Advertisement

ಆಜ್ರಿ: ಮುಂಗಾರು ಪೂರ್ವ ಸಿದ್ಧತೆಯಾಗಿಲ್ಲ

10:47 PM May 31, 2020 | Team Udayavani |

ಕುಂದಾಪುರ: ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಆಜ್ರಿಹರ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಗಬೇಕಾದ ಸಿದ್ಧತೆ ಮಾತ್ರ ಇನ್ನೂ ಶುರುವಾದಂತೆ ಕಾಣುತ್ತಿಲ್ಲ.

Advertisement

ಆಜ್ರಿ ಪೇಟೆಯಲ್ಲಿ ಪ್ರತಿ ವರ್ಷದ ಮಳೆಗಾಲದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗುತ್ತದೆ. ಇದಕ್ಕೆ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಕೆಲವೆಡೆ ಚರಂಡಿಯೇ ಇಲ್ಲದಿರುವುದು ಪ್ರಮುಖ ಕಾರಣ. ಈ ಬಾರಿಯೂ ಕೂಡ ಸ್ಥಳೀಯಾಡಳಿತ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಆಜ್ರಿಯ ಪೇಟೆಯಲ್ಲಿ ಚರಂಡಿಯ ಹೂಳೆತ್ತುವ, ರಸ್ತೆ ಬದಿಯ ಗಿಡಗಂಟಿ ತೆರವು ಸಹಿತ ಮುಂಗಾರಿಗೆ ಮುನ್ನ ಆಗಬೇಕಾಗಿರುವ ಯಾವುದೇ ಪೂರ್ವ ಸಿದ್ಧತಾ ಕಾರ್ಯಗಳು ಆರಂಭಗೊಂಡಿಲ್ಲ.

ಇನ್ನು ಆಜ್ರಿಯಿಂದ ನೇರಳಕಟ್ಟೆ ಕಡೆಗೆ ಸಂಚರಿಸುವ ಹಾಗೂ ಆಜ್ರಿಯಿಂದ ಸಿದ್ದಾಪುರ ಕಡೆಗೆ ಸಂಚರಿಸುವ ಪ್ರಮುಖ ರಸ್ತೆಗಳ ಬದಿಯಲ್ಲಿ ಬೆಳೆದಿರುವ ಗಿಡಗಂಟಿ, ಪೊದೆಗಳು ರಸ್ತೆಗೆ ತಾಗಿಕೊಂಡಿವೆ. ಪ್ರತಿ ದಿನ ಹತ್ತಾರು ಬಸ್‌ಗಳು, ಇತರ ಘನ ವಾಹನಗಳು ಓಡಾಡುತ್ತವೆ. ರಸ್ತೆಗೆ ತಾಗಿಕೊಂಡ ಈ ಪೊದೆಗಳಿಂದಾಗಿ ಅಪಘಾತ ಸಂಭವಿಸುವ, ಮಾತ್ರವಲ್ಲದೆ ವಾಹನ ಸವಾರರಿಗೆ ಅಪಾಯಕಾರಿಯಾಗುವ ಭೀತಿಯೂ ಇದೆ. ಕೂಡಲೇ ಇದನ್ನು ತೆರವು ಮಾಡಬೇಕು ಎನ್ನುವುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆಯೇ ತೋಡು!
ಆಜ್ರಿಯ ಪೇಟೆಯಿಂದ ಆರಂಭಗೊಂಡು, ಎಲ್ಲ ಪ್ರಮುಖ ರಸ್ತೆಗಳಿಗೂ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲದಂತಾಗಿದೆ. ಕೆಲವೆಡೆಗಳಲ್ಲಿ ಚರಂಡಿಯಿದ್ದರೂ ಅದರಲ್ಲಿ ಹೂಳು ತುಂಬಿದೆ. ಕಸ, ಕಡ್ಡಿಗಳ ರಾಶಿಯೇ ಇದೆ. ಅದನ್ನು ತೆರವು ಮಾಡಿಲ್ಲ. ಇದರಿಂದ ಪ್ರತಿ ಮಳೆಗಾಲದಲ್ಲೂ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆಗಳು ತೋಡುಗಳಂತೆ ಕಾಣುತ್ತವೆ. ಮತ್ತೆ ಕೆಲವು ಕಡೆಗಳಲ್ಲಿ ಚರಂಡಿಯ ನೀರು ಸಮರ್ಪಕವಾಗಿ ಹರಿದು ಹೋಗದೆ ಅಲ್ಲೇ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತಿದೆ.

ಶೀಘ್ರ ಕೆಲಸ ಆರಂಭ
ಈ ಬಗ್ಗೆ ಪಂಚಾಯತ್‌ನಲ್ಲಿ ಚರ್ಚಿಸಲಾಗಿದೆ. ಶೀಘ್ರ ಚರಂಡಿ ಸ್ವತ್ಛತೆ, ಹೂಳೆತ್ತುವ ಕೆಲಸ ಮಾಡಲಾಗುವುದು. ಇನ್ನು ಚರಂಡಿ ಇಲ್ಲದಿರುವ ಕಡೆ ಚರಂಡಿ ನಿರ್ಮಾಣ ಕುರಿತಂತೆ ಜಿ.ಪಂ., ತಾ.ಪಂ.ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಗೋಪಾಲ್‌ ದೇವಾಡಿಗ,
ಪಿಡಿಒ, ಆಜ್ರಿ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next