ಹೊಸದಿಲ್ಲಿ : ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ ವಿರುದ್ಧ ದಿಲ್ಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಲಂಚದ ಕೇಸೊಂದನ್ನು ದಾಖಲಿಸಿಕೊಂಡಿದೆ.
ಎಐಎಡಿಎಂಕೆ ಪಕ್ಷದ ಎರಡೆಲೆಗಳ ಚುನಾವಣಾ ಚಿಹ್ನೆಗಾಗಿ ನಡೆಯತ್ತಿರುವ ಸಮರದ ಮೇಲೆ ಪ್ರಭಾವ ಬೀರುವುದಕ್ಕಾಗಿ ಬಳಸಲು ಉದ್ದೇಶಿಸಲಾಗಿದ್ದ 1.5 ಕೋಟಿ ನಗದು ವಶ ಪಡಿಸಿಕೊಳ್ಳಲಾಗಿರುವುದನ್ನು ಅನುಸರಿಸಿ ದಿಲ್ಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರನ್ನು ಎಫ್ಐಆರ್ನಲ್ಲಿ ಹೆಸರಿಸಿರುವುದಾಗಿ ಎಎನ್ಐ ಸುದ್ದಿ ಮೂಲಗಳು ತಿಳಿಸಿವೆ.
ದಿಲ್ಲಿ ಪೊಲೀಸರು ಇಂದು ಬೆಳಗ್ಗೆ ಮಧ್ಯ ದಿಲ್ಲಿಯಲ್ಲಿನ ಹೊಟೇಲ್ ಒಂದರಿಂದ ಎಸ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿ ಆತನ ಬಳಿ ಇದ್ದ 1.5 ಕೋಟಿ ರೂ. ನಗದನ್ನು ಹಾಗೂ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಕಾರನ್ನು ವಶಪಡಿಸಿಕೊಂಡಿದ್ದರು.
ಎಐಎಡಿಎಂಕೆ ಪಕ್ಷದ ಎರಡೆಲೆಯ ಚುನಾವಣಾ ಚಿಹ್ನೆಗಾಗಿ ಓ ಪನ್ನೀರಸೆಲ್ವಂ ಮತ್ತು ತಮಿಳು ನಾಡಿನ ಆಳುವ ಪಕ್ಷವಾಗಿರುವ ವಿ ಕೆ ಶಶಿಕಲಾ ಬಣದ ನಡುವೆ ತೀವ್ರವಾದ ಸಮರ ಏರ್ಪಟ್ಟಿರುವ ನಡುವೆಯೇ ಈ ಬಂಧನ ಹಾಗೂ 1.5 ಕೋಟಿ ರೂ. ವಶೀಕರಣ ನಡೆದಿರುವುದು ಗಮನಾರ್ಹವಾಗಿದೆ.
ಆರ್ ಕೆ ನಗರ ಉಪಚುನಾವಣೆಗೆ ಮುನ್ನವೇ ಕಳೆದ ತಿಂಗಳಲ್ಲಿ ಚುನಾವಣಾ ಆಯೋಗವು ಸ್ತಂಭನಗೊಳಿಸಿದ್ದ ಎಐಎಡಿಎಂಕೆ ಪಕ್ಷದ ಎರಡೆಲೆಗಳ ಚುನಾವಣಾ ಚಿಹ್ನೆ ಶಶಿಕಲಾ ಬಣಕ್ಕೆ ಸಲ್ಲುವಂತೆ ಮಾಡಲು 60 ಕೋಟಿ ರೂ.ಗಳ ಲಂಚವನ್ನು ನೀಡಬೇಕಾಗಿದೆ ಎಂದು ದಿನಕರನ್ ತನ್ನಲ್ಲಿ ಹೇಳಿರುವುದಾಗಿ ಮಧ್ಯವರ್ತಿ ಎಸ್ ಚಂದ್ರಶೇಖರ್ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಶಿಕಲಾ ಅವರ ಸೋದರ ಸಂಬಂಧಿಯಾಗಿರುವ ದಿನಕರನ್ ಅವರು ಆರ್ ಕೆ ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯಾಗಿದ್ದರು.