Advertisement

Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್‌

07:59 AM Oct 28, 2024 | Team Udayavani |

ಅಜೆಕಾರು: ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಕೊಲೆಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಪ್ರತಿಮಾ ತನ್ನ ಪತಿ ಬಾಲಕೃಷ್ಣ ಅವರಿಗೆ ಅಹಾರದಲ್ಲಿ ಸೇರಿಸಿದ್ದ ವಿಷ ಪದಾರ್ಥವು ಆರ್ಸೆನಿಕ್‌ ಟ್ರೈ ಆಕ್ಸೈಡ್‌ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Advertisement

ಆರ್ಸೆನಿಕ್‌ ಟ್ರೈ ಆಕ್ಸೈಡ್‌ ವಿಷ ಪದಾರ್ಥವನ್ನು ಪ್ರಿಯಕರ ದಿಲೀಪ್‌ ಹೆಗ್ಡೆ ಉಡುಪಿಯ ಲ್ಯಾಬ್‌ ಒಂದರಿಂದ ಪಡೆದಿದ್ದ ಎನ್ನಲಾಗಿದ್ದು, ಈ ಹಿನ್ನೆಲೆ
ಯಲ್ಲಿ ಅಜೆಕಾರು ಪೊಲೀಸರು ಲ್ಯಾಬ್‌ ಮಾಲಕರನ್ನು ಹಾಗೂ ಅವರ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಅದರ ಜತೆ ಎ1 ಆರೋಪಿ ಪ್ರತಿಮಾಳಿಂದ 2 ಮೊಬೈಲ್‌ ಹಾಗೂ ಎ 2 ಆರೋಪಿ ದಿಲೀಪ್‌ ಹೆಗ್ಡೆಯಿಂದ 1 ಮೊಬೈಲ್‌ ಮತ್ತು 2 ಸಿಮ್‌ ಸೇರಿದಂತೆ ಒಟ್ಟು 4 ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.

ಉಡುಪಿಯ ಲ್ಯಾಬ್‌ನಿಂದ ಆರ್ಸೆನಿಕ್‌ ಟ್ರೈ ಆಕ್ಸೈಡ್‌ ತರಿಸಿ ಬಾಲಕೃಷ್ಣ ಅವರ ಪತ್ನಿ ಪ್ರತಿಮಾಳಿಗೆ ನೀಡಿದ್ದ. ಪ್ರತಿಮಾ ನಿತ್ಯ ಆಹಾರದ ಜತೆ ಸ್ವಲ್ಪ ಸ್ವಲ್ಪವೇ ಪತಿಗೆ ನೀಡುತ್ತಿದ್ದಳು. ಇದರಿಂದಾಗಿ ಬಾಲಕೃಷ್ಣ ಅವರ ಅಂಗಾಂಗಗಳು ಸಂವೇದನೆ ಕಳೆದುಕೊಂಡು ಆಸ್ಪತ್ರೆ ಸೇರುವಂತಾಯಿತು. ಚಿಕಿತ್ಸೆಯ ಬಳಿಕ‌ ಚೇತರಿಸಿಕೊಂಡಿದ್ದ ಬಾಲಕೃಷ್ಣ ಅವರನ್ನು ಅ. 19ರ ರಾತ್ರಿ ಮನೆಗೆ ಕರೆತರಲಾಗಿತ್ತು. ಆರೋಪಿಗಳಾದ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿಕೊಂಡು ಅದೇ ದಿನ ಮಧ್ಯರಾತ್ರಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ವಿಷದ ಬಾಟಲಿಗೆ ಹುಡುಕಾಟ
ಪ್ರತಿಮಾಳು ವಿಷವನ್ನು ಪ್ರತೀನಿತ್ಯ ತನ್ನ ಪತಿಗೆ ಆಹಾರದ ಜತೆ ಮಿಶ್ರಣ ಮಾಡಿ ಕೊಟ್ಟ ಬಳಿಕ ಖಾಲಿಯಾದ ವಿಷದ ಬಾಟಲಿಯನ್ನು ಪ್ರಿಯಕರ ದಿಲೀಪ್‌ ಹೆಗ್ಡೆಗೆ ನೀಡಿದ್ದು, ಆತ ಕಾರ್ಕಳ ಕುಕ್ಕುಂದೂರಿನ ಅಯ್ಯಪ್ಪನಗರದ ಕುಕ್ಕುಂದೂರು-ಹಿರ್ಗಾನ ಸಂಪರ್ಕ ರಸ್ತೆಯ ಬಳಿ ಬಾಟಲಿ ಎಸೆದಿರುವುದಾಗಿ ಪೊಲೀಸರಲ್ಲಿ ಬಾಯ್ಬಿಟ್ಟಿದ್ದ. ಆದರೆ ಅ. 27ರಂದು ಪೊಲೀಸರು ಬಾಟಲಿ ಪತ್ತೆಗಾಗಿ ಆರೋಪಿಯನ್ನು ಆ ಸ್ಥಳಕ್ಕೆ ಕರೆದೊಯ್ದು ಹುಡುಕಿದಾಗ ಅಲ್ಲಿ ಯಾವುದೇ ಬಾಟಲಿ ಪತ್ತೆಯಾಗಿಲ್ಲ.

ದಿಲೀಪ್‌ ಹೆಗ್ಡೆಯು ಪ್ರತಿಮಾಳಿಗೆ ರಾಸಾಯನಿಕದ ಬಾಟಲಿಗಳನ್ನು ನೀಡಿದ ಮರ್ಣೆ ಗ್ರಾಮದ ಅಜೆಕಾರು ಪೇಟೆ ಬಳಿಯ “ಪ್ರತಿಮಾಸ್‌ ಬ್ಯೂಟಿ ಲಾಂಜ್‌’ ಸಮೀಪದಲ್ಲಿ ಪೊಲೀಸರ ಮಹಜರು ಕಾರ್ಯ ನಡೆದಿದೆ. ಮೃತರ ಮೂಳೆಗಳಲ್ಲಿ ಆರ್ಸೆನಿಕ್‌ ಟ್ರೈಆಕ್ಸೆ„ಡ್‌ ರಾಸಾಯನಿಕ ಇರುವ ಸಾಧ್ಯತೆ ಬಗ್ಗೆ ಮೃತರ ತಂದೆಯಾದ ಸಂಜೀವ ಸಾಲಿಯಾನ್‌ ಅವರಲ್ಲಿ ವಿಚಾರಿಸಿ, ಅವರ ಒಪ್ಪಿಗೆಯಂತೆ ಮೃತರ ಉತ್ತರಕ್ರಿಯೆ ಬಗ್ಗೆ ತೆಗೆದಿರಿಸಿದ್ದ ಮೂಳೆಗಳ 2 ತುಂಡುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Advertisement

ಚೌತಿಯ ದಿನದಂದೇ ವಿಷ ಪ್ರಾಶನ
ಹಬ್ಬ ಎಂದರೆ ಜತೆಗೂಡಿ ಪಾಯಸದ ಊಟ ಮಾಡುವುದು ಕ್ರಮ. ಆದರೆ ಇಲ್ಲಿ ಪತ್ನಿಯೇ ತಾಳಿ ಕಟ್ಟಿದ ಪತಿಗೆ ವಿಷ ನೀಡಿರುವುದು ವಿಪರ್ಯಾಸವೇ ಸರಿ. ಪತಿ ಬಾಲಕೃಷ್ಣ ಅವರನ್ನು ಮುಗಿಸಲು ವ್ಯವಸ್ಥಿತ ಷಡ್ಯಂತ್ರ ಹೆಣೆದಿದ್ದ ಪ್ರತಿಮಾ ಚೌತಿಯ ದಿನ ಹಬ್ಬದ ಊಟದಲ್ಲಿ ಪತಿಗೆ ಮೊದಲು ವಿಷ ಬೆರೆಸಿ ಕೊಟ್ಟಿದ್ದಳು. ಆ ದಿನ ಅವರು ವಾಂತಿ ಮಾಡಿದ್ದು ಅನಂತರ ಸ್ವಲ್ಪ ಸ್ವಲ್ಪವೇ ವಿಷ ನೀಡಿದ್ದರಿಂದ ಅವರ ಆರೋಗ್ಯ ಬಿಗಡಾಯಿಸುತ್ತ ಸಾಗಿತ್ತು. ಅದರ ನಡುವೆ ಜ್ವರ ಕೂಡ ಬಂದಿತ್ತು.

ಆರ್ಥಿಕ ನೆರವು ನೀಡಿದ್ದ ಸಾರ್ವಜನಿಕರು
ಸುಮಾರು ಎರಡು ತಿಂಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾಕಷ್ಟು ಹಣ ಖರ್ಚಾಗಿತ್ತು. ಭಾವನ ಚಿಕಿತ್ಸೆಗಾಗಿ ಸಂದೀಪ್‌ ಸುಮಾರು ಒಂದು ಲಕ್ಷ ರೂ. ವ್ಯಯಿಸಿದ್ದರು. ಇನ್ನೂ ಹೆಚ್ಚಿನ ಹಣ ಅಗತ್ಯವಾಗಿದ್ದರಿಂದ ಅವರು ಸಾಮಾಜಿಕ ಜಾಲತಾಣದ ಮೂಲಕ ನೆರವಿಗೆ ಮನವಿ ಮಾಡಿದ್ದರು. ಪ್ರತಿಮಾ ಕೂಡ ಜಾಲತಾಣದ ಮೂಲಕ ನೆರವು ಮಾಡುವಂತೆ ಯಾಚಿಸಿದ್ದರು. ಇಬ್ಬರೂ ಪ್ರತ್ಯೇಕ ಖಾತೆ ನೀಡಿದ್ದು ಸಾಕಷ್ಟು ನೆರವು ಸಾರ್ವಜನಿಕರಿಂದ ದೊರಕಿತ್ತು.

ಇಂದು ದಿಲೀಪ್‌ ಕೋರ್ಟಿಗೆ
ಎ1 ಆರೋಪಿ ಪ್ರತಿಮಾಳ ಪ್ರಿಯಕರ ಎ2 ಆರೋಪಿ ದಿಲೀಪ್‌ ಹೆಗ್ಡೆಯ ಪೊಲೀಸ್‌ ಕಸ್ಟಡಿ ಅ. 28ರಂದು ಅಂತ್ಯಗೊಳ್ಳಲಿದ್ದು, ಆರೋಪಿಯನ್ನು ಸೋಮ
ವಾರ ಬೆಳಗ್ಗೆ ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ. ಆತನನ್ನು ಮೂರು ದಿನ ಪೊಲೀಸರ ಕಸ್ಟಡಿಗೆ ನೀಡಲಾಗಿತ್ತು. ವಿಷದ ಬಾಟಲಿ ಸಹಿತ ಇನ್ನೂ ಕೆಲ ಸೊತ್ತುಗಳನ್ನು ವಶಕ್ಕೆ ಪಡೆಯಬೇಕಾಗಿರುವ ಕಾರಣ ಮತ್ತು ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಯಬೇಕಿರುವ ಕಾರಣ ಆರೋಪಿಯನ್ನು ಮತ್ತಷ್ಟು ದಿನ ಪೊಲೀಸರು ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಇನ್ನೊಂದು ಹಂತದಲ್ಲಿ ದಿಲೀಪ್‌ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಹಿರಿಯಡಕ ಸಬ್‌ಜೈಲಿನಲ್ಲಿರುವ ಆರೋಪಿ ಪ್ರತಿಮಾಳನ್ನು ಪೊಲೀಸರು ಕಸ್ಟಡಿಗೆ ಕೇಳುವ ಪ್ರಕ್ರಿಯೆಯನ್ನು ನಡೆಸಬಹುದು. ಅನಂತರ ಇಬ್ಬರನ್ನೂ ಒಟ್ಟಿಗೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಾಗಿದೆ.

ಏನಿದು ಆರ್ಸೆನಿಕ್‌ ಟ್ರೈ ಆಕ್ಸೈಡ್‌ ?
ಆರ್ಸೆನಿಕ್‌ ಟ್ರೈ ಆಕ್ಸೈಡ್‌ ರಾಸಾಯನಿಕ ಪದಾರ್ಥ ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತು ಎನ್ನಲಾಗಿದ್ದು, ಇದನ್ನು ಹೆಚ್ಚಾಗಿ ಶಾಲಾ ಕಾಲೇಜು
ಗಳ ಲ್ಯಾಬ್‌ಗಳಲ್ಲಿ ಬಳಸಲಾಗುತ್ತದೆ. ಬಿಳಿ ಅಥವಾ ಹಳದಿ ಬಣ್ಣದ ಪುಡಿಯಾಗಿದ್ದು, ವಾಸನೆಯಿಲ್ಲ. ಈ ವಿಷಕಾರಿ ಪದಾರ್ಥ ನೀರು, ಎಥೆನಾಲ್‌ ಮತ್ತು ಇತರ ಸಾವಯವ ದ್ರಾವಕಗಳಲ್ಲಿ ಕರಗುತ್ತದೆ.

ಆರ್ಸೆನಿಕ್‌ ಟ್ರೈ ಆಕ್ಸೈಡ್‌ ಸೇವನೆಯಿಂದ ವಾಕರಿಕೆ, ಅತಿಸಾರ ಹೊಟ್ಟೆ ನೋವು, ಆಯಾಸ, ತಲೆನೋವು, ತಲೆತಿರುಗುವಿಕೆ, ದೌರ್ಬಲ್ಯ, ರಕ್ತಹೀನತೆ,  ಥ್ರಂಬೋಸೈಟೋಪೆನಿಯಾ (ಕಡಿಮೆ ಪ್ಲೇಟ್ಲೆಟ್‌ ಎಣಿಕೆ), ಲ್ಯುಕೋಪೆನಿಯಾ (ಕಡಿಮೆ ಬಿಳಿ ರಕ್ತ ಕಣಗಳ ಸಂಖ್ಯೆ), ಪ್ಲಾಸ್ಟಿಕ್‌ ರಕ್ತಹೀನತೆ (ಮೂಳೆ ಮಜ್ಜೆಯ ವೈಫ‌ಲ್ಯ) ಕಾರ್ಡಿಯಾಕ್‌ ಆರ್ಹೆತ್ಮಿಯಾಸ್‌, ರಕ್ತ ಕಟ್ಟಿ ಹೃದಯ ಸ್ಥಂಭನ, ಉಸಿರಾಟದ ವೈಫ‌ಲ್ಯ, ರೋಗಗ್ರಸ್ತವಾಗುವಿಕೆಗಳು ಕೋಮಾ, ನರವೈಜ್ಞಾನಿಕ ಹಾನಿ ಹೆಪಟೊಟಾಕ್ಸಿಸಿಟಿ (ಯಕೃತ್ತಿನ ಹಾನಿ) ನೆಫ್ರಾಟಾಕ್ಸಿಸಿಟಿ (ಮೂತ್ರಪಿಂಡದ ಹಾನಿ), ಕ್ಯಾನ್ಸರ್‌ಗಳು ಕಾಡುತ್ತವೆ.

ರೀಲ್ಸ್‌ಗಾಗಿ ಪತಿಯ ಪೀಡಿಸುತ್ತಿದ್ದ ಪತ್ನಿ
ಕೊರೊನಾ ಬಳಿಕ ಪ್ರತಿಮಾಗೆ ರೀಲ್ಸ್‌ ಅಭ್ಯಾಸ ಹೆಚ್ಚಾಗಿತ್ತು. ಕೆಲವು ಸಮಯದ ಹಿಂದೆ ಮಾಡಿದ್ದ ಕರಿಮಣಿ ಮಾಲೀಕ ನೀನಲ್ಲ.. ಎಂಬ ಪತಿಯೊಂದಿಗೆ
ಮಾಡಿದ್ದ ರೀಲ್ಸ್‌ ಹೆಚ್ಚು ಜನಪ್ರಿಯವಾಗಿತ್ತು. ಗಂಡ ಬಾಲಕೃಷ್ಣ ಪೂಜಾರಿಗೆ ರೀಲ್ಸ್‌ನಲ್ಲಿ ಅಷ್ಟೊಂದು ಆಸಕ್ತಿ ಇಲ್ಲವಾಗಿದ್ದರೂ ಪತ್ನಿಯ ಒತ್ತಾಯ ತಾಳಲಾರದೆ ಭಾಗವಹಿಸುತ್ತಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ.

ರೀಲ್ಸ್‌ನಲ್ಲಿ ಭಾಗವಹಿಸಲೇಬೇಕು ಎಂಬ ಪತ್ನಿಯ ಅತಿಯಾದ ಪೀಡನೆಯಿಂದ ರೋಸಿ ಹೋಗಿದ್ದ ಬಾಲಕೃಷ್ಣ ಅವರು ಹಲವಾರು ಬಾರಿ ಪತ್ನಿಗೆ ಗದರಿದ್ದರು. ರೀಲ್ಸ್‌ ಮಾಡದಿರುವಂತೆಯೂ ತಿಳಿಸಿದ್ದರು. ಬ್ಯೂಟಿಪಾರ್ಲರ್‌ ಆರಂಭಿಸಿದ ಬಳಿಕ ಗೆಳತಿಯರ ಜತೆಯೂ ರೀಲ್ಸ್‌ ಮಾಡುತ್ತಿದ್ದಳು. ಎಸೆಸೆಲ್ಸಿವರೆಗೆ ಓದಿದ್ದ ಪ್ರತಿಮಾ ಮೊಬೈಲ್‌ನಲ್ಲಿ ರೀಲ್ಸ್‌ ಮಾಡುವ ಕಲೆಯನ್ನು ಕರಗತಮಾಡಿಕೊಂಡಿದ್ದಳು. 200ಕ್ಕೂ ಹೆಚ್ಚು ರೀಲ್ಸ್‌ ಮಾಡಿ ಅದನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next