Advertisement

ಏರ್‌ ಜಾಕ್‌ ಕುಸಿದು ಕಾರ್ಮಿಕ ಸಾವು

05:44 PM May 22, 2022 | Team Udayavani |

ಕುರುಗೋಡು: ಸಾರಿಗೆ ಸಂಸ್ಥೆಯ ಬಸ್‌ ರಿಪೇರಿ ಮಾಡುತ್ತಿದ್ದ ವೇಳೆಯಲ್ಲಿ ಜಾಕ್‌ಏರ್‌ ಬಲೂನ್‌ ಕುಸಿದ ಪರಿಣಾಮ ತಾಂತ್ರಿಕ ಸಹಾಯಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುರುಗೋಡಿನ ಬಸ್‌ ಡಿಪೋದಲ್ಲಿ ಶನಿವಾರ ಬೆಳಗ್ಗೆ ಜರುಗಿದೆ.

Advertisement

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗಕ್ಕೆ ಸೇರಿದ ಕುರುಗೋಡು ಬಸ್‌ ಡಿಪೋದಲ್ಲಿ ತಾಂತ್ರಿಕ ಸಹಾಯಕನಾಗಿದ್ದ ಟಿ. ಮಂಜುನಾಥ್‌ (32) ಮೃತಪಟ್ಟ ವ್ಯಕ್ತಿ.

ಎಂದಿನಂತೆ ಕರ್ತವ್ಯಕ್ಕೆ ಹಾಜರಾದಾಗ ಬೆಳಗ್ಗೆ 8ಗಂಟೆ ಸಮಯದಲ್ಲಿ ಬಸ್ಸಿಗೆ ಜಾಕ್‌ ಅಳವಡಿಸಿ ಬಲೂನ್‌ ರಿಪೇರಿ ಮಾಡಲು ಮುಂದಾಗಿದ್ದು, ಈ ವೇಳೆ ಜಾಕ್‌ಏಕಾಏಕಿ ಸ್ಲಿಪ್‌ ಆಗಿ ಮಂಜುನಾಥನ ಎದೆ ಮತ್ತು ಕುತ್ತಿಗೆಯ ಮೇಲೆ ಕುಸಿದಿದೆ ಎನ್ನಲಾಗಿದೆ.

ಅಲ್ಲಿಯೇ ಇದ್ದ ಕೆಲ ನೌಕರರು ಮಂಜುನಾಥನನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ನಂತರ ಮಂಜುನಾಥ್‌ ಅವರನ್ನು ಹೊರಗೆ ತೆಗೆದು ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸಮುದಾಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸಾರಿಗೆ ಸಂಸ್ಥೆಯಲ್ಲಿ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷವಷ್ಟೇ ಕುರುಗೋಡು ಡಿಪೋಗೆ ವರ್ಗಾವಣೆಗೊಂಡಿದ್ದರು. ಮಂಜುನಾಥ್‌ ಸಾವಿಗೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಸಿಬ್ಬಂದಿ ತಮ್ಮ ಆಕ್ರೋಶ ಹೊರಹಾಕಿದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next