್ದರು. ಬೆಳಿಗ್ಗೆ 8 ಗಂಟೆಗೆ ಅಜೆಕಾರಿನ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಬಾಲಕೃಷ್ಣ ಮೃತ ಪಟ್ಟಿರುವುದು ತಿಳಿದು ಬಂದಿತ್ತು.

Advertisement

ಒಮ್ಮೆಲೆ ಅನಾರೋಗ್ಯದಿಂದ ಬಾಲಕೃಷ್ಣ ಮೃತಪಟ್ಟ ಬಗ್ಗೆ ಮನೆಯವರು ಅನುಮಾನದಿಂದ ಪೊಲೀಸರಿಗೆ ದೂರು ನೀಡಿದ್ದರು.

ಇನ್ಸ್ಟಾಗ್ರಾಮ್‌ ಲವ್‌

ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಪ್ರತಿಮಾಗೆ ಇನ್ಸ್ಟಾಗ್ರಾಮ್‌ ನಲ್ಲಿ ಸಕ್ರಿಯವಾಗಿದ್ದಳು. ಗಂಡನೊಂದಿಗೂ ರೀಲ್ಸ್‌ ಗಳನ್ನು ಮಾಡುತ್ತಿದ್ದಳು. ಇದೇ ವೇಳೆ ಕಾರ್ಕಳದ ದಿಲೀಪ್‌ ಹೆಗ್ಡೆ ಎಂಬಾತ ಇನ್ಸ್ಟಾಗ್ರಾಮ್‌ ನಲ್ಲಿ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಅದು ಅನೈತಿಕ ಸಂಬಂಧದತ್ತ ಬೆಳೆದಿತ್ತು. ತಮ್ಮ ಸಂಬಂಧಕ್ಕೆ  ಗಂಡ ಬಾಲಕೃಷ್ಣ ಅಡ್ಡಿ ಬರಬಹುದೆಂದು ಇಬ್ಬರೂ ಮಾತನಾಡಿಕೊಂಡು ಆತನನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದಾರೆ.

ಅವರ ಸಂಚಿನಂತೆ ದಿಲೀಪ್‌ ಹೆಗ್ಡೆಯು ಪ್ರತಿಮಾಳಿಗೆ ವಿಷ ಪದಾರ್ಥವನ್ನು ತಂದು ಕೊಟ್ಟಿದ್ದು, ಅದನ್ನು ಬಾಲಕೃಷ್ಣರವರಿಗೆ ಊಟದಲ್ಲಿ ಸೇರಿಸಿ ಕೊಡುವಂತೆ ತಿಳಿಸಿದ್ದ. ಅದರಂತೆ ಅವಳು ಊಟದಲ್ಲಿ ಸೇರಿಸಿ ಹಲವು ಬಾರಿ ಕೊಟ್ಟಿದ್ದಾಳೆ. ಇದರಿಂದ ಬಾಲಕೃಷ್ಣ ಅನಾರೋಗ್ಯಗೊಂಡು ಹಾಸಿಗೆ ಹಿಡಿದಿದ್ದ. ಕೊನೆಗೆ ಅ.20ರಂದು ಗಂಡನನ್ನು ಶಾಶ್ವತವಾಗಿ ತೊಲಗಿಸುವ ಉಪಾಯ ಹೂಡಿದ್ದ ಪ್ರತಿಮಾ, ದಿಲೀಪ್‌ ಹೆಗ್ಡೆಯನ್ನು ದೆಪ್ಪುತ್ತೆಯ ಮನೆಗೆ ಬರಲು ಹೇಳಿದ್ದಳು.

ಪ್ರತಿಮಾ ಮತ್ತು ದಿಲೀಪ್

ಮಧ್ಯರಾತ್ರಿ 1:30 ಗಂಟೆಯ ಸುಮಾರಿಗೆ ಪ್ರತಿಮಾಳ ಮನೆಗೆ‌ ಆತ ಬಂದಿದ್ದು, ದಿಲೀಪ್‌ ಹೆಗ್ಡೆ ಮತ್ತು ಪ್ರತಿಮಾ ಇಬ್ಬರೂ ಸೇರಿ ಬೆಡ್‌ ಶೀಟನ್ನು ಬಾಲಕೃಷ್ಣ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ. ಇದೀಗ ಇಬ್ಬರು ಕೂಡಾ ಪೊಲೀಸರ ಅತಿಥಿಗಳಾಗಿದ್ದಾರೆ.

ಗಂಡನೊಂದಿಗೆ ಸೇರಿ ʼಕರಿಮಣಿ ಮಾಲಿಕ ನೀನಲ್ಲʼ ಎಂದು ರೀಲ್ಸ್‌ ಮಾಡಿದ್ದಾಕೆ ಕೊನೆಗೂ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ʼಇನ್ನಿಲ್ಲʼ ಎಂದು ಮಾಡಿದ್ದು ಮಾತ್ರ ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next